Search This Blog

Friday 11 October 2019

ಶಂ ನೋ ದೇವೀರಭೀಷ್ಟಯ . . . .

ಶಂ ನೋ ದೇವೀರಭೀಷ್ಟಯ ಆಪೋ ಭವಂತು ಪೀತಯೇ |
ಶಂ ಯೋರಭಿ ಸ್ರವಂತು ನಃ ||
ಹೌದು ನೀರು ಸ್ವಚ್ಚವಾಗಿದ್ದರೆ ಕಲ್ಮಶರಹಿತವಾಗಿದ್ದರೆ ಅವು ರೋಗ ನಿರೋಧಕಗಳಾಗಿ ಕಾರ್ಯ ನಿರ್ವಹಿಸುತ್ತವಂತೆ. ನೀರು ದೇಹದಲ್ಲಿ ಪ್ರಮಾಣಕ್ಕಿಂತ ಕಡಿಮೆಯಾದರೂ ರೋಗದ ತೀವ್ರತೆ ಅಧಿಕವಾಗುತ್ತದೆಯಂತೆ. ಜೀರ್ಣ ಮತ್ತು ಅಜೀರ್ಣಕ್ಕೂ ಇದೇ ನೀರು ಅತ್ಯಂತ ಅವಶ್ಯವಂತೆ. ಪಚನಕ್ರಿಯೆ ನಡೆಯಲೂ ನೀರು ಬೇಕೇ ಬೇಕು ಎನ್ನುವ ಭಾವದೊಂದಿಗೆ ಶಂ ನೋ - ಒಳ್ಳೆಯದಾಗಲಿ ಎನ್ನುತ್ತದೆ. ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ರೋಗಕಾರಕ ಕ್ರಿಮಿಗಳಿಂದ ನಮಗೆ ಹಾನಿ ಉಂಟಾಗದಿರಲಿ ಎನ್ನುವ ಋಕ್ಕಿನ ಆಶಯ ಬಹಳ ಮಹತ್ವದ್ದು. ನಾವು ಕುಡಿಯುವ ನೀರು ಕುಡಿಯಲು ಯೋಗ್ಯವಾಗಿರುವಂತೆ ದೊರಕಿಸಿಕೊಡಿ ಎನ್ನುವ ಮಾತು ನಿಜಕ್ಕೂ ಸೂರ್ಯ ಚಂದ್ರರಿರುವ ತನಕವೂ ಸತ್ಯದ್ದು.

ನೀರು ನಮಗೆ ಎಷ್ಟು ಮುಖ್ಯ ಎನ್ನುವುದನ್ನು ಅತ್ಯಂತ ಸ್ವಾರಸ್ಯಕರವಾಗಿ ಹೇಳುವ ಋಕ್ಕು ಋಗ್ವೇದದಲ್ಲಿದೆ. ಅಲ್ಲಿ ಮನುಷ್ಯನಿಗೆ ಬರತಕ್ಕ ಹೆಚ್ಚಿನ ಎಲ್ಲಾ ರೋಗಗಳನ್ನೂ ನೀರಿನ ಮಾಧ್ಯಮದಿಂದಲೇ ಗುಣಪಡಿಸಬಹುದು ಎನ್ನುವುದಲ್ಲದೇ ನಮ್ಮ ಆಹಾರ ನಮಗೆ ಸಸಿಗಬೇಕಿದ್ದರೆ ಅಗ್ನಿ ಬಹಳ ಮುಖ್ಯ. ಆದರೆ ಅಗ್ನಿಯ ಮಧ್ಯವರ್ತಿ ಇದೇ ನೀರು ಎನ್ನುತ್ತಾನೆ ಋಗ್ವೇದದ ಹತ್ತಬನೇ ಮಂಡಲದ ಒಂಬತ್ತನೇ ಸೂಕ್ತದಲ್ಲಿ.
ಅಪ್ಸು ಮೇ ಸೋಮೋ ಅಬ್ರವೀದಂತರ್ವಿಶ್ವಾನಿ ಭೇಷಜಾ |
ಅಗ್ನಿಂ ವಿಶ್ವಶಂಭುವಂ || ಎನ್ನುವಲ್ಲಿನ ಅಗ್ನಿಂ ವಿಶ್ವಶಂಭುವಂ ಎನ್ನುವಲ್ಲಿನ ಜಗನ್ನಿರ್ಮಾತೃ ಅಗ್ನಿ ಎನ್ನುವ ಭಾವ ಕಾಣಸಿಗುತ್ತದೆ.

