Search This Blog

Sunday 29 April 2018

ಸೋಮ - ಅದೊಂದು ಶಕ್ತಿ



ಸೋಮ ಎನ್ನುವುದು ಯಾವುದೇ ಮತ್ತು ಭರಿಸುವ ಪಾನವಲ್ಲ. ಸೋಮದಿಂದಲೇ ಭಾಷೆಗಳ ಉಗಮ ವಿಕಾಸ ಎಲ್ಲವೂ ಆಗಿದೆ. ಸೋಮದ ಕುರಿತಾಗಿ ಬರೆಯುತ್ತಾ ಸಾಗಿದಾರೆ ಅದ್ಭುತವಾದ ಜಗತ್ತೊಂದು ಗೋಚರಿಸುತ್ತದೆ. ಸೋಮನೇ ಸೂರ್ಯ, ಸೋಮನೇ ಜಗದ್ಯಾಪೀ. ಈ ಸೋಮ ಎನ್ನುವುದು ಅಗಾಧ ಶಕ್ತಿಯನ್ನು ಸೂಚಿಸುವ ಒಂದು ಪದ ಅನ್ನಿಸಿ ಬಿಡುತ್ತದೆ. ನಾವಿಂದು ನಮ್ಮ ನಮ್ಮ ಭಾವನೆಗಲನ್ನು ಹೇಗೆ ವ್ಯಕ್ತ ಪಡಿಸುತ್ತಿದ್ದೇವೆಯೋ ಅವೆಲ್ಲವೂ ಸೋಮದಿಂದಲೇ, ಸೋಮನಿಂದಲೇ. ಒಂದು ಕೃತಿ ಅಥವಾ ನಾವು ಆಡುವ ಮಾತು ಭಾಷಣ ಎಲ್ಲವೂ ಸ್ವಾರಸ್ಯಕರವಾಗಿರಬೇಕಿದ್ದರೆ ಅದು ಸೋಮದಿಂದಲೇ ಸಾಧ್ಯವಾಗಿದೆ. ಸೋಮದ ಕುರಿತಾಗಿ ಅನೇಕ ಕಥೆಗಳಿವೆ.
ಪರ್ಜನ್ಯ ವೃದ್ಧಂ ಮಹಿಷಂ ತಂ ಸೂರ್ಯಸ್ಯ ದುಹಿತಾಭರತ್ |
ತಂ ಗಂಧರ್ವಾಃ ಪ್ರತಗೃಭ್ಣಂತಂ ಸೋಮೇ ರಸಮಾದಧುರಿಂದ್ರಾ ಯೇಂದೋಪರಿ ಸ್ರವ || ೯ :೩ : ೧೧೩
ಪರ್ಜನ್ಯನಂತೆ ಬಲಶಾಲಿಯಾದ ಪೂಜ್ಯನಾದ ಸೋಮನನ್ನು (ಸೋಮವನ್ನು) ದ್ಯುಲೋಕದಿಂದ ಸೂರ್ಯನ ಮಗಳಾದ ಶೃದ್ಧೆಯು ತಂದಳು. ಅದನ್ನು ಗಂಧರ್ವರು ಸ್ವೀಕರಿಸಿದರು. ಅದೇ ಸೋಮದಲ್ಲಿ ರಸ ಬರುವಂತೆ ಮಾಡಿದರು. ಸೋಮನೇ ನೀನು ಇಂದ್ರನು ಕುಡಿಯುವುದಕ್ಕಾಗಿ ಪ್ರವಹಿಸು ಎನ್ನುವುದು ಈ ಋಕ್ಕಿನ ಅರ್ಥ.
ಆದರೆ ಈ ಸೋಮದ ಕುರಿತಾಗಿ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯಲ್ಲಿ ಹೇಳಲ್ಪಟ್ಟಿದೆ. ಯಜುರ್ವೇದದ ತೈತ್ತಿರೀಯ ಸಂಹಿತೆಯಲ್ಲಿ "ತಂ ಸೋಮ ಮಾಹ್ರಿಯಮಾಣಂ ಗಂಧರ್ವೋ ವಿಶ್ವಾವಸುಃ ಪರ್ಯಮುಷ್ಣಾತ್ಸತಿಸ್ರೋ ರಾತ್ರಿಃ" (೬:೧ ರಿಂದ ೬:೫ ರವರೆಗೆ)
ಹಿಂದೆ ಸೋಮವು ಸ್ವರ್ಗದಲ್ಲಿದ್ದಿತ್ತು. ಅದನ್ನು ಭೂಮಿಗೆ ತರಲು ಯಾರಿಂದಲೂ ಸಾಧ್ಯವಾಗದೇ ಇದ್ದಾಗ ಗಾಯತ್ರಿಯು ಶ್ಯೇನ ಪಕ್ಷಿಯ ರೂಪದಿಂದ ಸ್ವರ್ಗಕ್ಕೆ ಹೋಗಿ ಅಲ್ಲಿ ಸೋಮವನ್ನು ಕಾಯುತ್ತಿದ್ದ ಸ್ವಾನ, ಭ್ರಾಜ, ಅಂಘಾರಿ, ಬಂಭಾರಿ, ಹಸ್ತ, ಸುಹಸ್ತ, ಕೃಶಾನು ಎನ್ನುವ ಸೋಮದ ಪಾಲಕರನ್ನು ಎದುರಿಸಿ ಅವರಿಂದ ತಪ್ಪಿಸಿಕೊಂಡು ಸೋಮವನ್ನು ಭೂಮಿತರುತ್ತಾಳೆ. ಭೂಮಿಗೆ ತರುತ್ತಿರುವ ಸಮಯದಲ್ಲಿ "ವಿಶ್ವಾವಸು" ಎನ್ನುವ ಗಂಧರ್ವನೊಬ್ಬ ಸೋಮವನ್ನು ಅಪಹರಿಸಿ ಮೂರು ದಿನಗಳ ತನಕ ಇಟ್ಟುಕೊಂಡನು. ಅದನ್ನು ಅವನಿಂದ ಹೇಗೆ ಬಿಡಿಸಿ ತರುವುದು ಎಂದು ಚಿಂತಿಸುತ್ತಿರುವಾಗ ಒಂದು ವಿಚಾರ ಹೊಳೆಯುತ್ತದೆ. ಗಂಧರ್ವರು ಸ್ತ್ರೀ ವ್ಯಾಮೋಹಿಗಳು, ಅತಿ ಕಾಮಿಗಳು ಅವರಿಗೆ ಸ್ತ್ರೀಯರ ಆಶೆ ತೋರಿಸಿ ಸೋಮವನ್ನು ಬಿಡಿಸಿ ತರುವುದು ಎಂದು ಆಲೋಚಿಸಿ ವಾಗ್ದೇವತೆಯ ಸಮೀಪಕ್ಕೆ ಹೋಗಿ ಅವಳಲ್ಲಿ ವಿಷಯವನ್ನೆಲ್ಲಾ ತಿಳಿಸಿ ಅವಲ ಅನುಮತಿಯಂತೆ ಅವಳನ್ನು ಸುಂದರ ಸ್ತ್ರೀಯಾಗಿ ಮಾರ್ಪಡಿಸಿ ಅವಳನ್ನು ಗಂಧರ್ವರಿಗೆ ಮಾರಿ ಅದಕ್ಕೆ ಬದಲಾಗಿ ಸೋಮವನ್ನು ತರುವಂತೆಯೂ ನಿಷ್ಕರ್ಷೆಯಾಯಿತು. ಅದರಂತೆ ವಾಗ್ದೇವತೆಯು ಸುಂದರ ರೂಪ ಧರಿಸಿದಳು. ಅವಲನ್ನು ಗಂಧರ್ವರಿಗೆ ಕೊಟ್ಟು ಅವರ ವಶದಲ್ಲಿದ್ದ ಸೋಮವನ್ನು ಹಿಂದಕ್ಕೆ ತಂದರು. ಸೋಮವು ದೇವತೆಗಳ ವಶವಾದ ತಕ್ಷಣ ಸುಂದರಳಾಗಿದ್ದ ವಾಗ್ದೇವತೆಯು ಕೆಂಪು ಬಣ್ಣದ ಜಿಂಕೆಯ ರೂಪ ಧರಿಸಿ ಗಂಧರ್ವರಿಂದ ತಪ್ಪಿಸಿಕೊಂಡು ಬಂದು ದೇವತೆಗಳಲ್ಲಿ ಸೇರಿಕೊಂಡಳು. ಇದು ಯಜುರ್ವೇದದಲ್ಲಿ ಬರುವ ಕಥೆ. ಇದು ಅಂದಿನಿಂದ ಇಂದಿನ ತನಕವೂ ಯಜ್ಞಗಳಲ್ಲಿನ ಉಪಯೋಗಕ್ಕಾಗಿ ಸೋಮವನ್ನು ಕೊಂಡು ತರುತ್ತಾರೆ. ಯಜ್ಞಾಂಗಗಳಲ್ಲಿ "ಸೋಮವಿಕ್ರಯಣ" ಎನ್ನುವುದು ಒಂದು ಯಜ್ಞಾಂಗ ಕರ್ಮ ಎನ್ನಿಸಿತು. ಸೋಮವನ್ನು ತರುವುದು ಬಹಳ ಕಷ್ಟದ ಕೆಲಸ ಆದುದರಿಂದ ಅದನ್ನು ದ್ರವ್ಯ ಕೊಟ್ಟೆ ತರುತ್ತಾರೆ. ಮತ್ತು ಅದು ಮೂರು ದಿನ ಗಂಧರ್ವರ ವಶದಲ್ಲಿದ್ದುದರ ಪರಿಣಾಮ ಇಂದಿಗೂ ಸೋಮವನ್ನು ಮೂರು ದಿನ ಇಟ್ಟು ಆಮೇಲೆ ಬಳಸಲಾಗುತ್ತದೆ.


Friday 27 April 2018

ಲಂಚ, ಭೃಷ್ಟಾಚಾರ, ಎಲ್ಲವೂ ಪರಂಪರಾನುಗತವಾದ ಬಳುವಳಿಯೇ ಹೊರತು ಈಗಿನದ್ದಲ್ಲ - ಕ್ಷೇಮೇಂದ್ರ.(ಬನವಾಸಿ ಕದಂಬರ ಸಾಹಿತ್ಯಿಕ ಸಾಂಸ್ಕೃತಿಕ ಕೊಂಡಿ ಕ್ಷೇಮೇಂದ್ರ)



