Search This Blog

Sunday 25 March 2018

ಮಾಂ ಧಾಸ್ಯತೀತಿ = ಮಾಂಧಾತ ಮತ್ತು ವೇದ - ಪುರಾಣ – ಇತಿಹಾಸ


ಇಕ್ಷ್ವಾಕುವಂಶದಲ್ಲಿ ಯುವನಾಶ್ವನೆಂಬವನು ಜನಿಸಿದನು. ಅವನು ಮೌಲ್ಯಯುತವಾದ ಅನೇಕ ಯಾಗಗಳನ್ನು ಮಾಡಿದನು. ಧರ್ಮಾತ್ಮನಾದ ಅವನು ಒಂದು ಸಾವಿರ ಅಶ್ವಮೇಧ ಯಾಗಗಳನ್ನು ಮಾಡಿದನಂತೆ. ಸಾವಿರ ಅಶ್ವಮೇಧಯಾಗಗಳೇ ಅಲ್ಲದೇ ಇನ್ನೂ ಅನೇಕ ಯಜ್ಞಗಳನ್ನು ಮಾಡಿ ಮುಗಿಸಿದನು. ಇಂತಹ ಮಹಾತ್ಮನಾದ, ಮಹಾವ್ರತನಾದ ಯುವನಾಶ್ವನಿಗೆ ಮಕ್ಕಳಿರಲಿಲ್ಲ. ಮಕ್ಕಳನ್ನು ಪಡೆಯುವ ಅಭಿಲಾಷೆಯಿಂದ ಆ ರಾಜನು ರಾಜ್ಯದ ಆಡಳಿತವೆಲ್ಲವನ್ನೂ ಮಂತ್ರಿಗಳಿಗೆ ವಹಿಸಿಕೊಟ್ಟು ಹೆಚ್ಚುಕಾಲ ಕಾಡಿನಲ್ಲಿಯೇ ತಪಶ್ಚರಣೆಮಾಡುತ್ತಾ ಕಾಲಕಳೆಯುತ್ತಿದ್ದನು. ಶಾಸ್ತ್ರಾಧಾರಿತ ವಿಧಿನಿಯಮಗಳನ್ನು ಅನುಸರಿಸುತ್ತಾ ಅರಣ್ಯದಲ್ಲಿದ್ದ ರಾಜನು ಉಪವಾಸವ್ರತನಿಷ್ಠನಾದನು. ಆದರೆ ಆ ಉಪವಾಸದಿಂದ ಅವನು ಬಳಲುತ್ತಿದ್ದನು. ಬಹಳ ಬಾಯಾರಿಕೆಯಿಂದ ಬಳಲಿ ಸುತ್ತಾಡುತ್ತಾ ತುಂಬಾ ದಣಿದು ಕಡೆಗೆ ಸಮೀಪದಲ್ಲಿಯೇ ಇದ್ದ ಭೃಗುಮಹರ್ಷಿಗಳ ಆಶ್ರಮಕ್ಕೆ ಹೋದನು. ಅವನ ಅದೃಷ್ಟವೇ ಅವನನ್ನು ಅಲ್ಲಿಗೆ ಕೊಂಡೊಯ್ದಿತು. ಅವನು ಅಲ್ಲಿಗೆ ಪ್ರವೇಶಿಸಿದ್ದು ರಾತ್ರಿಯಲ್ಲಿ. ಅದೇ ರಾತ್ರಿಯಲ್ಲಿ ಭೃಗುಪುತ್ರನಾದ ಚ್ಯವನಮಹರ್ಷಿಯು ಯುವನಾಶ್ವನಿಗೆ ಮಕ್ಕಳಾಗಬೇಕೆಂದು ಒಂದು ಯಜ್ಞವನ್ನು ಮಾಡಿ ಮುಗಿಸಿದ್ದನು. ಯಜ್ಞವೇದಿಕೆಯ ಬಳಿಯಲ್ಲಿ ಮಂತ್ರಪೂರಿತವಾದ ಒಂದು ಪೂರ್ಣಕುಂಭವು ಸ್ಥಾಪಿತವಾಗಿದ್ದಿತು. ಯುವನಾಶ್ವನ ಪತ್ನಿಯು ಆ ತೀರ್ಥವನ್ನು ಪ್ರಾಶನಮಾಡಿದರೆ ದೇವಸಮಾನನಾದ ಪುತ್ರನನ್ನು ಪಡೆಯುತ್ತಿದ್ದಳು. ಅಂತಹ ಮಹತ್ತ್ವಪೂರ್ಣವಾದ ತೀರ್ಥದ ಕುಂಭವನ್ನು ಅಲ್ಲಿಟ್ಟಿದ್ದರು. ರಾತ್ರಿಯಲ್ಲಿ ಬಹಳ ಹೊತ್ತು ಕಳೆದಿದ್ದರಿಂದಲೂ, ಕರ್ಮಗಳನ್ನು ಮಾಡಿ ಆಯಾಸಹೊಂದಿದ್ದರಿಂದಲೂ ಮಹರ್ಷಿಗಳೆಲ್ಲರೂ ಮಲಗಲು ಹೊರಟುಹೋದರು. ಅವರು ಹೋದನಂತರವೇ ಯುವನಾಶ್ವನು ಹಸಿವು, ಬಾಯಾರಿಕೆಗಳಿಂದ ಬಳಲಿದವನಾಗಿ ಆಶ್ರಮಕ್ಕೆ ಬಂದನು. ಆತನ ನಾಲಿಗೆಯು ಒಣಗಿಹೋಗಿತ್ತು. ಆಶ್ರಮವನ್ನು ಪ್ರವೇಶಿಸಿದೊಡನೆಯೇ ಕುಡಿಯಲು ನೀರು ಕೇಳಿದನು. ರಾಜನ ಬಾಯಿ ಒಣಗಿಹೋಗಿದ್ದುದರಿಂದಲೂ, ಆಹಾರವಿಲ್ಲದೇ ಬಳಲಿಕೆಯಿಂದಲೂ ಅವನ ಧ್ವನಿಯೂ ಬಹಳವಾಗಿ ಕುಗ್ಗಿಹೋಗಿದ್ದಿತು. ಪಕ್ಷಿಯ ಧ್ವನಿಯಂತೆ ಕೀರಲು ಧ್ವನಿಯಿಂದ ಕೂಡಿದ್ದ ಅವನ ಪ್ರಾರ್ಥನೆಯು ಆಶ್ರಮದಲ್ಲಿ ಮಲಗಿದ್ದ ಯಾರೊಬ್ಬರಿಗೂ ಕೇಳಿಸಲಿಲ್ಲ. ರಾಜನು ಹತಾಶನಾಗಿ ಆಶ್ರಮದೊಳಗೆ ಸುತ್ತಲೂ ನೋಡಿದನು. ಯಜ್ಞವೇದಿಯಲ್ಲಿ ಜಲಪೂರ್ಣವಾಗಿದ್ದ ಕುಂಭವಿದ್ದುದು ಅವನಿಗೆ ಕಾಣಿಸಿತು. ಒಡನೆಯೇ ರಾಜನು ಉದಕುಂಭ ವಿದ್ದೆಡೆಗೆ ಧಾವಿಸಿದನು. ಅದರಲ್ಲಿದ್ದ ನೀರೆಲ್ಲವನ್ನೂ ಕುಡಿದನು. ಸ್ವಲ್ಪ ಹೊತ್ತು ಕಳೆದನಂತರ ಮಹರ್ಷಿಗಳೆಲ್ಲರೂ ನಿದ್ರೆಯಿಂದ ಎದ್ದರು. ಜಲರಹಿತವಾದ ಕುಂಭವನ್ನು ನೋಡಿದರು. ಕೂಡಲೇ ಅವರೆಲ್ಲರೂ ಒಂದೆಡೆಯಲ್ಲಿ ಸೇರಿ ಈ ಕೆಲಸ ಮಾಡಿದವರು ಯಾರೆಂದು ಚಿಂತಿಸತೊಡಗಿದರು. ಅಲ್ಲಿಯೇ ಇದ್ದ ಯುವನಾಶ್ವನು ತಾನೇ ಕುಡಿದುದಾಗಿಯೂ, ಬಾಯಾರಿಕೆಯಿಂದ ಬಳಲಿದ್ದ ತಾನು ನೀರೆಲ್ಲವನ್ನೂ ಕುಡಿದೆ ಎಂದು ಹೇಳಿದನು. ಆ ಮಾತುಗಳನ್ನು ಕೇಳಿದ ಚ್ಯವನನು ಖಿನ್ನನಾಗಿ ರಾಜನ ಹತ್ತಿರ : ಮಹಾರಾಜ ನೀನು ತಪ್ಪು ಮಾಡಿಬಿಟ್ಟೆ. ನಿನಗೆ ಮಕ್ಕಳಾಗಬೇಕೆಂಬ ಅಭಿಲಾಷೆಯಿಂದಲೇ ಅದಕ್ಕೆ ಸಂಬಂಧಿಸಿದಂತೆ ಹೋಮ- ಹವನಾದಿಗಳನ್ನು ಮಾಡಿ ಮಂತ್ರಪೂರಿತವಾದ ಜಲವನ್ನು ಈ ಕುಂಭದಲ್ಲಿಡಲಾಗಿತ್ತು. ನಾನು ಮಹಾಕ್ಲಿಷ್ಟವಾದ ತಪಸ್ಸನ್ನುಮಾಡಿ ನನ್ನ ತಪಃಫಲವನ್ನು ಬೀಜರೂಪವಾಗಿ ಈ ಭಾಂಡದಲ್ಲಿ ನಿಕ್ಷೇಪಿಸಿದ್ದೆನು. ಮಹಾಬಲಶಾಲಿಯೂ, ಮಹಾವೀರ್ಯವಂತನೂ, ಇಂದ್ರನನ್ನೂ ತನ್ನ ಪರಾಕ್ರಮದಿಂದ ಗೆಲ್ಲುವಷ್ಟು ಸಾಮರ್ಥ್ಯವುಳ್ಳವನಾಗಿಯೂ ಇರುವ ಪುತ್ರನು ನಿನಗೆ ಹುಟ್ಟಬೇಕೆಂದು ನಾನು ಈ ಕರ್ಮಗಳೆಲ್ಲವನ್ನೂ ಮಾಡಿ ನನ್ನ ತಪಃಫಲವೆಲ್ಲವನ್ನೂ ಈ ಉದಕುಂಭದಲ್ಲಿ ನಿಕ್ಷೇಪಿಸಿದ್ದೆನು. ಈ ತೀರ್ಥವನ್ನು ನಿನ್ನ ಪತ್ನಿಯು ಕುಡಿದು ಅವಳಲ್ಲಿ ಸರ್ವಶ್ರೇಷ್ಠನಾದ ಮಗನು ಹುಟ್ಟಬೇಕಾಗಿತ್ತು. ನೀನೀಗ ಈ ತೀರ್ಥವನ್ನು ಕುಡಿದು ತಪ್ಪು ಮಾಡಿಬಿಟ್ಟಿರುವೆ. ನೀನೀಗ ಈ ತೀರ್ಥವನ್ನು ಕುಡಿದುಬಿಟ್ಟಿರುವುದರಿಂದ ನಾವಾದರೂ ಏನನ್ನೂ ಮಾಡಲೂ ಸಾಧ್ಯವಿಲ್ಲ. ತಪಃಫಲವನ್ನು ಪಡೆದಿದ್ದ ಮಂತ್ರಪೂರಿತವಾಗಿದ್ದತೀರ್ಥವನ್ನು ನೀನು ಬಾಯಾರಿಕೆಯಿಂದ ಕುಡಿದುಬಿಟ್ಟೆಯಾದಕಾರಣ ನಾನು ಮೇಲೆ ಹೇಳಿದಂತೆ ಸರ್ವಲಕ್ಷಣಸಂಪನ್ನನಾದ ಮತ್ತು ಮಹಾಪರಾಕ್ರಮಶಾಲಿಯಾದ ಮಗನನ್ನು ನೀನೇ ಹಡೆಯಬೇಕಾಗಿದೆ. ಇಂದ್ರನಿಗೆ ಸಮಾನನಾದ ಮಗನು ನಿನಗೆ ಲಭ್ಯವಾಗುವಂತೆ ಒಂದು ಯಾಗವನ್ನು ಮಾಡುವೆವು. ಆ ಯಾಗದ ಫಲದಿಂದಾಗಿ ನಿನಗೆ ಗರ್ಭಧಾರಣೆಯ ಕಷ್ಟ ಉಂಟಾಗುವುದಿಲ್ಲ. ಎಂದು ಸಮಾಧಾನಗೊಳಿಸಿದನು. ಅನಂತರದಲ್ಲಿ ಯುವನಾಶ್ವನ ಹೊಟ್ಟೆಯ ಎಡಭಾಗವನ್ನು ಸೀಳಿಕೊಂಡು ಸೂರ್ಯ ತೇಜಸ್ಸಿನಿಂದ ಕೂಡಿದ್ದ ಶಿಶುವು ಹೊರಬಂದಿತು. ಆ ಶಿಶುವು ಹುಟ್ಟಿದಾಗಲೇ ಬಹಳ ಬಲಶಾಲಿಯಾಗಿದ್ದಿತು. ಯುವನಾಶ್ವನ ಹೊಟ್ಟೆಯನ್ನು ಸೀಳಿ ಮಗುವು ಹೊರಗೆ ಬಂದರೂ ಯುವನಾಶ್ವನು ಸಾಯಲೂ ಇಲ್ಲ; ಯಾತನೆಯನ್ನೂ ಅನುಭವಿಸಲಿಲ್ಲ. ಯಜ್ಞದ ಫಲದಿಂದ ಯುವನಾಶ್ವನಿಗೆ ಯಾವ ವಿಧವಾದ ತೊಂದರೆಯೂ ಆಗಲಿಲ್ಲ. ಅಂತಹ ಅದ್ಭುತವಾದ ಶಿಶುವೊಂದು ಭೂಲೋಕದಲ್ಲಿ ಹುಟ್ಟಿರುವುದನ್ನು ನೋಡಲು ಇಂದ್ರನೂ ದೇವತೆಗಳೊಡನೆ ಯುವನಾಶ್ವನ ಅರಮನೆಗೆ ಆಗಮಿಸಿದನು. ಮಗುವನ್ನು ನೋಡುತ್ತಲೇ ಮುಗ್ಧರಾದ ದೇವತೆಗಳು ಇಂದ್ರನನ್ನು ಕೇಳಿದರು : ದೇವೇಂದ್ರ ಈ ಮಗುವು ಏನನ್ನು ಕುಡಿಯುತ್ತದೆ? ತಂದೆಯನ್ನೇ ತಾಯಿಯನ್ನಾಗಿ ಪಡೆದಿರುವ ಶಿಶುವಿಗೆ ಸ್ತನ್ಯಪಾನದ ಅದೃಷ್ಟವೆಲ್ಲಿಯದು?”
