Search This Blog

Sunday 31 December 2017

ಅಹಿಚ್ಛತ್ರ - ಅಹಿಕ್ಷೇತ್ರ ಕರ್ನಾಟಕವೇ ಅಥವಾ ಕರ್ನಾಟಕದಿಂದ ಹೊರಗಿತ್ತೇ ?

ಕನ್ನಡ ನಾಡನ್ನು ಮೊಟ್ಟಮೊದಲಿಗೆ ಆಳಿದ್ದು ಕದಂಬ ಮಯೂರ. ಈತನ ಬಗ್ಗೆ ಹಲವಾರು ದಂತೆಕಥೆಗಳೇ ಇದ್ದರೂ ಸಹ ಅಹಿಚ್ಛತ್ರಕ್ಕೂ ಕದಂಬರಿಗೂ ಸಂಬಂಧ ಕಲ್ಪಿಸುವುದು ಸಾಮಾನ್ಯ.ಬ್ರಾಹ್ಮಣೋತ್ಪತ್ತಿ ಮಾರ್ತಾಂಡದ ಶ್ಲೋಕ 1 ಪುಟ 577 ರಲ್ಲಿ ಮಯೂರೋ ನಾಮ ನೃಪತಿಃ ಹೇಮಾಂಗದಕುಮಾರಕಃ | ಅಹಿಕ್ಷೇತ್ರೇ ಸ್ಥಿತಾನ್ ವಿವಿಪ್ರಾಂಶ್ಚಾಗತಾನ್ ದ್ವಿಜಪುಂಗವಾನ್ || ಎನ್ನುವ ಉಲ್ಲೇಖ ಕಾಣಸಿಗುತ್ತದೆ.ಹೇಮಾಂಗದನ ಮಗನಾದ ಮಯೂರ ವರ್ಮನು ಅಹಿಕ್ಷೇತ್ರದ ಬ್ರಾಹ್ಮಣರನ್ನು ಕರೆತಂದ ಎನ್ನುವ ಉಲ್ಲೇಖ ಕಾಣಸಿಗುತ್ತದೆ. ಪ್ರಾಚೀನ ಕಾಲದ ಅಹಿಚ್ಚತ್ರ ಎನ್ನುವ ಸ್ಥಳ ಬೇರೆ ಬೇರೆ ಪ್ರದೇಶಗಳಿಗೆ ಹೇಳಲ್ಪಟ್ಟಿದೆ. ಆದರೆ ಅಹಿಚ್ಚತ್ರದಿಂದ ಬ್ರಾಹ್ಮಣರನ್ನು ದೂರದ ದಕ್ಷಿಣಕ್ಕೆ ಕರೆತಂದಿರುವ ಬಗ್ಗೆ ಅನೇಕ ವಿರೋಧಾಭಾಸಗಳಿವೆ. ಮಯೂರ ವರ್ಮನು ಸ್ವತಃ ಬ್ರಾಹ್ಮಣನಾಗಿದ್ದನೆಂದು ಹಲವು ಕಡೆಗಳಲ್ಲಿ ಉಲ್ಲೇಖವಾಗಿವೆ.ಅಥಬಭೂವ ದ್ವಿಜ ಕುಲಂ ಎಂದು ಮತ್ತು ಕದಂಬಕುಲೇ ಶ್ರೀಮಾನ್ ಬಭೂವ ದ್ವಿಜೋತ್ತಮಃ ನಾಮತೋ ಮಯೂರ ಶರ್ಮೇತಿ ಎಂದೂ ತಾಳಗುಂದದ ಶಾಸನದಲ್ಲಿಯೂ ಹಾಗೂ ಗುಡ್ನಾಪುರ ಶಾಸನದಲ್ಲಿ ವೇದ ವೇದಾಂಗ ವಿಶಾರದಃ ಎಂಬ ಉಲ್ಲೇಖ ಸಿಗುತ್ತದೆ. ಹಾಗಿರುವಾಗ ಈ ಪ್ರದೇಶದಲ್ಲಿ ಬ್ರಾಹ್ಮಣರೇ ಇರದಿದ್ದ ಸಂದರ್ಭವಿದ್ದರೆ ಬೇರೆಡೆಯಿಂದ ಬ್ರಾಹ್ಮಣರನ್ನು ಕರೆತರಬೇಕಿತ್ತು. ಕದಂಬ ಮಯೂರ ವರ್ಮ ಅಶ್ವಮೇಧವನ್ನೇ ಮಾಡಿಲ್ಲ ಎನ್ನುವ ಹಲವರ ವಾದಕ್ಕೆ "ಅಶ್ವಮೇಧಾವಭೃಥ ಪವಿತ್ರೀಕೃತಾನ್ವಯಾನಾಂ ಎನ್ನುವ ಉಲ್ಲೇಖ ದೇವಗಿರಿಯೇ ಮೊದಲಾದ ಶಾಸನಗಳಲ್ಲಿ ಸಿಗುತ್ತದೆ. ಎಪಿಗ್ರಾಫಿಯಾ ಕರ್ನಾಟಕ ಸಂಪುಟ 7ರಲ್ಲಿ ಶಾಸನಸಂಖ್ಯೆ 117 ರಲ್ಲಿ ಶಿಖಾರಿಪುರ ತಾಲೂಕಿನ ವಿರಕ್ತಮಠದಲ್ಲಿರುವ ತಾಮ್ರ ಶಾಸನದಲ್ಲಿನ ಉಲ್ಲೇಖದಂತೆ ಮಯೂರವರ್ಮನು ಅನೇಕ ಅಶ್ವಮೇಧಯಾಗಗಳನ್ನು ಮಾಡಿದನೆಂದು ಹೇಳಲ್ಪಟ್ಟಿದೆ. 111ಸಾಲುಗಳ ಈ ಶಾಸನ ಬನವಾಸಿಯನ್ನು ಆಳಿದ ಕದಂಬವೀರ ಸೋಮಭೂಪತಿಯದ್ದು. 
೧೦೫೩ರ ಕದಂಬ ತೈಲಪದೇವನ ಶಾಸನೊಂದರಲ್ಲಿ ಹದಿನೆಂಟು ಅಶ್ವಮೇಧ ಯಾಗವನ್ನು ಮಯೂರವರ್ಮನು ಮಾಡಿದ ಎಂದಿದೆ. ಇದು ಉತ್ಪ್ರೇಕ್ಷೆಯಾದರೂ ಸಹ ಇದರನ್ವಯ ನಾವು ಗಮನಿಸುವುದಾದರೆ ಈ ಶ್ರೌತಯಾಗಕ್ಕೆ ಯಾಗಕ್ಕೆ ಯಾವ ಯಾವ ಕರ್ಮಗಳಿಗೆ ಯಾವ ಬ್ರಾಹ್ಮಣರು ಅವಶ್ಯ ಎನ್ನುವುದನ್ನು ಅರಿತ ಮಯೂರ ಕರೆಸಿರಲೂ ಬಹುದೆನ್ನುವ ಅಭಿಪ್ರಾಯ ಅನೇಕ ವಿದ್ವಾಂಸರಲ್ಲಿದೆ. 
ಎಪಿಗ್ರಾಫಿಯ ಕರ್ನಾಟಕದ 3ನೇ ಸಂಪುಟದ ನಂಜನಗೂಡು ಶಾಸನ ಸಂಖ್ಯೆ 402 ರಲ್ಲಿ ಗಂಗರ ತಾಮ್ರಪಟ ಶಾಸನದಲ್ಲಿ ವೇದ ವಿದ್ಯಾ ಆವಾಸಸ್ಥಾನವಾದ ಅಹಿಚ್ಚತ್ರದಿಂದ ವೇದವಿದರಾದ ಬ್ರಾಹ್ಮಣರು ದಕ್ಷಿಣ ಪ್ರದೇಶವನ್ನು ಪಾವನ ಗೊಳಿಸಲು ಸ್ಥಾಣಗುಂದೂರಿನಲ್ಲಿ ಬಂದು ನೆಲೆಸಿದರು ಎನ್ನುತ್ತದೆ. ತಾಳಗೂಮ್ದದ ಶಿಲಾಶಾಸನದಲ್ಲಿ ಮುಕ್ಕಣ್ಣ ಅಥವಾ ತ್ರಿನೇತ್ರಕದಂಬನೆಂದು ಮಯೂರವರ್ಮನನ್ನು ಹೇಳಿರುವುದಲ್ಲದೇ, ಮುಕ್ಕಣ್ಣ ಕದಂಬನು ಅಹಿಚ್ಚತ್ರಕ್ಕೆ ಹೋಗಿ ಹನ್ನೆರಡು ಸಾವಿರ ಜನ ಬ್ರಾಹ್ಮಣರನ್ನು ಕರೆತಂದ ಎನ್ನುತ್ತದೆ. ಶಿವಮೊಗ್ಗ ಜಿಲ್ಲೆ ಕುಬಟೂರಿನ ಶಾಸನದಲ್ಲಿ "ಅಹಿಚ್ಚತ್ರಪುರೀ ಲಲನಾ ಲಲಾಟ ತಿಲಕರುಂ" ಎಂದು ಬಣ್ಣಿಸಿದೆ. ಆದರೆ ಇಷ್ಟೆಲ್ಲಾ ಆದರೂ ಸಹ ಅಹಿಚ್ಚತ್ರ ಅನ್ನುವುದು ಯಾವುದು ಎನ್ನುವುದರ ಬಗ್ಗೆ ಅನೇಕ ಗೊಂದಲಗಳಿವೆ. ಥಾಮಸ್ ಬುಕನಾನ್ ಪ್ರಕಾರ ಆಂಧ್ರದ ತೆಲಂಗಾಣ ಪ್ರದೇಶದ ಅಹಿಚ್ಚತ್ರದಿಂದ ೫೦೦೦ ಮಂದಿ ಬ್ರಾಹ್ಮಣರನ್ನು ಮಯೂರವರ್ಮ ಕರೆತಂದ ಎನ್ನುತ್ತಾರೆ. ಆದರೆ ಅದಕ್ಕೆ ಯಾವುದೇ ಪೂರಕ ದಾಖಲೆ ನಾನು ನೋಡಿದಂತೆ ಸಿಗುತ್ತಿಲ್ಲ.ಆದರೆ ಮುಲಕನಾಡು ಮುಂತಾದ ಬ್ರಾಹ್ಮಣರು ಆಂಧ್ರ ಮೂಲದಿಂದ ಇದ್ದಿರಬಹುದು ಯಾಕೆ ಅಂದರೆ ಇಂದಿಗೂ ತೆಲುಗು ಆಡು ಭಾಶೆಯನ್ನಾಗಿ ಪಡೆದುಕೊಂಡಿದ್ದಾರೆ. ಶಂಭಾಜೋಷಿಯವರು ಹೇಳುವಂತೆ (ಅಹಿಚ್ಚತ್ತ್ರ ಯಾವುದು? ಅದು ಎಲ್ಲಿದೆ? ಪುಟ 13 - 14ರಲ್ಲಿ) ಉತ್ತರದಲ್ಲಿ ಹಿಂದೆ ಛತ್ರಪುರವೆನ್ನುವ ಊರು ಇತ್ತುಅಹಿಕರು ಪ್ರಾಬಲ್ಯ ಹೊಂದಿದ್ದರಿಂದ ಅದನ್ನು ಅಹಿಚ್ಚತ್ರ ಎನ್ನುತ್ತಿದ್ದರು ಎನ್ನುತ್ತಾರೆ. ಆದರೆ ಇದಕ್ಕೂ ಸಹ ಸೂಕ್ತ ಆಧಾರ ಸಿಗುವುದಿಲ್ಲ. ಇನ್ನು ಕರಾವಳಿಯ ನಾಗರಖಂಡ ದ ಬಗ್ಗೆ ನೋಡುವುದಾದರೆ, ನಾಗ ಎನ್ನುವುದು ಹಾವಿನ ಇನ್ನೊಂದು ಹೆಸರಲ್ಲವೇ, ಅಹಿ ಎನ್ನುವುದು ನಾಗನಿಗೂ ಸಲ್ಲುತ್ತದೆ.ಅಹಿಕ್ಷೇತ್ರ ಎನ್ನುವುದೇ ಅಹಿಚ್ಚತ್ರವಾಗಿರಲೂ ಬಹುದು. ಎಪಿಗ್ರಾಫಿಯಾ ಕರ್ನಾಟಕ ೮ನೇ ಸಂಪುಟ ಸೊರಬ 228 ರ ಸಾಲು 43 - 44 ರಲ್ಲಿ ಮತ್ತು276ನೇ ಶಾಸನ ಸಂಖ್ಯೆಯಲ್ಲಿ ಹಾಗೂ ಶಾಸನ ಸಂಖ್ಯೆ 225 ರಲ್ಲಿ ನಾಗರ ಖಂಡದಉಲ್ಲೇಖ ವಿಸ್ತಾರವಾಗಿ ಬಂದಿದೆ. 
ಇವೆಲ್ಲವನ್ನೂ ಗಮನಿಸಿದರೆ ಕರ್ನಾಟಕದ ಕರಾವಳಿ ಭಾಗವನ್ನೇ ಅಹಿಚ್ಛತ್ರವೆಂದು ಕರೆದಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇನ್ನು ವಿಸ್ತೃತವಾಗಿ ಮಾನ್ಯ ಸಚಿನ್ ಭಟ್ಟರ ಅಭಿಪ್ರಾಯದೊಂದಿಗೆ ನನ್ನ ಅಭಿಪ್ರಾಯವನ್ನು ಸೇರಿಸಿದಾಗ ಆರನೇ ಶತಮಾನದ್ದೆನ್ನಲಾಗುವ ಚ೦ದ್ರವಳ್ಳಿಯ ಶಾಸನದ ಪ್ರಕಾರ ಕದ೦ಬರ ರಾಜ್ಯ ಉತ್ತರದಲ್ಲಿ ಮಹಾರಾಷ್ಟ್ರದ ಭರೂಚದವರೆಗೂ, ಪೂರ್ವದಲ್ಲಿ ಆ೦ಧ್ರದವರೆಗೂ ವಿಸ್ತರಿಸಿತ್ತು. ತ್ರೈಕೂಟ, ಅಭೀರ, ಪಲ್ಲವ, ಪಾರಿಯಾತ್ರಿಕ, ಸೇ೦ದ್ರಕ, ಪುನ್ನಾಟ, ಮೌಖರಿ, ಪಶ್ಚಿಮ ವಿ೦ಧ್ಯ ಪ್ರದೇಶಗಳನ್ನೊಳಗೊ೦ಡಿತ್ತು. ಅವರ ರಾಜ್ಯದ ಒಳಗೇ ಇರುವ ಗೋದಾವರಿ ಮೂಲದ ಅಹಿಚ್ಛತ್ರದಿ೦ದ ಬ್ರಾಹ್ಮಣರನ್ನು ಕರೆಸಿ ಇಲ್ಲಿ ನೆಲೆನಿಲ್ಲಿಸಿರಬಹುದೇ? ಹಾಗಾದರೆ ಈ ಗೋದಾವರಿ ತೀರವಿರುವುದು ಮಹಾರಾಷ್ಟ್ರದಲ್ಲೇ ಅಥವಾ ಆ೦ಧ್ರದಲ್ಲೇ? ಕದ೦ಬ ರಾಜರ ಕು೦ತಳ ರಾಜ್ಯದಲ್ಲಿ ತುಳುನಾಡಿನ ಆಲುಪರು ದರ್ಮಾಭಿಮಾನಿಗಳೂ, ಸತ್ಯಪುತ್ರರೂ ಆಗಿದ್ದರಿ೦ದ(ಇದು ಗಿರ್ನಾರ್ ಬಂಡೆ ಶಾಸನಗಳಲ್ಲಿ ಪ್ರಾಕೃತ ಮತ್ತು ಬ್ರಾಹ್ಮಿಯಲ್ಲಿ ಸತಿಯಪುತೋ ಎಂದು ಉಲ್ಲೇಖಗೊಂಡಿದೆ) ಅವರ ಆಶಯ ಪ್ರೋತ್ಸಾಹವೂ ಸೇರಿ ಕ್ರಿ.ಶ. ಮೂರನೇ ಶತಮಾನದ ಸುಮಾರಿಗೆ ಅಹಿಚ್ಛತ್ರದ ಬ್ರಾಹ್ಮಣರು ಬ೦ದರೇ? ಹಾಗೆ ಬಂದವರು ಬ್ರಾಹ್ಮಣರು ಮಾತ್ರವಲ್ಲ. ನಂಬೂದಿರಿಗಳು, ತಮಿಳಿನ ಗೌಂಡರ್ ಸಮುದಾಯ, ನಾಗಾ ಸಮುದಾಯಕ್ಕೆ ಸೇರಿದ ಕೇರಳದ ನಾಯರರು, ತುಳುನಾಡಿನ ಬಂಟರು, ಆಂಧ್ರದ ನಾಯ್ಡುಗಳು ಕೂಡ ಇದ್ದಾರೆ. ಇವರೆಲ್ಲರ ಇತಿಹಾಸಗಳೂ ಅಹಿಚ್ಛತ್ರವನ್ನೇ ಉಲ್ಲೇಖಿಸುತ್ತವೆ. ಹಾಗಾದರೆ ಆ ಅಹಿಚ್ಛತ್ರ ಒಂದೇ ಆಗಿತ್ತೇ ಅಥವಾ ಹಲವು ಪ್ರದೇಶಗಳಿಗೆ ಆ ಹೆಸರಿತ್ತೇ? ಒಂದೇ ಪ್ರದೇಶದಿಂದ ಬೇರೆ ಬೇರೆ ಸಮುದಾಯಗಳ ಅಷ್ಟು ದೊಡ್ಡ ಮಟ್ಟಿನ ವಲಸೆಗೆ ಕಾರಣಗಳೇನು? ಕೋಟ ಬ್ರಾಹ್ಮಣರು ಅಹಿಚ್ಛತ್ರದಿ೦ದ ಆಂಧ್ರದ ಗೋದಾವರಿ, ಗೋದಾವರಿಯಿ೦ದ ಬನವಾಸಿ, ಬನವಾಸಿಯ ಬಳಿಕ ಈ ಹಾದಿಯಲ್ಲಿ ಹಾಡುವಳ್ಳಿ, ಬೈ೦ದೂರು ಮಾರ್ಗವಾಗಿ ಸಹ್ಯಾದ್ರಿಯ ತಪ್ಪಲಿನ ಪ್ರಮುಖ ಸ೦ಪರ್ಕಪ್ರದೇಶವಾದ ಗ೦ಗನಾಡಿಗೆ ಬ೦ದು ನೆಲೆಸಿದರೆಂದು ಪಿ.ಎನ್. ನರಸಿ೦ಹಮೂರ್ತಿಯವರು ಸಂಪಾದಿಸಿದ ಕು೦ದನಾಡಿನ ಶಾಸನಗಳಲ್ಲಿ ತಿಳಿಸಲಾಗಿದೆ. ಶಾಂಕರ, ಮಾಧ್ವ ಮತಗಳ ಪ್ರಭಾವಕ್ಕೊಳಗಾಗದೇ ತಮ್ಮ ಮೂಲ ಆಚರಣೆಗಳನ್ನು ಉಳಿಸಿಕೊಂಡು ಬಂದ ಕರಾವಳಿಯ ಏಕೈಕ ಬ್ರಾಹ್ಮಣ ಸಮುದಾಯವಿದ್ದರೆ ಅದು ಕೂಟ ಬ್ರಾಹ್ಮಣರು. ಅವರ ಆರಾಧ್ಯ ದೈವ ನರಸಿಂಹ. ಆಂಧ್ರದಲ್ಲಿರುವಷ್ಟು ದೊಡ್ಡ ಮಟ್ಟಿನ ನರಸಿಂಹಾರಾಧನೆಯನ್ನು ಬೇರಾವ ರಾಜ್ಯಗಳಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂಬುದೊಂದು ವಿಶೇಷ.’ಉತ್ತರದಲ್ಲಿ ಅಲೆಕ್ಸಾ೦ಡರಿನ ದಾಳಿಯ ನ೦ತರ ಹೆಚ್ಚಾದ ಪರದೇಶಿ ಆಕ್ರಮಣಗಳು, ಅಶೋಕನ ಕಾಲದಲ್ಲಿ ಬೌದ್ಧ ಧರ್ಮಕ್ಕೆ ಸಿಕ್ಕ ಪ್ರೋತ್ಸಾಹ ವಿಪ್ರರ ವಲಸೆಯನ್ನು ಪ್ರೋತ್ಸಾಹಿಸಿತು. ಕ್ರಿ.ಪೂ 50 ರಿ೦ದ ಕ್ರಿ.ಶ 200ರ ತನಕ ದಕ್ಷಿಣದಲ್ಲಿ ರಾಜ್ಯವಾಳಿದ ಶಕಪುರುಷ, ದಕ್ಷಿಣಾಪಥಪತಿ ಶಾಲಿವಾಹನ ಚಕ್ರವರ್ತಿಯ ಆಶ್ರಯ, ನಿರ೦ತರ ಯಜ್ಞಯಾಗದಿ೦ದ ಇವರ ವಲಸೆಗೆ ನೆರವು ಸಿಕ್ಕಿತು’ ಎಂದು ನಮ್ಮೂರಿನವರೇ ಆದ ಶ್ರೀ ಉಪ್ಪುಂದ ಚಂದ್ರಶೇಖರ ಹೊಳ್ಳರು ತಮ್ಮ ’ಕೂಟಮಹಾಜಗತ್ತು’ ಎಂಬ ಸಂಶೋಧನಾ ಗ್ರಂಥದಲ್ಲಿ ಹೇಳಿದ್ದಾರೆ. ಅವರ ಊಹೆ ಸರಿಯಾದುದಾದರೂ, ಗ್ರಹಿಕೆ ಸರಿಯಿಲ್ಲವೆನ್ನುವುದು ನನ್ನಭಿಪ್ರಾಯ. ಮೌರ್ಯರಿದ್ದುದು ಕ್ರಿ.ಪೂ ಹತ್ತನೇ ಶತಮಾನಕ್ಕೂ ಹಿಂದೆ ಎಂದು ನಾನು ಈಗಾಗಲೇ ಹೇಳಿ ಆಗಿತ್ತು. ಅಲೆಕ್ಸಾಂಡರ್ ದಾಳಿಮಾಡಿದ್ದು ಗುಪ್ತರ ಕಾಲದಲ್ಲಿ, ಮೇಲಾಗಿ ಅಸಲಿ ಶಾಲಿವಾಹನನಾಳಿದ್ದು ಉಜ್ಜೈನಿಯನ್ನೇ ಹೊರತೂ ದಕ್ಷಿಣಾಪಥವನ್ನಲ್ಲ, ಕ್ರಿ.ಶ 78ರಲ್ಲಿ ಪ್ರಾರಂಭವಾದ ಶಾಲಿವಾಹನ ಶಕೆಯ ಪ್ರಾರಂಭಕರ್ತೃ ಶಕಪುರುಷ ಶಾಲಿವಾಹನನೆಂದೇ ತಲೆಕೆಟ್ಟ ಬ್ರಿಟಿಷ್ ಇತಿಹಾಸಕಾರರಿಂದ ಗುರುತಿಸಲ್ಪಟ್ಟ ದಕ್ಷಿಣಾಪಥಪತಿ, ತ್ರಿಸಮುದ್ರತೋಯಪೀತವಾಹನನೆಂದೆಲ್ಲ ಬಿರುದಾಂಕಿತ ಗೌತಮೀಪುತ್ರಶಾತಕರ್ಣಿ ಆಳ್ವಿಕೆ ನಡೆಸಿದ ಕಾಲ ಕ್ರಿ.ಪೂ ೪ನೇ ಶತಮಾನ. ಈ ಮೂರೂ ಅಂಶಗಳಿಗೂ ತಾಳಮೇಳವಿಲ್ಲ. ಮೇಲಾಗಿ ಅಲೆಕ್ಸಾಂಡರಿನ ಆಕ್ರಮಣವಾದರೂ ಆತ ಸಿಂಧೂನದಿಯನ್ನು ದಾಟಲಾಗಲಿಲ್ಲವೆಂಬುದು ಸತ್ಯ. ಕಾರಣ, ಆಗ ಉತ್ತರ ಭಾರತವನ್ನಾಳುತ್ತಿದ್ದುದು ಯಾವುದೋ ಸಣ್ಣ ಪುಟ್ಟ ಚಿಲ್ಲರೆ ರಾಜವಂಶವಲ್ಲ. ಭಾರತದ ಸ್ವರ್ಣಯುಗದ ಸೃಷ್ಟಿಕರ್ತೃರೆನಿಸಿಕೊಂಡ ಗುಪ್ತರು ಅಲ್ಲಿ ಪಟ್ಟಕ್ಕೇರಿದ್ದರು. ವೈದಿಕ ಸಂಸ್ಕೃತಿ, ಸಂಪ್ರದಾಯಗಳ ರಕ್ಷಣೆಗೆ ಗುಪ್ತರ ಕೊಡುಗೆ ಕಡಿಮೆಯೇನಲ್ಲ. ಅಲೆಕ್ಸಾಂಡರಿನಂಥ ವೀರನೇ ಭಾರತದೊಳಬರಲು ಹೆದರಿದ್ದನೆಂದರೆ ಸಮಕಾಲೀನ ರಾಜನೀತಿಯಲ್ಲಿ ಗುಪ್ತರ ಪ್ರಾಬಲ್ಯವನ್ನು ಊಹಿಸಬಹುದು. ಅಂಥಹುದರಲ್ಲಿ ಉತ್ತರ ಭಾರತದಲ್ಲಿ ವಿದೇಶಿಗರ ಆಕ್ರಮಣ ತಾಳಲಾರದೇ ಬ್ರಾಹ್ಮಣರು ಅಲ್ಲಿಂದ ದಕ್ಷಿಣಕ್ಕೆ ವಲಸೆಬಂದರೆಂಬುದು ಸಾಧುವಾದವಲ್ಲ. ಸುದೀರ್ಘ 50 ವರ್ಷಗಳ ಕಾಲ ರಾಜ್ಯವಾಳಿದ ಸಮುದ್ರಗುಪ್ತ , ಸಪ್ತಸಿ೦ಧೂ ಪ್ರದೇಶಗಳನ್ನು ಆಕ್ರಮಿಸಿ ಆ ಭಾಗದ ಯೌಧೇಯರನ್ನು ತನ್ನ ಅಧೀರರನ್ನಾಗಿಸಿದ ವಿಚಾರ ಅವನ ಅಲಹಾಬಾದಿನ ಸ್ತಂಭ ಶಾಸನದಲ್ಲಿ ಉಲ್ಲೇಖಿತವಾಗಿದೆ. ಅದರಲ್ಲಿ ಸಮುದ್ರಗುಪ್ತನು ಸಟ್ಲೇಜ್ ನದಿ ಪ್ರದೇಶದ ಬ್ರಹ್ಮಾವರ್ತವನ್ನೂ, ದಕ್ಷಿಣಾಪಥವನ್ನೂ ಆಕ್ರಮಿಸಿ ಅಹಿಚ್ಛತ್ರದ ರಾಜನಾದ ಅಚ್ಯುತನನ್ನೂ, ಚಂಪಾವತಿಯ ನಾಗಸೇನನನ್ನೂ, ಕೋಟದ ಮುಖ್ಯಸ್ಥನನ್ನೂ ಜಯಿಸಿದನೆ೦ದು ಹೇಳಿಕೊಂಡಿದ್ದಾನೆ. ಪೊಳಲಿ ನಾರಾಯಣ ಮಯ್ಯರು ’ಕೂಟಬಂಧು’ ಮಾಸಿಕದಲ್ಲಿ ಇದನ್ನೊಮ್ಮೆ ಪ್ರಸ್ತಾವಿಸಿದ್ದರು. ಆಂಧ್ರದ ಗೋದಾವರಿಯ ದಕ್ಷಿಣಕ್ಕೆ ಚಂಪಾವತಿ ನದಿಮುಖಜ ಭೂಮಿಯ ಪ್ರದೇಶಕ್ಕೆ ಚಂಪಾವತಿಯೆಂದು ಹೆಸರು. ಅವೆರಡೂ ಒಂದೇ ಆಗಿರಬಹುದೇ? ಕೋಟ ಎಂಬ ಹೆಸರಿನ ಊರು ಕರ್ನಾಟಕದ ಉಡುಪಿ ಹಾಗೂ ಆಂಧ್ರಪ್ರದೇಶ ನೆಲ್ಲೂರು ಈ ಎರಡೂ ಕಡೆಯೂ ಇವೆ(ರಾಜಸ್ಥಾನ, ಮಲೇಷಿಯಾಗಳಲ್ಲೂ ಇವೆ). ಅಹಿಚ್ಛತ್ರವೂ ಅಲ್ಲೆಲ್ಲೋ ಹತ್ತಿರದಲ್ಲೇ ಇರಬಹುದೇ? ಇದೇ ಸಮುದ್ರಗುಪ್ತ ಪಲ್ಲವರೊಡನೆ ಕಾದಾಡಿ ಶಿವಸ್ಕಂಧವರ್ಮನನ್ನು ಸೋಲಿಸಿದ್ದ. ಈ ಸೋಲಿನಿಂದ ಪಲ್ಲವರು ಬಲಗುಂದಿದ್ದನ್ನೇ ನೋಡಿಕೊಂಡು ಮಯೂರವರ್ಮ ಕದಂಬ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡ. ಇವುಗಳೆಲ್ಲಾ ಏನೇ ಇರಲಿ ಅಹಿಛ್ಛತ್ರವೆನ್ನುವುದು ಕರ್ನಾಟಕದ ಕರಾವಳಿ ಪ್ರದೇಶ ಎನ್ನುವುದು ನನ್ನ ಅಭಿಪ್ರಾಯ. ಕರಾವಳಿಯಲ್ಲಿ ಮೊದಲೇ ಬ್ರಾಹ್ಮಣ ವಸತಿ ಇದ್ದಿತ್ತು ಎಂದಿಟ್ಟುಕೊಳ್ಳೋಣ. ಆದರೆ ಯಜ್ಞಯಾಗಾದಿಗಳನ್ನು ಋಷಿಸ೦ಪ್ರದಾಯ ಪ್ರವರ್ತಕರೂ, ಮ೦ತ್ರವೇತ್ತರೂ, ಮ೦ತ್ರದೃಷ್ಟಾರರೂ ಅಗಿರುವವರಿ೦ದಲೇ ಮಾಡಿಸಬೇಕಿತ್ತು. (ಹೆಚ್ಚಿನ ವಿವರ ವೇ.ಬ್ರ. ಬನವತಿ ರಾಮಕೃಷ್ಣ ಶಾಸ್ತ್ರಿಗಳ ’ಗೋತ್ರಪ್ರವರ ವಿಷಯ’). ಹಾಗಾಗಿದ್ದರಿಂದಲೇ ಮಯೂರ ವರ್ಮ ವೇದಪಾರಂಗತರನ್ನು ಬೇರೆಡೆಯಿಂದ ಕರೆಸಬೇಕಾಯ್ತು. ಕರ್ನಾಟಕ ಚರಿತ್ರೆ ಸ೦ಪುಟ 1 ಪುಟ 316ರಲ್ಲಿಯೂ ಉಲ್ಲೇಖಿಸಿದ೦ತೆ ನಾಸಿಕದ ಮಾಧವಪುರ ಷಟ್‌ಕೋನ ಸ್ಯೂಪಸ್ಥ೦ಭ ಶಾಸನವು ಸಾಕೇತ ಅಯೋಧ್ಯೆಯಿ೦ದ ಬ೦ದ ಕಾಶ್ಯಪ ಗೋತ್ರದ ಕಠಶಾಖೆಯ ಸೋಮಯಶಸ್ ಬ್ರಾಹ್ಮಣನು ಕ್ರಿ.ಶ 102ರಲ್ಲಿ(?) ವಾಜಪೇಯ ಯಾಗವನ್ನು ಶಾತವಾಹನ ರಾಜರ ಪರವಾಗಿ ನೇರವೇರಿಸಿದ ಎಂದಿದೆ. ಈ ಶಾತವಾಹನರ ಪ್ರಾ೦ತೀಯ ರಾಜಧಾನಿ ಬನವಾಸಿಯಾಗಿತ್ತು. ಶಾತವಾಹನರ ಬಳಿಕ ಕರಾವಳಿ ಮ೦ಡಲವನ್ನಾಳತೊಡಗಿದ ಒ೦ದನೇ ಚುಟುಕುಲಾನ೦ದ ಶಾತಕರ್ಣಿ ಮತ್ತವನ ಮಗ ಎರಡನೇ ಮಗ ವಿಣ್ಹೆ ಚುಟುಕುಲಾನ೦ದ ಶಾತಕರ್ಣಿಯರು ಅನೇಕ ಯಾಗಗಳನ್ನು ನೆರವೇರಿಸಿ ದಾನದತ್ತಿ ನೀಡಿದ ಬಗ್ಗೆ ಶಾಸನಗಳಿವೆ. ಶಾತವಾಹನರು ಹಾರೀತ ಪುತ್ರರೆ೦ದೂ, ಮಾನ್ಯ ಗೋತ್ರದವರೆ೦ದೂ ತಮ್ಮನ್ನು ಕರೆದುಕೊ೦ಡಿದ್ದರು. ಅವರ ನ೦ತರ ಆಳ್ವಿಕೆಗೆ ಬ೦ದ ಮಯೂರವರ್ಮ ತಾನು ಶಿವಸ್ಕ೦ದವರ್ಮನ ಮರಿಮೊಮ್ಮಗ, ವೀರಶರ್ಮನ ಮೊಮ್ಮಗ, ಬ೦ಧುಷೇಣನ ಮಗನೆಂದೂ ಹಾರೀತ ಪುತ್ರ, ಮಾನ್ಯ ಗೋತ್ರದವನೆ೦ದೂ ಹೇಳಿಕೊಂಡು ತನ್ನ ಮೂಲವನ್ನು ಶಾಲಿವಾಹನರ ಜೊತೆ ಗುರುತಿಸಿಕೊಂಡಿದ್ದಾನೆ. ಉತ್ತರದಲ್ಲಿ ಅಲೆಕ್ಸಾ೦ಡರಿನ ದಾಳಿಯ ನ೦ತರ ಹೆಚ್ಚಾದ ಪರದೇಶಿ ಆಕ್ರಮಣಗಳು, ಅಶೋಕನ ಕಾಲದಲ್ಲಿ ಬೌದ್ಧ ಧರ್ಮಕ್ಕೆ ಸಿಕ್ಕ ಪ್ರೋತ್ಸಾಹ, ಅಶೋಕನ ಮೊಮ್ಮಗ ಸಮ್ಪ್ರತಿಯ ಕಾಲದಲ್ಲಿ ಆ೦ಧ್ರದ ಗೋದಾವರಿ ತಟದವರೆಗೆ ಹಬ್ಬಿದ್ದ ಕಳಿ೦ಗರಾಜ್ಯದಲ್ಲಿ ಜೈನಮತಾಚರಣೆ ವ್ಯಾಪಕಗೊ೦ಡಿದ್ದು ವಿಪ್ರರ ವಲಸೆಯನ್ನು ಗೋದಾವರಿಯ ದಕ್ಷಿಣಕ್ಕೆ ಪ್ರೋತ್ಸಾಹಿಸಿತು. ಕಳಿ೦ಗ ರಾಜ್ಯದ ರಾಜಧಾನಿ ಕಳಿ೦ಗಪಟ್ಟಣವಿರುವುದು ಆ೦ಧ್ರದ ಗೋದಾವರಿ ತೀರದ ಶ್ರೀಕಾಕುಳ೦ನಲ್ಲಿ. ಖಾರವೇಲರ ಕಾಲದಲ್ಲಿ ಉತ್ತರ ಆ೦ಧ್ರದ ಬಹುಭಾಗ ಜೈನಮತ ಪ್ರವರ್ಧಮಾನಕ್ಕೆ ಬ೦ದು ವೈದಿಕ ಮತ ಅನಾದರಕ್ಕೆ ಕಾರಣವಾಗಿತ್ತು. ಅದೇ ಕಾರಣಕ್ಕೋ ಏನೋ ಕಳಿ೦ಗ ರಾಜ್ಯಕ್ಕೆ ಕಾಲಿಟ್ಟರೆ ಪ್ರಯಶ್ಚಿತ್ತ ಮಾಡಿಕೊಳ್ಳಬೇಕೆ೦ದು ಬೋಧಾಯನ ಒ೦ದು ಕಡೆ ಹೇಳುತ್ತಾನೆ. ಹಾಗೆ ನೋಡಿದರೆ ಯಜುರ್ವೇದದ ಸೂತ್ರಕಾರರಾದ ಆಪಸ್ತಂಭ ಮತ್ತು ಬೋಧಾಯನರಿಬ್ಬರೂ ಆಂಧ್ರದೇಶದವರೇ ಅಂದರೆ ಆಂಧ್ರದೇಶವು ಮೊದಲಿನಿಂದಲೂ ವೈದಿಕ ಚಟುವಟಿಕೆಗಳ ಮುಖ್ಯಕೇಂದ್ರವಾಗಿತ್ತು. ಉತ್ತರದಿಂದ ಗೋದಾವರೀ ತೀರಕ್ಕೆ ಬಂದಿರಬಹುದಾಗಿದ್ದ ವಿಪ್ರರು ಶಾತವಾಹನರ ನಂತರ ಅಲ್ಲಿಂದ ಮತ್ತೆ ದಕ್ಷಿಣದತ್ತ ಉನ್ನತ ಸ್ಥಾನಮಾನವನ್ನರಸಿ ತೆರಳಿರಬಹುದು. 
ಶಾತವಾಹನ ಸಾಮ್ರಾಜ್ಯದಲ್ಲಿ ಮೊದಲ ಮಗ ಪಟ್ಟಕ್ಕೇರುತ್ತಿದ್ದ. ಉಳಿದ ಮಕ್ಕಳು ಮತ್ತು ಅಳಿಯಂದಿರು ವಿವಿಧ ಮಂಡಳಗಳ ಅಥವಾ ಪ್ರಾಂತ್ಯಗಳ ಅಧಿಪತಿಗಳಾಗುತ್ತಿದ್ದರು. ಶಾತವಾಹನರ ಕೊನೆಯ ಅರಸು ಪುಲೋಮಶ್ರೀ ಶಾತಕರ್ಣಿಯ ಕಾಲದಲ್ಲಿ ಸಾಮ್ರಾಜ್ಯ ಶಿಥಿಲವಾಗಿತ್ತು. ಚಿಕ್ಕ ಚಿಕ್ಕ ಪ್ರಾಂತ್ಯಗಳ ಆಡಳಿತಾಧಿಕಾರಿಗಳಾಗಿದ್ದ ವಂಶಸ್ಥರೆಲ್ಲ ದಾಯಾದಿ ಕಲಹದಲ್ಲಿ ತೊಡಗಿ ಹೊಡೆದಾಡತೊಡಗಿದರು. ಅವರಲ್ಲಿ ಕೆಲವರು ಸ್ವಾತಂತ್ರ್ಯವನ್ನು ಘೋಷಿಸಿಕೊಂಡು ತಮ್ಮದೇ ರಾಜ್ಯ ಕಟ್ಟಿಕೊಂಡರು. ಮುಂದೆ ಶಾತವಾಹನ ಸಾಮ್ರಾಜ್ಯ ಹನ್ನೆರಡು ಕವಲುಗಳಾಗಿ ಒಡೆದು ಹೋಯಿತೆಂದು ಬ್ರಹ್ಮಾಂಡಪುರಾಣ(ಅಂಧ್ರಾರಾಮ್ ಸಂಸ್ಥಿತಾಃ ಪಂಚ ತೇಷಾಮ್ ವಸಶ್ಚಃ ಯೇ ಪುನ ಸಪ್ತೈವತು ಭವಿಷ್ಯಂತಿ - ಅಧ್ಯಾಯ 77, 171) ಮತ್ತು ವಾಯುಪುರಾಣಗಳು ತಿಳಿಸುತ್ತವೆ. ಪಲ್ಲವರು, ಸೇನ, ಕದಂಬ, ವಿಷ್ಣುಕೌಂಡಿನ್ಯ, ಬೃಹತ್ಪಾಲ, ಬಾಣ, ರಾಜಪುತ್ರ, ಸಾಲಂಖ್ಯಾಯನ, ವಕಟಕ, ವಲ್ಲಭೀ, ವೈದುಂಬ, ನೊಳಂಬರೆಲ್ಲರ ಮೂಲವೂ ಆಂಧ್ರಶಾತವಾಹನರೇ. ಶಾತವಾಹನ ವಂಶಸ್ಥರು ಕಾಶ್ಮೀರವನ್ನೂ ಆಳಿದ್ದರೆಂದು ಕಲ್ಹಣನ ರಾಜತರಂಗಿಣಿ ತಿಳಿಸುತ್ತದೆ. ಪಲ್ಲವರು ಮುಂದೆ ಕಂಚಿಯನ್ನು ರಾಜಧಾನಿಯನ್ನಾಗಿಸಿಕೊಂಡರೂ ಅವರ ಮೂಲ ತೆಲುಗು ನಾಡೇ. ಅವರು ಮೊದಲು ಆಳಿದ್ದು ಕೃಷ್ಣಾ ಮತ್ತು ಗುಂಟೂರು ವಲಯವನ್ನು. ಮುಂದೆ ಸ್ಕಂದವರ್ಮನ ಕಾಲದಲ್ಲಿ ಅದು ಕೃಷ್ಣಾ ನದಿಯಿಂದ ದಕ್ಷಿಣದಲ್ಲಿ ಪೆನ್ನಾರ್ ವರೆಗೂ ಪಶ್ಚಿಮದಲ್ಲಿ ಬಳ್ಳಾರಿಯವರೆಗೂ ವಿಸ್ತರಣೆಯಾಯಿತು. ಪಲ್ಲವ ಶಬ್ದಾರ್ಥವೇ ಬಳ್ಳಿ ಅಥವಾ ಎಲೆ. ಇದರಲ್ಲಿನ ಅನೇಕ ವಿಷಯಗಳು. ಎಲ್ಲಾ ಕಡೆಗಳಿಂದ ತೆಗೆದುಕೊಂಡಿದ್ದೇನೆ. 
ಅಹಿಚ್ಚತ್ರದಿಂದ ಬ್ರಾಹ್ಮಣರಾಗಿದ್ದರೆ ಉತ್ತರದ ಶಾಖ್ಹೆಯ ವೇದಗಳನ್ನು ಇಲ್ಲಿ ಸ್ವಲ್ಪವಾದರೂ ಉಳಿಸಿಕೊಳ್ಳುತ್ತಿರಲಿಲ್ಲವೇ ?? ಇಲ್ಲಿ ಬ್ರಾಹ್ಮಣರ ಕೊರತೆ ಇತ್ತೇ ??