#ವೇದಲ್ಲಿ_ನೀರು

ಆದಿತ್ಯವರ್ಣೇ ಇರುವುದು ಬಿಲ್ವ ಮರದಲ್ಲಿ


ಆದಿತ್ಯವರ್ಣೇ ತಪಸೋಽಧಿಜಾತೋ ವನಸ್ಪತಿಸ್ತವ ವೃಕ್ಷೋಽಥ ಬಿಲ್ವಃ |
ತಸ್ಯ ಫಲಾನಿ ತಪಸಾ ನುದನ್ತು ಮಾಯಾನ್ತರಾಯಾಶ್ಚ ಬಾಹ್ಯಾ ಅಲಕ್ಷ್ಮೀಃ | |

ಮಂತ್ರ ಶ್ರೀಸೂಕ್ತದ ಮಂತ್ರ. ಸೂಕ್ತದ ಮಂತ್ರದ ದೃಷ್ಟಾರ ಆನಂದ ಋಷಿ ಎನ್ನುವವನು. ಋಷಿ ಮಹಾಲಕ್ಷ್ಮಿಯನ್ನು ಕುರಿತಾಗಿ ಮಂತ್ರವನ್ನು ಜಪಿಸುತ್ತಾನೆ. ಹೇಗಿದ್ದಾಳೆ ಲಕ್ಷ್ಮೀ ಎಂದರೆ ಆದಿತ್ಯವರ್ಣೇ ಎನ್ನುತ್ತಾನೆ. ಸೂರ್ಯನ ಪ್ರಭೆಯಂತಿದ್ದಾಳೆ ಎಂದು ಪ್ರಖರತೆಯನ್ನೂ ಮಂದವನ್ನೂ ಸೂಚಿಸುತ್ತಾನೆ.
ಸರ್ಯನಪ್ರಭೆ ಅಥವಾ ಕಾಂತಿಯಂತೆ ಮಹಾ ಪ್ರಕಾಶಮಾನವಾಗಿ ಬೆಳಗುವ ಶರೀರವನ್ನು ಹೊಂದಿರುವ ಹೇ ಶ್ರೀದೇವತೆಯೇ ನಿನ್ನ ಅನುಗ್ರಹ ಪೂರಿತ ಆಜ್ಞೆಯಂತೆ ಹೂವನ್ನು ಬಿಡದೇ ಫಲವನ್ನು ಮಾತ್ರ ಕೊಡುವ ಬಿಲ್ವ ಎನ್ನುವ ವೃಕ್ಷವು (ಸಸ್ಯಪ್ರಬೇಧ) ಹುಟ್ಟಿಕೊಂಡಿತು. ಬಿಲ್ವವು ಮನುಷ್ಯರಿಗೆ ಸುಖ ಸಂಪತ್ತು ಕೊಡಲಿ. ಮತ್ತು ಮನುಷ್ಯರಲ್ಲಿರುವ ಅಜ್ಞಾನವನ್ನು ದೂರಮಾಡಲಿ ಎನ್ನುವ ಅರ್ಥವನ್ನು ಕೊಡುತ್ತದೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ಮಹತ್ವದ ಅಂಶ ಎಂದರೆ ವನಸ್ಪತಿಸ್ತವ ವೃಕ್ಷೋಽಥ ಬಿಲ್ವಃ | ತಸ್ಯ ಫಲಾನಿ ತಪಸಾ ನುದನ್ತು ಎನ್ನುವಲ್ಲಿನ ಅಂಶವನ್ನು ನೋಡಿದರೆ ಬಿಲ್ವ ಪತ್ರೆಯ ಮಹತ್ವ ಆಶ್ಚರ್ಯ ಹುಟ್ಟಿಸುತ್ತದೆ. ಮೂರು ದಳಗಳುಳ್ಳ ಬಿಲ್ವ ಪತ್ರದ ಕುರಿತು ಶ್ರೀವಿದ್ಯಾರಣ್ಯರುಅಪುಷ್ಪಾಃ ಫಲವಂತೋ ಯೇ ತೇ ವನಸ್ಪತಯಃ ಸ್ಮೃತಾಃ ಅಂದರೆ ಬಿಲ್ವಪತ್ರೆ ಎನ್ನುವುದು ಹೂವನ್ನು