ಮುನಿಮತ ಮೀಮಾಂಸಾ ಎನ್ನುವುದು ಹತ್ತು ಹನ್ನೊಂದನೇ ಶತಮಾನದ ವಿಶಿಷ್ಟಗ್ರಂಥ ಎಂದು ಹೇಳಬಹುದು. ಇದರಲ್ಲಿ ಪ್ರಾಚೀನ ಋಷಿಗಳೆಲ್ಲರ ಜನ್ಮಜಾಲಾಡಲಾಗಿದೆ. ಪ್ರಾಚೀನ ಋಷಿುಗಳ ದೂಷಣೆಯೇ ಈ ಗ್ರಂಥದ ಮುಖ್ಯಾಂಶ. ಈ ಗ್ರಂಥದಲ್ಲಿ ಬರುವ ಕೆಲವು ವರ್ಣನೆಗಳು ಭಟ್ಟನಾರಾಯಣನ ವೇಣಿಸಂಹಾರವನ್ನೂ, ಭವಭೂತಿಯ ಶೈಲಿಯನ್ನು ಹೋಲುತ್ತದೆ. ಶಬ್ದ, ಅಲಂಕಾರ ಉಪಮಾನೋಪಮೇಯಗಳು ಇವನಿಗೆ ಕರತಲಾಮಲಕವಾಗಿದ್ದು ಯಾವುದನ್ನೂ ಹೇಗೆ ವರ್ಣಿಸಿದರೂ ಅದು ಈಗಷ್ಟೇ ಸಂಭವಿಸಿತೇನೋ ಎನ್ನುವಷ್ಟು ಮತ್ತು ತಾನೇ ಪ್ರತ್ಯಕ್ಷ ನೋಡಿದಷ್ಟು ಚೆನ್ನಾಗಿ ವರ್ಣಿಸುವ ಕಲೆ ಕ್ಷೇಮೇಂದ್ರನಿಗೆ ಒಲಿದಿತ್ತು. ಮೂಲ ವಿಷಯಕ್ಕೆ ಚ್ಯುತು ಬರದಂತೆ ವರ್ಣಿಸುವ ಕುಶಲತೆ ಅವನಿಗಿತ್ತು. ತನ್ನ ಬಾಲ್ಯದಲ್ಲಿಯೇ ಕವಿಯಾಗುವುದಕ್ಕೆ ಬೇಕಾದ ವಿದ್ಯೆ ಪಡೆದುದಾಗಿ ಸರಸ್ವತೀ ಕಂಠಾಭರಣದಲ್ಲಿ ಹೇಳಿಕೊಂಡಿದ್ದಾನೆ. ಕವಿತೆಯೂ ಪ್ರಕೃತಿಯನ್ನು ಹೋಲುತ್ತದೆ. ಅದಕ್ಕೆ ವಿದ್ಯೆ ಕೇವಲ ಸಹಾಯಕ ಮಾತ್ರ ಎಂದು ಅದೇ ಕೃತಿಯಲ್ಲಿ ಹೇಳಿಕೊಂಡಿದ್ದಾನೆ. ನೀರಸವಾದ ತರ್ಕ ಮತ್ತು ವ್ಯಾಕರಣಗಳನ್ನು ಈತ ಹೀಯಾಳಿಸುತ್ತಿದ್ದ. ಸರಳವಾದ ಹೃದಯ ವೈಶಾಲ್ಯತೆ, ಸೌಂದರ್ಯದ ಆಸ್ವಾದನೆಯಲ್ಲಿ ಸ್ವಾಭಾವಿಕವಾದ ಆಸಕ್ತಿ ಇರದೇ ಕವಿತೆಯ ಮಾಧುರ್ಯದ ಆಸ್ವಾದನೆ ಯಾರಿಗೆ ಹಿಡಿಸುವುದಿಲ್ಲವೋ ಅಂತವರು ತರ್ಕ ವ್ಯಾಕರಣ ಎಂದು ಅರಚುತ್ತಿರಲಿ ಎಂದು ಹೇಳಿದ್ದಾನೆ. ಅಂತವರ ವಿದ್ಯೆಯು ಕುರುಡನು ಸೂರ್ಯನನ್ನು ನೋಡಿದಷ್ಟೇ ಎಂದು ಹೇಳಿದ್ದಾನೆ. ಈತ ಚಿಕ ಚಿಕ್ಕ ಗ್ರಂಥಗಳನ್ನು ಬರೆದು ದೂಷಣೆ ಮಾಡುವುದರಲ್ಲಿಯೇ ನಿಸ್ಸೀಮನಾಗಿದ್ದನು. ಇಂತಹ ಚಿಕ್ಕ ಗ್ರಂಥಗಳಲ್ಲಿ ದರ್ಪಣ ವಿಲಾಸ ಪ್ರಾಮುಖ್ಯವನ್ನು ಪಡೆಯುತ್ತದೆ. ತನ್ನ ಕಾಲದಲ್ಲಿ ಬಂದ ಅವ್ಯವಹಾರಗಳನ್ನೆಲ್ಲಾ ಖಂಡಿಸಿದ್ದಾನೆ. ಲೋಕಾನುಭವವನ್ನು ತಿಳಿಸುವ ಇವನ 'ಕಲಾವಿಲಾಸ' ಎನ್ನುವ ಗ್ರಂಥದಲ್ಲಿ ಮೋಹ, ಡಂಭಾಚಾರ, ಕಾಮ ಜೀವನ, ಮೊದಲಾದ ಕೆಟ್ತ ಲಕ್ಷಣಗಳನ್ನು ವಿವರಿಸುತ್ತಾ ಹತ್ತನೇ ಅಧ್ಯಾಯದಲ್ಲಿ ರಾಜನ ಆಸ್ಥಾನದಲ್ಲಿದ್ದ ಕರಣಿಕರ ದುರ್ವ್ಯವಹಾರವನ್ನು ವರ್ಣಿಸಿದ್ದಾನೆ. ಅವರ ಲಂಚಕೋರತನ, ಸುಳ್ಳು ಹೇಳುವುದು ಕಪಟವ್ಯವಹಾರ, ಮೋಸ, ಅಕ್ಷರಸ್ಖಾಲಿತ್ಯಮಾಡಿ ಮೋಸಗೊಳಿಸುವುದು. ಬೇಕೆಂತಲೇ ಬರಹದಲ್ಲಿ ಕಳ್ಳತನಮಾಡುವುದು, ಜನರು ತೆರಿಗೆ ಪಾವತಿಸಿದ್ದರಲ್ಲಿ ಸಹಿತ ಎನ್ನುವಲ್ಲಿ ರಹಿತ ಎಂದುಇ ಬರೆದು ರಹಿತ ಇರುವಲ್ಲಿ ಸಹಿತ ಎಂದು ಅಕ್ಷರಗಳನ್ನು ತಿದ್ದುವುದು. ಕಡತಗಳನ್ನು ಸುಟ್ಟುಹಾಕುವುದು, ಅನೇಕವೇಳೆ ಹಿರಿಯ ಅಧಿಕಾರಿಗಳಿಗೆ ವೇತನವೇ ಪಾವತಿಯಾಗದಂತೆ ಮಾಡುವುದು. ಇಂತವುಗಳನ್ನು ತಾನೇ ಅನುಭವಿಸಿದಂತೆ ವರ್ಣಿಸಿರುವನು. 
ಹೌದು ಈ ವಿಷಯಗಳೆಲ್ಲಾ ಸಮಕಾಲೀನ ಪ್ರಪಂಚದಲ್ಲಿ ಇಂದು ನಾವು ಈಗ ಘಟಿಸಿದೆ ಮತ್ತು ಈಗ ನಾವು ಲೋಕ ಕೆಟ್ಟಿದೆ ಲಂಚಗುಳಿತನ ಭ್ರಷ್ಟಾಚಾರ ಎಂದೆಲ್ಲಾ ಬೊಬ್ಬಿಡುತ್ತೇವೆ . ಆದರೆ ಇವು ಎಲ್ಲಾ ಕಾಲದಲ್ಲೂ ನಡೆದುಕೊಂಡು ಬಂದ ವ್ಯವಸ್ಥೆ ಎನ್ನಬಹುದು. 
ಈತ ತನ್ನ ಕಾಲಕ್ಕು ಮೊದಲಿನ ಕವಿಗಳ ಬರಹಗಳನ್ನು ವಿಶ್ಲೇಷಿಸಿದ್ದಾನೆ. ಔಚಿತ್ಯ ವಿಚಾರ ಚರ್ಚಾ ಎನ್ನುವ ಗ್ರಂಥ ಅದಕ್ಕಾಗಿಯೇ ಮೀಸಲಿಟ್ಟಿದ್ದಾನೆ. ಈಗ ಉಪಲಬ್ದವಿರದ ಗ್ರಂಥಗಳ ಹೆಸರು ಮತ್ತು ಅದರಲ್ಲಿನ ತಿರುಳು. ಈತನ ಈ ಗ್ರಂಥದಿಂದ ತಿಳಿಯುತ್ತದೆ. ಇದು ಆತ ನಮಗೆ ಕೊಟ್ಟ ಬಹುದೊಡ್ಡ ಉಡುಗೊರೆ. ಆತ ಔಚಿತ್ಯ ವಿಚಾರ ಚರ್ಚಾ ಎನ್ನುವ ಗ್ರಂಥದಲ್ಲಿ ಕರ್ನಾಟಕದ ಕುರಿತಾಗಿ ಬರೆಯುತ್ತಾ ಕದಂಬರ ರಾಜ್ಯದ ಔನ್ನತ್ಯ ವಿವರಿಸುತ್ತಾನೆ. ಅದನ್ನು ನಾನಿಲ್ಲಿ ಹೇಳುವುದಿಲ್ಲ. ಆದರೆ ಅದ್ಭುತ ವಿವರಣೆ ನೀಡುತ್ತಾನೆ. ಅದಕ್ಕಾಗಿ ಕನ್ನದದ ಜನ ಕ್ಷೇಮೇಂದ್ರನಿಗೆ ಶರಣೆಲ್ಲಲೇ ಬೇಕು. ಔಚಿತ್ಯವಿಚಾರಚರ್ಚೆಯಲ್ಲಿ ಕ್ಷೇಮೇಂದ್ರ 'ಔಚಿತ್ಯಂ ರಸಸಿದ್ಧಸ್ಯ ಸ್ಥಿರಂ ಕಾವ್ಯಸ್ಯ ಜೀವಿತಂ' ಎಂಬ ಔಚಿತ್ಯ ಸಂಪ್ರದಾಯವನ್ನು ಪ್ರತಿಪಾದಿಸಿದ್ದಾನೆ. ಕಾವ್ಯಕ್ಕೆ ಉತ್ಕರ್ಷವುಂಟಾಗುವುದು ಅದರಲ್ಲಿನ ಪದ, ವಾಕ್ಯ, ಅರ್ಥ, ಗುಣ ಅಲಂಕಾರ, ರಸ ಮುಂತಾದವುಗಳಲ್ಲೆಲ್ಲ ಇರುವ ಔಚಿತ್ಯದಿಂದಲೇ ಎಂದು ಸಮರ್ಥಿಸಿ ಪ್ರಸಿದ್ಧ ಕವಿಗಳ ಪ್ರಯೋಗಗಳಲ್ಲೂ ಈತ ದೋಷಗಳನ್ನು ತೋರಿಸಿದ್ದಾನೆ. ಉದಾಹರಣೆಗಳನ್ನು ತನ್ನ ಮತ್ತು ಇತರರ ಕೃತಿಗಳಿಂದ ಆರಿಸಿಕೊಟ್ಟಿದ್ದಾನೆ. ಔಚಿತ್ಯ ಸಂಪ್ರದಾಯಕ್ಕೆ ಸಿದ್ಧಾಂತಸ್ವರೂಪವನ್ನು ಕೊಟ್ಟ ಕೀರ್ತಿ ಕ್ಷೇಮೇಂದ್ರನಿಗೆ ಮೀಸಲು. ಕುಂತೇಶ್ವರದೌತ್ಯವೆಂಬುದು ಕಾಳಿದಾಸ ವಿರಚಿತವೆಂದು ಈ ಗ್ರಂಥದಲ್ಲಿ ಹೇಳಿದೆ.
“ಕವಿಕಂಠಾಭರಣ”ಗಳಲ್ಲಿ ಕ್ಷೇಮೇಂದ್ರನೇ ಹೇಳಿಕೊಂಡಿರುವಂತೆ ಇವನ ತಂದೆ ಪ್ರಕಾಶೇಂದ್ರ, ತಾತ ಸಿಂಧು, ಸಹೋದರ ಚಕ್ರಪಾಲ. ಕ್ಷೇಮೇಂದ್ರನ ಮಗ ಸೋಮೇಂದ್ರ ತನ್ನ ತಂದೆ ರಚಿಸಿದ್ದ ಅವದಾನ ಕಲ್ಪತೆಗೆ 108ನೆಯ ಪಲ್ಲವವನ್ನು ಬರೆದು ಸೇರಿಸಿ ಉಪೋದ್ಘಾತದಲ್ಲಿ ತನ್ನ ವಂಶ ವೃಕ್ಷವನ್ನು ಈ ರೀತಿ ಕೊಟ್ಟಿದ್ದಾನೆ.
ಬೃಹತ್ಕಥಾಮಂಜರಿಯಲ್ಲಿ ಕ್ಷೇಮೇಂದ್ರನೇ ಹೇಳಿಕೊಳ್ಳುವಂತೆ ತನ್ನ ತಂದೆಯಾದ ಪ್ರಕಾಶೇಂದ್ರನು ದಾನಶೀಲನೆಂದೂ ಅವನ ಮನೆ ದೊಡ್ದ ಅನ್ನಸತ್ರವೇ ಆಗಿತ್ತೆಂದೂ ಆತ ದೇವದ್ವಿಜಮಠಾಧಿಗಳಿಗಾಗಿ ಕೋಟಿಗಟ್ಟಲೆ ಹಣವನ್ನು ನೀಡುತ್ತಿದ್ದುದಾಗಿಯೂ ಆತ ಶೈವನಾಗಿದ್ದು ಅನೇಕ ಶಿವಬಿಂಬಗಳನ್ನು ಶಿವಾಲಯಗಳಲ್ಲಿ ಪ್ರತಿಷ್ಠಿಸಿದುದಲ್ಲದೆ ಅಂಥ ಒಂದು ಬಿಂಬವನ್ನು ಪೂಜಿಸಿ ಅದನ್ನೇ ತಬ್ಬಿಕೊಂಡು ಪ್ರಾಣ ನೀಗಿದುದಾಗಿಯೂ ಹೇಳಿಕೊಳ್ಳುತ್ತಾನೆ. ಇದರಿಂದ ಕ್ಷೇಮೇಂದ್ರನೂ ಸಹ ಶೈವನೆಂದಂತಾಯಿತು. ಇವನ ಗುರುವಾದ ಅಭಿನವಗುಪ್ತನಂತೂ ಶೈವನೇ. ಆತ ವಾಸವಾಗಿದ್ದುದೂ ಶೈವಮಂಡಲದಲ್ಲೇ. ಹೀಗಿದ್ದರೂ ಕಾಲಕ್ರಮದಲ್ಲಿ ಆತ ವೈಷ್ಣವನಾಗಿಬಿಟ್ಟ. ಇದಕ್ಕೆ ಕಾರಣ ಪರಮ ಭಾಗವತನಾಗಿದ್ದ ಸೋಮಪಾದನ ಅನುಗ್ರಹವೇ ಎಂದು ಕ್ಷೇಮೇಂದ್ರನೇ ತನ್ನ ಬೃಹತ್ ಕಥಾಮಂಜರಿಯಲ್ಲಿ ಹೇಳಿಕೊಂಡಿದ್ದಾನೆ. 
"ತಸ್ಯಾತ್ಮಜಃ ಸರ್ವಮನೀಷಿ ಶಿಷ್ಯಃ ಶ್ರೀವ್ಯಾಸದಾಸಾಪರಪುಣ್ಯನಾಮಾ" 
ಎಂಬಲ್ಲಿ ಕ್ಷೇಮೇಂದ್ರ ತಾನು ಸರ್ವಮನೀಷಿಯ ಶಿಷ್ಯನೆಂದೂ ತನಗೆ ವ್ಯಾಸದಾಸ ಎಂಬ ಮತ್ತೊಂದು ಪುಣ್ಯಕರವಾದ ಹೆಸರಿತ್ತೆಂದು ತಿಳಿಸಿರುವುದರಿಂದ ಈ ಸರ್ವಮನೀಷಿಯೇ ಸೋಮಪಾದಾಚಾರ್ಯನಿರಬೇಕೆಂದೂ ಕ್ಷೇಮೇಂದ್ರ ವೈಷ್ಣವನಾದ ಮೇಲೆ ಭಾರತಮಂಜರಿಯನ್ನು ರಚಿಸಿದ್ದಿರಬಹುದು ಆಮೇಲೆ ವ್ಯಾಸದಾಸನೆಂಬ ಹೆಸರನ್ನು ಪಡೆದಿರಬೇಕೆಂದೂ ಭಾವಿಸಬಹುದಾಗಿದೆ ಆದರೆ ಭಾರತಕಥಾ ಮಂಜರಿ ಈತನೇ ರಚಿಸಿದ ಬಗ್ಗೆ ಗೊಂದಲಗಳಿವೆ. 
ಕ್ಷೇಮೇಂದ್ರನಿಂದ ರಚಿತವಾದುವೆಂದು ಈ ವರೆಗೆ ತಿಳಿದು ಬಂದಿರುವ ಗ್ರಂಥಗಳು 35. ಆ ಪೈಕಿ ಉಪಲಬ್ಧವಾಗಿರುವುವು 19. 
ಕ್ಷೇಮೇಂದ್ರನ ಮೂರು ಮಂಜರಿಗಳೂ ಸುಪ್ರಸಿದ್ಧವಾಗಿವೆ. ಸುವಿಸ್ತಾರವಾದ ರಾಮಾಯಣ ಮಹಾಭಾರತಗಳನ್ನು, ಮೂಲದಲ್ಲಿರುವ ಯಾವ ಘಟನೆಯನ್ನೇ ಆಗಲಿ ಉಪಾಖ್ಯಾನವನ್ನೇ ಆಗಲಿ ಬಿಡದಂತೆ, ಪದ್ಯಾತ್ಮಕವಾಗಿಯೇ ಸಂಗ್ರಹಿಸಿರುವುದು ಈ ಮಂಜರಿಗಳ ವೈಶಿಷ್ಟ್ಯ. ಇದರಿಂದ ಆ ಮೂಲಗ್ರಂಥಗಳು ಕ್ಷೇಮೇಂದ್ರನ ಕಾಲದಲ್ಲಿ ಯಾವ ಸ್ವರೂಪದಲ್ಲಿದ್ದುವೆಂಬುದನ್ನು ತಿಳಿಯಲವಕಾಶವಾಗಿದೆ. ಕ್ಷೇಮೇಂದ್ರನ ಬೃಹತ್ಕಥಾಮಂಜರಿ ಗುಣಾಢ್ಯನ ಬೃಹತ್ಕಥೆಯ ಸಂಗ್ರಹರೂಪ. ಇದರಲ್ಲಿ 19 ಲಂಬಕಗಳಿವೆ. ಇದರ ಮೊದಲ ಐದು ಲಂಬಕಗಳೂ ಸೋಮದೇವನ ಕಥಾಸರಿತ್ಸಾಗರದ ಕ್ರಮದಲ್ಲೇ ಇದ್ದರೂ ಅಲ್ಲಿಂದ ಮುಂದಕ್ಕೆ ಲಂಬಕಗಳ ಅನುಪೂರ್ವಿ, ವಿಷಯ ಮುಂತಾದವುಗಳಲ್ಲಿ ಗಣನೀಯವಾದ ವ್ಯತ್ಯಾಸಗಳಿರುವುದರಿಂದ ಇಬ್ಬರೂ ಮೂಲ ಬೃಹತ್ಕಥೆಯನ್ನೇ ಸಂಗ್ರಹಿಸಿದ್ದಾರೆಂದು ಹೇಳಲು ಸಾಧ್ಯವಾಗುತ್ತಿಲ್ಲ.
ಕಾಶ್ಮೀರದ ಜನಿಸಿದ ಕವಿಗಳಲ್ಲಿ ಈತ ಅಗ್ರಗಣ್ಯನೆನಿಸಿ ಅನೇಕ ವಿದ್ಯಾಪಾರಂಗತನಾಗಿದ್ದು ಸಂಸ್ಕೃತ ಸಾಹಿತ್ಯದ ವಿಭಿನ್ನ ಕ್ಷೇತ್ರಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾನೆ. ಈತನ ಕಾಲ ಸುಮಾರು 990 ರಿಂದ 1070 ಎನ್ನಲಾಗುತ್ತಿದೆ. ವಿದ್ಯಾವಿವೃತ್ತಿ - ಪ್ರತ್ಯಭಿಜ್ಞಾ ವಿವೃತಿ ವಿಮರ್ಶಿನಿ ರಚಿಸಿದ ಅಭಿನವಗುಪ್ತನಲ್ಲಿ ತಾನು ಸಾಹಿತ್ಯ ಶಾಸ್ತ್ರವನ್ನು ಕಲಿತುದಾಗಿ ತನ್ನ ಬೃಹತ್ಕಥಾಮಂಜರಿಯಲ್ಲಿ ಹೇಳಿಕೊಂಡಿದ್ದಾನೆ. ಅಭಿನವಗುಪ್ತ ಪ್ರತ್ಯಭಿಜ್ಞಾದರ್ಶನ ವ್ಯಾಖ್ಯಾನ ಬರೆದುದು 1014ರಲ್ಲಿ. ಈ ಆಧಾರದ ಮೇಲೆ ಕ್ಷೇಮೇಂದ್ರ ಸುಮಾರು 990ರಲ್ಲಿ ಹುಟ್ಟಿದವನಾಗಿರಬೇಕೆಂದು ಭಾವಿಸಲಾಗುತ್ತದೆ. ಕಾಶ್ಮೀರದಲ್ಲಿ ಆಳಿದ ರಾಜಾ ಅನಂತ ಎನ್ನುವವನ (1022-1063) ಆಸ್ಥಾನದಲ್ಲಿ ತಾನು ಕವಿಯಾಗಿದ್ದುದಾಗಿಯೂ ತನ್ನ ಹಲವಾರು ಕೃತಿಗಳ ಸಮಾಪ್ತಿವಾಕ್ಯಗಳಲ್ಲಿ ಈತನೇ ಹೇಳಿಕೊಂಡಿರುವುದಲ್ಲದೆ ಬೃಹತ್ಕಥಾಮಂಜರಿ ಸಮಯಮಾತೃಕಾ ಮತ್ತು ದಶಾವತಾರ ಚರಿತಗಳಲ್ಲಿ ತಾನು ಅವನ್ನು ರಚಿಸಿದ ಕಾಲವನ್ನೂ ಬರೆದಿಟ್ಟಿದ್ದಾನೆ. ಅದರಂತೆ ಈಗ ಉಪಲಬ್ಧವಾಗಿರುವ ಕೃತಿಗಳಲ್ಲಿ ಬೃಹತ್ಕಥಾಮಂಜರಿ (1037) ಮೊದಮೊದಲು ರಚಿತವಾದುದೆಂದು ರಾಜ ಅನಂತನ ಮಗ ಕಲಶನ ಕಾಲದಲ್ಲಿ ದಶಾವತಾರಚರಿತ (1066) ರಚಿತವಾದುದೆಂದೂ ಹೇಳಿಕೊಂಡಿದ್ದಾನೆ. ಆದ್ದರಿಂದ ಕ್ಷೇಮೇಂದ್ರ ಸುಮಾರು 1070 ರ ವೇಳೆಗೆ ಕಾಲವಾದನೆಂದು ನಂಬಲಾಗಿದೆ.
ಕ್ಷೇಮೇಂದ್ರನ ಕಾಲ ಬನವಾಸಿ ಕದಂಬರ ಕಾಲಕ್ಕಿಂತ ಸುಮಾರು 800 ವರ್ಷಗಳ ತರುವಾಯ. ಆದರೆ ಆತ ಬನವಾಸಿ ಕದಂಬರ ಕಾಲಕ್ಕೆ ಬೇಕಾದವನಾಗುತ್ತಾನೆ. ಅದನ್ನು ಸಧ್ಯದಲ್ಲಿಯೇ ಬರೆಯುತ್ತೇನೆ.
ಇದು ತಾಳಗುಂದದ ಸ್ತಂಭ ಶಾಸನದ ಸಾಲು ಕುಬ್ಜ ಕವಿಯು ರಚಿಸಿದ್ದು. ಈ ಸಾಲಿಗೂ ಕ್ಷೇಮೇಂದ್ರನ ಉಲ್ಲೇಖಕ್ಕೂ ನೇರ ಸಂಬಂಧವಿದೆ.