Friday 29 December 2017

ಪ್ರಾಚೀನ ಕನ್ನಡದ ಶಾಸನಗಳಲ್ಲಿ ಸಾಯನ - ನಿರಯನ.

ಕನ್ನಡದ ಶಾಸನಗಳಲ್ಲಿ ವರ್ಷಗಳನ್ನು ಉಲ್ಲೇಖಿಸುವಾಗ ಯಾವ ಶಕಮಾನವನ್ನು ಬಳಸುತ್ತಿದ್ದರು ಎಂದು ನೋಡುವುದಾದರೆ ನಮ್ಮ ಸಾಹಿತ್ಯದಲ್ಲಿ ಕಲಿಯುಗಾದಿಯಿಂದ ಸಂದ ವರ್ಷಗಳು, ಯುಧಿಷ್ಠಿರ ಶಕೆಯ ವರ್ಷಗಳು, ಉತ್ತರಭಾರತದಲ್ಲಿ ವಿಕ್ರಮ ಶಕೆ ಮತ್ತು ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಶಾಲಿವಾಹನ ಶಕೆಯನ್ನು ಬಳಸುತ್ತಾರೆ. ಇವುಗಳು ಸರ್ವೇ ಸಾಮಾನ್ಯ, ಆದರೆ ಕನ್ನಡದ ಶಾಸನಗಳಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಆಳುತ್ತಿದ್ದ ರಾಜರು ತಮ್ಮ ಆಳ್ವಿಕೆಯ ವರ್ಷಗಳನ್ನು ಮೊದಲ ಉಲ್ಲೇಖ ಸಿಗುವುದು ಬಾದಾಮಿ ಚಲುಕ್ಯ ವಿನಯಾದಿತ್ಯನು ಹರಿಹರದಲ್ಲಿ ಬರೆಸಿದ ಸಂಸ್ಕೃತ ಮತ್ತು ಕನ್ನಡಮಿಶ್ರ ಶಾಸನದಲ್ಲಿ ಕನ್ನಡದ ಆರಂಭದ ಸಾಲು ಪೌಣ್ರ್ಣಮಾಸ್ಯಾಂ ಶ್ರೀಮದಾಳುವರಾಜವಿಜ್ಞಾಪನಯಾ ಎಂದು ಪೌರ್ಣಮಿಯನ್ನು ಸೂಚಿಸುತ್ತಾ ಆರಂಭವಾಗುತ್ತದೆ. ಇದರ ನಂತರ ಕ್ರಿ.ಶ. 726ರ ಗಂಗ ಶ್ರೀಪುರುಷನ ತಲಕಾಡಿನ ದಾನಶಾಸನದಲ್ಲಿ ಶ್ರೀಪುರುಷಮಹಾರಾಜ ಪೃಥಿವೀರಾಜ್ಯಂಗೆಯೆ ಪ್ರಥಮ ವಿಜಯಸಮ್ಬತ್ಸರಂ ಕಾರ್ತ್ತಿಗೆ ಪುಣ್ಣಮೆ ಅನ್ದು ಎನ್ನುವ ಉಲ್ಲೇಖ ಕಾಣಸಿಗುತ್ತದೆ. ಆದರೆ ಅಧಿಕೃತವಾಗಿ ಹಾಸನ ಜಿಲ್ಲೆಯ ಅರಕಲಗೂಡಿನ ಮರೂರಿನ ಕ್ರಿ.ಶ. 912ರ ಗಂಗನೀತಿಮಾರ್ಗನ ಶಾಸನದಲ್ಲಿ “ಸತ್ಯವಾಕ್ಯ ಪೆಮ್ರ್ಮನಡಿಗಳ ಪತ್ತೊಮ್ಭತ್ತನೆಯ ವರಿಸದೊಳ್ ಎಂದು ಬರೆಯಲಾಗಿದೆ ಅದಲ್ಲದೇ ಶ್ರೀರಂಗಪಟ್ಟಣದ ರಾಮಪುರದಲ್ಲಿ ಸತ್ಯವಾಕ್ಯಪೆರ್ಮಾನಡಿಯು ಬರೆಸಿದ ಜಿನ ಶಾಸನದಲ್ಲಿ ಕಾಣಸಿಗುತ್ತದೆ. ಅಲ್ಲಿ “ಶ್ರೀರಾಜ್ಯವಿಜಯಸಮ್ಬತ್ಸರ ಸತ್ಯವಾಖ್ಯಪೆರ್ಮ್ಮಾನಡಿಗಳಾಳುಮು(ವ)ತ್ತ ನಾಲ್ಕನೆಯ ವರ್ಷದ ಮಾರ್ಗ್ಘಸಿರಮಾಸದ ಪೆಱತಲೆದಿವಸವಾಗೆ” ಎಂದು ಬರೆಯಲಾಗಿದೆ. 
ಬಹಳಷ್ಟು ಕನ್ನಡ ಶಾಸನಗಳಲ್ಲಿ “ಬಾರ್ಹಸ್ಪತ್ಯಮಾನ”ದ ಅರವತ್ತು ವರ್ಷಗಳ ಸಂವತ್ಸರ ಪದ್ಧತಿಯನ್ನು ಅನುಸರಿಸಿ ಉಲ್ಲೇಖಿಸಲಾಗಿದೆ. ಬಾರ್ಹಸ್ಪತ್ಯಮಾನದಲ್ಲಿ ಒಂದು ಸಂವತ್ಸರ ಚಕ್ರವು ಪ್ರಭವದಿಂದ ಆರಂಭಗೊಂಡು ಅಕ್ಷಯ ಅಥವಾ ಕ್ಷಯ ಸಂವತ್ಸರದೊಂದಿಗೆ ಕೊನೆಗೊಳ್ಳುತ್ತದೆ. ಕನ್ನಡಶಾಸನಗಳಲ್ಲಿ ಈ ಪದ್ಧತಿ ಆರಂಭ ಯಾವಾಗ ಆಯಿತು ಅನನುವುದು ಗಮನಿಸಬೇಕು.
ಸಾಮಾನ್ಯವಾಗಿ ಶಾಲಿವಾಹನ ಶಕವರ್ಷ ಮತ್ತು ಸಂವತ್ಸರದ ಉಲ್ಲೇಖವಿರುವ ಶಾಸನಗಳಲ್ಲಿ ಚಾಂದ್ರಮಾನ ಪದ್ಧತಿಯಂತೆ ಮಾಸ, ಪಕ್ಷ, ಮತ್ತು ತಿಥಿಗಳನ್ನು ಉಲ್ಲೇಖಿಸಲಾಗಿದೆ. ಅವುಗಳಲ್ಲದೇ, ಬಹಳಷ್ಟು ಶಾಸನಗಳಲ್ಲಿ ವಾರ ಮತ್ತು ದಿನ ನಕ್ಷತ್ರಗಳನ್ನೂ ನೀಡಲಾಗಿದೆ. ಈ ಸಂದರ್ಭದಲ್ಲಿ ಐತಿಹಾಸಿಕವಾಗಿ ಒಂದು ಮುಖ್ಯವಾದ ಸಂಶಯವೆಂದರೆ ಸೋಮವಾರವೇ ಮೊದಲಾದ ವಾರಗಳ ಉಲಲೇಖದ ಪ್ರಾಚೀನತೆಯನ್ನು ಅವಲೋಕಿಸಬೇಕಿದೆ. ಪ್ರಾಚೀನ ಸಾಹಿತ್ಯ ಕೃತಿಗಳಲ್ಲಿ ವಾರಗಳ ಬಳಕೆ ಇಲ್ಲವೇ ಇಲ್ಲವೆನ್ನುವಷ್ಟು ವಿರಳ. ನಮ್ಮ ಖಗೋಳ ಇತಿಹಾಸಜ್ಞರ ಪ್ರಕಾರ ನಮ್ಮ ಖಗೋಳ ಸಿದ್ಧಾಂತ ಕೃತಿಗಳಲ್ಲಿ ವಾರಗಳ ಬಳಕೆ ಸುಮಾರು ಕ್ರಿ.ಶ. 2ರಿಂದ3ನೇ ಶತಮಾನಗಳಲ್ಲಿ ಆರಂಭವಾಯಿತಂತೆ. ಶಾಸನಗಳಲ್ಲಿ ವಾರಗಳು ಕಾಣಿಸಿಕೊಳ್ಳಬೇಕಾದರೆ ಇನ್ನೂ ಒಂದೆರಡು ಶತಮಾನಗಳು ಮುಂದಕ್ಕೆ ಹೋಗಿರಬಹುದು.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆರಣಿಯ ಗಂಗ-ಸತ್ಯವಾಕ್ಯ ಪೆರ್ಮ್ಮಾನಡಿ ಎರಡನೆಯಮಾರಸಿಂಹನ ಶಾಸನ ಒಂದರಲ್ಲಿ
15. ನಂ ಮಾಬಲಯ್ಯನೆಂದೊಗೞಿದರಾರ್ ಶ್ರೀರಾಜ್ಯವಿಜ
16. ಯಸಂವತ್ಸರ ಸತ್ಯವಾಕ್ಯ ಪೆರ್ಮ್ಮಾನಡಿಗಳ ಪಟ್ಟಂ ಗಟ್ಟಿದ
17. ಪತ್ತೆನೆಯ ಆಂಗಿರ ಸಂವತ್ಸರ ಆಶ್ವಯುಜಮಾಸ
18. ದ ಪುಣ್ನಿಮೆಯಂದು ಸೋಮಗ್ರಹಣಮುಂ ವಿಷುಸಂಕ್ರಾಂತಿ
19. ಯುಂ ದೊರೆಕೊಳೆ
ಈ ಶಾಸನದಲ್ಲಿ ಉಲ್ಲೇಖಗೊಂಡ ಆಂಗೀರಸ ಸಂವತ್ಸರವು ಕ್ರಿ.ಶ. 972-73 ಇಸವಿಗೆ ಸರಿಹೊಂದುತ್ತದೆ. ಕ್ರಾಂತಿವೃತ್ತ (ಸೂರ್ಯನ ಸುತ್ತಲೂ ಭೂಮಿಯ ಸರಾಸರಿ ಕಕ್ಷೆಯನ್ನು ಹೊಂದಿರುವ ಜ್ಯಾಮಿತೀಯ ಸಮತಳಕ್ಕೆ ಕ್ರಾಂತಿವೃತ್ತ ಸಮತಳ ಎಂದು ಹೆಸರು).ಮತ್ತು ವಿಷುವದ್ ವೃತ್ತ (ಖಗೋಳದ ಅಕ್ಷಕ್ಕೆ, ಅಂದರೆ ವೀಕ್ಷಕನನ್ನು ಧ್ರುವನಕ್ಷತ್ರಕ್ಕೆ ಜೋಡಿಸುವ ರೇಖೆಗೆ, ಲಂಬವಾಗಿ ಎಳೆದ ಮಹಾ ವೃತ್ತಕ್ಕೆ (ಇದರ ಕೇಂದ್ರವೂ ವೀಕ್ಷಕನೇ) ವಿಷುವದ್ ವೃತ್ತ ಎಂದು ಹೆಸರು.) ಇವೆರಡೂ ಸಂಧಿಸುವ ಬಿಂದುಗಳನ್ನು ವಿಷುವಗಳು ಎಂದು ಕರೆÉಯಲಾಗುತ್ತದೆ. ಭೂಮಿಯ ಸುತ್ತಲೂ ಸಾಪೇಕ್ಷ ಚಲನೆಯಿಂದಾಗಿ ಸೂರ್ಯನು ಒಂದು ಸೌರವರ್ಷದ ಅವಧಿಯಲ್ಲಿ ಒಮ್ಮೆ ಸುತ್ತುಹಾಕಿ ಬರುತ್ತಾನೆ. ಸೂರ್ಯನ ಈ ಕಾಲ್ಪನಿಕ ಪಥವನ್ನೇ ಕ್ರಾಂತಿವೃತ್ತ ಎನ್ನಲಾಗುತ್ತದೆ. ಸೂರ್ಯನು ತನ್ನ ವಾರ್ಷಿಕಚಲನೆಯಲ್ಲಿ ಸುಮಾರು ಮಾರ್ಚ್ 21-22ರಂದು ಒಂದು ವಿಷುವಕ್ಕೂ ಮತ್ತು ಆರು ತಿಂಗಳ ನಂತರ, ಸುಮಾರು ಸೆಪ್ಟೆಂಬರ್ 23ರ ಆಸುಪಾಸಿನಲ್ಲಿ ಇನ್ನೊಂದು ವಿಷುವಕ್ಕೂ ಬರುತ್ತಾನೆ. ಈ ಎರಡು ವಿಷುವ ಬಿಂದುಗಳನ್ನು ಕ್ರಮವಾಗಿ ಮಹಾವಿಷುವ ಮತ್ತು ಜಲವಿಷುವ ಎಂದು ಕರೆಯುತ್ತೇವೆ.
ಪ್ರಸ್ತುತ ಈ ಶಾಸನದ ವರ್ಷದಲ್ಲಿ ಜಲವಿಷುವ ಸಂಕ್ರಾಂತಿಯು ಸೆಪ್ಟೆಂಬರ್25ರಂದು ಉಂಟಾಯಿತು. ಆ ದಿನ ಹುಣ್ಣಿಮೆಯಾಗಿದ್ದು ಚಂದ್ರಗ್ರಹಣವೂ ಇತ್ತು ಎನ್ನುವುದು ತಿಳಿದು ಬರುತ್ತದೆ.
ಈಗ ಇನ್ನೊಂದು ಶಾಸನವನ್ನು ನೋಡಿದರೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗನವಲೆಯ ಕ್ರಿ. ಶ 975ರ ಜಿನಶಾಸನವೊಂದರಲ್ಲಿ
1. ಭದ್ರಮಸ್ತು ಜಿ
2. ನಶಾಸನಾ
3. ಯ ಶ್ರೀಮತ್
4. ಸಕವರ್ಷ 8
5. 97 ಯ ಯು
6. ವಸಂವತ್ಸರ
7. ದ ಆಷಾಡ
8. ಮಾಸದ ಶು
9. ದ್ಧ ದಶಮಿಯು
10. ಸೋಮವಾರ
11. ವುಂ ಸ್ವಾತಿನ
12. ಕ್ಷತ್ರಮುಮಾ
13. ಗೆ . . . . ಎಂದು ಮುಂದೆ ಸಾಗುವ
ಈ ಶಾಸನದಲ್ಲಿ ಹೇಳಲಾದ ಯುವ ಸಂವತ್ಸರವು ಕ್ರಿ.ಶ. 975-76ನೇ ಇಸವಿಗೆ ಸರಿಹೊಂದುತ್ತದೆ. ಆಷಾಢಮಾಸದ ಶುದ್ಧ ದಶಮಿಯು ಕ್ರಿ.ಶ. 975 ಜೂನ್ 21 ಆಗಿರುತ್ತದೆ. ಆದಿನ ಸೋಮವಾರವಾಗಿದ್ದು ಸ್ವಾತಿನಕ್ಷತ್ರವು ನಡೆಯುತ್ತಿತ್ತು ಎನ್ನುವುದು ತಿಳಿದು ಬರುತ್ತದೆ.