ಪ್ರದೇಶಿನೀಂ ತತೋಽಸ್ಯಾಸ್ಯೇ ಶಕ್ರಃ ಸಮಭಿಸಂದಧೇ |
ಮಾಮಯಂ ಧಾಸ್ಯತೀತ್ಯೇವಂ ಭಾಷಿತೇ ಚೈವ ವಜ್ರಿಣಾ |
ಮಾನ್ಧಾತೇತಿ ಚ ನಾಮಾಸ್ಯ ಚಕ್ರುಃ ಸೇನ್ದ್ರಾ ದಿವೌಕಸಃ || ೩೧ ||
ಇಂದ್ರನು ಕ್ಷಣಕಾಲ ಯೋಚಿಸಿ ತನ್ನ ಹೆಬ್ಬೆಟ್ಟಿನ
ಪಕ್ಕದ ತೋರುಬೆರಳನ್ನು ಶಿಶುವಿಗೆ ಚೀಪಲು ಕೊಟ್ಟು ಅಯಂ ಮಾಂ ಧಾಸ್ಯತಿಧಾಸ್ಯತಿ ಎಂದರೆ ಪಾಸ್ಯತಿನನ್ನನ್ನೇ ಇವನು ಕುಡಿಯುತ್ತಾನೆಎಂದು ದೇವತೆಗಳಿಗೆ ಹೇಳಿದನು. ಶಿಶುವಿಗೆ ಸ್ತನ್ಯದ ಪ್ರತ್ಯಾಮ್ನಾಯವಾಗಿ ತನ್ನ ತರ್ಜನಿಯನ್ನೇ ಕೊಟ್ಟು ಇಂದ್ರನು ಮಾಂ ಧಾಸ್ಯತಿಎಂದು ಹೇಳಿದ್ದರಿಂದ ದೇವತೆಗಳು ಆ ಶಿಶುವಿಗೆ ಮಾಂಧಾತಎಂದೇ ನಾಮಕರಣಮಾಡಿದರು.
ಈತನ ಮಗನೇ ಪುರುಕುತ್ಸ. ಹೌದು ವೇದಾದಿಗಳಲ್ಲಿ ಬಂದು ಹೋಗಿರುವಾತ.
ಅಸ್ಮಾಕಮತ್ರ ಪಿತರಸ್ತ ಆಸನ್ತ್ಸಪ್ತ ಋಷಯೋ ದೌರ್ಗಹೇ ಬಧ್ಯಮಾನೇ |
ತ ಆಯಜಂತ ತ್ರಸದಸ್ಯುಮಸ್ಯಾ ಇಂದ್ರಂ ನ ವೃತ್ರತುರಮರ್ಧದೇವಂ ||
ಪುರುಕುತ್ಸಾನೀ ವಾಮದಾಶದ್ಧವ್ಯೇ ಭಿರಿಂದ್ರಾವರುಣಾ ನಮೋಭಿಃ |
ಆಥಾ ರಾಜಾನಂ ತ್ರಸದಸ್ಯುಮಸ್ಯಾ ವೃತ್ರಹಣಂ ದದಥುರರ್ದ್ಧದೇವಂ || ಋಗ್ವೇದ ೪ : ೪೨
ಈ ಋಕ್ಕಿನಲ್ಲಿ ಪುರುಕುತ್ಸನು ಕಾರಾಗ್ರಹವಾಸಿಯಾದಾಗ ಸಪ್ತರ್ಷಿಗಳೇ ಪಾಲಕರಾಗಿದ್ದರಂತೆ. ಇದೇ ಸಮಯದಲ್ಲಿ ಸಪ್ತರ್ಷಿಗಳು ಇಂದ್ರಾವರುಣ ಯಜ್ಞವನ್ನು ಮಾಡಿ ಅವರ ಅನುಗ್ರಹದಿಂದ ಪುರುಕುತ್ಸನ ಪತ್ನಿಯಾದ ಪುರುಕುತ್ಸಾನಿಯಲ್ಲಿ ತ್ರಸದಸ್ಯು ಎನ್ನುವ ಅಸದೃಷನಾದ ಮಗನನ್ನು ಪಡೆಯುವಂತೆ ಮಾಡಿದರು ಎಂದು ತಿಳಿದು ಬರುತ್ತದೆ. ಇಲ್ಲಿ ವಾಮದೇವ ಋಷಿಯು ಇಂದ್ರಾವರುಣರನ್ನು ಸ್ತುತಿಸಿ ನಿಮ್ಮಿಂದ ಲೋಕವಿಖ್ಯಾತನಾದ ಮಹಾಬಲಶಾಲಿಯಾದ ತ್ರಸದಸ್ಯು ಎನ್ನುವ ಮಗನನ್ನು ಕರುಣಿಸಿದ್ದೀರಿ ಎನ್ನುವುದಾಗಿಯೂ ಪುರುಕುತ್ಸಾನಿಯು ನಿಮ್ಮನ್ನು ಸಂತುಷ್ಟಿ ಗೊಳಿಸಿರುವುದಾಗಿಯೂ ಹೇಳುವುದಲ್ಲದೇ ಮಂತ್ರ ದೃಷ್ಟಾರ ಋಷಿಯು ಈ ಪುರುಕುತ್ಸಾನಿ ಮತ್ತು ತ್ರಸದಸ್ಯುವು ಗಿರಿಕ್ಷಿತ್ ಮತ್ತು ದುರ್ಗಹ ಎನ್ನುವ ವಂಶದಿಂದ ಬಂದವರೆಂದೂ ತಿಳಿಯುತ್ತದೆ.