Thursday 26 April 2018

ಕಾಳಿದಾಸನ ರಘುವಂಶದ ಕಾವೇರಿ ಮತ್ತು ರವಿಕೀರ್ತಿಯ ಕಾವ್ಯ ಕನ್ನಿಕೆ ಕಾವೇರಿ.


ಸೂರ್ಯ ವಂಶದ ಮೊದಲ ದೊರೆ ವೈವಸ್ವತ ಮನು. ದಿಲೀಪ ಅವನ ವಂಶದಿಂದ ಬಂದವನು. ಅವನು ಸುದಕ್ಷಿಣಾ ಎನ್ನುವವಳನ್ನು ಮದುವೆ ಆಗಿದ್ದ ಆದರೆ ಆತನಿಗೆ ಬಹುಕಾಲದವರೆಗೂ ಮಕ್ಕಳಿರಲಿಲ್ಲ. ಆತ ತನ್ನ ಕುಲ ಗುರುವಾದ ವಶಿಷ್ಠರಲ್ಲಿ ತನ್ನ ದುಃಖವನ್ನು ತೋಡಿಕೊಂಡಾಗ ವಶಿಷ್ಠನು ಸುರಭಿಯ ಮಗಳಾದ(ಕರು) ನಂದಿನಿಯನ್ನು ಆರಾಧಿಸು ನಿನಗೆ ಮಕ್ಕಳಾಗುವುದು ಎಂದಾಗ ಹಾಗೇ ಮಾಡುತ್ತಾನೆ. ಈ ಆರಾಧನೆಯಿಂದ ದಿಲೀಪನಿಗೆ ಸಂತಾನ ಪ್ರಾಪ್ತಿಯಾಗಿ ರಘುವಿನ ಜನವಾಗುತ್ತದೆ.
ರಘು ಅತ್ಯಂತ ಬಲಿಷ್ಠ. ಪ್ರಜಾನುರಾಗಿಯಾಗಿ ಪ್ರವರ್ಧಮಾನಕ್ಕೆ ಬರುತ್ತಾನೆ. ಪ್ರಜಾಕಲ್ಯಾಣಕ್ಕಾಗಿ ರಘುವು ದಿಗ್ವಿಜಯಗಳನ್ನು ಮಾಡಿ "ಸರ್ವಜಿತ್" ಎನ್ನುವ ಯಾಗವೊಂದನ್ನು ಮಾಡುತ್ತಾನೆ. ಯಾಗದ ಸಮಯದಲ್ಲಿ ಗುರುದಕ್ಷಿಣಾ ನಿಮಿತ್ತವಾಗಿ ತನ್ನ ಬಳಿ ಬಂದ ವರತಂತು ಎನ್ನುವ ಋಷಿಯ ಶಿಷ್ಯನಾದ ಕೌತ್ಸ ಎನ್ನುವವನಿಗೆ ಹದಿನಾಲ್ಕು ಕೋಟಿ ದ್ರವ್ಯಗಳನ್ನು ಕೊಟ್ಟನಂತೆ. ಈ ಯಾಗದ ನಿಮಿತ್ತ ರಘುವಿಗೆ ಅಜ ಎನ್ನುವ ಮಗನು ಜನಿಸುತ್ತಾನೆ.
ರಘುವಿನ ಮಗನಾದ ಅಜನು ಪ್ರಾಯ ಪ್ರವೃದ್ಧನಾಗಿದ್ದ ಸಮಯದಲ್ಲಿ ವಿದರ್ಭದ ರಾಜ ಭೋಜನ ತಂಗಿಯಾದ ಇಂಣ್ದುಮತಿ ಎನ್ನುವವಳನ್ನು ಮದುವೆಯಾಗುತ್ತಾನೆ. ಈ ಇಂದು ಮತಿಗೆ ಅಜನಿಂದ ಜನಿಸಿದವನೇ ದಶರಥ.
ಈ ದಶರಥ ಕೌಸಲ್ಯೆ , ಸುಮಿತ್ರೆ ಮತ್ತು ಕೈಕೇಯಿರನ್ನು ಮದುವೆಯಾಗಿ ರಾಮಾಯಣದ ಕಥೆಗೆ ಮೂಲರಾಗುತ್ತಾರೆ ಮುಂದೆ. ಮುಂದೆ ಜನಪ್ರಿಯವಾದ ರಾಮಾಯಣದ ಕಥೆ .......ರಾಮನಿಗೆ ಕುಶ ಮತ್ತು ಲವ ಎನ್ನುವ ಇಬ್ಬರು ಮಕ್ಕಳಾಗುತ್ತಾರೆ. ರಾಮ ಕುಶನಿಗೆ ರಾಜ್ಯಭಾರವನ್ನು ಒಪ್ಪಿಸುತ್ತಾನೆ. ಆತ ಕುಮುದ್ವತಿ ಎನ್ನುವವಳನ್ನು ಮದುವೆಯಾಗುತ್ತಾನೆ. ಈ ಕುಮುದ್ವತಿ ಮತ್ತು ಕುಶರಿಂದ ಹುಟ್ಟಿದವನು ಅತಿಥಿ ಎನ್ನುವ ಹೆಸರು ಪಡೆದುಕೊಳ್ಳುತ್ತಾನೆ. ಈ ಅತಿಥಿ ಎನ್ನುವವನಿಗೆ ಒಬ್ಬ ಮಗಹುಟ್ಟುತ್ತಾನೆ ಆತನೇ ಅಗ್ನಿವರ್ಣ ಎನ್ನುವವನು ಈತ ವಿಷಯ ನ್ಲಂಪಟನಾಗಿ ಅಕಾಲದಲ್ಲಿ ಮೃತ್ಯು ಹೊಂದಿ ಈ ಕುಲದ ಕೊನೆಯ ಅರಸನಾಗುತ್ತಾನೆ. ಈತನ ಮರಣಾನಂತರ ಆತನ ಮಡದಿಗೆ ಪಟ್ತಕಟ್ಟುತ್ತಾರೆ. ಈ ಅಗ್ನಿವರ್ಣನೇ ಈ ವಂಶದ ಕೊನೆಯ ದೊರೆಯಾಗುತ್ತಾನೆ ಎನ್ನುವುದಾಗಿ ಕಾಳಿದಾಸನ ರಘುವಂಶದಲ್ಲಿ ವರಣನೆ ಬರುತ್ತದೆ. ಒಟ್ಟು ಹತ್ತೊಂಬತ್ತು ಸರ್ಗಗಳ ಈ ಕಾವ್ಯದಲ್ಲಿ ನಾಲ್ಕನೇ ಸರ್ಗದ ೪೫ನೇ ಶ್ಲೋಕದಲ್ಲಿ ಕಾವೇರಿಯ ಉಲ್ಲೇಖ ಸಿಗುತ್ತದೆ.

ಸ ಸೈನ್ಯ ಪರಿಭೋಗೇಣ ಗಜದಾನ ಸುಗಂಧಿನಾ |
ಕಾವೇರೀಂ ಸರಿತಾಂ ಪತ್ಯುಃ ಶಂಕನೀಯಾಮಿವಾಕರೋತ್ || 4 : 45 ||

ಕಾಲಿದಾಸನ ಕಾವ್ಯದಲ್ಲಿ ರಘು ಹೇಳುತ್ತಾನೆ ; ಅವನ ಸೈನಿಕರು ಕಾವೇರಿಯ ನೀರನ್ನು ಸವಿದು ಪುಳಕಿತರಾದರಂತೆ. ಆ ನೀರಿನಿಂದ ಹೊಮ್ಮುತ್ತಿದ್ದ ಸುಗಂಧದಿಂದ ಮನೋಲ್ಲಾಸ ಹೊಂದಿದರಂತೆ. ಆನೆಗಳು ಈ ಕಾವೇರಿಯನ್ನು ಕಂಡು ಅದಕ್ಕೊಂದು ಸೇತುವೆಯನ್ನೇ ನಿರ್ಮಿಸಿದವೋ(ಇದನ್ನು ಸಾಗರ ಎಂದು ವರ್ಣಿಸಿದ್ದಾನೆ) ಎನ್ನುವ ಶಂಕೆ ಹುಟ್ಟಿತಂತೆ. ಕಾವೇರೀ ಸರಿತಾಂ ಪತ್ಯುಃ ಕಾಳಿದಾಸನ ಪದ ಪ್ರಯೋಗ ಎಷ್ಟು ಖುಷಿ ಕೊಡುತ್ತದೆ. ಕಾವೇರಿ ಎನ್ನುವ ನದಿಯ ಪತಿ ಎನ್ನುತ್ತಾನೆ ಅಂದರೆ ಸಮುದ್ರಕ್ಕೆ ಹೋಲಿಸುತ್ತಾನೆ.
ಇದು ಕಾಳಿದಾಸನ ಕಾವ್ಯದ ಉಲ್ಲೇಖವಾದರೆ ಇನ್ನೊಬ್ಬ ಕವಿ ರವಿಕೀರ್ತಿಯದ್ದು ಗಮನಿಸೋಣ.
ಮಹಾಭಾರತ ಯುದ್ಧವಾಗಿ 3735 ವರ್ಷಗಳ ನಂತರ (ಕ್ರಿ. ಶ. 634 - 35)ರಲ್ಲಿ ರವಿಕೀರ್ತಿ ಎನ್ನುವವ ಪ್ರಬುದ್ಧ ಕವಿ ಬಾದಾಮಿ ಚಳುಕ್ಯರ ಎರಡನೇ ಪೊಲೆಕೇಶಿಯ ಕಾಲದಲ್ಲಿದ್ದ. ಈತ ಐಹೊಳೆಯ ಜಿನ ದೇವಾಲಯದಲ್ಲಿ ರಚಿಸಿದ ಶ್ರೇಷ್ಠ ಕಾವ್ಯಾತ್ಮಕವಾದ ಶಾಸನದಲ್ಲಿ ಪುನಃ ಕಾವೇರಿಯನ್ನು ಸ್ಮರಿಸಿಕೊಳ್ಳುತ್ತಾನೆ.
ಶಾಸನದ 14ನೇ ಸಾಲಿನ ಉತ್ತರಾರ್ಧದಲ್ಲಿ

ಕಾವೇರೀ ದೃತಶಫರೀವಿಲೋಲ ನೇತ್ರಾ ಚೋಳಾನಾಂ ಸಪದಿ ಜಯೋದ್ಯತಸ್ಯ ಯಸ್ಯ |
ಪ್ರಶ್ಚ್ಯೋತನ್ಮದಗಜಸೇತುರುದ್ಧನೀರಾ ಸಂಸ್ಪರ್ಶಂ ಪರಿಹರತಿಸ್ಮ ರತ್ನರಾಶೇಃ ||




ಇಲ್ಲಿ ರವಿಕೀರ್ತಿಯೂ ಒಮ್ಮೆಲೆ ಚೋಳರಾಜರು ಬಂದು ಮುತ್ತಿಗೆ ಹಾಕಿದಾಗ ಶುಭ್ರವಾಗಿ ಸ್ವಚ್ಚವಾಗಿ ಹರಿಯುತ್ತಿದ್ದ ಕಾವೇರಿಯಲ್ಲಿನ ಮೀನುಗಳ ಕಣ್ಣುಗಳಿಂದ ಹೊರಟ ಚಿಕ್ಕ ಚಿಕ್ಕ ಕಿರಣಗಳು ಕುಕ್ಕುತ್ತಿದ್ದವಂತೆ, ಆನೆಗಳಿಂದ ಮಾಡಲ್ಪಟ್ಟ ಸೇತುವೆಯು ನೀರನ್ನು ಮುಟ್ಟಿ ಕಂದು ಬಣ್ಣಕ್ಕೆ ತಿರುಗಿದ್ದವಂತೆ. ಆ ಶುಭ ನೀರಿನಲ್ಲಿ ರತ್ನಗಳ ರಾಶಿಯೇ ಇತ್ತಂತೆ. ಹೌದು ಇಲ್ಲಿ ಕವಿಗಳ ಕವಿತಾ ಸಾಮರ್ಥ್ಯ ಅಚ್ಚರಿ ಹುಟ್ಟಿಸುತ್ತದೆ. ಕಾಳಿದಾಸ ಆ ಕಾಲದಲ್ಲಿ ಕಾವೇರಿಯನ್ನು ನೋಡಿದ್ದನೇ ? ಗೊತ್ತಿಲ್ಲ. ಆದರೆ ಕಾಳಿದಾಸನ ಪರಮ ಭಕ್ತನಾಗಿದ್ದ. ಮತ್ತು ಕಾಳಿದಾಸನಷ್ಟೇ ತಾನು ಸಾಮರ್ಥ್ಯ ಉಳ್ಳವನು ಎಂದು ಬರೆದುಕೊಂಡ ರವಿಕೀರ್ತಿ ರಘುವಂಶವನ್ನು ಭಟ್ಟೀ ಇಳಿಸಿದ್ದಂತೂ ಹೌದು.

Wednesday 25 April 2018

ನಮ್ಮ ದೇಶದ ಸಂಸ್ಕೃತಿಯೇ ಹಾಗೆ ..........................