ಕನ್ನಡ ಶಾಸನಗಳನ್ನು ಗಮನಿಸಿದಾಗ ಕಂಡುಬರುವ ಕೆಲವು ಮುಖ್ಯವಾದ ಸಂವತ್ಸರಾದಿಗಳ ಅಂಶಗಳು ಅಂದರೆ, ಶಾಲಿವಾಹನ ಶಕವನ್ನು ಉಲ್ಲೇಖಿಸುವಾಗ ಬಳಕೆಯಲ್ಲಿರುವ ಪದ್ಧತಿಯಲ್ಲಿ ಗತ ವರ್ಷಗಳ ಸಂಖ್ಯೆಯನ್ನು ನಮೂದಿಸುತ್ತೇವೆ. ಅಂದರೆ ಕ್ರಿ.ಶ. 2017ನೇ ಇಸವಿಯು ಶಾಲಿವಾಹನ ಶಕ ಗತವರ್ಷ 1940. ಆದರೆ ಕನ್ನಡ ಶಾಸನಗಳಲ್ಲಿ ಈ ನಿಯಮವನ್ನು ಮಾತ್ರ ಅನುಸರಿಸಿಲ್ಲ. ಅಲ್ಲಲ್ಲಿ ಆಗ ನಡೆಯುತ್ತಿದ್ದ ಅಥವಾ ಪ್ರಚಲಿತ ವರ್ಷದ ಸಂಖ್ಯೆಯನ್ನು ಉಲ್ಲೇಖಿಸಲಾಗಿದೆ. ಉದಾಹರಣೆಗೆ ಕ್ರಿ.ಶ. 2017 ನೇ ಇಸವಿಯನ್ನು ಬರೆಯುವಾಗ 1940 ಎಂದು ಬರೆದಂತೆ ಬರೆಯುತ್ತಿದ್ದರು. ಈ ರಿತಿ ಬರೆಯುತ್ತಿದ್ದುದರಿಂದ ಈಗ ಶಾಲಿವಾಹನಶಕ ವರ್ಷದಿಂದ ಕ್ರಿಸ್ತಶಕವನ್ನು ಹೇಳುವಾಗ ಅನೇಕ ಭಾರಿ ಗೊಂದಲವುಂಟಾಗುತ್ತದೆ. ಆದರೆ ಸಂವತ್ಸರದ ಹೆಸರನ್ನು ಶಾಸನದಲ್ಲಿ ಉಲ್ಲೇಖಿಸಿದ್ದಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವುದು ಸುಲಭ.
ಬೇರೆ ಬೇರೆ ಪ್ರದೇಶಗಳಲ್ಲಿ ಮತ್ತು ಬೇರೆ ಬೇರೆ ಕಾಲಾವಧಿಗಳಲ್ಲಿ ಪಂಚಾಂಗ ಗಣನೆಗೆ ನಮ್ಮ ದೇಶದಲ್ಲಿ ವಿಭಿನ್ನ ಖಗೋಳ ಸಿದ್ಧಾಂತ ಪದ್ಧತಿಗಳು ಬಳಕೆಯಲ್ಲಿದ್ದವು. ಉತ್ತರಭಾರತದಲ್ಲಿ ಬಹಳಷ್ಟು ಪ್ರದೇಶಗಳಲ್ಲಿ ಬಹಳ ಕಾಲ ಸೂರ್ಯಸಿದ್ಧಾಂತ ಮತ್ತು ಪೈತಾಮಹ ಅಥವಾ ಸಿದ್ಧಾಂತಗಳು ಬಳಕೆಯಲ್ಲಿದ್ದವು. ದಕ್ಷಿಣಭಾರತದಲ್ಲಿ ಮುಖ್ಯವಾಗಿ ಸೂರ್ಯಸಿದ್ಧಾಂತ, ಆರ್ಯಪದ್ಧತಿ ಮತ್ತು ಅದರ ಪರಿಷ್ಕøತ ಪದ್ಧತಿಯಾದ ವಾಕ್ಯಸಿದ್ಧಾಂತ ಎನ್ನುವುದು ಬಳಕೆಯಲ್ಲಿದ್ದವು. ಇಷ್ಟೇ ಅಲ್ಲದೆ ಕ್ರಿ.ಶ. 16ನೇ ಶತಮಾನದ ನಂತರ ಮುಖ್ಯವಾಗಿ ಉತ್ತರಭಾರತದಲ್ಲಿ, ಸಂಪೂರ್ಣ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ “ಗಣೇಶ ದೈವಜ್ಞ” ಎಂಬ ಪ್ರಸಿದ್ಧ ಖಗೋಲಜ್ಞನ “ಗ್ರಹಲಾಘವ” ಎಂಬ ಕೃತಿಯನ್ನು ಆಧರಿಸಿದ “ಗಣೇಶ ಪಕ್ಷ”ದ ಪಂಚಾಂಗಗಳು ಬಳಕೆಯಲ್ಲಿದ್ದವು. ಇಂತಹ ವಿವಿಧ ಪಂಚಾಂಗ ಪದ್ಧತಿಗಳನ್ನು ಬಳಸಿ ಶಾಸನಗಳಲ್ಲಿ ತಿಥಿ, ನಕ್ಷತ್ರ ಮುಂತಾದವುಗಳನ್ನು ಉಲ್ಲೇಖಿಸಿರುತ್ತಾರೆ. ಇದರಿಂದಾಗಿ ಶಾಸನಗಳಲ್ಲಿ ಹೇಳಿರುವ ಪಂಚಾಂಗ ವಿವರಗಳಿಗೆ ಸರಿಹೊಂದುವ ಇಂದಿನ ಪದ್ಧತಿಯ ದಿನಾಂಕಗಳನ್ನು ನಿಖರವಾಗಿ ಗುರುತಿಸುವುದು ಬಹಳ ಪ್ರಯಾಸದ ಕೆಲಸ.
ಸಾಮಾನ್ಯವಾಗಿ ಶಾಸನಗಳಲ್ಲಿ ಉಲ್ಲೇಖಿಸಿರುವ ಭಾರತೀಯ ಪಂಚಾಂಗ ವಿವರಗಳಿಗೆ ಸರಿಹೊಂದುವಂತೆ ಇಂದಿನ ಕ್ರೈಸ್ತ ದಿನಾಂಕಗಳನ್ನು ಪತ್ತೆಹಚ್ಚಲು ಶಾಸನತಜ್ಞರು ಬಳಸುವುದು ಪ್ರಸಿದ್ಧ ವಿದ್ವಾಂಸರಾದ ಸ್ವಾಮಿ ಕಣ್ಣುಪಿಳ್ಳೆ ಅವರ ಇಂಡಿಯನ್ ಎಫೆಮರಿಸ್ನ್ನು . ಆದರೆ ಪಿಳ್ಳೆ ಅವರ ಕೃತಿಯಲ್ಲಿ ಎರಡು ವಿಭಿನ್ನ ಪದ್ಧತಿಗಳಾದ ಸೂರ್ಯಸಿದ್ಧಾಂತ ಮತ್ತು ಆರ್ಯಪದ್ಧತಿಗಳನ್ನು ಮಾತ್ರ ಆಧರಿಸಿ ಕೋಷ್ಟಕಗಳನ್ನು ರಚಿಸಿದ್ದಾರೆ. ಹೀಗಾಗಿ ದೇಶದ ಎಲ್ಲಾ ಪ್ರದೇಶಗಳಲ್ಲೂ ಇವೆರಡೇ ಪದ್ಧತಿಗಳು ಬಳಕೆಯಲ್ಲಿದ್ದವು ಎಂದು ತೆಗೆದುಕೊಂಡಂತಾಗುತ್ತದೆ ಆದರೆ ಇದೇ ಸತ್ಯವಲ್ಲ. ಒಂದು ಪದ್ಧತಿಯ ಪ್ರಕಾರ ಒಂದು ಚಾಂದ್ರಮಾಸವು ಅಧಿಕಮಾಸ ಆಗಿದ್ದರೆ ಇನ್ನೊಂದು ಪದ್ಧತಿಯಂತೆ ಹಾಗಿಲ್ಲದಿರಬಹುದು. ಹಾಗೆಯೇ ತಿಥಿ ನಕ್ಷತ್ರಗಳೂ ವಿಭಿನ್ನವಾಗಿರಬಹುದು.
ಶಾಸನಗಳಲ್ಲಿ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣಗಳ ಉಲ್ಲೇಖಗಳು ಬಹಳ ಜ್ಞಾನಪ್ರದವಾಗಿರುತ್ತವೆ. ಒಂದು ವೇಳೆ ಉಲ್ಲೇಖಿತ ಗ್ರಹಣಗಳು ಶಾಸನಗಳ ರಚನೆಯ ಪ್ರದೇಶಗಳಲ್ಲಿ ಗೋಚರವಾಗಿದ್ದರೆ ಆಗ ಆ ಪ್ರದೇಶಗಳಲ್ಲಿ ಬಳಕೆಯಲ್ಲಿದ್ದ ಪಂಚಾಂಗ ಪದ್ಧತಿಯ ಬಗ್ಗೆ ಇವು ಹೆಚ್ಚು ಬೆಳಕು ಚೆಲ್ಲುತ್ತವೆ.
ಇನ್ನು ಭಾರತಿಯರಲ್ಲಿ ಸಾಮಾನ್ಯವಾಗಿ ಮಕರಸಂಕ್ರಮಣ ಮತ್ತು ಉತ್ತರಾಯಣ ಪುಣ್ಯಕಾಲದ ಬಗ್ಗೆ ಗೊಂದಲವಿದೆ. ನಿಜಕ್ಕೂ ಇವೆರಡೂ ಒಂದೇ ದಿನ ಉಂಟಾಗುವುದಿಲ್ಲ. ಈತ್ತೀಚೆಗಿನ ವರ್ಷಗಳಲ್ಲಿ ಸಾಮಾನ್ಯವಾಗಿ ಮಕರಸಂಕ್ರಮಣವು ಜನವರಿ 14-15 ದಿನಾಂಕಗಳಂದು ಸಂಭವಿಸುತ್ತದೆ. ಅದರೆ ನಿಜವಾಗಿಯೂ ಉತ್ತರಾಯಣ ಉಂಟಾಗುವುದು ಡಿಸೆಂಬರ್ 22ರ ಆಸುಪಾಸಿನ ದಿನ. ಇವೆರಡರ ಅಂತರ ಸುಮಾರು 23-24 ದಿನಗಳಷ್ಟು. ಈ ಗೊಂದಲಕ್ಕೆ ಕಾರಣವೆಂದರೆ ಮಕರಸಂಕ್ರಮಣ ಎಂದರೆ ಸೂರ್ಯನು ನಿರಯಣ ಮಕರರಾಶಿಯನ್ನು ಪ್ರವೇಶಿಸುವುದು. ಆದರೆ ಉತ್ತರಾಯಣದ ಆರಂಭವೆಂದರೆ ಸೂರ್ಯನ ಕ್ರಾಂತಿ ದಕ್ಷಿಣದ ಗರಿಷ್ಠ ಬೆಲೆಯನ್ನು ಸುಮಾರು 23.5 ಡಿಗ್ರಿ ಪಡೆದಿದ್ದು ಅಂದಿನಿಂದ ಉತ್ತರಮುಖಿಯಾಗುವುದು. ಇಲ್ಲಿ ಸೂರ್ಯನ ಕ್ರಾಂತಿಯನ್ನು ಕಂಡುಹಿಡಿಯಲು ಸಾಯನ ಪದ್ಧತಿಯನ್ನು ಬಳಸಬೇಕಾಗುತ್ತದೆ. ಆ ದಿನ ನಿಜಕ್ಕೂ ಸೂರ್ಯನು ಸಾಯನ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಾಯನ ಮತ್ತು ನಿರಯಣ ಪದ್ಧತಿಗಳ ವ್ಯತ್ಯಾಸವನ್ನು ಅಯನಾಂಶ ಎನ್ನುತ್ತೇವೆ. ಇದರ ನಿಖರವಾದ ಬೆಲೆಯನ್ನು ನಿರ್ಧರಿಸುವುದು ಕಷ್ಟ.
