Search This Blog

Thursday 16 July 2020

ದಿಕ್ಸುನ್ದರೀ ವದನವೆನ್ನುವ ತ್ರಿವಿಕ್ರಮಭಟ್ಟ

ರಾಷ್ಟ್ರಕೂಟ ಮೂರನೇ ಇಂದ್ರರಾಜನ ಕಾಲ, ಅಂದರೆ ಸುಮಾರು, ಸಾ. ಶಕವರ್ಷ ೮೩೩ರಲ್ಲಿ ಒಂದು ಶಾಸನ ಹಾಕಿಸುತ್ತಾನೆ. ಹಾಗೆ ನೋಡಿದರೆ ರಾಷ್ಟ್ರಕೂಟರ ಕಾಲದಲ್ಲಿ ಅನೇಕ ಕವಿಗಳು ನಮ್ಮ ಪ್ರದೇಶಗಳಲ್ಲಿ ಕಾಣ ಸಿಗುತ್ತಾರೆ. ಕನ್ನಡದ ರಾಜನೊಬ್ಬ ಮಧ್ಯಪ್ರದೇಶದ ಬಗುಮ್ರಾದಲ್ಲಿ ಬರೆಸಿದ ಈ ತಾಮ್ರಪಟ ಶಾಸನ ಉತ್ತರದ ನಾಗರೀ ಲಿಪಿಯನ್ನು ಹೋಲುತ್ತದೆ. ಈ ಶಾಸನವನ್ನು ರೂಪಕಾಲಂಕಾರವನ್ನೇ ಬಳಸಿ ಬರೆದ ಕವಿ ನಲಚಂಪೂ ರಚಿಸಿದ ತ್ರಿವಿಕ್ರಮಭಟ್ಟ. ತ್ರಿವಿಕ್ರಮ ಸಮೃದ್ದ ಶಬ್ದಭಂಡಾರ ಹಾಗೂ ವಿವಿಧ ಕ್ರಿಯಾಪದಗಳ ವಿವಿಧ ಬಳಕೆಯಲ್ಲಿ ಈ ಕವಿ ಸಿದ್ಧಹಸ್ತ.
ಉದಯಗಿರಿಗತಾಯಾಂ ಪ್ರಾಕ್ ಪ್ರಭಾ ಪಾಂಡುತಾಯಾಂ ಅನುಸರಥಿ ನಿಶೀಥೇ ಶೃಂಗಮಸ್ತಾಚಲಸ್ಯ |
ಜಯತಿ ಕಿಮಪಿ ತೇಜ: ಸಾಂಪ್ರತಂ ವ್ಯೋಮಮಧ್ಯೆ ಸಲಿಲಮಿವ ವಿಭಿನ್ನಂ ಜಾಹ್ನವಂ ಯಾಮುನಂ ಚ |ಎನ್ನುವ ಈ ಶ್ಲೋಕದಿಂದ  ತ್ರಿವಿಕ್ರಮನಿಗೆ ಯಮುನಾ ತ್ರಿವಿಕ್ರಮ ಎಂಬ ಹೆಸರು ಬಂದಂತೆ ತೋರುತ್ತದೆ.
ನಳಚಂಪೂವನ್ನು ತ್ರಿವಿಕ್ರಮನೇ “ದಮಯಂತೀ ಕಥಾ" ಎಂದೂ ಕರೆದಿದ್ದಾನೆ. ಈ ಕೃತಿಯ ಪ್ರತಿಯೊಂದು ಉಚ್ಛ್ವಾಸದ ಕೊನೆಯಲ್ಲೂ “ಹರಿಚರಣಸರೋಜ” ಎಂಬ ಪದ ಪ್ರಯೋಗವಿದೆ. ಕಿರಾತಾರ್ಜುನೀಯವನ್ನು “ಲಕ್ಷ್ಯಂಕ” ವೆಂದೂ ಮಾಘಕಾವ್ಯವನ್ನು ತ್ರ್ಯಂಕ” ವೆಂದೂ ಕರೆದಿರುವಂತೆಯೇ, ತ್ರಿವಿಕ್ರಮ ಈ ಕಥೆಯನ್ನು ಪರಿಚರಣಸರೋಜಾಂಕ" ಎಂದು ಕರೆದಿದ್ದಾನೆ. ತ್ರಿವಿಕ್ರಮಭಟ್ಟನಿಗೆ ನಳಚಂಪೂ ಶಾಶ್ವತವಾದ ಕೀರ್ತಿಯನ್ನು ತಂದುಕೊಟ್ಟಿದೆ.

ದಿಕ್ಸುನ್ದರೀ ವದನ ಚಾನ್ದನ ಪತ್ರ ಭಂಗ ಲೀಲಾಯಮಾನ ಘನ ವಿಸ್ತೃತ ಕಾನ್ತ ಕೀರ್ತ್ತೇ |
ಶ್ರೀರಾಷ್ಟ್ರಕೂಟಕುಲಶೈಲಮಲಂಕರಿಷ್ಣೋಸ್ತಸ್ಮಾದಭೂನ್ನಿರುಪಮೋ ನಿರವದ್ಯ ಶೈಲಃ ||



ಕಾಲಯಾನದ ಕುರಿತು. ಡಾ. ನಾ ಸೋಮೇಶ್ವರ ಅವರು


ಮಾರ್ಕಂಡೇಯಪುರಾಣ ಯಾವ ಕಾಲದ್ದು ??


ದಧೀಚಿ ಹೆಸರು ಅತ್ಯಂತ ಪ್ರಸಿದ್ಧ. ಈಗಿನ ಎಲ್ಲಾ ವಿದ್ಯೆಗಳಿಗೂ ಮೂಲ ಪುರುಷ  ಇದೇ ದಧೀಚಿ. ದಧೀಚಿಯಿಂದಲೇ ಅಶ್ವಿನೀ ದೇವತೆಗಳಿಗೆ ಮಧುವಿದ್ಯೆ ಪಾಪ್ತವಾಗುತ್ತದೆ. ಮಧು ವಿದ್ಯೆ ಉಪದೇಶಿಸಿದ್ದಕ್ಕಾಗಿ ಶಿಕ್ಷೆಯಾಗಿ ಅವನ ತಲೆ ಹೋಗುತ್ತದೆ. ಎನ್ನುವ ಕಥೆ ಪ್ರಚಲಿತವಿದೆ. ಕುದುರೆಯ ತಲೆ ಶರ್ಯಣ್ಯಾವತಿಯಲ್ಲಿ ತೇಲುತ್ತಿರುತ್ತದೆ. ಅದೇ ಶರ್ಯಣ್ಯಾವತಿ ಇರುವುದು ಈಗ ನಾನು ಹೇಳುವ ಪ್ರಸ್ತುತ ಪ್ರದೇಶಕ್ಕೆ ಬಹಳ ದೂರದ್ದಲ್ಲ.
ಅದು ಮರುಭೂಮಿ. ಬಿಸಿಲಿನ ಝಳ ಅನುಭವಿಸಿಯೇ ತಿಳಿಯಬೇಕು. ರಾಜಸ್ಥಾನದ ನಾಗೌರಿ ಜಿಲ್ಲೆಯ ಜಯಲ್ ತಹಸೀಲ್ ಗೋಥ್ ಮತ್ತು ಮಂಗ್ಲೋಡ್ ಎನ್ನುವ ಗ್ರಾಮದಲ್ಲಿರುವ ದೇವೀ ದೇವಾಲಯವೇ ದಧಿಮತಿ ಅಥವಾ ದಾಧಿಮತಿ ಮಂದಿರ. ಇದರ ಕುರಿತು ಬರೆಯುತ್ತಿರುವೆ. ಸುಮಾರು ನಾಲ್ಕನೇ ಶತಮಾನಕ್ಕೂ ಪೂರ್ವದಲ್ಲಿಯೇ ಕಾಣಿಸಿಕೊಳ್ಳುವ ದೇವಾಲಯ ಆನಂತರದಲ್ಲಿ ಜೀರ್ಣಾವಸ್ಥೆಗೆ ತಲುಪಿದಾಗ ಅದನ್ನು ಪುನರ್ನಿಮಿಸಲಾಯಿತು. ಇದು ಭಾರತದ ೫೨ ಶಕ್ತಿಪೀಠಗಳಲ್ಲಿ ಪ್ರಮುಖವಾದದ್ದು ಎಂದು ಹೇಳಲಾಗುತ್ತದೆ. ದೇವಾಲಯದ ಪ್ರಮುಖ ಭಕ್ತರಲ್ಲಿ ದಾಧೀಚ್ ಅಥವಾ ದಾಹಿಮಾ ಎಂದು ಕರೆಸಿಕೊಳ್ಳುವ ಬ್ರಾಹ್ಮಣರು ಮತ್ತು ರಜಪೂತರು ಹೆಚ್ಚು.
ವೇದ ಮತ್ತು ಪುರಾಣಗಳಲ್ಲಿ ವರ್ಣಿತರಾಗಿರುವ ದಧೀಚಿ ಎನ್ನುವ ಮಹರ್ಷಿಯ ತಂಗಿಯು ಮಾಘ ಶುಕ್ಲ ಸಪ್ತಮಿಯ ದಿನ ಅಂದರೆ ರಥ ಸಪ್ತಮಿಯ ದಿನ ಆಕಾಶದ ಮಂಥನ ನಡೆಯುತ್ತದೆ ಸಂದರ್ಭದಲ್ಲಿ ಜನ್ಮ ಪಡೆದಳು ಎಂದು ಐತಿಹ್ಯ. ಮತ್ತು ಅದೇ ಮಾಘಮಾಸದ ಅಷ್ಟಮೀ ದಿನ ವಿಕಟಾಸುರ ಎನ್ನುವ ಅಸುರನ ಸಂಹಾರ ಮಾಡುತ್ತಾಳೆ. ಆದುದರಿಂದ ಮಾಘ ಶುಕ್ಲ ಅಷ್ಟಮಿಯ ದಿನವನ್ನು ಜಯಾಷ್ಟಮಿ ಎಂದು ಕರೆಯಲಾಗುತ್ತದೆ ಎನ್ನುವುದು ಇಲ್ಲಿನ ಪ್ರತೀತಿ. ಆಕೆಯೇ ಶ್ರೀಲಕ್ಷ್ಮಿ ಎನ್ನುವ ನಂಬಿಕೆ ಇದೆ. ಅದೇ ದಧಿಮತಿ, ದಧೀಮಾತಿ ಎನ್ನುವ ದೇವಿಯಾಗಿ ನೆಲೆಸಿದ್ದಾಳೆ ಎನ್ನುವುದು ಅಲ್ಲಿನವರ ನಂಬುಗೆ.
ಶಾಸನದ ಅಭಿಪ್ರಾಯದಂತೆ ದಾಧೀಚ್ ಬ್ರಾಹ್ಮಣರು ಇದೇ ದೇವಾಲಯ ಸಮುಚ್ಚಯದಲ್ಲಿಯೇ ಆಶ್ರಯ ಪಡೆದಿದ್ದರಂತೆ. ಇದರ ಅಕ್ಷರವನ್ನು ಗಮನಿಸಿದರೆ ಬಹಳ ಆಶ್ಚರ್ಯವಾಗುತ್ತದೆ. ಹಳಗನ್ನಡ ಲಿಪಿಯ ಶೈಲಿಯೂ ಕೆಲವೊಮ್ಮೆ ಇಣುಕುತ್ತದೆ ಕಡೆಯಿಂದ ನಾಗರಿಯನ್ನು ಸಂಪುರ್ಣವಾಗಿ ಬಳಸಿಕೊಂಡಂತೆ ಇಲ್ಲ. ಶಾಸನದ ಕೊನೆಯ ಸಾಲಿನಲ್ಲಿ ಶಾಸನದ ವರ್ಷವನ್ನು ಉಲ್ಲೇಖಿಸಿದ್ದು ಅದುಸಂವಚ್ಛರ ಶೇ()ತೇಶು ೨೦೦ ೮೦    ಶ್ರಾವಣ ೧೦ ಅಂದರೆ ಇದು ವಿಕ್ರಮ ಸಂವತ್ಸರದ ೨೮೯ನೇ ವರ್ಷ.  ಶಾಸನ ಬಹಳ ಆಶ್ಚರ್ಯವಾಗಿದ್ದು ನನಗೆ ಮಾರ್ಕಂಡೇಯಪುರಾಣದ ೮೮ನೇ ಅಧ್ಯಾಯದ ದೇವೀಮಹಾತ್ಮೆಯ ನಾರಾಯಣೀ ಸ್ತುತಿಯಲ್ಲಿನ ಅಥವಾ ಸಪ್ತಶತಿಯ ಹನ್ನೊಂದನೇ ಅಧ್ಯಾಯದ ೧೦ನೇ ಶ್ಲೋಕ ಮತ್ತು ಸಪ್ತಶತಿಯ ೫೮೫ನೇ ಶ್ಲೋಕ.
ಸರ್ವಮಙ್ಗಲಮಾಙ್ಗಲ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಽಸ್ತು ತೇ || ೧೦ ||


ಹೇ ನಾರಾಯಣಿ! ನೀನು ಸಮಸ್ತ ಪ್ರಕಾರವಾದ ಮಂಗಲಗಳನ್ನು ಉಂಟುಮಾಡುವ ಮಂಗಲಮಯಿಯಾಗಿರುವೆ. ಕಲ್ಯಾಣವನ್ನುಂಟು ಮಾಡುವಶಿವೆಯೂ ನೀನೇ. ನಿನ್ನಿಂದಲೇ ಸಕಲಾಭೀಷ್ಟಗಳೂ ಸಿದ್ಧಿಸುತ್ತವೆ. ನೀನು ಶರಣಾಗತ ವತ್ಸಲಳೂ, ತ್ರಿನೇತ್ರಳೂ ಹಾಗೂ ಗೌರಿಯೂ ಆಗಿರುವೆ. ನಿನಗೆ ನಮಸ್ಕಾರಗಳು ಎನ್ನುವ ಅರ್ಥವನ್ನು ಸ್ತುತಿ ನೀಡುತ್ತದೆ.
ಎನ್ನುವ ಸಾಲುಗಳು ಶಾಸನದ ೧೧ ಮತ್ತು ೧೨ನೇ ಸಾಲಿನಲ್ಲಿ ಬಂದಿವೆ. ಇದು ಆಶ್ಚರ್ಯವನ್ನುಂಟು ಮಾಡುತ್ತದೆ. ಮಾರ್ಕಂಡೇಯ ಪುರಾಣದ ಕಾಲವನ್ನು ಸುಮಾರು ೭ನೇ ಶತಮಾನಕ್ಕೆ ತಂದು ನಿಲ್ಲಿಸುವ ನಮ್ಮ ಸಂಶೋಧಕರಿಗೆ ಶಾಸನದಲ್ಲಿನ ಶ್ಲೋಕ ಯಾವಕಾಲದ್ದಾಗಿರಬಹುದು. ಶಾಸನದ ಕಾಲವನ್ನು ಶಾಸನದ ಅಂತ್ಯದಲ್ಲಿ ಹೇಳಲಾಗಿದೆ. ಇದರ ಆರಂಭದಲ್ಲಿಯೂ ಸರಸ್ವತಿಯನ್ನು ಧ್ಯಾನಿಸುವುದು ಕಾಣ ಸಿಗುತ್ತದೆ. ದಾಧೀಚ್ ಬ್ರಾಹ್ಮಣರ ಗೋತ್ರಗಳೂ ಶಾಸನದಲ್ಲಿವೆ. ಅಂದರೆ ಒಂದೋ ಪುರಾಣದ ರಚನೆಯ ಕಾಲವನ್ನು ಎಳೆದು ತಂದು ಈಚೆ ನಿಲ್ಲಿಸಲಾಗಿದೆ. 

ಕಾವ್ಯಾದರ್ಶದ ಚತುರ್ಮುಖ

ಚತುರ್ಮುಖ ಮುಖಾಂಭೋಜ ವನಹಂಸ ವಧೂರ್ಮಮ |
ಮಾನಸೇ ರಮತಾಂ ನಿತ್ಯಂ ಸರ್ವಶುಕ್ಲಾ ಸರಸ್ವತೀ ||

ಪ್ರವಾಹದಂತೆ ಹರಿಯುತ್ತಿರುವ ಸರಸ್ವತಿ ನಮಗೆ ಜ್ಞಾನದ ಪ್ರವಾಹವನ್ನು ಹರಿಸಲಿ, ನಮ್ಮ ಮನಸ್ಸನ್ನು ಜ್ಞಾನದ ಪ್ರವಾಹದಿಂದ ರಮಿಸಲಿ, ದೋಷರಹಿತವಾದ ಶಬ್ದಗಳು ವಾಕ್ಯಗಳು ನನಗೆ ಒದಗಿ ಬರಲಿ ಎನ್ನುವ ಆಶಯದೊಂದಿಗೆ ದಂಡಿ ಎನ್ನುವ ಕವಿ ಕಾವ್ಯಾದರ್ಶವನ್ನು ಆರಂಭಿಸುತ್ತಾನೆ.