ಯೇಭಿಸ್ತೃಕ್ಷಿಂ ವೃಷಣಾ ತ್ರಾಸದಸ್ಯವಂ ಮಹೇ ಕ್ಷತ್ರಾಯ ಜಿನ್ವಥಃ || ೮ : ೭: ೨೨
ರಲ್ಲಿ ಇದೇ ವಂಶದಲ್ಲಿ ತಾರ್ಕ್ಷ್ಯ ಅಥವ ತೃಕ್ಷ ಎನ್ನುವವನೂ ಇದ್ದುದಾಗಿ ತಿಳಿಯುತ್ತದೆ.
ಈ ಪುರುಕುತ್ಸನ ಮಗನಾದ ತ್ರಸದಸ್ಯವೂ ಋಷಿಯಾಗಿದ್ದನು ಎನ್ನುವುದು ಕೆಲವು ಋಕ್ಕಿನಲ್ಲಿ ಹೇಳಲ್ಪಟ್ಟಿದೆ.
ಮಮದ್ವಿತಾರಾಷ್ಟ್ರಂ ಕ್ಷತ್ರಿಯಸ್ಯ ವಿಶ್ವಯೋರ್ವಿಶ್ವೇ ೪ : ೪೨ : ೧
ರಲ್ಲಿ ತ್ರಸದಸ್ಯು ಎನ್ನುವವನು ರಾಜನೂ ಆಗಿದ್ದ ಋಷಿಯೂ ಆಗಿದ್ದ ಎನ್ನುತ್ತದೆ. ದ್ವಿತಾರಾಷ್ಟ್ರಂ ಎನ್ನುವುದನ್ನು ಸಾಯಣರು ಎರಡು ರಾಷ್ಟ್ರ ಎಂದರೆ ಒಂದು ಭೂಮಿ ಮತ್ತು ಸ್ವರ್ಗ ಎನ್ನುವುದಾಗಿ ಅರ್ಥೈಸಿದ್ದಾರೆ, ಕೆಲವು ಋಕ್ಕುಗಳಲ್ಲಿ ದ್ಯಾವಾ ಪೃಥಿವಿಯೂ ತಾನೇ ಎನ್ನುತ್ತಾನೆ.