ಆದರೆ ನಮ್ಮ ಪ್ರಾಚೀನ ಕನ್ನಡಶಾಸನಗಳಲ್ಲಿ ಕೆಲವೊಮ್ಮೆ ಉತ್ತರಾಯಣ ಮತ್ತು ದಕ್ಷಿಣಾಯನ ಸಂಕ್ರಾಂತಿಗಳನ್ನು ಸರಿಯಾಗಿಯೇ ಅರ್ಥಮಾಡಿಕೊಂಡು ಬಳಸಿರುವುದನ್ನು ಕಾಣಬಹುದು. ಈ ಪ್ರಸ್ತಾವನೆಯ ಉದ್ದೇಶವೆಂದರೆ ಪ್ರಾಚೀನ ಶಾಸನಗಳು ಬಳಸುತ್ತಿದ್ದ ಪಂಚಾಂಗ ಪದ್ಧತಿಗಳಲ್ಲಿ ನಿರಯಣರಾಶಿ ಸಂಕ್ರಮಣಕ್ಕೂ ಮತ್ತು ಸಾಯನ ಉತ್ತರಾಯಣ-ದಕ್ಷಿಣಾಯನ ಸಂಕ್ರಮಣಗಳಿಗೂ ವ್ಯತ್ಯಾಸವನ್ನು ಅರಿತುಕೊಂಡು ಉಲ್ಲೇಖಿಸುತ್ತಿದ್ದರು. ಈಗಿನ ಸಂಪ್ರದಾಯಸ್ಥರಿಗಿರುವ ಗೊಂದಲ ಆಗಿರಲಿಲ್ಲ. - ಸದ್ಯೋಜಾತ ಭಟ್ಟ

Wednesday 27 December 2017

ಮೆಗಸ್ತನೀಸ್ ನ ಇಂಡಿಕವೂ | ನಮಗದು ಸಕಲ ವೇದದ ಸಾರ

ಹತ್ತು ಸಾವಿರ ವರ್ಷಗಳಿಗೂ ಹಿಂದೆ ಅಮೇರಿಕನ್ನರು ಕಣ್ಣುಬಿಡುವ ಮೊದಲೇ, ಯುರೋಪಿಯನ್ನರು ಹುಟ್ಟುವ ಮೊದಲೇ, ಪ್ರಪಂಚದ ಹೆಚ್ಚಿನಕಡೆ ಬಟ್ಟೆಹಾಕದೇ ತಿರುಗುತ್ತಿದ್ದ ಕಾಲದಲ್ಲಿ ನಮ್ಮ ಕಣ್ಣು ಕೋರೈಸುವ ಅದ್ಭುತ ವೈದಿಕ ನಾಗರಿಕತೆಯೊಂದು ಭಾರತದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿ ನಾವಿಂದೂ ನೆನೆಸಿಕೊಂಡು ತಲೆ ಎತ್ತಿ ನಿಲ್ಲುವಂತೆ ಮಾಡಿ ಅವಿಚ್ಛಿನ್ನವಾಗಿ, ಅಖಂಡವಾಗಿ ವಿಕಸನಗೊಂಡಿತ್ತು.
ಇಲ್ಲಿಯ ತನಕ ನಾವು ಹೌದೆಂದು ತಲೆಯಾಡಿಸಿಕೊಂಡು ನಂಬಿಕೊಂಡುಬಂದಿರುವುದು ಏನೆಂದರೆ ಕ್ರಿ.ಪೂ 327 ಸುಮಾರಿಗೆ ಅಂದರೆ ಮೌರ್ಯರ ಕಾಲದಲ್ಲಿ ಅಲೆಗ್ಸಾಂಡರ್ ನಮ್ಮ ದೇಶದ ಮೇಲೆ ದಂಡಯಾತ್ರೆ ನಡೆಸುತನಕವೂ ನಮ್ಮ ದೇಶಕ್ಕೆ ಇದು ನಮ್ಮ ಇತಿಹಾಸ ಎಂದು ತಿಳಿಯಬಹುದಾದ ಇತಿಹಾಸ ಇರಲೇ ಇಲ್ಲ. ಗ್ರೀಕ್ ವೀರ ತನ್ನ ಜೊತೆ ಕರೆತಂದ ಕೆಲ ಮೇಧಾವಿಗಳು ಎಂದು ಹಣೆಪಟ್ಟಿ ಕಟ್ಟಿಕೊಂಡವರು ಬರೆದಿಟ್ಟ ಪ್ರಾಚೀನ  ದಾಖಲೆಗಳಿಂದಲೇ ಭಾರತದ ಇತಿಹಾಸ ಆರಂಭವಾಗುವುದು. ಇವನ ಕಾಲದ ನಂತರ ಅಂದರೆ ಅದೇ ಸುಮಾರು ಕ್ರಿ.ಪೂ ೪ನೇ ಶತಮಾನದಲ್ಲಿ ಮೆಗಸ್ತನೀಸ್ ಎನ್ನುವ ಗ್ರೀಕ್ ಇತಿಹಾಸಕಾರ ಬರೆದ ಇಂಡಿಕಾಭಾರತದ ಇತಿಹಾಸದ ಕುರಿತಾಗಿರುವ ಮೊತ್ತಮೊದಲ ಅಧಿಕೃತ ದಾಖಲೆಯೆಂದು ನಮ್ಮ ಕೆಲವು ಇತಿಹಾಸಕಾರಿಂದ ಮುಕ್ತಕಂಠದಲ್ಲಿ ಶ್ಲಾಘಿಸಲ್ಪಟ್ಟಿದೆ. ಸುಮಾರು ಒಂದುವರೆ ಸಾವಿರ ವರ್ಷಗಳಷ್ಟು ಹಿಂದೆಯೇ ಹೆಸರೊಂದನ್ನುಉಳಿಸಿಕೊಂಡು ಮತ್ತೆಲ್ಲ ನಾಮಾವಶೇಷಗೊಂಡಿರುವ ಕೃತಿಯೇ ನಮ್ಮ ಈಗಿನ ಇತಿಹಾಸಕಾರರಿಗೆಲ್ಲ ಇತಿಹಾಸವನ್ನು ನಿರ್ಧರಿಸಲಿರುವ ಏಕೈಕ ಚಾರಿತ್ರಿಕ ಆಧಾರ. ಸೆಲ್ಯುಕಸ್ ೧ ನಿಕಾಟೋರ್ನ ರಾಯಭಾರಿಯಾಗಿ ಚಂದ್ರಗುಪ್ತ ಮೌರ್ಯನ ರಾಜಧಾನಿಯಾದ ಪಾಟಲೀಪುತ್ರದಲ್ಲಿದ್ದುಕೊಂಡು ಮೆಗಸ್ತನೀಸನು ಇಂಡಿಕಾ ರಚಿಸಿದ. ಇದು ತತ್ಕಾಲೀನ ಭಾರತದ ಆಡಳಿತಾತ್ಮಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ದೊಡ್ದಮಟ್ತದಲ್ಲಿ ಪರಿಣಾಮಕಾರಿ ಬೆಳಕು ಬೀರುತ್ತದೆಂದು ನಾವು ಓದಿದ ಪಠ್ಯಪುಸ್ತಕಗಳಲ್ಲೆಲ್ಲ ಪುಂಖಾನುಪುಂಖವಾಗಿ ಊದುತ್ತಾರೆ. ನಮ್ಮ ಪುರಾಣೇತಿಹಾಸಗಳಲ್ಲಿ ಸೂಚ್ಯವಾಗಿ ನಿಖರವಾಗಿ ದಿನ, ತಾರೀಖು, ಸಂವತ್ಸರಗಳು ಮಾತ್ರವಲ್ಲದೇ ನಕ್ಷತ್ರಗಳ ಚಲನೆ, ಅವುಗಳ ಸ್ಥಾನವನ್ನೂ ಸೇರಿದಂತೆ ಸೂಕ್ಷ್ಮಾತಿಸೂಕ್ಷ್ಮ ಅಂಶಗಳನ್ನೂ ಬರೆದಿಟ್ಟಿರುವಾಗ ಅವ್ಯಾವವೂ ನಮಗೆ ಸರಿಯೆನಿಸುವುದೇ ಇಲ್ಲ.
ಕಲಿಯುಗ ಪ್ರಾರಂಭವಾಗಿದ್ದು ಮಹಾಭಾರತ ಯುದ್ಧ ನಡೆದ 36ನೇ ವರ್ಷವಾದ ಕ್ರಿ.ಪೂ 3102ರಲ್ಲೆಂದು ವೈಜ್ಞಾನಿಕವಾಗಿಯೇ ಹೇಳಲ್ಪಟ್ಟಿದೆ ಮತ್ತು ಸಾಬೀತಾಗಿದೆ. ಕಲಿಯುಗದ ಆರಂಭ ಪ್ರಮಾದಿ ಸಂವತ್ಸರದ ಯುಗಾದಿಯಂದು, ದಿನ ಮೇಷ ರಾಶಿಯಲ್ಲಿ ಏಳು ಗ್ರಹಗಳು ಸೇರಿದ್ದವೆಂದು ನಮ್ಮ ಪುರಾಣಗಳು ದಾಖಲಿಸಿದ ಸತ್ಯಕ್ಕೆ ಖಗೋಳಶಾಸ್ತ್ರಜ್ಞರೆಲ್ಲ ಒಪ್ಪಿ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಮಹಾಭಾರತ ಯುದ್ದದಿಂದ ಆರಂಭಿಸಿ ಬೇರೆ ಬೇರೆ ರಾಜರ ಆಳ್ವಿಕೆಯ ಕ್ರಮಗಳನ್ನು ಭಾಗವತಪುರಾಣ, ಮತ್ಸ್ಯ, ವಾಯು, ಬ್ರಹ್ಮಾಂಡ, ಭವಿಷ್ಯತ್ ಮತ್ತು ವಿಷ್ಣುಪುರಾಣಗಳಿಂದ ತಿಳಿದು ಬರುತ್ತದೆ. ಇವುಗಳಲ್ಲದೇ ಪ್ರಾಚೀನ ಖಗೋಲ ಶಾಸ್ತ್ರಜ್ಞರಾದ ವೃದ್ಧಗರ್ಗ, ಹಾಗೂ ಸು.6ನೆಯ ಶತಮಾನದಲ್ಲಿದ್ದ ಭಾರತದ ಪ್ರಸಿದ್ಧ ಗಣಿತಶಾಸ್ತ್ರಜ್ಞ ಹಾಗೂ ಖಗೋಳ ವಿಜ್ಞಾನಿ ವರಾಹ ಮಿಹಿರನ ಬೃಹತ್ಸಂಹಿತೆ, ಶತಪಥ ಬ್ರಾಹ್ಮಣ, ಕಲ್ಹಣನ ರಾಜತರಂಗಿಣಿ, ನೇಪಾಳರಾಜವಂಶಾವಳೀ, ಭಾಸ್ಕರಾಚಾರ್ಯರ ಸಿದ್ಧಾಂತ ಶಿರೋಮಣಿ, ಅದರ ಮೇಲಿನ ರಚಿತವಾದಂತಹ ಟಿಕಾಗ್ರಂಥ ಕೃಷ್ಣ ಮಿಶ್ರನ ಜ್ಯೋತಿಷ್ಯ ಫಲರತ್ನಮಾಲ, ಸೋಮನಾಥ ಮಿಶ್ರನ ಜ್ಯೋತಿಷ್ಯ ಕಲ್ಪಲತಾ, ಕಲಿಯುಗ ರಾಜ ವೃತ್ತಾಂತಗಳವರೆಗೆ ಲೆಕ್ಕವಿಲ್ಲದಷ್ಟು ಪೌರಾಣಿಕ, ಐತಿಹಾಸಿಕ ಕೃತಿಗಳು ಖಚಿತವಾಗಿಯೇ ವಿವರಿಸಿವೆ. ನಮಗೆ ಇವಾವುವೂ ಕಾಣಿಸುವುದೇ ಇಲ್ಲ ಅದೇನೇ ಇರಲಿ ಈಗ ಮಹಾಭಾರತವನ್ನು ಸ್ವಲ್ಪ ನೋಡೋಣ.
ಉತ್ತರೆಗೆ ಪರೀಕ್ಷಿತನು ಜನಿಸುವ ದಿನ ಸಪ್ತರ್ಷಿ ಮಂಡಲವು ಮಘಾ ನಕ್ಷತ್ರವನ್ನು ಪ್ರವೇಶಿಸಿತೆಂದು ಮಹಾಭಾರತದಲ್ಲಿ ಉಲ್ಲೇಖವಿದೆ. ಸಪ್ತರ್ಷಿ ಮಂಡಲವು ನೂರು ವರ್ಷಕ್ಕೆ ಒಂದೊಂದೆ ನಕ್ಷತ್ರವಾಗಿ ಹಿಂದೆ ಸರಿಯುತ್ತ 2700 ವರ್ಷಗಳಿಗೆ ಮತ್ತೆ ಪುನಃ ಅದೇ ಸ್ಥಾನಕ್ಕೆ ಬಂದುನಿಲ್ಲುತ್ತದೆ. ಇದು ಪಕ್ಕಾ ಖಗೋಳ ಜ್ಯೋತಿಷ್ಯವನ್ನಾಧರಿಸಿದ ವೈಜ್ಞಾನಿಕ ಲೆಕ್ಕಾಚಾರ. ಇದನ್ನೇ ಮತ್ಸ್ಯ ಪುರಾಣದಲ್ಲಿ ಹೀಗೆ ಹೇಳಲಾಗಿದೆ.
ಮತ್ಸ್ಯಪುರಾಣ: ಅಧ್ಯಾಯ 271.
ಇತ್ಯೇವಂ ಮಾನವೋ ವಂಶಃ ಪ್ರಾಗೇವ ಸಮುದಾಹೃತಃ |
ಅತ ಊರ್ಧ್ವಂ ಪ್ರವಕ್ಷ್ಯಾಮಿ ಮಾಗಧಾ ಯೇಬೃಹಧೃಥಾಃ ||17
ಪೂರ್ವೇಣ ಯೇ ಜರಾಸಂಧಾತ್ಸಹದೇವಾನ್ವಯೇ ನೃಪಾಃ |
ಅತೀತಾ ವರ್ತಮಾನಾಶ್ಚ ಭವಿಷ್ಯಾಂಶ್ಚ ನಿಬೋಧತ || 18
ಸಂಗ್ರಾಮೇ ಭಾರತೇ ವೃತ್ತೇ ಸಹದೇವೇ ನಿಪಾತಿತೇ |
ಸೋಮಾಧಿಸ್ತಸ್ಯ ದಾಯಾದೋ ರಾಜಾಭೂತ್ಸ ಗಿರಿವ್ರಜೇ ||19
ಬೃಹಧೃಥ ವಂಶದ ಮಗಧ ರಾಜರ ಬಗ್ಗೆ ಹೀಗಿದೆ. ಭಾರತ ಯುದ್ಧದಲ್ಲಿ ಜರಾಸಂಧನ ಮಗ ಸಹದೇವ ಮಡಿದನು. ಅವನ ಮಗ ಸೋಮಧಿಯು ಗಿರಿವ್ರಜದಲ್ಲಿ ರಾಜನಾಗಿ ಐವತ್ತೆ೦ಟು ವರ್ಷ ರಾಜ್ಯಭಾರ ಮಾಡಿದನು.
ಇನ್ನು ಮುಂದು ವರಿದು ಮತ್ಸ್ಯಪುರಾಣ: ಅಧ್ಯಾಯ 273ನೇ ಅಧ್ಯಾಯದಲ್ಲಿ ....