ಕಲಚೂರಿಗಳ ದೊರೆ ತ್ರೈಲೋಕ್ಯಮಲ್ಲದೇವ ಮಧ್ಯಪ್ರದೇಶದ ರೇವಾ ತಾಮ್ರಪಟವನ್ನು ಸಾ ಶ. ೯೬೩ರಲ್ಲಿ ಬರೆಸುತ್ತಾನೆ. ಅಕ್ಷರವನ್ನು ತುಂಬಾ ಸುಂದರವಾಗಿ ಆಲಂಕಾರಿಅಕವಾಗಿ ಬರೆಯಲಾಗಿದೆ. ಅಕ್ಷರಸ್ಖಾಲಿತ್ಯ ಇದ್ದರೂ ತುಂಬಾ ಸುಂದರವಾಗಿದೆ. ಅನುಸ್ವಾರಾಕ್ಷರಗಲನ್ನು ಮತ್ತು ಮೇಲಿನ ಕೊಂಬುಗಳನ್ನು ವಿಶೇಷವಾಗಿ ಬರೆಯಲಾಗಿದೆ. ನಂದಿನಾಗರಿ ಅಕ್ಷರಗಳನ್ನು ಬಳಸಿಕೊಂಡಿದ್ದರೂ ನಾಗರಿಯೂ ನುಸುಳಿದಂತಿದೆ. ಈ ಶಾಸನದಲ್ಲಿ ದಂಡಿಯ ಕಾವ್ಯಾದರ್ಶದ ಮಂಗಲ ಶ್ಲೋಕವನ್ನು ನಾಲ್ಕು ಮತ್ತು ಐದನೇ ಸಾಲಿನಲ್ಲಿ ಬಳಸಿಕೊಂಡದ್ದು ಬಹಳ ವಿಶೇಷವಾಗಿ ಕಾಣುತ್ತದೆ.
ಸ್ವಲ್ಪ ಬುದ್ಧ್ಯಾ ಮಂದಮತಿರಹಂ ಯತ್ತುವಾಲ್ಯಾತಿ ಉದ್ಗೀರಿತಮ್ |
ಶುದ್ಧಮಶುದ್ಧಂ ವಾ ಪಂಡಿತ ವಿಶ್ವೇಶ್ವರೇಣ ಲಿಖಿತಮಿತಿ || ಎಂದು ಬರೆದು ಈ ಶಾಸನದಲ್ಲಿನ ತಪ್ಪುಗಳನ್ನು ಮನ್ನಿಸಿ ಎಂದು ಶಾಸನ ಕವಿ ವಿಶ್ವೇಶ್ವರನಿಂದ ರಚಿಸಲ್ಪಟ್ಟ ಈ ಶಾಸನವನ್ನು ಬರೆದವನು ಪಂ. ಗಂಗಾಧರ ಮತ್ತು ಶೀರುಕನೆನ್ನುವವನು.




ಆಚಾರದಲ್ಲಿ ಆದರ್ಶವನ್ನು ಬೋಧಿಸುವವ : ಕಣಿಕನ ಕೂಟನೀತಿ ೨

ನಗುನಗುತ್ತಾ ಜನರಿಗೆ ಆಚಾರದ ಆದರ್ಶವನ್ನು ಬೋಧಿಸುತ್ತಾ ತೋರಿಕೆಯ ಸದಾಚಾರ ಪ್ರದರ್ಶನವು ತಾನು ಮಾಡಿದ ಅಪರಾಧಕ್ಕೆ ಒಂದು ಆವರಣದ ರೂಪದಲ್ಲಿರುತ್ತದೆ. ಕಪ್ಪುಮೋಡಗಳು ಪರ್ವತವನ್ನೇ ಮುಚ್ಚುವಂತೆ ಸದಾಚಾರದ ತೋರಿಕೆಯು ಅವನ ಮಹಾಪರಾಧವನ್ನೂ ಮುಚ್ಚಿಬಿಡುವುದು. ಎನ್ನುವುದನ್ನೇ ಈ ಶ್ಲೋಕದಲ್ಲಿ ಹೇಳಲಾಗಿದೆ.

ಅಪಿ ಘೋರಾಪರಾಧಸ್ಯ ಧರ್ಮಮಾಶ್ರಿತ್ಯ ತಿಷ್ಠತಃ |
ಸ ಹಿ ಪ್ರಚ್ಛಾದ್ಯತೇ ದೋಷಃ ಶೈಲೋ ಮೇಘೈರಿವಾಸಿತೈಃ || ೫೮ ||

ತನಗೆ ಕೋಪಬಂದಿದ್ದರೂ ಮುಖದಲ್ಲಿ ಅದನ್ನು ಪ್ರಕಟಿಸಬಾರದು. ಮಾತಿನಲ್ಲಿಯೂ ಸಹ ಕೋಪದ ಭಾವ  ಮತ್ತು ನಿಷ್ಠುರತೆಯನ್ನು ತೋರಿಸಬಾರದು. ಯಾವಾಗಲೂ ನಸುನಗುತ್ತ್ತಲೇ ಮಾತನಾಡಬೇಕು. ಕೋಪದಿಂದ ಬೇರೆಯವರನ್ನು ನಿಂದಿಸಬಾರದು ಎನ್ನುವುದನ್ನು ಕಣಿಕ ಧೃತರಾಷ್ಟ್ರನಿಗೆ ಈ ಶ್ಲೋಕದಿಂದ ಹೇಳುತ್ತಾನೆ.

ಕ್ರುದ್ಧೋಽಪ್ಯಕ್ರುದ್ಧರೂಪಃ ಸ್ಯಾತ್ಸ್ಮಿತಪೂರ್ವಾಭಿಭಾಷಿತಾ |
ನ ಚಾಪ್ಯನ್ಯಮಪಧ್ವಂಸೇತ್ಕದಾಚಿತ್ಕೋಪಸಂಯುತಃ || ೫೫ ||

ಶತ್ರುಗಳ ನಾಶವನ್ನು ಹೇಳುತ್ತಾ . . . .
ಪ್ರಹರಿಷ್ಯನ್ಪ್ರಿಯಂ ಬ್ರೂಯಾತ್ಪ್ರಹರನ್ನಪಿ ಭಾರತ |
ಪ್ರಹೃತ್ಯ ಚ ಕೃಪಾಯೀತ ಶೋಚೇತ ಚ ರುದೇತ ಚ || ೫೬ ||

ಶತ್ರುವನ್ನು ನಾಶಮಾಡುವ ಮೊದಲು ಮತ್ತು ನಾಶಮಾಡುವ ಕಾಲದಲ್ಲಿ ಹಿತವಾದ ಮಾತುಗಳನ್ನೇ ಹೇಳುತ್ತಿರಬೇಕು. ಶತ್ರುವನ್ನು ಧ್ವಂಸಮಾಡಿದನಂತರ ಅವನಿಗಾಗಿ ಪರಿತಾಪಪಡಬೇಕು ಅಥವಾ ಅಂತಹ ಭಾವನೆಯನ್ನು ವ್ಯಕ್ತಪಡಿಸಬೇಕು. ಕೆಲವು ಸಂದರ್ಭಗಳಲ್ಲಿ ಅವನ ಪ್ರಶಂಸೆಮಾಡುತ್ತಾ ದುಃಖಿಸುತ್ತಾ ಅಳಬೇಕಾಗುತ್ತದೆ.
ಶತ್ರುವು ತನಗಿಂತ ಪರಾಕ್ರಮಿಯಾಗಿದ್ದಾಗ ಅವನನ್ನು ವಿದವಿದವಾಗಿ ಹೊಗಳಿ ಸಂತೈಸುತ್ತಲಿದ್ದು, ಅವನು ದುರ್ಬಲನಾದ ತಕ್ಷಣ ಅಥವಾ ಅವನು ನತದೃಷ್ಟನಾದದ್ದು ತಿಳಿದೊಡನೆಯೇ ಧ್ವಂಸಮಾಡಬೇಕು.