ಬಿಡದೇ ಕಾಯಿಯನ್ನು ಕೊಡುತ್ತದೆ. ಆದುದರಿಂದಲೇ ಅದನ್ನು ವನಸ್ಪತಿ ಎಂದು ಕರೆಯಲಾಗುತ್ತದೆ. ಎಂದು ವಾಮನಪುರಾಣದಲ್ಲಿ ಕಾತ್ಯಾಯನನ ಮಾತು. ಬಿಲ್ವ ವೃಕ್ಷವೇ ಲಕ್ಷ್ಮಿಯ ನಿವಾಸಸ್ಥಾನ ಎಂದು ಭಾರ್ಗವಪುರಾಣದಲ್ಲಿ ಹೇಳಲಾಗಿದೆ ಎಂದು ಪೃಥ್ವೀದರಾಚಾರ್ಯರ ಅಭಿಪ್ರಾಯ. ಸಾಧಾರಣವಾಗಿ ಮರಗಳು ಮೊದಲು ಹೂವುಗಳನ್ನು ಬಿಟ್ಟು ನಂತರದಲ್ಲಿ ಫಲಬಿಡುತ್ತವೆ. ಆದರೆ ಹೂವನ್ನು ಬಿಡದೇ ಫಲಕೊಡುವ ಮರಗಳನ್ನೆಲ್ಲಾ ವನಸ್ಪತಿ ಎಂದು ಕರೆಯಲಾಗುತ್ತದೆ. ಇದರಲ್ಲಿ ಪ್ರಮುಖವಾಗಿರುವುದು ಬಿಲ್ವಪತ್ರೆ.
ಬಿಲ್ವ ಎನ್ನುವುದು ಲಕ್ಷ್ಮಿಯ ತಪಸ್ಸಿನಿಂದ ಶಿವನಿಗೆ ಪ್ರಿಯವೆನ್ನಿಸಿತು ಎನ್ನುವುದು ಬ್ರಹ್ಮಾಂಡಪುರಾಣದಲ್ಲಿ. ಹೀಗೇ ಬಿಲ್ವಪತ್ರೆಯ ಕುರಿತಾಗಿ ಸ್ಕಾಂದಪುರಾಣದಲ್ಲಿ ಕಥೆಯನ್ನೇ ಕೊಡಲಾಗಿದೆ. ಅದೇನೇ ಇರಲಿ ಬಿಲ್ವಪತ್ರೆ ಅತ್ಯಂತ ಸುವಾಸನಾಯುಕ್ತವಾದದ್ದು. ಆದರೆ ಬಿಲ್ವಪತ್ರೆಯ ಕಾಯಿ ಕಾಣಸಿಗುತ್ತದೆ, ಅದು ಸಹ ಸುವಸನಾಯುಕ್ತವೇ. ಅನೇಕ ರೋಗಗಳೂ ನಿವಾರಣೆಯಾಗುತ್ತದೆ. ಇಂತಹ ಒಂದು ಬಿಲ್ವ ಶಿವನಿಗರ್ಪಿತವಾದರೂ ಸ್ವರ್ಗಪ್ರಾಪ್ತಿ ಎನ್ನಲಾಗುತ್ತದೆ. ಉದಯಿಸುತ್ತಿರುವ ಸೂರ್ಯನಂತೆ ಶರೀರಹೊಂದಿ ಕಂಗೊಳಿಸುತ್ತಿರುವ ಶ್ರೀ ಲಕ್ಷ್ಮಿಯು ಬಿಲ್ವಾರಣ್ಯದಲ್ಲಿ ನೆಲೆಸುತ್ತಾಳೆ ಎಂದು ಸಹ ವರ್ಣನೆ ಸಿಗುತ್ತದೆ. ಇಂತಹ ಬಿಲ್ವ ಪತ್ರೆಯ ಮರ ಎಲ್ಲೆಂದರಲ್ಲಿ ಬೆಳೆಯುವುದಿಲ್ಲ. ಅದು ಬೆಳೆಯುವುದು ಅಂತಹ ವಾತಾವರಣದಲ್ಲಿ. ನವರಾತ್ರಿಯಲ್ಲಿ ಲಕ್ಷ್ಮೀ ಮತ್ತು ಶಿವನಿಗೂ ಬಿಲ್ವ ಪತ್ರೆ ಅತ್ಯಂತ ಶ್ರೇಷ್ಠ.
#ಶ್ರೀಸೂಕ್ತ_ಬಿಲ್ವ