ಮಹಾಪದ್ಮಾಭಿಷೇಕಾತ್ತು ಯಾವಜ್ಜನ್ಮ ಪರೀಕ್ಷಿತಃ |
ಏವಂ ವರ್ಷ ಸಹಸ್ರಂತು ಜ್ಞೇಯಂ ಪಂಚಾಶದುತ್ತರಮ್ ||36
ಪರೀಕ್ಷಿತನ ಹುಟ್ಟಿನಿಂದ ನಂತರ ಮಹಾಪದ್ಮನ ಪಟ್ಟಾಭಿಷೇಕದವರೆಗೆ ಸಾವಿರದ ಐದುನೂರು ವರ್ಷಗಳಾದವು.
ಪೌಲೋಮಾಸ್ತು ತಥಾಂssಧ್ರಾಸ್ತು ಮಹಾಪದ್ಮಾಂತರೇಪುನಃ |
ಅನಂತರಂ ಶತಾನ್ಯಷ್ಟೌ ಷಟ್ತ್ರಿಂಶತ್ತು ಸಮಾಸ್ತಥಾ ||37
ತಾವತ್ಕಾಲಾಂತರಂ ಭಾವ್ಯಮಾಂಧ್ರಾಂತಾದಾಪರೀಕ್ಷಿತಃ |
ಭವಿಷ್ಯೇ ತೇ ಪ್ರಸಂಖ್ಯಾತಾಃ ಪುರಾಣಜ್ಞೈಃ ಶ್ರುತರ್ಷಿಭಿಃ ||38
ಸಪ್ತರ್ಷಯಸ್ತದಾ ಪ್ರಾಂಶುಃ ಪ್ರದೀಪ್ತೇನಾಗ್ನಿನಾ ಸಮಾಃ |
ಸಪ್ತವಿಂಶತಿ ಭಾವ್ಯಾನಾಮಾಂಧ್ರಾಣಾಂತು ಯದಾ ಪುನಃ || 39
ಮಹಾಪದ್ಮನಂದನಿಂದ ಆಂಧ್ರ ಪುಲೋಮನ ನಡುವಿನ ಅವಧಿ 836 ವರ್ಷಗಳು. ಅಂದರೆ ಪರೀಕ್ಷಿದ್ರಾಜನ ಕಾಲದಿಂದ ಆಂಧ್ರರ ಪತನದವರೆಗೆ ಒಂದುಸಾವಿರದ ಎಂಟುನೂರ ಎಂಭತ್ತಾರು ವರ್ಷಗಳು ಕಳೆದಂತಾಗುವವು. ಪರೀಕ್ಷಿತನ ಜನನದಿಂದ ಆಂಧ್ರರಾಜರ ಕಾಲದವರೆಗೆ ಹೀಗೇ 2700 ವರ್ಷಗಳಲ್ಲಿ ಅಗ್ನಿನಕ್ಷತ್ರದಲ್ಲಿದ್ದ ಸಪ್ತರ್ಷಿ ಮಂಡಲದ ಒಂದು ಸುತ್ತು ಪೂರ್ಣಗೊಂಡಿತು. ಮಹಾಭಾರತ ನಡೆಯುವುದಕ್ಕಿಂಥ 571 ವರ್ಷಗಳ ಮೊದಲು ಅಂದರೆ ಕ್ರಿ.ಪೂ 3709ರಲ್ಲಿ ಕುರುವಂಶದ ಬೃಹದ್ರಥನಿಂದ ರಾಜಗೃಹ ಅಥವಾ ಗಿರಿವ್ರಜವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಮಗಧ ಸಾಮ್ರಾಜ್ಯ ಅಥವಾ ಬೃಹದ್ರಥ ರಾಜವಂಶ ಸ್ಥಾಪಿಸಲ್ಪಟ್ಟಿತು.
ಬೃಹದೃಥ ವಂಶದ ಹತ್ತನೇ ತಲೆಮಾರು ಅಂದರೆ ಮಹಾಭಾರತದ ಸಂದರ್ಭದಲ್ಲಿ ಭೀಮನಿಂದ ಕೊಲ್ಲಲ್ಪಟ್ಟ ಮಗಧದ ದೊರೆ ಜರಾಸಂಧ. ಜರಾಸಂಧನ ಮಗ ಸಹದೇವ. ಸಹದೇವನ ನಂತರ ವಂಶದ 22 ರಾಜರು ಒಟ್ಟೂ 1006 ವರ್ಷಗಳ ಕಾಲ ಅಂದರೆ ಕ್ರಿ.ಪೂ 2132ರವರೆಗೆ ಮಗಧವನ್ನಾಳಿದರು. ಬೃಹದ್ರಥ ವಂಶದ ಕೊನೆಯ ದೊರೆ ರಿಪುಂಜಯನನ್ನು ಹತ್ಯೆಗೈದು ಅವನ ಮಂತ್ರಿಯಾಗಿದ್ದ ಶುನಕ ತನ್ನ ಮಗ ಪ್ರದ್ಯೋತನನನ್ನು ಪಟ್ಟಕ್ಕೇರಿಸಿದ. ಕ್ರಿ.ಪೂ 2132ರಿಂದ ಕ್ರಿ.ಪೂ 1994ರವರೆಗೆ 138 ವರ್ಷಗಳ ಐದು ತಲೆಮಾರುಗಳ ಕಾಲ ಮಗಧವನ್ನಾಳಿದವರು ಪ್ರದ್ಯೋತನ ರಾಜವಂಶದವರು. ಪ್ರದ್ಯೋತನ ವಂಶದವರ ನಂತರ ಕ್ರಿ.ಪೂ 1994ರಿಂದ 1634ರವರೆಗೆ 360 ವರ್ಷಗಳ ಕಾಲ ಮಗಧವು ಶಿಶುನಾಗ ವಂಶದ ಹತ್ತು ರಾಜರುಗಳಿಂದ ಆಳಲ್ಪಟ್ಟಿತು. ಸಾಮ್ರಾಜ್ಯವನ್ನು ಸ್ಥಾಪಿಸಿದವನು ಶಿಶುನಾಗ. ಇವನ ಮಗ ಕಾಕವರ್ಣ. ಶಿಶುನಾಗರ 4,5,6ನೇ ರಾಜರಾದ ಕ್ಷೇಮಜಿತ್, ಬಿಂಬಿಸಾರ ಮತ್ತು ಅಜಾತಶತ್ರುಗಳ ಕಾಲದಲ್ಲಿಯೇ ಬುದ್ಧನು ಬದುಕಿದ್ದನು.

ಮಹಾಭಾರತ ಯುದ್ಧ ನಡೆದ ಸುಮಾರು 1500 ವರ್ಷಗಳು ಗತಿಸಿದ್ದವು ಅಂದರೆ ಕ್ರಿ.ಪೂ 1634ರಲ್ಲಿ ಮಗಧದಲ್ಲಿ ಮಹಾಪದ್ಮನಂದನ ಪಟ್ಟಾಭಿಷೇಕ ನಡೆಯಿತು. ಅವನೂ ಅವನ ಮಕ್ಕಳೂ ಸೇರಿ ನವನಂದರು ನೂರು ವರ್ಷಗಳವರೆಗೆ ಆಳ್ವಿಕೆ ನಡೆಸಿದರು. ನಂದರಿಂದ ತನಗಾದ ಅವಮಾನಕ್ಕೆ ಪ್ರತೀಕಾರವಾಗಿ ನಂದರ ಕೊನೆಯ ಅರಸ ಧನನಂದನನ್ನು ಚಂದ್ರಗುಪ್ತ ಮೌರ್ಯನೆಂಬ ಯುವರಾಜನ ಸಹಾಯದಿಂದ ಚಾಣಕ್ಯ ಕೊಲ್ಲಿಸಿದ ಮತ್ತು ಅವನನ್ನೇ ಕ್ರಿ.ಪೂ 1534ರಲ್ಲಿ ಮಗಧದ ಸಿಂಹಾಸನವನ್ನೇರಿಸಿದ.  316 ವರ್ಷಗಳ ಮೌರ್ಯವಂಶದ ಆಳ್ವಿಕೆಯ ನಂತರ 891 ವರ್ಷಗಳು ಶುಂಗ, ಕಾಣ್ವ ಮತ್ತು ಆಂಧ್ರ ವಂಶಗಳು ಮಗಧವನ್ನಾಳಿದವು. ಆಂಧ್ರವಂಶದ ಕೊನೆಯ ರಾಜ ಚಂದ್ರಶ್ರೀ ಅಥವಾ ಚಂದ್ರಮಸು ಆಳ್ವಿಕೆಯಲ್ಲೇ ಕ್ರಿ.ಪೂ 327 ರಲ್ಲಿಯೇ ಅಲೆಕ್ಸಾಂಡರ್ ನ ದಂಡಯಾತ್ರೆ ನಡೆದದ್ದು. ಚಂದ್ರಮಸುವನ್ನೇ ಗ್ರೀಕ್ ಲೇಖಕರು Agrammes ಅಥವಾ Xandramus ಎಂದು ಕರೆದಿದ್ದಾರೆ. ಮೊದಲನೇ ಚಂದ್ರಗುಪ್ತನು ಅದೇ ವರ್ಷ ಚಂದ್ರಮಸುವನ್ನೂ ಅವನ ಮಗ ಪುಲೋಮನನ್ನೂ ಹತ್ಯೆಗೈದು ಆಂಧ್ರ ಭೃತ್ಯ ವಂಶವನ್ನು ಸ್ಥಾಪಿಸಿ ಪಾಟಲೀಪುತ್ರವನ್ನು ತನ್ನ ರಾಜಧಾನಿಯನ್ನಾಗಿಸಿ ಅಧಿಕಾರಕ್ಕೇರಿದನು. ಆಂಧ್ರಭೃತ್ಯರೇ ಭಾರತೀಯ ಇತಿಹಾಸದ ಸ್ವರ್ಣಯುಗದ ನಿರ್ಮಾತೃರೆನಿಸಿಕೊಂಡ ಗುಪ್ತರು. ವಿಷ್ಣುಪುರಾಣದಲ್ಲಿ ಆಂಧ್ರಭೃತ್ಯಾಸ್ಸಪ್ತಃಎಂದೂ, ಮತ್ಸ್ಯ ಪುರಾಣದಲ್ಲಿ ಆಂಧ್ರಾಣಾಂ ಸಂಸ್ಥಿತಾರಾಜ್ಯೇತೇಷಾಂ ಭೃತ್ಯಾನ್ವಯೇ ಸಪ್ತೈವಾಂಧ್ರಾ ಭವಿಷ್ಯಂತಿಎಂದು ಆಂಧ್ರರ ಬಳಿಕ ಆಂಧ್ರಭೃತ್ಯವಂಶದ ಏಳು ರಾಜರುಗಳು ರಾಜ್ಯವಾಳಿದ್ದನ್ನು ತಿಳಿಸುತ್ತದೆ. ಗುಪ್ತರ ಚಂದ್ರಗುಪ್ತನ ಕಾಲದಲ್ಲಿ ಗ್ರೀಕ್ ರಾಜ ಸೆಲ್ಯುಕಸ್ ನ ರಾಯಭಾರಿಯಾಗಿ ಭಾರತಕ್ಕೆ ಮೆಗಸ್ತನೀಸ್ ಬಂದನು. ಚಂದ್ರಗುಪ್ತನ ಮಗನೇ ಇತಿಹಾಸ ಕಂಡ ಅಪ್ರತಿಮ ದಂಡನಾಯಕನೆಂದು ಹೊಗಳಲ್ಪಟ್ಟ ಸಮುದ್ರಗುಪ್ತ. ರಾಜರ ವಂಶಕ್ರಮವನ್ನು ಹಿಂದೂ ಪುರಾಣಗಳು ಮಾತ್ರವಲ್ಲದೇ, ಪ್ರಾಚೀನ ಬೌದ್ಧ ಸಾಹಿತ್ಯಗಳು, ಎಲಿಯಂ ಜೋನ್ಸಿನಂಥ ಮಹಾನ್ ಇತಿಹಾಸಕಾರರೂ ಒಪ್ಪಿಕೊಂಡಿದ್ದಾರೆ. ಇಷ್ಟೆಲ್ಲಾ ಪ್ರಮಾಣಗ್ರಂಥಗಳಿದ್ದರೂ ಸಹ ಕ್ರಿ.ಪೂ 1534ರಲ್ಲಿದ್ದ ಚಂದ್ರಗುಪ್ತ ಮೌರ್ಯನನ್ನು ಕ್ರಿ.