ಅಪರಾಧವನ್ನು ತಿಳಿಸುತ್ತಾ . . . .
ಅಪಿ ಘೋರಾಪರಾಧಸ್ಯ ಧರ್ಮಮಾಶ್ರಿತ್ಯ ತಿಷ್ಠತಃ |
ಸ ಹಿ ಪ್ರಚ್ಛಾದ್ಯತೇ ದೋಷಃ ಶೈಲೋ ಮೇಘೈರಿವಾಸಿತೈಃ || ೫೮ || ನಗುನಗುತ್ತಾ ಜನರಿಗೆ ಆಚಾರದ ಆದರ್ಶವನ್ನು ಬೋಧಿಸುತ್ತಾ ತೋರಿಕೆಯ ಸದಾಚಾರ ಪ್ರದರ್ಶನವು ತಾನು ಮಾಡಿದ ಅಪರಾಧಕ್ಕೆ ಒಂದು ಆವರಣದ ರೂಪದಲ್ಲಿರುತ್ತದೆ. ಕಪ್ಪುಮೋಡಗಳು ಪರ್ವತವನ್ನೇ ಮುಚ್ಚುವಂತೆ ಸದಾಚಾರದ ತೋರಿಕೆಯು ಅವನ ಮಹಾಪರಾಧವನ್ನೂ ಮುಚ್ಚಿಬಿಡುವುದು.

ಯಃ ಸ್ಯಾದನುಪ್ರಾಪ್ತವಧಸ್ತಸ್ಯಾಗಾರಂ ಪ್ರದೀಪಯೇತ್ |
ಅಧನಾನ್ನಾಸ್ತಿಕಾಂಶ್ಚೌರಾನ್ವಿಷಯೇ ಸ್ವೇ ನ ವಾಸಯೇತ್ || ೫೯ || ಯಾರನ್ನು ಕೊಲ್ಲಬೇಕಾಗಿರುವುದೋ ಅಂತಹವರ ಮನೆಯನ್ನೇ ಭಸ್ಮಮಾಡಬೇಕು. ಅವರ ಮನೆಗೆ ಬೆಂಕಿ ಹಾಕಿ ನಿಃಶೇಷವಾಗಿ ನಾಶಮಾಡಬೇಕು. ದರಿದ್ರರನ್ನೂ, ನಾಸ್ತಿಕರನ್ನೂ ಮತ್ತು ಕಳ್ಳರನ್ನೂ ದೇಶದಲ್ಲಿ ಇರಲಿಕ್ಕೆ ಆಸ್ಪದ ಕೊಡಬಾರದು. ಇಂತವರು ಶತ್ರುಗಳ ಕೈಗೊಂಬೆಗಳಾಗುವ ಸಂಭವ ಇರುತ್ತದೆ.

ಶತ್ರುವು ಬಂದ ತಕ್ಷಣ ಆತನನ್ನು ಸ್ವಾಗತಿಸಿ ಅವನಿಗೆ ಆಸನ ಮತ್ತು ಭೋಜನಾದಿಗಳಿಂದ ಉಪಚರಿಸಿ, ಅವನಿಗೆ ಇಷ್ಟವಾದ ವಸ್ತುವನ್ನು ಕೊಟ್ಟು ಸಂಪೂರ್ಣವಿಶ್ವಾಸಿಯನ್ನಾಗಿ ಮಾಡಿಕೊಂಡು ಅನಂತರ ನಾಶಮಾಡಬೇಕು. ಕಚ್ಚಿದ ಕೂಡಲೇ ಸಾಯಿಸುವ ವಿಷದ ಹಲ್ಲಿರುವ ಹಾವಿನಂತೆ ಶತ್ರುವನ್ನು ಕ್ಷಣಮಾತ್ರದಲ್ಲಿ ಧ್ವಂಸಗೊಳಿಸುವ ತೀಕ್ಷ್ಣವಾದ ಆಯುಧವನ್ನು ಹೊಂದಿರಬೇಕು.

ಅಶಙ್ಕಿತೇಭ್ಯಃ ಶಙ್ಕೀತ ಶಙ್ಕಿತೇಭ್ಯಶ್ಚ ಸರ್ವಶಃ |
ಆಶಙ್ಕ್ಯಾದ್ಭಯಮುತ್ಪನ್ನಮಪಿ ಮೂಲಂ ನಿಕೃನ್ತತಿ || ೬೧ || ನಿನಗೆ ಯಾರ ವಿಷಯದಲ್ಲಿ ಸಂಶಯ ಇರುವುದಿಲ್ಲವೋ ಅವರನ್ನು ಬಹಳ ಜಾಗ್ರತೆಯಿಂದ ಪರೀಕ್ಷಿಸುತ್ತಲೇ ಇರಬೇಕು. ನಿನಗೆ ಆಗದವರೆಂದು ಯಾರ ವಿಷಯದಲ್ಲಿ ಸಂಶಯವಿರುವುದೋ ಅವರ ವಿಷಯದಲ್ಲಿ ನೀನು ಎಲ್ಲ ರೀತಿಯಿಂದಲೂ ಎಚ್ಚರದಿಂದಿರಬೇಕು. ನೀನು ಯಾರ ವಿಷಯದಲ್ಲಿ ಸಂಶಯಪಡುವುದಿಲ್ಲವೋ ಮತ್ತು ಯಾರು ನಿನ್ನ ನಂಬಿಕೆಗೆ ಪಾತ್ರರೆಂದು ಭಾವಿಸಿರುವೆಯೋ ಅಂತಹವರಿಂದಲೇ ಅಪಾಯವೇನಾದರೂ ಸಂಭವಿಸಿದರೆ ಅದು ನೀನು ತಡೆದುಕೊಳ್ಳಲಾಗದ ಅಪಾಯವಾಗುತ್ತದೆ. ನಿನ್ನನ್ನೇ ಅದು ಸಂಪೂರ್ಣವಾಗಿ ನಾಶಗೊಳಿಸಿಬಿಡುತ್ತದೆ.