ಅಹಂ ರಾಜಾ ವರುಣೋ ಮಹ್ಯಂ ತಾನ್ಯಸುರ್ಯಾಣಿ ಪ್ರಥಮಾ ಧಾರಯಂತ |
ಕ್ರತುಂ ಸ ಚಂತೇ ವರುಣಸ್ಯ ದೇವಾ ರಾಜಾಮಿ ಕೃಷ್ಟೇರುಪಮಸ್ಯ ವವ್ರೇಃ || ೪ : ೪೨ : ೨

ನಾನೇ ಜಗದೊಡೆಯನಾದ ವರುಣ, ದೇವತೆಗಳು, ಪ್ರಸಿದ್ಧವಾದ, ಅಸುರನಾಶಕವಾದ ಬಲವನ್ನೆಲ್ಲಾ ನನಗಾಗಿಯೇ ಪಡೆದಿದ್ದಾರೆ, ವರುಣಾತ್ಮನೂ ಮಾನವರೂಪನೂ ಆದ ನಾನು ಎಲ್ಲರಿಗೂ ಪ್ರಭುವಾಗಿದ್ದೇನೆ. ನನ್ನ ಕರ್ಮವನ್ನು ದೇವತೆಗಳು ಪಡೆಯುತ್ತಾರೆ ಎನ್ನುತ್ತಾನೆ.
ಅಹಮಿಂದ್ರೋ ವರುಣಸ್ತೇ ಮಹಿತೋರ್ವೀ ಗಭೀರೇ ರಜಸಿ ಸುಮೇಕೇ |
ತ್ವಷ್ಟೇವ ವಿಶ್ವಾ ಭುವನಾನಿ ವಿದ್ವಾನ್ತ್ಸಮೈರಯಂ ರೋದಸಿ ಧಾರಯಂತ || ೪ : ೪೨ : ೩
ನಾನೇ ನನ್ನ ಮಹಾತ್ಮ್ಯದಿಂದ ಇಂದ್ರನಂತೆಯೂ ವರುಣನಂತೆಯೂ ಇದ್ದೇನೆ. ಪ್ರಸಿದ್ಧವಾದ ಮತ್ತು ವಿಸ್ತೃತವಾದ, ಅಗಣಿತ ಆಳವುಳ್ಳವನೂ ಸುಂದರವೂ ಆದ ದ್ಯಾವಾಪೃಥಿವಿಗಳೇ ನಾನಾಗಿದ್ದೇನೆ. ದ್ಯಾವಾ ಪೃಥಿವಿಗಳೆರಡನ್ನೂ ನಾನು ಧರಿಸಿದ್ದೇನೆ ಎನ್ನುತ್ತಾನೆ.
ಇದೇ ಮಾಂಧಾತ - ಪುರುಕುತ್ಸ - ಮತ್ತು ತ್ರಸದಸ್ಯುವಿನ ವಂಶದಿಂದ ಬಂದವನೇ ಶ್ರೀರಾಮ. ವೇದೋಲ್ಲಿಖಿತ ರಾಜವಂಶದ ಕುರುಹು ಸಿಂಧೂ ಸರಸ್ವತೀ ನದೀ ತೀರದ ಹಲಗೆಗಳಲ್ಲಿ ಕಾಣಿಸಿಕೊಳ್ಳುತ್ತದೆ ಹಾಗಾದರೆ ಇಲ್ಲಿ ವೇದ ಪುರಾಣಗಳು ಇತಿಹಾಸದಲ್ಲಿ ಸಂಬಂಧ ಪಡೆದುಕೊಳ್ಳುವುದಿಲ್ಲವೇ. ಇತಿಹಾಸವನ್ನು ಬೇರ್ಪಡಿಸಿ ಅದು ಆಧುನಿಕತೆಯೆಡೆಗೆ ತರುವಲ್ಲಿನ ಶ್ರಮಕ್ಕೆ ಧನ್ಯವಾದಗಳು. ರಾಮನವಮಿಯ ಶುಭಾಶಯಗಳೊಂದಿಗೆ ಇಂದು ಜನ್ಮದಿನವನ್ನು ಹೊಂದಿರುವ ಎಲ್ಲಾ ನನ್ನ ಮಿತ್ರರಿಗೂ ಶುಭಾಶಯಗಳು.