ಮೊನ್ನೆ ವಿಶ್ವಾಮಿತ್ರರ ಕುರಿತು ಬರೆಯುವಾಗಲೇ ಇದನ್ನು ಬರೆದಿದ್ದೆ ಆದರೆ ದೀರ್ಘ ಬರಹ ಓದುವುದಕ್ಕೆ ಕಷ್ಟ ಎಂದು ಪ್ರಕಟಿಸಲಿಲ್ಲ. ವೇದಗಳಲ್ಲಿ ಅನೇಕ ವಿಧದ ಜನಾಂಗಗಳ ಉಲ್ಲೇಖ ಕಾಣಸಿಗುತ್ತದೆ. ಅದು ಋಗ್ವೇದ ಮಾತ್ರವಲ್ಲ ಮೂರೂ ವೇದಗಳಲ್ಲಿ ಬರುತ್ತವೆ. ಇಲ್ಲಿ ಭಾರತ ಜನಾಂಗ ಎನ್ನುವುದು ಸಾಮಾನ್ಯವಾಗಿ ಎಲ್ಲ ಕಡೆ ಕಾಣಸಿಗುತ್ತದೆ. ಈ ಭಾರತ ಜನಾಂಗದಲ್ಲಿಯೇ ಜನಸಿಸಿ ತಮ್ಮ ಸಂಸ್ಕಾರಗಳನ್ನು ಅಳವಡಿಸಿಕೊಂಡವರ ಕುರಿತಾಗಿ ಈ ಕಥೆ ಬರೆದೆ. ಇದು ಅತ್ಯಂತ ದೀರ್ಘವಾಗಿದೆ. ಸಹನೆಯಿಂದ ಓದುತ್ತೀರೆನ್ನುವ ವಿಶ್ವಾಸ.
ಮಹಾಭಾರತದ ವನಪರ್ವ೧೯೮ನೆಯ ಅಧ್ಯಾಯದಲ್ಲಿ ಒಂದು ಕಥೆ ಬರುತ್ತದೆ. ಅಲ್ಲಿ ಯುಧಿಷ್ಠಿರನಿಗೆ ಮಾರ್ಕಾಂಡೇಯ ಆ ಕಥೆಯನ್ನು ಹೇಳುತ್ತಾ ಹೋಗುತ್ತಾನೆ.
ವಿಶ್ವಾಮಿತ್ರನ ಮಗನಾದ ಅಷ್ಟಕನು ಅಶ್ವಮೇದಯಜ್ಞವನ್ನು ಮಾಡುತ್ತಿದ್ದ. ಆ ಯಜ್ಞಕ್ಕೆ ಅಷ್ಟಕನ ಜ್ಞಾತಿಗಳಾದ ಪ್ರತರ್ದನ, ವಸುಮನಸ ಮತ್ತು ಉಶೀನರನ ಮಗ ಶಿಬಿ ಆಗಮಿಸಿದ್ದರು. ಅಶ್ವಮೇಧಯಾಗವು ಮುಗಿದನಂತರದಲ್ಲಿ ಅಷ್ಟಕನು ಯಾಗಕ್ಕೆ ಆಗಮಿಸಿದ್ದ ತನ್ನ ಮೂವರು ಅಣ್ಣ ತಮ್ಮಂದಿರನ್ನೂ ರಥದಲ್ಲಿ ಕುಳ್ಳಿರಿಸಿಕೊಂಡು ಪ್ರಯಾಣಮಾಡುತ್ತಾನೆ ಹಾಗೆ ಪ್ರಯಾಣಿಸುತ್ತಿರುವಾಗ ದಾರಿಯಲ್ಲಿ ನಾರದರು ಸಿಕ್ಕಿದರು. ಕೂಡಲೇ ರಥವನ್ನು ನಿಲ್ಲಿಸಿ ನಾಲ್ವರು ರಾಜಕುಮಾರರೂ ಮಹರ್ಷಿಗಳಿಗೆ ಅಭಿವಾದನಮಾಡಿ ನಮಸ್ಕರಿಸಿ ರಥದ ಮೇಲೆ ಕುಳಿತುಕೊಳ್ಳುವಂತೆ ನಾರದರನ್ನು ಪ್ರಾರ್ಥಿಸಿದರು. ನಾರದರು ಹಾಗೆಯೇ ಆಗಲೆಂದು ಹೇಳಿ ರಥದಲ್ಲಿ ಕುಳಿತರು. ರಾಜ ಕುಮಾರರೂ ರಥವನ್ನು ಹತ್ತಿದರು. ನಾಲ್ವರಲ್ಲಿ ಒಬ್ಬ ರಾಜಕುಮಾರನು ರಥದಲ್ಲಿಯೇ ನಾರದರನ್ನು ಯಥೋಚಿತವಾಗಿ ಸತ್ಕರಿಸಿದನು. ಹಾಗೇ ನಾರದರಲ್ಲಿ ತಮ್ಮಲ್ಲಿ ಕೆಲವು ಪ್ರಶ್ನೆ ಕೇಳಬೇಕೆಂದಿರುವೆ ಕೇಳಬಹುದೇ ಎನ್ನುತ್ತಾನೆ.
ನಾರದರುಕೇಳಬಹುದುಎಂದು ಉತ್ತರಿಸಿದರು. “ಮಹರ್ಷಿಗಳೇ! ನಾವು ಚಿರಂಜೀವಿಗಳಾಗಿದ್ದೇವೆ. ಅನೇಕ ಧರ್ಮ ಕಾರ್ಯಗಳನ್ನು ಮಾಡಿದ್ದೇವೆ. ಸಾಧುಗಳು ಅನುಸರಿಸುವ ಸನ್ಮಾರ್ಗದಲ್ಲಿಯೇ ನಡೆಯುತ್ತಿದ್ದೇವೆ. ನಾವು ಮಾಡಿರುವ ಸತ್ಕರ್ಮಗಳ ಫಲವಾಗಿ ನಮಗೆ ಅವಸಾನಾನಂತರದಲ್ಲಿ ಸ್ವರ್ಗಪ್ರಾಪ್ತಿಯೂ ಆಗುವುದು. ಅಲ್ಲಿಯೂ ಬಹಳ ಕಾಲದವರೆಗೆ ಸ್ವರ್ಗಸುಖವನ್ನು ಅನುಭವಿಸುವೆವು. ಆದರೆ ಸ್ವರ್ಗಸುಖವೂ ಶಾಶ್ವತವಲ್ಲವೆಂಬುದೂ ನಮಗೆ ತಿಳಿದಿದೆ. ನಮ್ಮ ಸತ್ಕರ್ಮ ಫಲಗಳು ತೀರಿದೊಡನೆಯೇ ನಾವು ಪುನಃ ಭೂಮಿಯಲ್ಲಿ ಜನ್ಮವೆತ್ತಬೇಕಾಗುತ್ತದೆ. ನಮ್ಮ ನಾಲ್ವರಲ್ಲಿ ಯಾವನು ತನ್ನ ಸತ್ಕರ್ಮಗಳ ಫಲವು ಮುಗಿದನಂತರ ಮೂವರಿಗಿಂತಲೂ ಮೊದಲು ಸ್ವರ್ಗದಿಂದ ಚ್ಯುತನಾಗಿ ಭೂಮಿಯಲ್ಲಿ ಹುಟ್ಟುತ್ತಾನೆ? ರಹಸ್ಯವನ್ನು ದಯಮಾಡಿ ತಿಳಿಸಬೇಕೆಂದು ಪ್ರಾರ್ಥಿಸುತ್ತೇನೆ.” ಎಂದನು ನಾರದರು ಜಟಿಲವಾದ ಪ್ರಶ್ನೆಗೆ ಉತ್ತರಿಸಲು ತಡಕಾಡದೇ ಅವನು ಕೇಳುತ್ತಿದ್ದಂತೆಯೇ ಪ್ರಶ್ನೆಗೆ ಉತ್ತರವನ್ನಿತ್ತರು. “ಅಷ್ಟಕನು ಎಲ್ಲರಿಗಿಂತಲೂ ಮೊದಲು ಸ್ವರ್ಗದಿಂದ ಚ್ಯುತನಾಗುತ್ತಾನೆ.” “ಕಾರಣವೇನೆಂದು ಕೇಳಬಹುದೇ?” “ನಾನು ಹಿಂದೆ ಸ್ವಲ್ಪ ಕಾಲ ಅಷ್ಟಕನ ಮನೆಯಲ್ಲಿಯೇ ತಂಗಿದ್ದೆನು. ಒಂದು ದಿನ ಇವನು ನನ್ನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಪಟ್ಟಣದ ಹೊರಭಾಗಕ್ಕೆ ಕರೆದುಕೊಂಡು ಹೋದನು. ಅಲ್ಲಿ ಅನೇಕ ವರ್ಣಗಳ ಸಾವಿರಾರು ಹಸುಗಳಿದ್ದುದನ್ನು ಕಂಡು ಹಸುಗಳು ಯಾರವೆಂದು ಅಷ್ಟಕನನ್ನು ಪ್ರಶ್ನಿಸಿದೆನು. ಅದಕ್ಕುತ್ತರವಾಗಿ ಅಷ್ಟಕನು, “ ಹಸುಗಳೆಲ್ಲವೂ ನನ್ನವೇ ಆಗಿದ್ದುವು. ಎಲ್ಲ ಹಸುಗಳನ್ನೂ ನಾನು ಬ್ರಾಹ್ಮಣರಿಗೆ ದಾನವಾಗಿ ಕೊಟ್ಟುಬಿಟ್ಟೆನುಎಂದುತ್ತರಿಸಿ ತನ್ನ ಶ್ಲಾಘನೆಯನ್ನು ತಾನೇ ಮಾಡಿಕೊಂಡನು. ಇವನು ವಿಧವಾದ ಉತ್ತರವನ್ನು ಕೊಟ್ಟದ್ದರಿಂದಲೇ ಇವನ ಮನಸ್ಸು ಎಷ್ಟರಮಟ್ಟಿಗೆ ಸಂಸ್ಕೃತವಾಗಿರುವುದೆಂಬುದನ್ನು ತಿಳಿದು ಇವನು ಮಾಡಿರುವ ದಾನಕ್ಕೆ ಇಂತಿಷ್ಟೇ ಫಲವೆಂದು ನಿರ್ಧರಿಸಿದೆನು.”
ಈಗ ಉಳಿದ ಮೂವರಲ್ಲಿ ಪುನಃ ಜಿಜ್ಞಾಸೆಯುಂಟಾಯಿತು. ಅವರಲ್ಲೊಬ್ಬನು ನಾರದರನ್ನು ಕೇಳಿದನು : “ಮಹರ್ಷಿಗಳೇ! ತಾವು ಹೇಳಿದಂತೆ ಅಷ್ಟಕನು ಮೊದಲು ಸ್ವರ್ಗದಿಂದ ಕೆಳಗಿಳಿಯುತ್ತಾನೆ. ನಾವು ಮೂವರೂ ಸನ್ಮಾರ್ಗದಲ್ಲಿಯೇ ಇದ್ದೇವೆ. ನಾವು ಅಷ್ಟಕನಿಗಿಂತಲೂ ಇನ್ನೂ ಸ್ವಲ್ಪ ಹೆಚ್ಚುಕಾಲ ಸ್ವರ್ಗದಲ್ಲಿರಲು ಸಾಧ್ಯವಾಗಬಹುದೇ ಹೊರತು ಶಾಶ್ವತವಾದ ಸ್ವರ್ಗಸುಖವು ನಮಗಾರಿಗೂ ಸಿಕ್ಕಲಾರದು. ನಾವು ಮೂವರಲ್ಲಿ ಯಾರು ಮೊದಲು ಸ್ವರ್ಗದಿಂದ ಭೂಮಿಯಲ್ಲಿ ಜನಿಸುತ್ತೇವೆ. ನಾರದರು ಕೂಡಲೇ ಹೇಳಿದರು : ‘ಪ್ರತರ್ದನ.’