ನ ವಿಶ್ವಸೇದವಿಶ್ವಸ್ತೇ ವಿಶ್ವಸ್ತೇ ನಾತಿವಿಶ್ವಸೇತ್ |
ವಿಶ್ವಾಸಾದ್ಭಯಮುತ್ಪನ್ನಂ ಮೂಲಾನ್ಯಪಿ ನಿಕೃನ್ತತಿ || ೬೨ || ವಿಶ್ವಾಸಕ್ಕೆ ಯೋಗ್ಯರಲ್ಲದವರನ್ನು ನಂಬಲೇಬಾರದು. ವಿಶ್ವಾಸಕ್ಕೆ ಯೋಗ್ಯರಾದವರನ್ನೂ ಸಂಪೂರ್ಣವಾಗಿ ನಂಬಬಾರದು. ಏಕೆಂದರೆ ಹೆಚ್ಚು ನಂಬಿದವನಿಂದ ಉಂಟಾಗುವ ಭಯವು ರಾಜನನ್ನೇ ಸಮೂಲವಾಗಿ ನಾಶಮಾಡಿಬಿಡುತ್ತದೆ. ವಿಶ್ವಸನೀಯರಾಗಿರುವವರೇನಾದರೂ ಶತ್ರುಗಳ ಕಡೆಗೆ ಸೇರಿಬಿಟ್ಟರೆ ನಿನ್ನ ಮೂಲೋತ್ಪಾಟನೆಯಾಗುತ್ತದೆ.

Wednesday 15 July 2020

ಮಹಾಭಾರತದ ರಾಜಕಾರಣ : ಕಣಿಕನ ಕೂಟನೀತಿ ೧


ಪ್ರಾಯಶಃ ಮಹಾಭಾರತದ ಈ ಒಪಂದು ಸಂದರ್ಭ ಇರದೇ ಇದ್ದಿದ್ದರೇ ಪಾಂಡವರ ಮತ್ತು ಕೌರವರ ಮಧ್ಯೇ ಕಂದಕವೋ ದ್ವೇಷವೋ ಆಗುತ್ತಿರಲಿಲ್ಲವಿರಬಹುದು.

ಮಹಾಭಾರತದ ಆದಿಪರ್ವದಲ್ಲಿ ಬರುವ ಸಂಭವಪರ್ವದಲ್ಲಿ ಧೃತರಾಷ್ಟ್ರನಿಗೆ ಕಣಿಕನ ಕೂಟನೀತಿಯ ಉಪದೇಶವನ್ನು ವೈಶಂಪಾಯನರು ಹೇಳುತ್ತಾರೆ. ಪಾಂಡುವಿನ ಮಕ್ಕಳು ದಿನದಿಂದ ದಿನಕ್ಕೆ ಬಲದಲ್ಲಿ ತನ್ನ ಮಕ್ಕಳಿಗಿಂತಲೂ ಔನ್ನತ್ಯವನ್ನು ಹೊಂದುತ್ತಿರುವರೆಂಬುದನ್ನು ಕೇಳಿ ಧೃತರಾಷ್ಟ್ರನು ವ್ಯಾಕುಲನಾಗಿ ಚಿಂತೆಗೀಡಾಗುತ್ತಾನೆ. ಬೇರೆ ಮಾರ್ಗವನ್ನು ಕಾಣದೇ ಆ ಕಾಲದ ಪ್ರಸಿದ್ಧರಾಜಕಾರಣಿಯಾದ ಕಣಿಕನೆಂಬ ಮಂತ್ರಿಯನ್ನು ಕರೆಸಿ ಏಕಾಂತದಲ್ಲಿ ಮಾತನಾಡುತ್ತಾನೆ. ಕಣಿಕ ರಾಜಕಾರಣಿ ಮಾತ್ರವಲ ಚಾಣಾಕ್ಷನಾದ ರಾಜನೀತಿಜ್ಞನೂ ಆಗಿದ್ದನು. ಅವನ ಮತ್ತು ಧೃತರಾಷ್ಟ್ರನ ಮಾತುಕಥೆಗಳು ಮಹಾಭಾರತದಲ್ಲಿ ಪ್ರಸಿದ್ಧ.
ಕಣಿಕನು ಆರಂಭದಲ್ಲಿಯೇ ತಾನು ಹೇಳಿದ್ದರಲ್ಲಿ ಸೂಕ್ತವಾಗಿರುವುಇದನ್ನು ನೀನು ಅನುಸರಿಸು ಎಂದು ಆರಂಭಿಸುತ್ತಾನೆ.

‘ಪಾಂಡವರೇ ನಿನ್ನ ಶತ್ರುಗಳು’ ಎನ್ನುವ ಮಾತನ್ನು ಕಣಿಕನು ನೇರವಾಗಿ ಹೇಳದಿದ್ದರೂ ‘ಪಾಣ್ಡುಪುತ್ರೇಭ್ಯಃ ಆತ್ಮಾನಂ ರಕ್ಷ’ ಎನ್ನುವುದು ‘ಪಾಂಡುವಿನ ಮಕ್ಕಳಿಂದ ನಿನ್ನನ್ನು ಸಂರಕ್ಷಿಸಿಕೋ’ಎಂದು ಕಣಿಕನು ಹೇಳುವ ಮಾತು ‘ಪಾಂಡವರೇ ತನ್ನ ಶತ್ರುಗಳು’ಎಂಬ ಅಭಿಪ್ರಾಯವು ಧೃತರಾಷ್ಟ್ರನ ಮನಸ್ಸಿನಲ್ಲಿ ದೃಢವಾಗಿ ನಿಂತು ಬಿಡುತ್ತದೆ. ಪಾಂಡವರನ್ನು ಹೇಗಾದರೂ ಮಾಡಿ ನಿರ್ನಾಮ ಮಾಡಬೇಕೆನ್ನುವ ದುರ್ಯೋಧನನ ಯೋಜನೆಗಳಿಗೆ ಧೃತರಾಷ್ಟ್ರನ ಬೆಂಬಲ ಸಿಕ್ಕಿದ್ದು ಕಣಿಕನ ರಾಜನೀತಿಯ ಉಪದೇಶದ ಪ್ರಭಾವದಿಂದಲೇ.

ನಿತ್ಯಮುದ್ಯತದಣ್ಡಃ ಸ್ಯಾನ್ನಿತ್ಯಂ ವಿವೃತಪೌರುಷಃ |
ಅಚ್ಛಿದ್ರಶ್ಛಿದ್ರದರ್ಶೀ ಸ್ಯಾತ್ಪರೇಷಾಂ ವಿವರಾನುಗಃ || ೬ || ರಾಜರು ಆಯುಧ ಸನ್ನದ್ಧರಾಗಿಯೇ ಇರಬೇಕು. ತಮ್ಮ ಸೈನ್ಯದ ಪರಾಕ್ರಮವನ್ನು ಪ್ರಶಂಸಿಸಿ ಸೈನಿಕರನ್ನು ಹುರಿದುಂಬಿಸಬೇಕು. ತಮ್ಮಲ್ಲಿರುವ ಯಾವುದೇ ಲೋಪ ದೋಷಗಳೂ ಮತ್ತು ನ್ಯೂನತೆಗಳೂ ಬಹಿರಂಗವಾಗದಂತೆ ನೋಡಿಕೊಳ್ಳಬೇಕು ಮತ್ತು ಶತ್ರುವಿನಲ್ಲಿರುವ ಲೋಪ ದೋಷಗಳನ್ನೂ, ನ್ಯೂನತೆಗಳನ್ನೂ ತಿಳಿದುಕೊಳ್ಳುತ್ತಿರಬೇಕು. ಎನ್ನುವ ಕಣಿಕನ ಮಾತು ಇಂದಿಗೂ ಬಹಳ ಪ್ರಸ್ತುತವೆನ್ನಿಸುತ್ತದೆ.

ನಿತ್ಯಮುದ್ಯತದಣ್ಡಾದ್ಧಿ ಭೃಶಮುದ್ವಿಜತೇ ಜನಃ |
ತಸ್ಮಾತ್ಸರ್ವಾಣಿ ಕಾರ್ಯಾಣಿ ದಣ್ಡೇನೈವ ವಿಧಾರಯೇತ್ || ೭ || ಈ ಶ್ಲೋಕದಲ್ಲಿನ ಮಹತ್ವ ಗಮನಿಸಬಹುದು. ಇಲ್ಲಿ ದಂಡ ಎನ್ನುವ ಪದ ಪ್ರಯೋಗವಾಗಿದೆ. ಇಲ್ಲಿ ದಂಡವೆಂದರೆ ಶಿಕ್ಷೆ ಎಂದು ಗಮನಿಸಿದರೆ ಕಠಿನಶಿಕ್ಷೆಯನ್ನು ಕೊಡುವ ರಾಜನನ್ನು ಕಂಡರೆ ಎಲ್ಲರೂ ಭಯಪಡುತ್ತಾರೆ. ಆದರೆ ಶಿಕ್ಷೆಯು ಕ್ರೂರವಾಗಿದ್ದಷ್ಟೂ ಅಪರಾಧಗಳು ಕಡಿಮೆಯಾಗುವುದು ಎನ್ನುವುದು ಅಂದಿನ ರಾಜಕಾರಣದ ಅಭಿಪ್ರಾಯ. ಮಾನವೀಯತೆಯ ಅನುಕಂಪದಿಂದ ರಾಕ್ಷಸಪ್ರವೃತ್ತಿಯವರನ್ನೂ ಸರಿಯಾಗಿ ಶಿಕ್ಷಿಸದೇ ಇರುವುದರಿಂದ ಅನರ್ಥಗಳೇ ಉಂಟಾಗುತ್ತವೆ. ಇದರಿಂದ ಅಂತಹ ರಾಜ ಕ್ರೂರಿ ಎನ್ನಿಸಿಕೊಂಡರು ಸಹ ಅನಿವಾರ್ಯತೆಯೂ ಇತ್ತು. ಯಾವ ರಾಜನು ಯಾವಾಗಲೂ ಮೇಲೆ ಬೀಳುವ ಸ್ವಭಾವದಿಂದಿರುವನೋ ಅವನನ್ನು ಕಂಡರೆ ಎಲ್ಲರೂ ಹೆಚ್ಚಾಗಿ ಭಯಪಡುವರು. ಆದುದರಿಂದ ರಾಜನಾದವನು ಎಲ್ಲ ಕಾರ್ಯಗಳನ್ನೂ ದಂಡದ ಮೂಲಕವಾಗಿಯೇ ಸಾಧಿಸಬೇಕು ಎನ್ನುವುದು ಕಣಿಕನ ಅಭಿಪ್ರಾಯವಾಗಿತ್ತು.