ಪೂ 327ಕ್ಕೆ ನಮ್ಮ ಇತಿಹಾಸಕಾರರು ತಂದು ನಿಲ್ಲಿಸಿದರು!! ಇದು ಮೆಗಾಸ್ತನೀಸ್ ನ ಕೊಡುಗೆ. ಈ ಚಂದ್ರಗುಪ್ತ ಮೌರ್ಯನನ್ನೇ ಅಲೆಕ್ಸಾಂಡರ್ನ ಸಮಕಾಲೀನನ್ನಾಗಿಸಿ ಭಾರತದ ಚರಿತ್ರೆಯ ಸಾವಿರದೈನೂರು ವರ್ಷಗಳನ್ನೇ ಬ್ರಿಟೀಷರು ಇಲ್ಲವಾಗಿಸಿದರು. ಪರಮ ನೀಚ ಬ್ರಿಟಿಷರು ಮಾಡಿಟ್ಟುಹೋದ ತಪ್ಪು ಕಾಲನಿರ್ಣಯಗಳನ್ನೇ ಸರಿಯೆಂದುಕೊಂಡು ಅವರು ಹೋದ ನಂತರವೂ ನಾವು ಒಪ್ಪಿ ಅಪ್ಪಿಕೊಂಡು ಕುಣಿದಾಡುತ್ತಿದ್ದೇವೆ. ಹಾಗೆಂದು ಬ್ರಿಟೀಷರು ಸುಮ್ಮನೆ ಊಹಿಸಿ ಕಾಲಗಣನೆ ಮಾಡಲಿಲ್ಲ. ಅವರಿಗಿದ್ದ ಆಧಾರ ಗ್ರೀಕ್ ಲೇಖಕರು ಉಲ್ಲೇಖಿಸಿದ ಸ್ಯಾಂಡ್ರೋಕಾಟಸ್’(Sandracottus) ಎಂಬ ಹೆಸರು. ಮೆಗಸ್ತನೀಸ್ ಮಾತ್ರವಲ್ಲದೇ ಡಿಯೋಡೊರಸ್, ಕರ್ಟಿಯಸ್ ನಂಥ ಗ್ರೀಕ್ ಲೇಖಕರೇ ಕ್ಸಂಡ್ರಮಸ್ನನ್ನು ಕೊಂದು ಸ್ಯಾಂಡ್ರೋಕಾಟಸ್ ಪಟ್ಟಕ್ಕೇರಿದನೆಂದೂ, ಆತನ ನಂತರ ಅವನ ಮಗ ಸ್ಯಾಂಡ್ರೋಸಿಪ್ಟಸ್ರಾಜ್ಯವಾಳಿದನೆಂದೂ ಹೇಳಿದ್ದಾರೆ. ಚಂದ್ರಗುಪ್ತ ಮೌರ್ಯ ಧನನಂದನನ್ನು ಕೊಂದು ಸಿಂಹಾಸನಕ್ಕೇರಿದ, ಅವನ ನಂತರ ಆಳಿದವನು ಚಂದ್ರಗುಪ್ತನ ಮಗ ಬಿಂದುಸಾರ. ಚಂದ್ರಗುಪ್ತನು ಚಂದ್ರಮಸುವನ್ನು ಕೊಂದು ಗುಪ್ತ ವಂಶವನ್ನು ಸ್ಥಾಪಿಸಿದ್ದು. ಅವನ ನಂತರ ಅವನ ಮಗ ಸಮುದ್ರಗುಪ್ತ ರಾಜನಾದ. ಇದನ್ನೇ ಕ್ಸಂಡ್ರಮಸ್ಮತ್ತು ಸ್ಯಾಂಡ್ರೋಸಿಪ್ಟಸ್ಹೆಸರುಗಳು ಧನನಂದ ಮತ್ತು ಬಿಂದುಸಾರನ ಗ್ರೀಕ್ ಅಪಭೃಂಶದ ಹೆಸರುಗಳಾಗಿರಬೇಕು ಅಥವಾ ಚಂದ್ರಮಸ್ ಮತ್ತು ಸಮುದ್ರಗುಪ್ತರದ್ದೋ ಇರಬೇಕು ಸ್ಯಾಂಡ್ರೋಕಾಟಸ್ ಕಾಲದ ಭಾರತೀಯ ರಾಜರಲ್ಲೇ ಶ್ರೇಷ್ಟನೆಂದೂ, ಕುಲೀನ ಮನೆತನದವನೆಂದೂ, ದೊಡ್ಡ ಸೈನ್ಯದೊಂದಿಗೆ ಇಡೀ ಭಾರತವನ್ನೇ ಗೆದ್ದನೆಂದೂ ಗ್ರೀಕ್ ಇತಿಹಾಸಕಾರ ರಾಯಭಾರಿಗಳ ಮಾತು. ಚಾಣಕ್ಯನ ಬೆಂಬಲದಿಂದ ಶೂದ್ರ ಸ್ತ್ರೀಯ ಮಗನಾದ ಚಂದ್ರಗುಪ್ತ ಮೌರ್ಯ ಕೋಸಲ, ವಿದೇಹದಂಥ ಅಕ್ಕಪಕ್ಕದ ರಾಜರ ಸಹಾಯದಿಂದ ಅಧಿಕಾರವುಳಿಸಿಕೊಂಡಿದ್ದನ್ನು ಬಿಟ್ಟರೆ ಅವನು ಅಂಥಹ ಶ್ರೇಷ್ಟ ರಾಜ ಅಲ್ಲ. ಆದರೆ ಮೊದಲನೇ ಚಂದ್ರಗುಪ್ತ ಹಾಗಲ್ಲ. ಸೂರ್ಯವಂಶಕ್ಕೆ ಸೇರಿದ ಇವನಿಗೆ ವಿಜಯಾದಿತ್ಯನೆಂಬ ಬಿರುದಿತ್ತು. ಇವನ ಮಗ ಸಮುದ್ರಗುಪ್ತನು ಅಶೋಕಾದಿತ್ಯನೆಂದೂ, ಮೊಮ್ಮಗ ಎರಡನೇ ಚಂದ್ರಗುಪ್ತನು ವಿಕ್ರಮಾದಿತ್ಯನೆಂದೂ ಬಿರುದಾಂಕಿತರಾಗಿದ್ದರು. ತನ್ನ ಗುಪ್ತಚರರಿಂದ ಚಂದ್ರಗುಪ್ತನ ಸೈನ್ಯಬಲವನ್ನು ತಿಳಿದುಕೊಂಡ ಮಹಾಶೂರ ವೀರ ಗ್ರೀಕ್ ರಾಜನಿಗೆ ಕೈಕಾಲು ನಡುಕ ಶುರುವಾಗಿ ಗಂಗೆಯನ್ನು ದಾಟದೇ ತನ್ನ ದಂಡಯಾತ್ರೆಯನ್ನು ಬಿಟ್ಟು ಓಡಿಹೋದನಂತೆ. ಸಾವಿರ ವರ್ಷಗಳಿಗಿಂತ ಹೆಚ್ಚು ಕಾಲದ ಅಂತರವನ್ನು ಹೊಂದಿರುವ ಇಬ್ಬರು ಚಂದ್ರಗುಪ್ತರಿಗೆ ಎಲ್ಲಿಂದೆಲ್ಲಿಯ ಸಂಬಂಧವೋ ತಿಳಿಯುತ್ತಿಲ್ಲ. ಅಶೋಕನ ಕಥೆಯೂ ಅಷ್ಟೇ. ಇತಿಹಾಸದಲ್ಲಿ ಮೂವರು ಅಶೋಕರ ಉಲ್ಲೇಖವಿದೆ. ಕಲ್ಹಣನ ರಾಜತರಂಗಿಣಿಯಲ್ಲಿ ಪ್ರಸ್ತಾಪಿಸಲ್ಪಟ್ಟ ಕಾಶ್ಮೀರವನ್ನಾಳಿ ತದನಂತರ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಗೋನಂದ ವಂಶದ ಧರ್ಮಾಶೋಕ ಮೊದಲಿನವನು. ಈತ ಕಾಶ್ಮೀರವನ್ನಾಳಿದ ನಲವತ್ತೆಂಟನೇ ಅರಸು. ಇವನ ಮರಿಮೊಮ್ಮಗನೇ ಕನಿಷ್ಕ ಚಕ್ರವರ್ತಿ. ಎರಡನೇಯವನು ಇದೇ ಕಾಲದಲ್ಲಿದ್ದ ಅಶೋಕವರ್ಧನನೆಂದು ಹೆಸರಾಗಿದ್ದ ಚಂದ್ರಗುಪ್ತ ಮೌರ್ಯನ ಮೊಮ್ಮಗ. ಮೂರನೇಯವನು ನಾವು ಹೆಬ್ಬಂಡೆ ಶಸನಗಳನ್ನು ಬರೆಸಿದ ಅಂದುಕೊಳ್ಳುವ ಮಹಾಶೋಕನೆಂದು ಹೆಸರಾಗಿದ್ದ ಸಮುದ್ರಗುಪ್ತ. ಎಷ್ಟೋ ಶತಮಾನಗಳ ನಂತರ ಬಂದ ದೀಪವಂಶ ಎನ್ನುವ ಗ್ರಂಥ ಮತ್ತು ಅಶೋಕವದನದಂಥವುಗಳೆಲ್ಲ ಕ್ರಿ.ಪೂ ಮೂರನೇ ಶತಮಾನದ ಸುಮಾರಿಗೆ ಇಡೀ ಭರತಖಂಡವನ್ನು ಏಕಚಕ್ರಾಧಿಪತ್ಯದಡಿ ತಂದು ಆಳಿದ ಸಮುದ್ರಗುಪ್ತನ ಕುರಿತಾದವೇ. ಇವನ ಜೀವನಚರಿತ್ರೆಯನ್ನು ಬರೆದ ಹರಿಸೇನ, ಕಲಿಯುಗ ರಾಜ ವೃತ್ತಾಂತ, ಕಲ್ಹಣನ ರಾಜತರಂಗಿಣಿಗಳೆಲ್ಲ ಅಶೋಕನನ್ನೇ ಹಾಡಿ ಹೊಗಳಿವೆ. ಬೌದ್ಧರ ಮಂಜುಷ್ರೀಮೂಲಕಲ್ಪದಲ್ಲಿರುವ ಹೆಸರು ಇದೇ ಸಮುದ್ರಗುಪ್ತನದ್ದೇ. ಈಗ ಅಶೋಕನ ಹೆಸರಲ್ಲಿ ಸಿಕ್ಕಿರುವ ಶಾಸನಗಳೆಲ್ಲ ಕ್ರಿ.ಪೂ ಮೂರನೇ ಶತಮಾನದ್ದು. ಇದನ್ನು ನಂಬುವುದು ಬಿಡುವುದು ಆಮೇಲಿನ ಮಾತು ಆದರೆ ಆ ಕಾಲದಲ್ಲಿ ಸಮುದ್ರಗುಪ್ತನನ್ನು ಹೊರತುಪಡಿಸಿದರೆ ಅಶೋಕನೆಂಬ ಹೆಸರಿನ ಮತ್ತೊಬ್ಬ ರಾಜ ಭಾರತದಲ್ಲೇ ಇರಲಿಲ್ಲವೆಂಬುದು ಐತಿಹಾಸಿಕ ಸತ್ಯ. ಒಂದೇ ಹೆಸರಿನವರು ಎನ್ನುವ ಒಂದೇ ಕಾರಣಕ್ಕೆ ಯಾರ್ಯಾರನ್ನೋ ಎಲ್ಲೆಲ್ಲಿಗೋ ತಂದು ಏನೇನೋ ಬಿಡಿಸಲಾಗದ ಗೋಜಲು ಗೋಜಲಾಗಿಸಿದ ಕೀರ್ತಿಯೆಲ್ಲ ಮ್ಯಾಕ್ಸ್ ಮುಲ್ಲರ್, ವಿ..ಸ್ಮಿತ್, ಜೇಮ್ಸ್ ಪ್ರಿನ್ಸೆಪ್ ನಂಥವರು ಬ್ರಿಟಿಷ್ ಇತಿಹಾಸಕಾರರಿಗೆ ಸಲ್ಲಬೇಕು. ಹತ್ತಾರು ಸಾವಿರ ವರ್ಷಗಳ ಹಿಂದೆ ಯುರೋಪಿಯನ್ನರು ಹುಟ್ಟುವ ಮೊದಲೇ, ಅಮೇರಿಕನ್ನರು ಕಣ್ಣುಬಿಡುವ ಮೊದಲೇ ಪ್ರಪಂಚದ ಹೆಚ್ಚಿನಕಡೆ ಬಟ್ಟೆಹಾಕದೇ ತಿರುಗುತ್ತಿದ್ದ ಕಾಲದಲ್ಲಿ ನಮ್ಮ ಕಣ್ಣು ಕೋರೈಸುವ ಅದ್ಭುತ ವೈದಿಕ ನಾಗರಿಕತೆಯೊಂದು ಭಾರತದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿ ನಾವಿಂದೂ ನೆನೆಸಿಕೊಂಡು ತಲೆ ಎತ್ತಿ ನಿಲ್ಲುವಂತೆ ಮಾಡಿ ಅವಿಚ್ಛಿನ್ನವಾಗಿ, ಅಖಂಡವಾಗಿ ವಿಕಸನಗೊಂಡಿತ್ತು. ಅಂಥ ವೇದಕಾಲವನ್ನು ಎಳೆದು ಮೂರು ಸಾವಿರ ವರ್ಷದ ಹಿಂದೆ ತಂದುನಿಲ್ಲಿಸಿದ್ದಲ್ಲದೇ, ಐದು ಸಾವಿರ ವರ್ಷಗಳ ಹಿಂದೆ ನಡೆದ ಮಹಾಭಾರತ ಯುದ್ಧದ ಕಾಲವನ್ನು ಮೂರು ಸಾವಿರ ವರ್ಷಗಳೀಚೆ ತಂದು, ಕ್ರಿ.ಪೂ 1800ರಲ್ಲಿ ಬದುಕಿದ್ದ ಬುದ್ಧನನ್ನು ಕ್ರಿ.ಪೂ 5ನೇ ಶತಮಾನದಲ್ಲಿ ಮತ್ತೊಮ್ಮೆ ಹುಟ್ಟಿಸಿ, ಕ್ರಿ.ಪೂ 1500ರಲ್ಲೇ ಸತ್ತು ಸ್ವರ್ಗ ಸೇರಿದ್ದ ಚಂದ್ರಗುಪ್ತ ಮೌರ್ಯನನ್ನೇ ಅಲೆಕ್ಸಾಂಡರಿನ ಸಮಕಾಲೀನನನ್ನಾಗಿಸಿದ ತಥಾಕಥಿತ ಅಂದಿನ ಇತಿಹಾಸಕಾರರು ಮತ್ತು ಇಂದಿನ ಪ್ರಗತಿ ಪರರಿಗೆ ನಾವು ಶಹಬ್ಬಾಸ್ ಅನ್ನಲೇ ಬೇಕು. ಜಗತ್ತಿ ಯಾವ ದೇಶದ ಯಾವ ಮೂಲೆಗಾದರೂ ಹೋಗಿ ಹೇಳಿ ನಿಮ್ಮ ಇತಿಹಾಸ ನೀವಂದುಕೊಂಡದ್ದಕ್ಕಿಂತ ಹಳೆಯದು, ನಿಮ್ಮ ಹಿರಿಯರು ಪ್ರಪಂಚ ಕಾಣದ ವೈಭವದಲ್ಲಿ ಶ್ರೇಷ್ಟ ನಾಗರಿಕತೆಯೊಂದನ್ನು ನಡೆಸಿದರುಎಂದು. ಖುಷಿಯಿಂದ ಕುಣಿದಾಡುತ್ತಾರೆ. ಅದೇ ಮಾತನ್ನು ನಮ್ಮವರಿಗೆ ಹೇಳಿದರೆ. ನಮಗಿನ್ನೂ ನಮ್ಮ ಪೂರ್ವಜರು ಎಲ್ಲಿಂದಲೋ ಬಂದು ದಾಳಿಮಾಡಿದವರು, ನಮ್ಮದು ದಟ್ಟ ದರಿದ್ರ ಅನಾಗರೀಕ ದೇಶ, ನಾವು ಸಂಸ್ಕೃತಿ ಕಲಿತಿದ್ದೇ ಬ್ರಿಟಿಷರಿಂದ ಎನ್ನುತ್ತೇವೆ ಆರ್ಯ ದ್ರಾವಿಡ ಎನ್ನುವ ಕಚ್ಚಾಟದಲ್ಲೇ ಸಾಯುತ್ತೇವೆ.