ಹುಟ್ಟುತ್ತಾನೆ. ಇವನ ಮನೆಯಲ್ಲಿಯೂ ನಾನು ಸ್ವಲ್ಪಕಾಲ ತಂಗಿದ್ದೆನು. ಇವನೂ ಒಮ್ಮೆ ನನ್ನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ವಿಹಾರಾರ್ಥವಾಗಿ ಹೊರಟನು. ರಥಕ್ಕೆ ನಾಲ್ಕು ಕುದುರೆಗಳು ಕಟ್ಟಲ್ಪಟ್ಟಿದ್ದುವು. ಪ್ರಯಾಣಮಾಡುತ್ತಿರುವ ಸಮಯದಲ್ಲಿ ಒಬ್ಬ ಬ್ರಾಹ್ಮಣನು ಎದುರಾಗಿ ಬಂದು ರಾಜನಿಗೆ ಸ್ವಸ್ತಿವಾಚನಮಾಡಿ ಆಶೀರ್ವದಿಸಿ, ತನಗೊಂದು ಕುದುರೆಯನ್ನು ದಾನವಾಗಿ ಕೊಡುವಂತೆ ಪ್ರಾರ್ಥಿಸಿದನು. ತಾನು ರಾಜಧಾನಿಗೆ ಹಿಂದಿರುಗಿದನಂತರ ಕುದುರೆಯನ್ನು ಕೊಡುವೆನೆಂದು ಪ್ರತರ್ದನನು ಬ್ರಾಹ್ಮಣನಿಗೆ ಹೇಳಿದನು. ಆದರೆ ಬ್ರಾಹ್ಮಣನು ಅದಕ್ಕೊಪ್ಪಲಿಲ್ಲ. ಕೂಡಲೇ ತನಗೆ ಕುದುರೆಯು ಬೇಕಾಗಿದೆಯೆಂದು ಒತ್ತಾಯಮಾಡಿ ಕೇಳಿದನು. ಬ್ರಾಹ್ಮಣನು ಒತ್ತಾಯ ಪಡಿಸಿದನಂತರ ರಾಜನು ತನ್ನ ರಥದ ಬಲಭಾಗದಲ್ಲಿ ಕಟ್ಟಿದ್ದ ಕೊನೆಯ ಕುದುರೆಯನ್ನೇ ಬಿಚ್ಚಿ ಬ್ರಾಹ್ಮಣನಿಗೆ ದಾನವಾಗಿ ಕೊಟ್ಟನು. ಮೂರು ಕುದುರೆಗಳಿಂದ ಎಳೆಯಲ್ಪಡುತ್ತಿದ್ದ ರಥವು ಮುಂದೆ ಸ್ವಲ್ಪದೂರ ಹೋಗುವುದರೊಳಗಾಗಿ ಮತ್ತೊಬ್ಬ ಬ್ರಾಹ್ಮಣನು ಬಂದನು. ಅವನೂ ಒಂದು ಕುದುರೆಯನ್ನೇ ದಾನವಾಗಿ ಕೇಳಿದನು. ರಾಜಧಾನಿಗೆ ಹಿಂದಿರುಗಿದನಂತರ
ಕೊಡುವೆನೆಂಬ ರಾಜನ ಉತ್ತರವು ಅವನಿಗೂ ಸಹ್ಯವಾಗಲಿಲ್ಲ. ರಥದ ಎಡ ಭಾಗದ ಕೊನೆಯಲ್ಲಿದ್ದ ಕುದುರೆಯನ್ನು ಬಿಚ್ಚಿ ಪ್ರತರ್ದನನು ಬ್ರಾಹ್ಮಣನಿಗೆ ದಾನವಾಗಿ ಕೊಟ್ಟುಬಿಟ್ಟನು. ರಥದಲ್ಲಿ ಎರಡು ಕುದುರೆಗಳು ಮಾತ್ರವೇ ಉಳಿದುವು. ನಾವಿಬ್ಬರೂ ಇನ್ನೂ ಮುಂದೆ ಸ್ವಲ್ಪದೂರ ಪ್ರಯಾಣಮಾಡಿದೆವು. ಇನ್ನೊಬ್ಬ ಬ್ರಾಹ್ಮಣನು ರಥಕ್ಕೆದುರಾಗಿ ಬಂದು ರಾಜನನ್ನು ಆಶೀರ್ವದಿಸಿ ತಾನು ಯಾಚಿಸಲು ಬಂದಿರುವುದಾಗಿಯೂ ತನ್ನ ಇಷ್ಟಾರ್ಥವನ್ನು ಪೂರೈಸಬೇಕೆಂದೂ ಹೇಳಿ ದನು. ಪ್ರತರ್ದನನು ರಥವನ್ನು ನಿಲ್ಲಿಸಿ ಕೆಳಗಿಳಿದು ಬ್ರಾಹ್ಮಣನಿಗೆ ನಮಸ್ಕರಿಸಿ ಏನುಬೇಕೆಂದು ಕೇಳಲಾಗಿ, ಅವನು ಕೇಳಿದ್ದೂ ಒಂದು ಕುದುರೆಯನ್ನೇ. ಬ್ರಾಹ್ಮಣನಿಗೂ ಪ್ರತರ್ದನನುನಗರಕ್ಕೆ ಹಿಂದಿರುಗಿದನಂತರ ಕೊಡುವೆನೆಂಬಹಿಂದಿನ ಇಬ್ಬರಿಗೆ ಕೊಟ್ಟ ಉತ್ತರವನ್ನೇ ಕೊಟ್ಟನು. ಆದರೆ ಬ್ರಾಹ್ಮಣನೂ ಅದಕ್ಕೊಪ್ಪಲಿಲ್ಲ. ರಾಜನು ಉಳಿದಿದ್ದ ಎರಡು ಕುದುರೆಗಳಲ್ಲಿ ಒಂದನ್ನು ಬ್ರಾಹ್ಮಣನಿಗೆ ಕೊಟ್ಟು ಕಳುಹಿಸಬೇಕಾಯಿತು. ನಾನು ಘಟನೆಗಳೆಲ್ಲವನ್ನೂ ವೀಕ್ಷಿಸುತ್ತಾ ರಾಜನ ಮನಸ್ಸಿನ ಜೌದಾರ್ಯವನ್ನು ಬಹು ಸೂಕ್ಷ್ಮರೀತಿಯಲ್ಲಿ ಗ್ರಹಿಸುತ್ತಿದ್ದೆನು. ಉಳಿದಿದ್ದ ಒಂದೇ ಕುದುರೆಯು ನಮ್ಮ ರಥವನ್ನು ಇನ್ನೂ ಸ್ವಲ್ಪದೂರ ಮುಂದೆ ಕೊಂಡೊಯ್ದಿತು. “ಸ್ವಲ್ಪ ಮುಂದಕ್ಕೆ ಇನ್ನೊಬ್ಬ ನಾಲ್ಕನೆಯ ಬ್ರಾಹ್ಮಣನು ರಥಮ ಮುಂದೆ ಬಂದು ನಿಂತನು. ಅಡಿಗಡಿಗೆ ಯಾಚಕರು ಬರುತ್ತಿದ್ದರೂ ರಾಜನ ಮುಖವು ವಿವರ್ಣವಾಗಲಿಲ್ಲ. ರಥವನ್ನು ನಿಲ್ಲಿಸಿ ಕೆಳಗಿಳಿದು ಬ್ರಾಹ್ಮಣನಿಗೆ ನಮಸ್ಕರಿಸಿ ಪ್ರತರ್ದನನು ಪ್ರಶ್ನಿಸಿದನು. “ಏನು ಬೇಕೆಂದು ಪ್ರಶ್ನಿಸಿದನು ಅದಕ್ಕೆ ಬ್ರಾಹ್ಮಣನು ನನಗೆ ಒಂದು ಕುದುರೆಯು ಅತ್ಯವಶ್ಯವಾಗಿ ಬೇಕಾಗಿರುವುದು.” ಬ್ರಾಹ್ಮಣನೂ ಕುದುರೆಯನ್ನೇ ಕೇಳಿದನು. ರಥಕ್ಕೆ ಕಟ್ಟಿದ್ದುದು ಒಂದೇ ಒಂದು ಕುದುರೆ. ರಾಜನ ಪ್ರತಿಕ್ರಿಯೆಯನ್ನು ನೋಡಬೇಕೆಂದು ನನ್ನ ಮನಸ್ಸು ತವಕಿಸುತ್ತಿದ್ದಿತು. ಹಿಂದಿನ ಮೂವರು ಯಾಚಕರಿಗೆ ಉತ್ತರಿಸಿದಂತೆಯೇ ಬ್ರಾಹ್ಮಣನಿಗೂ ರಾಜನು ನಗರಕ್ಕೆ ಹಿಂದಿರುಗಿದನಂತರ ಕೊಡುವೆನೆಂದೇ ಉತ್ತರವನ್ನಿತ್ತನು. ಆದರೆ ರಥವನ್ನೆಳೆಯುತ್ತಿರುವುದು ಒಂದೇ ಕುದುರೆಯೆಂಬುದನ್ನೂ ವಿವೇಚಿಸದೇ ಬ್ರಾಹ್ಮಣನು ತನಗೆ ಕುದುರೆಯು ಈಗಲೇ ಬೇಕಾಗಿದೆಯೆಂದೂ, ಕಾಲಮೀರಿ ದಾನಕೊಡುವುದು ನಿರರ್ಥಕವೆಂದೂ ಹೇಳಿದನು. ಒಡನೆಯೇ ರಾಜನು ಇದ್ದ ಒಂದು ಕುದುರೆಯನ್ನೂ ಬ್ರಾಹ್ಮಣನಿಗೆ ಕೊಟ್ಟು ಕುದುರೆಯ ಸ್ಥಾನದಲ್ಲಿ ತಾನೇ ನಿಂತು ರಥವನ್ನೆಳೆಯುತ್ತಾ ಹೇಳಿದನು : “ಈಗ ಯಾವನಾದರೂ ಬ್ರಾಹ್ಮಣನು ಬಂದರೆ ದಾನವಾಗಿಕೊಡಲು ನನ್ನಲ್ಲಿ ಏನೂ ಇಲ್ಲವಲ್ಲ! ಏನು ಮಾಡಲಿ?” ಪ್ರತರ್ದನನು ತನ್ನಲ್ಲಿದ್ದ ನಾಲ್ಕು ಕುದುರೆಗಳನ್ನು ದಾನವಾಗಿ ಕೊಟ್ಟಿದ್ದು ನಿಶ್ಚಯ. ಆದರೆ ಅವನು ಪ್ರತಿಯೊಂದು ಬಾರಿ ದಾನಮಾಡುವಾಗಲೂ, “ರಥಕ್ಕೆ ಕಟ್ಟಿರುವ ಕುದುರೆಗಳನ್ನು ಕೊಟ್ಟುಬಿಡಲೇ? ಮೂರೇ ಕುದುರೆಗಳಿವೆಯಲ್ಲಾ! ಕೊಡುವುದೆಂತು? ಎರಡು ಕುದುರೆಗಳು ಮಾತ್ರವೇ ಉಳಿದಿವೆ. ಮಾಡುವುದೇನು? ಇರುವ ಒಂದು ಕುದುರೆಯನ್ನೂ ಕೊಟ್ಟು ಬಿಟ್ಟರೆ ಹೇಗೆ?” ವಿಧವಾಗಿ ತರ್ಕಿಸಿ ದಾನಮಾಡಿದನು. ದಾನಮಾಡುವಾಗ ವಿಧವಾದ ಜಿಜ್ಞಾಸೆಯು ಮನಸ್ಸಿನಲ್ಲಿಬಾರದು. ಆದುದರಿಂದಲೇ ನಿಮ್ಮ ಮೂವರಲ್ಲಿ ಪ್ರತರ್ದನನು ಮೊದಲು ಸ್ವರ್ಗದಿಂದ ಚ್ಯುತನಾಗುತ್ತಾನೆ. ಎಲ್ಲರಿಗಿಂತಲೂ ಮೊದಲು ಅಷ್ಟಕನು ಸ್ವರ್ಗದಿಂದ ಚ್ಯುತನಾಗುವನೆಂದೂ ಎರಡನೆಯವನು ಪ್ರತರ್ದನನೆಂದೂ ನಾರದರು ಹೇಳಿದರು. ಉಳಿದಿಬ್ಬರಲ್ಲಿ ಯಾರು ಮೊದಲು ಸ್ವರ್ಗದಿಂದ ಚ್ಯುತರಾಗುವರೆಂಬ ವಿಷಯವಾಗಿ ಈಗ ಜಿಜ್ಞಾಸೆಯುಂಟಾಯಿತು. ಇಬ್ಬರಲ್ಲಿ ಒಬ್ಬನು ನಾರದರನ್ನು ಕೇಳಿದನು: “ಮಹರ್ಷಿಗಳೇ! ನಮ್ಮಿಬ್ಬರಲ್ಲಿ ಯಾರು ಮೊದಲು ಸ್ವರ್ಗದಿಂದ ಚ್ಯುತರಾಗುತ್ತೇವೆ?” ನಾರದರು ಹೇಳುತ್ತಾರೆವಸುಮನಸ.’ ಇದಕ್ಕೆ ಕಾರಣವೇನೆಂದರೆನಾನು ಹೀಗೆಯೇ ಪ್ರಪಂಚವೆಲ್ಲವನ್ನೂ ಸುತ್ತುತ್ತಿದ್ದಾಗ ಒಮ್ಮೆ ವಸುಮನಸನ ಮನೆಗೂ ಹೋಗಿದ್ದೆನು. ಸಮಯಕ್ಕೆ ಸರಿಯಾಗಿ ದೇವತೆ ಗಳಿಂದ ಕೊಡಲ್ಪಟ್ಟಿದ್ದ ಪುಷ್ಪರಥಕ್ಕೆ ಬ್ರಾಹ್ಮಣರು ಸ್ವಸ್ತಿವಾಚನವನ್ನು ಮಾಡುತ್ತಿದ್ದರು. ನಾನು ರಾಜನ ಸಮೀಪಕ್ಕೆ ಹೋದೆನು. ವೇಳೆಗೆ ಸ್ವಸ್ತಿ ವಾಚನವೂ ಮುಗಿಯಿತು. ಒಡನೆಯೇ ದಿವ್ಯರಥವು ಎಲ್ಲರಿಗೂ ಕಾಣಿಸಿತು. ಅನೇಕಾನೇಕ ಮಹಾಯಜ್ಞಗಳನ್ನು ಮಾಡಿ ದೇವತೆಗಳನ್ನು ಆರಾಧಿಸುತ್ತಿದ್ದ ವಸುಮನಸನಿಗೆ ಅವನು ಮಾಡಿದ ಯಜ್ಞದಿಂದ ಸುಪ್ರೀತರಾಗಿದ್ದ ದೇವತೆಗಳು ಪುಷ್ಪರಥವನ್ನು ಅನುಗ್ರಹಿಸಿದ್ದರು.) ನಾನು ರಥವನ್ನು ಮನಸಾರ ಹೊಗಳಿದೆನು. ನಾನು ಮಾಡಿದ ಪುಷ್ಪರಥದ ಸ್ತೋತ್ರವನ್ನು ಕೇಳಿ ವಸುಮನಸನು ನನ್ನೊಡನೆ ಹೇಳಿದನು : “ಮಹರ್ಷಿಗಳೇ! ನೀವು ಪುಷ್ಪರಥದ ಸೌಂದರ್ಯವನ್ನು ನೋಡಿ ಅದನ್ನು ಹೊಗಳಿದಿರಲ್ಲವೇ? ನಿಮ್ಮ ಹೊಗಳಿಕೆಗೆ ಪಾತ್ರವಾಗಿರುವ ರಥವು ಉತ್ತಮೋತ್ತಮವಾದುದೆಂಬುದರಲ್ಲಿ ಸಂಶಯವೇ ಇಲ್ಲ. ಅದೂ ಅಲ್ಲದೇ ಇಂತಹ ಉತ್ತಮವಾದ ವಸ್ತುವು ಮಹಾಜ್ಞಾನಿಗಳಾದ ತಮಗೇ ಸೇರುವುದು ಉಚಿತವಾಗಿದೆ. ಆದುದರಿಂದ ರಥವು ನಿಮ್ಮದೇ ಆಗಲಿ. ನಾನಿದನ್ನು ನಿಮಗೆ ಅರ್ಪಿಸಿದ್ದೇನೆ.” ಇದಾದ ಕೆಲವು ದಿನಗಳನಂತರ ಪುನಃ ಅವನಲ್ಲಿಗೆ ಹೋದೆನು. ಸಮಯಕ್ಕೆ ಸರಿಯಾಗಿ ಮತ್ತೊಂದು ಪುಷ್ಪರಥವನ್ನು ದೇವತೆಗಳು ಅನುಗ್ರಹಿಸಿದ್ದರು. ಅದರ ಸೌಂದರ್ಯವನ್ನು ನೋಡಿ ಭ್ರಾಂತನಾದ ನಾನು ರಥವನ್ನೂ ಸ್ತೋತ್ರಮಾಡಿದೆನು. ವಸುಮನಸನು ರಥವನ್ನೂ ನನಗೇ ಕೊಟ್ಟುಬಿಟ್ಟನು. ಮೂರನೆಯ ಬಾರಿ ರಾಜನ ಬಳಿಗೆ ಹೋಗುವ ಸಂದರ್ಭವೂ ಒದಗಿತು. ಕಾಕತಾಳನ್ಯಾಯದಂತೆ ಬಾರಿಯೂ ಬ್ರಾಹ್ಮಣರು ನೂತನವಾದ ಪುಷ್ಪರಥಕ್ಕೆ ಸ್ವಸ್ತಿವಾಚನಮಾಡುತ್ತಿದ್ದರು. ಸ್ವಸ್ತಿವಾಚನವು ಮುಗಿದ ನಂತರ ಅಲ್ಲಿದ್ದವರೆಲ್ಲರ ದೃಷ್ಟಿಗೂ ದಿವ್ಯರಥವು ಕಾಣಿಸಿಕೊಂಡಿತು. ರಥದ ಅನುಪಮವಾದ ಸೌಂದರ್ಯವನ್ನು ನೋಡಿದೊಡನೆಯೇ ಮುಗ್ಧನಾಗಿ ಹೋದ ನಾನು ಅದನ್ನೂ ಸ್ತೋತ್ರಮಾಡಿದೆನು. ನಾನು ಸ್ತೋತ್ರಮಾಡಿ ಮುಗಿಸಿದ ನಂತರ ವಸುಮನಸನುಮಹರ್ಷಿಗಳೇ! ನಿಮ್ಮಿಂದ ಪುಷ್ಪರಥಕ್ಕೆ ಸ್ವಸ್ತಿವಾಚನವು ಬಹಳ ಚೆನ್ನಾಗಿ ಮಾಡಲ್ಪಟ್ಟಿತುಎಂದು ಮಾತ್ರವೇ ಹೇಳಿ ಸುಮ್ಮನಾದನು. ಸಮಯದಲ್ಲಿ ಇವನಿಗೆ ರಥವನ್ನು ದಾನಕೊಡುವ ಮನಸ್ಸು ಬರಲಿಲ್ಲ. ಕಾರಣದಿಂದ ಶಿಬಿಗಿಂತಲೂ ವಸುಮನಸನು ಮೊದಲು ಸ್ವರ್ಗದಿಂದ ಚ್ಯುತನಾಗುತ್ತಾನೆ.” ನಾಲ್ವರಲ್ಲಿ ಒಬ್ಬನು ಪುನಃ ನಾರದರನ್ನು ಕೇಳಿದನು : “ನಾರದರೇ ಒಂದುವೇಳೆ ನೀವೂ ಮತ್ತು ಶಿಬಿಯೂ ಸ್ವರ್ಗಕ್ಕೆ ಹೋದರೆ ನಿಮ್ಮಿಬ್ಬರಲ್ಲಿ ಯಾರು ಮೊದಲು ಸ್ವರ್ಗದಿಂದ ಚ್ಯುತರಾಗುತ್ತಾರೆ?” ನಾರದರು ಒಡನೆಯೇ ಹೇಳಿದರು : “ನಾನೇ ಮೊದಲು ಕೆಳಗೆ ಬೀಳುತ್ತೇನೆ. ಶಿಬಿಯು ಮಾತ್ರ ಅಲ್ಲಿಯೇ ಇರುತ್ತಾನೆ.” ನಾಲ್ವರಲ್ಲೊಬ್ಬನು ಪುನಃ ನಾರದರನ್ನು ಪ್ರಶ್ನಿಸಿದನು. “ಶಿಬಿಯು ನಮ್ಮೆಲ್ಲರಿಗಿಂತಲೂ ಹೆಚ್ಚು ಕಾಲ ಸ್ವರ್ಗದಲ್ಲಿರುವ ಸಾಮರ್ಥ್ಯವನ್ನು ಹೇಗೆ ಪಡೆದನು? ಯಾವ ಧರ್ಮಕಾರ್ಯದಿಂದಾಗಿ ಇವನಿಗೆ ಮಹಾಫಲವು ಲಭ್ಯವಾಗಿರುವುದು? “ನಾನು ಶಿಬಿಗೆ ಸಮಾನನಲ್ಲ. ಇದಕ್ಕೆ ಕಾರಣವನ್ನು ತಿಳಿಸುವೆನು, ಸಾವಧಾನವಾಗಿ ಕೇಳಿರಿ. ಒಂದಾನೊಂದು ದಿನ ಬ್ರಾಹ್ಮಣನೊಬ್ಬನು ಶಿಬಿಯ ಸಮೀಪಕ್ಕೆ ಬಂದು ಸ್ವಸ್ತಿವಾಚನಮಾಡಿ ಇವನನ್ನು ಕುರಿತು ಹೇಳಿದನು : “ಶಿಬಿರಾಜ ನಾನು ಆಹಾರಾರ್ಥವಾಗಿ ನಿನ್ನಲ್ಲಿಗೆ ಬಂದಿರುವೆನು.” ಅದಕ್ಕುತ್ತರವಾಗಿ ಶಿಬಿಯು ಹೇಳಿದನು : “ಬ್ರಾಹ್ಮಣೋತ್ತಮ ನಾನು ನಿನಗೇನು ಸೇವೆಮಾಡಲಿ? ಕೂಡಲೇ ಆಜ್ಞೆ ಮಾಡುವವನಾಗು.” “ನಿನಗೆ ಬೃಹದ್ಗರ್ಭನೆಂಬ ಒಬ್ಬ ಮಗನಿರುವನಲ್ಲವೇ? ಅವನನ್ನು ಕೊಂದು ಅವನ ಮಾಂಸದಿಂದ ನನಗೆ ಆಹಾರವನ್ನು ಸಿದ್ಧಪಡಿಸುಎಂದು ಹೇಳಿ ಬ್ರಾಹ್ಮಣನು ಹೊರಟುಹೋದನು. ಸಮಯದಲ್ಲಿ ನಾನು ಶಿಬಿಯ ಬಳಿಯಲ್ಲಿಯೇ ಇದ್ದೆನು. ಬ್ರಾಹ್ಮ್ಲಣನ ಮಾತು ಕೇಳಿ ನಾನು ಭ್ರಾಂತನಾದೆನು. ಶಿಬಿಯು ಏನು ಹೇಳುವನು ಮತ್ತು ಏನು ಮಾಡುವನು? ಎಂಬುದನ್ನು ಬಹಳ ಉತ್ಸುಕತೆಯಿಂದ ನಿರೀಕ್ಷಿಸುತ್ತಿದ್ದೆನು. ಮಗನನ್ನು ಕೊಂದು ತನಗೆ ಆಹಾರವನ್ನು ಸಿದ್ಧಪಡಿಸುವಂತೆ ಬ್ರಾಹ್ಮ ಣನು ಆಜ್ಞಾಪಿಸಿದುದಕ್ಕಾಗಿ ಶಿಬಿಯ ಮುಖದಲ್ಲಿ ಸ್ವಲ್ಪವಾದರೂ ಅಸಮಾ ಧಾನದ ಚಿಹ್ನೆಯೂ ಕಾಣಲಿಲ್ಲ. ಬಂದ ಅತಿಥಿಯನ್ನು ಸತ್ಕರಿಸಬೇಕೆಂಬ ನಿಶ್ಚಲಧ್ಯೇಯವೊಂದೇ ಇವನ ಮನಸ್ಸಿನಲ್ಲಿದ್ದಿತು. ಬ್ರಾಹ್ಮಣನು ಹೇಳಿದಂತೆ ತನ್ನ ಮಗನನ್ನು ಕೊಂದು ಅವನ ಮಾಂಸವನ್ನು ಬೇಯಿಸಿ ಘಮ-ಘಮಿಸುವ ಆಹಾರವನ್ನು ಸಿದ್ಧಮಾಡಿಕೊಂಡು ಅದನ್ನು ಒಂದು ಪಾತ್ರೆಯಲ್ಲಿಟ್ಟು ತಲೆಯ ಮೇಲೆ ಹೊತ್ತುಕೊಂಡು ಬ್ರಾಹ್ಮಣನನ್ನು ಹುಡುಕುವ ಸಲುವಾಗಿ ಅರಮನೆಯಿಂದ ಹೊರಟನು. ಇವನು ಬ್ರಾಹ್ಮಣನಿಗಾಗಿ ಆಹಾರವನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಾಗ ಇವನಿಗೆದುರಾಗಿ ಸಿಕ್ಕಿದವನೊಬ್ಬನು ರಾಜನನ್ನು ಕುರಿತು ಗಾಬರಿಯಿಂದ ಹೇಳಿದನು : “ಮಹಾರಾಜ! ನೀನು ಹುಡುಕುತ್ತಿರುವ ಬ್ರಾಹ್ಮಣನು ಪಟ್ಟಣದ ಒಳಹೊಕ್ಕು ನಿನ್ನ ಅರಮನೆಗೆ ಬೆಂಕಿಯನ್ನಿಡುತ್ತಿದ್ದಾನೆ. ಅವನು ಬಹಳ ಕುಪಿತನಾಗಿದ್ದಂತೆ ಕಾಣುತ್ತಿದ್ದನು. ನಿನ್ನ ಅರಮನೆಗೆ ಬೆಂಕಿಯಿಟ್ಟದ್ದು ಮಾತ್ರವಲ್ಲದೇ ಬೊಕ್ಕಸಕ್ಕೂ, ನಿನ್ನ ಪತ್ನಿಯರಿರುವ ಅಂತಃಪುರಕ್ಕೂ, ಕುದುರೆಲಾಯ, ಆನೆಲಾಯಗಳಿಗೂ ಬೆಂಕಿಯಿಟ್ಟನು.” ಅಷ್ಟೊಂದು ರಾದ್ಧಾಂತದ ವಾರ್ತೆಯನ್ನು ಕೇಳಿದರೂ ಶಿಬಿಯ ಮುಖ ದಲ್ಲಿ ಕಳವಳದ ಕುರುಹೂ ಕಾಣಲಿಲ್ಲ. ಪುನಃ ನಗರಕ್ಕೆ ಹೋಗಿ ಅರಮನೆ ಯನ್ನು ಹೊಕ್ಕು ಅಲ್ಲಿಯೇ ಇದ್ದ ಬ್ರಾಹ್ಮಣನನ್ನು ಕಂಡು ವಿನೀತನಾಗಿಯೇ ಹೇಳಿದನು : “ಪೂಜ್ಯನೇ, ನಿನ್ನ ಆಜ್ಞಾನುಸಾರವಾಗಿ ಭೋಜನವನ್ನು ಸಿದ್ಧಗೊಳಿಸಲಾಗಿದೆ. ಸ್ವೀಕರಿಸು.” ಶಿಬಿಯ ಮಾತನ್ನು ಕೇಳಿ ಬ್ರಾಹ್ಮಣನು ಮಾತನಾಡಲೇ ಇಲ್ಲ. ಮೌನದಿಂದಲೇ ಕುಳಿತಿದ್ದನು. ಅಷ್ಟು ದಾರುಣವಾದ ಮಾರ್ತೆಗಳನ್ನು ಕೇಳಿಯೂ ರಾಜನ ಮುಖವು ಸ್ವಲ್ಪವಾದರೂ ವಿಕಾರಹೊಂದದಿರುವುದನ್ನು ನೋಡಿ ಬ್ರಾಹ್ಮಣನಿಗೆ ಪರ ಮಾಶ್ಚರ್ಯವಾಯಿತು. ರಾಜನನ್ನು ಇನ್ನೂ ಪರೀಕ್ಷಿಸುವುದು ಹೇಗೆಂಬುದನ್ನು ಯೋಚಿಸುತ್ತಾ ನೆಲದ ಮೇಲೆಯೇ ಕ್ಷಣಕಾಲ ನೆಟ್ಟದೃಷ್ಟಿಯುಳ್ಳವನಾಗಿ ಕುಳಿತಿದ್ದನು. ಶಿಬಿಗೆ ಬ್ರಾಹ್ಮಣನನ್ನು ಸತ್ಕರಿಸುವುದರಲ್ಲಿಯೇ ಪರಮಾಸಕ್ತಿಯಿದ್ದಿತು. ಅದೇ ತನ್ನ ಪರಮೋತ್ಕೃಷ್ಟಧರ್ಮವೆಂದೂ ದೃಢವಾಗಿ ನಂಬಿದ್ದನು. ಬ್ರಾಹ್ಮಣನನ್ನು ಸಂತೈಸುವ ಸಲುವಾಗಿ ಪುನಃ ದೈನ್ಯಭಾವದಿಂದ ಅವನೊಡನೆ ಶಿಬಿಯು ಹೇಳಿದನು : “ಭೋಜನವನ್ನು ಮಾಡಬಹುದಲ್ಲವೇ?” ಬ್ರಾಹ್ಮಣನು ಶಿಬಿಯ ಮುಖವನ್ನು ದುರ ದುರನೆ ಕ್ಷಣಕಾಲ ನೋಡಿನೀನೇ ಊಟ ಮಾಡುಎಂದು ಆಜ್ಞಾಪಿಸಿದನು. ತನ್ನ ಮಗನನ್ನು ಕೊಂದು ಸಿದ್ಧಪಡಿಸಿದ್ದ ಆಹಾರವನ್ನು ತಾನೇ ತಿನ್ನಬೇಕು. ವಿಷಯವು ಕೇಳುವವರಿಗೇ ಹೃದಯ ವಿದಾರಕವಾಗಿದ್ದರೂ ಶಿಬಿಯು ಬ್ರಾಹ್ಮಣನ ಮಾತಿನಿಂದಿಲೂ ವಿಚಲಿತ ಗೊಳ್ಳಲಿಲ್ಲ. ಬ್ರಾಹ್ಮಣನು ಹೇಳಿದುದೆಲ್ಲವೂ ಭಗವದಾಜ್ಞೆಯೆಂದೇ ಭಾವಿಸಿಹಾಗೆಯೇ ಆಗಲೆಂದುಬ್ರಾಹ್ಮಣನಿಗೆ ಉತ್ತರವಿತ್ತು, ತನ್ನ ತಲೆಯ ಮೇಲಿದ್ದ ಪಾತ್ರೆಯನ್ನು ಕೆಳಗಿಳಿಸಿ, ಬ್ರಾಹ್ಮಣನ ಆಜ್ಞಾನುಸಾರವಾಗಿ ಭೋಜನಮಾಡಲು ಸಿದ್ಧನಾದನು. ಬ್ರಾಹ್ಮಣನಿಗೆ ಅದನ್ನು ನೋಡಿ ಸಹಿಸಲಾಗಲಿಲ್ಲ. ಮೇಲೆದ್ದು ಹೋಗಿ ಶಿಬಿಯ ಕೈಹಿಡಿದು ಹೇಳಿದನುಶಿಬಿರಾಜ! ನೀನು ಕೋಪವನ್ನು ಸಂಪೂರ್ಣವಾಗಿ ಜಯಿಸಿ ಬಿಟ್ಟಿರುವೆ. ಬ್ರಾಹ್ಮಣನಿಗೆ ಕೊಡಕೂಡದೆಂದಿರುವ ವಸ್ತುವೇ ನಿನ್ನಲ್ಲಿಲ್ಲ. ತನು-ಮನ-ಧನ-ಪುತ್ರ-ಮಿತ್ರ-ಕಳತ್ರರೇ ಆದಿಯಾಗಿ ಸರ್ವಸ್ವವನ್ನೂ ನೀನು ಬ್ರಾಹ್ಮಣರಿಗೆ ದಾನಮಾಡಲು ಸಿದ್ಧನಾಗಿರುವೆಎಂದು ಹೇಳುತ್ತಾ ರಾಜನನ್ನು ಪುರಸ್ಕರಿಸಿದನು. ಬ್ರಾಹ್ಮಣನು ಸಂತುಷ್ಟನಾದುದಕ್ಕಾಗಿ ಸಂತಸಗೊಂಡ ಶಿಬಿಯು ತಲೆಯೆತ್ತಿ ನೋಡಲಾಗಿ, ತಾನು ಸಂಹರಿಸಿದ್ದ ಮಗನು ಜೀವಂತನಾಗಿ ದೇವತೆಯೋಪಾದಿಯಲ್ಲಿ ದಿವ್ಯಾಭರಣಗಳನ್ನು ಧರಿಸಿ ತನ್ನ ಮಗ ಮುಗುಳ್ನಗೆಯೊಡನೆ ಅಲ್ಲಿಯೇ ನಿಂತಿರುವುದನ್ನು ಕಂಡನು. ತಂದೆ ಮಕ್ಕಳಿಬ್ಬರನ್ನೂ ಆಶೀರ್ವದಿಸಿ ಬ್ರಾಹ್ಮಣನು ಅದೃಶ್ಯನಾದನು. ರಾಜಕುಮಾರರೇ ಬ್ರಹ್ಮನೇ ಬ್ರಾಹ್ಮಣನ ರೂಪವನ್ನು ಧರಿಸಿ ಶಿಬಿಯನ್ನು ಪರೀಕ್ಷಿಸುವ ಸಲುವಾಗಿ ಬಂದಿದ್ದನು. ಬ್ರಾಹ್ಮಣವೇಷದಲ್ಲಿದ್ದ ಬ್ರಹ್ಮನು ಅಂತರ್ಧಾನನಾದನಂತರ ಶಿಬಿಯ ಸಚಿವರು ಶಿಬಿಯನ್ನು ಕೇಳಿದರು : “ಮಹಾರಾಜ, ನೀನು ಎಲ್ಲ ವಿಷಯಗಳನ್ನೂ ತಿಳಿದವನಾಗಿರುವೆ. ಯಾವ ಅಪೇಕ್ಷೆಯಿಂದ ನೀನು ಹೀಗೆ ಮಾಡಿದೆ?. ನಾವೂ ಸಹ ಇದರ ರಹಸ್ಯವನ್ನು ತಿಳಿಯಬೇಕೆಂಬ ಆಶಯದಿಂದಿರುತ್ತೇವೆ.” ಶಿಬಿಯು ಉತ್ತರಿಸಿದನು :
ನೈವಾಹಮೇತದ್ಯಶಸೇ ದದಾನಿ ಚಾರ್ಥಹೇತೋರ್ನ ಭೋಗತೃಷ್ಣಯಾ |
ಪಾಪೈರನಾಸೇವಿತ ಏಷ ಮಾರ್ಗ ಇತ್ಯೇವಮೇತತ್ಸಕಲಂ ಕರೋಮಿ || ೨೬ ||
ಸದ್ಭಿಃ ಸದಾಧ್ಯಾಸಿತಂ ತು ಪ್ರಶಸ್ತಂ ತಸ್ಮಾ ತ್ಪ್ರಶಸ್ತಂ ಶ್ರಯತೇ ಮತಿರ್ಮೇ || ೨೭ || ಯಶಸ್ಸನ್ನು ಗಳಿಸಲು ನಾನು ದಾನಕೊಡುವುದಿಲ್ಲ. ಧನಲಾಭಕ್ಕಾಗಲೀ, ಭೋಗದ ತೃಷ್ಣೆಯಿಂದಾಗಲೀ ನಾನೀ ಮಾರ್ಗವನ್ನು ಅವಲಂಬಿಸಿರುವುದಿಲ್ಲ. ಪಾಪಾತ್ಮರುಗಳಿಗೆ ಮಾರ್ಗಾನುಸರಣೆಯು ದುಸ್ಸಾಧ್ಯವಾದುದೆಂಬುದನ್ನು ಮನಗಂಡೇ ನಾನೀ ಮಾರ್ಗವನ್ನು ಅನುಸರಿಸಲು ಇಚ್ಛೆಪಡುತ್ತೇನೆ. ಸತ್ಪುರುಷರಿಂದ ಅನುಸರಿಸಲ್ಪಟ್ಟಿರುವ ಮಾರ್ಗವು ಬಹುಪ್ರಶಸ್ತವಾದುದು. ನನ್ನ ಮನಸ್ಸು ಯಾವಾಗಲೂ ಸತ್ಪುರುಷರು ಅನುಸರಿಸಿರುವ ಮಾರ್ಗವನ್ನೇ ಅನುಸರಿಸಿಹೋಗಲು ತವಕಪಡುತ್ತದೆ.”