ಮಳೆಗೆ ಮರುದ್ದೇವತೆಯೇ ಮೂಲ.


ಆದಹ ಸ್ವಧಾಮನು ಪುನರ್ಗರ್ಭತ್ವಮೇರಿರೇ |
ದಧಾನಾ ನಾಮ ಯಜ್ಞಿಯಂ || ಇದು ಋಗ್ವೇದ ಒಂದನೇ ಮಂಡಲದಲ್ಲಿ ಬರುವ ಋಕ್ಕು.

ಇದು ಒಂದು ರೀತಿಯಲ್ಲಿ ನನಗೆ ಆಶ್ಚರ್ಯ ಹುಟ್ಟಿಸಿತು. ಇಂದು ನಾವು ಬೇಸಿಗೆ ಕಳೆದು ಮುಂಗಾರು ಬರುವುದು ಸ್ವಲ್ಪ ತಡವಾದರೂ ಸಹ ಹಂಡೆಗಳಲ್ಲಿ ಕುಳಿತು ಪರ್ಜನ್ಯ ಜಪವನ್ನೋ ಅಥವಾ ವರುಣ ಜಪವನ್ನೋ ಮಾಡುವುದನ್ನು ಕಾಣುತ್ತೇವೆ ಕೇಳುತ್ತೇವೆ ತೀರಾ ಆಧುನಿಕವಾಗಿಯೂ ಕಾಣುತ್ತೇವೆ. ಇನ್ನು ಕೆಲವೆಡೆ ಅಭಿಷೇಕಾದಿಗಳನ್ನು ಕಾಣುತ್ತೇವೆ. ಆದರೆ ಮೇಲೆ ಹೇಳಿದ ಋಕ್ಕನ್ನು ಗಮನಿಸಿದರೆ, ಮಳೆಗಾಲ ಕಳೆದು ಬೇಸಿಗೆ ಬಂದು ಪುನಃ ಮಳೆಯ ಆಗಮನಕ್ಕೆ ಮರುದ್ದೇವತೆಗಳನ್ನು ಸೂಕ್ತಕಾರ ಪ್ರಾರ್ಥಿಸುತ್ತಾನೆ. "ಮಳೆಗಾಲವು ಕಳೆದ ನಂತರ ಯಜ್ಞ ಯಾಗಾದಿಗಳಲ್ಲಿ ಗೌರವಿಸಲ್ಪಡುವ ಇತರ ದೇವತೆಗಳಂತೆ ಪ್ರಸಿದ್ಧರಾದ ಮರುದ್ದೇವತೆಗಳು ಜನರಿಗೆ ಸಸ್ಯರೂಪವಾದ ಆಹಾರವನ್ನೂ ಮತ್ತು ನೀರನ್ನು ಕೊಡುವುದಕ್ಕಾಗಿ ಪುನಃ ಹಿಂದಿನಂತೆ ಈಗಲೂ ಮಳೆಯನ್ನು ಉತ್ಪಾದಿಸುವ ಮೊದಲು ಮೋಡಗಳ ಮಧ್ಯದಲ್ಲಿ ನೀರು