ನಾಸ್ಯಚ್ಛಿದ್ರಂ ಪರಂ ಪಶ್ಯೇಚ್ಛಿದ್ರೇಣ ಪರಮನ್ವಿಯಾತ್ |
ಗೂಹೇತ್ಕೂರ್ಮ ಇವಾಙ್ಗಾನಿ ರಕ್ಷೇದ್ವಿವರಮಾತ್ಮನಃ || ೮ || ಆಮೆ ತನ್ನ ವೈರಿಗಳನ್ನು ಕಂಡಾಗ ಅಥವಾ ತನಗೆ  ಸಂಬವನೀಯ ಅಪಾಯ ತಿಳಿದು ದೇಹವನ್ನು ಚಿಪ್ಪಿನೊಳಗೆ ಸೇರಿಸಿಕೊಂಡು ರಕ್ಷಿಸಿಕೊಳ್ಳುತ್ತದೆಯೋ ಅದೇ ರೀತಿ ತನ್ನ ಮತ್ತು ತನ್ನ ಪ್ರಜೆಗಳ ರಕ್ಷಣೆ ಮಾಡಿಕೊಳ್ಳಬೇಕು. ಮತ್ತು ರಾಜನಾದವನು ಶತ್ರುವಿನ ಮೇಲೆ ಆಕ್ರಮಣದ ಸಿದ್ಧತೆಯನ್ನು ಮಾಡುವಾಗ ಅದರ ಸುಳಿವು ಶತ್ರುವಿಗೆ ಸ್ವಲ್ಪವೂ ತಿಳಿಯದಂತೆ ಎಚ್ಚರಿಕೆಯಿಂದಿರಬೇಕು. ಶತ್ರುವಿನಲ್ಲಿ ನ್ಯೂನತೆಯಿದೆಯೆಂದು ಅಥವಾ ಆತನ ಬಲ ಕಡಿಮೆಯಾಗಿದೆ ಎಂದು ತಿಳಿದೊಡನೆ ಅವನ ಮೇಲೆ ಬಿದ್ದು ಅವನನ್ನು ನಾಶಗೊಳಿಸಬೇಕು. ರಾಜನಾದವನು ತನ್ನ ಮನಸ್ಸಿನ ಧ್ಯೇಯೋದ್ದೇಶಗಳನ್ನು ಯಾರಿಗೂ ಬಿಟ್ಟುಕೊಡಬಾರದು.

ನಾಸಮ್ಯಕ್ಕೃತಕಾರೀ ಸ್ಯಾದುಪಕ್ರಮ್ಯ ಕದಾಚನ |
ಕಣ್ಟಕೋ ಹ್ಯಪಿ ದುಶ್ಛಿನ್ನ ಆಸ್ರಾವಂ ಜನಯೇಚ್ಚಿರಮ್ || ೯ || ಒಂದು ಚಿಕ್ಕ ಮುಳ್ಳು ಕಾಲಿಗೆ ಚುಚ್ಚಿದಾಗ ಅದರ ಒಂದು ಚೂರೂ ಉಳಿಯದಂತೆ ತೆಗೆದುಹಾಕಲಾಗುತ್ತದೆ ಹಾಗೆಯೇ ಒಂದು ಕಾರ್ಯಮಾಡಲು ನಿರ್ಧರಿಸಿದ ಮೇಲೆ ಕಡೆಯವರೆಗೂ ಆ ಕಾರ್ಯವನ್ನು ಸಾಧಿಸಲೇಬೇಕು. ಹಾಗೆಯೇ ಶತ್ರುಗಳನ್ನು ಸಂಪೂರ್ಣವಾಗಿ ನಾಶಗೊಳಿಸುವುದು ರಾಜನ ಮುಖ್ಯ ಕರ್ತವ್ಯ ಎನ್ನುತ್ತಾನೆ ಕಣಿಕ.

ವಧಮೇವ ಪ್ರಶಂಸನ್ತಿ ಶತ್ರೂಣಾಮಪಕಾರಿಣಾಮ್ |
ಸುವಿದೀರ್ಣಂ ಸುವಿಕ್ರಾನ್ತಂ ಸುಯುದ್ಧಂ ಸುಪಲಾಯಿತಮ್ |
ಆಪದ್ಯಾಪದಿ ಕಾಲೇ ಚ ಕುರ್ವೀತ ನ ವಿಚಾರಯೇತ್ || ೧೦ || ಶತ್ರುಗಳನ್ನೂ ಮತ್ತು ಅಪಕಾರಿಗಳನ್ನೂ ವಧಿಸುವುದೇ ಯೋಗ್ಯವೆಂದು ರಾಜನೀತಿಜ್ಞರು ಹೇಳುತ್ತಾರೆ ಮತ್ತು ಹೀಗೆ ಮಾಡುವುದನ್ನು ಅವರು ತಪ್ಪೆಂದು ಭಾವಿಸದೇ ಅದನ್ನು ಪ್ರಶಂಸಿಸುತ್ತಾರೆ. ಎಷ್ಟೇ ಪರಾಕ್ರಮಿಯಾದರೂ ಆತನಿಗೆ ಆಪತ್ತೆಂಬುದು ತಪ್ಪುವುದಿಲ್ಲ.  ಪರಾಕ್ರಮಶಾಲಿಯಾದವನಿಗೆ ಕಾಲಕಾಲಗಳಲ್ಲಿ ಒದಗುವ ಆಪತ್ತುಗಳನ್ನೇ ನಿರೀಕ್ಷಿಸುತ್ತಿದ್ದು, ಆ ಸಮಯದಲ್ಲಿ ಅಂತಹವನ ವಿಷಯದಲ್ಲಿ ಸ್ವಲ್ಪವೂ ದಯೆತೋರದೇ ಅವನನ್ನು ಸಂಹರಿಸಬೇಕು. ಯುದ್ಧದಲ್ಲಿ ಬಹಳ ನುರಿತವನಿಗೂ ಆಪತ್ತಿಲ್ಲವೆಂಬುದಿಲ್ಲ. ಅವನಿಗೂ ಕೆಲವು ಸಮಯಗಳಲ್ಲಿ ಭ್ರಾಂತಿಯುಂಟಾಗುತ್ತದೆ. ಅಂತಹ ಸಮಯವನ್ನೇ ಕಾದಿದ್ದು ಅವನನ್ನು ಪ್ರತಿಭಟಿಸಿ ಪಲಾಯನಮಾಡುವಂತೆ ಮಾಡಬೇಕು. ಶತ್ರುವು ವಿಪತ್ತಿನಲ್ಲಿರುವನೆಂದು ಖಂಡಿತವಾಗಿಯೂ ಕರುಣೆತೋರಬಾರದು. ಅವನ ಸಂಹಾರದಲ್ಲಿಯೇ ರಾಜನಾದವನು ಯೋಚಿಸುತ್ತಿರಬೇಕು.