ಒಟ್ಟಾಗಿ ಸೇರಿ ಗರ್ಭರೂಪದಿಂದಿರುವಂತೆ ಪರ್ಜನ್ಯನನ್ನು ಪ್ರೇರೇಪಿಸಿದರು." ಎಂದು ಮರುದ್ದೇವತೆಗಳು ಮಳೆಗೆ ಮೂಲ ಎನ್ನುವುದನ್ನು ಅಂದರೆ ಗಾಳಿಯಿಂದ ಮೋಡಗಳೆಲ್ಲಾ ಒಂದೆಡೆ ಸೇರಿ ತಮ್ಮಲ್ಲಿರುವ ನೀರಿನ ಹನಿಗಳನ್ನು ಭೂಮಿಯ ಮೇಲೆ ಚಿಮುಕಿಸಲಿ. ಮೋಡಕ್ಕೆ ಗಳಿಯ ಅವಶ್ಯಕತೆಯನ್ನು ಪ್ರತಿಪಾದಿಸಲಾಗಿದೆ. ಅಂದರೆ ನಾವುಗಳು ಇಂದು ಕೇವಲ ಪರ್ಜನ್ಯ ಜಪಮಾಡಿದರೆ ಸಾಕಾಗದು ಜೊತೆಯಲ್ಲಿ ಮರುದ್ದೇವತೆಗಳನ್ನೂ ಸಹ ಅದೇ ರೀತಿ ಮೋಡಗಳಿಗೆ ಪೂರಕವಾಗಿರುವಂತೆ ಪ್ರಾರ್ಥಿಸಬೇಕು ಎನ್ನುವುದು ತಿಳಿಯುತ್ತದೆ. ಅಂದರೆ ಕಾಲದಲ್ಲಿಯೂ ಸಹ ಮಳೆಗಾಗಿ ಪ್ರಾರ್ಥಿಸುತ್ತಿದ್ದರು ಆದರೆ ಪ್ರಾರ್ಥನೆಯ ವಿಧಾನ ಸ್ವಲ್ಪ ಬೇರೆ ಇತ್ತು.
ಗಟ್ಟಿಯಾದ ಮೋಡವು ಗಾಳಿಯ ಸಹಾಯದಿಂದ ನೀರಾಗಿ ಮಳೆಯಾಗುವ ಕ್ರಿಯೆ ವಿಜ್ಞಾನದಲ್ಲೂ ಇರಬಹುದು. ಆದರೆ ಇಲಲಿ ಗಾಳಿಯ ಶಕ್ತಿಯನ್ನು ಮತ್ತು ಅದರ ಅವಶ್ಯಕತೆಯನ್ನು ಸೂಕ್ತಕಾರ ಗಮನಿಸಿ ಮಳೆಗೆ ಪೂರಕ ಮೋಡ, ಮೋಡ ಕರಗಲಿಕ್ಕೆ ಗಾಳಿಯ ಅಥವಾ ಪ್ರಬಲವಾದ ಶಕ್ತಿಯೊಂದರ ಅವಶ್ಯಕತೆಯನ್ನು ತಿಳಿಸುತ್ತಾನೆ.

#ಮಳೆ_ಮೋಡ_ಗಾಳಿ