Saturday 24 March 2018

ಶಿಷ್ಟಾನಾಂತು ಸುದರ್ಶನಃ - ಕದಂಬ ಕಾಕುಸ್ಥವರ್ಮ


ಇದು ಹಾಸನ ಜಿಲ್ಲೆಯ ಬೇಲೂರಿನ ಹಲ್ಮಿಡಿಯಲ್ಲಿರುವ ವೀರಭದ್ರ ದೇವಾಲಯದ ಎದುರಿಗಿದ್ದ ಶಿಲಾ ಶಾಸನ. ಕದಂಬ ಕಾಕುಸ್ಥವರ್ಮನ ಶಾಸನ ಸುಮಾರು 450ನೇ ಇಸವಿಯದ್ದು. ಪೂರ್ವದ ಕದಂಬರ ಕಾಲದ ಶಾಸನಗಳು ಹೆಚ್ಚಿನವು ಸಂಸ್ಕೃತದಲ್ಲಿವೆ. ಮತ್ತು ಕಾಕುಸ್ಥವರ್ಮನ ಹಲಸಿಯ ಶಾಸನ ಕನ್ನಡದ ನೆಲಕ್ಕೆ ಋ ಅಕ್ಷರವನ್ನು ಪರಿಚಯಿಸಿದ ಮೊದಲ ಶಾಸನ. ಆಮೇಲೆ ಚಿಕ್ಕಬೆಟ್ಟದ ಶಾಸನದಲ್ಲಿ ಬಳಸಿದ್ದು ಬಿಟ್ಟರೆ ಮಧ್ಯದ ಶತಮಾನಗಳಲ್ಲಿ ಋ ಕಾರ ಪ್ರಾಯಶಃ ಬಳಕೆ ಆಗಿರಲಿಕ್ಕಿಲ್ಲ. ಆದರೂ ಸಹ ಸಂಪೂರ್ಣ ಸಂಸ್ಕೃತ ಭಾಷೆಯಿಂದ ಕನ್ನದಕ್ಕೆ ಬಂದಿರುವುದು ಸೋಜಿಗವೆನ್ನಿಸುತ್ತದೆ. ಬಹುಶಃ ಉತ್ತರದಲ್ಲಿ ನಮ್ಮ ನಾಡಿನ ಉತ್ತರದಲ್ಲಿ ಸಂಸ್ಕೃತ ಹೆಚ್ಚು ಪ್ರಚಲಿತವಿದ್ದು ದಕ್ಷಿಣಕ್ಕೆ ಕನ್ನಡ ಹೆಚ್ಚು ಪ್ರಚಲಿತವಿದ್ದಿರಬಹುದು. ಭಟ, ನಾಡು, ಬಟರಿ ಕುಲ, ದಕ್ಷಿಣಾಪಥ, ಪೊಗಳೆಪ್ಪೊಟ್ಟಣ, ಕೆಲ್ಲ, ಸೇಂದ್ರಕ, ಅರಸ, ಬಾಳ್ಗಳ್ಚು, ಕುರುಂಬಿಡಿ, ಪತ್ತೊಂದಿ. ಮುಂತಾದುವು ಬಳಕೆಗೊಂಡದ್ದು ಗಮನಿಸಿದರೆ ಅದಕ್ಕೂ ಮೊದಲೇ ಕನ್ನಡ ಹಂತ ಹಂತವಾಗಿ ಬೆಳೆದು ಬಂದಿದೆ. ಒಮ್ಮೆಲೇ ಇಂತಹ ಪದಗುಚ್ಚಗಳು ಬಂದದ್ದು ಗಮನಿಸಿದರೆ ಇದಕ್ಕೂ ಮೊದಲೇ ಶಿಲಾಶಾಸನಗಳು ಅಥವಾ ತಾಮ್ರಪಟಗಳು ಬಂದಿರಬಹುದು.
ಇಲ್ಲಿ ದಾನವಕ್ಷ್ಣೋರ್ = ದಾನವರ ಕಣ್ಣುಗಳಿಗೆ. ಶಿಷ್ಟಾನಾಂತು ಸುದರ್ಶನಃ ಎನ್ನುವಲ್ಲಿ ಸಜ್ಜನರಿಗೆ ಅಭಯದಾಯಕ. (ಸುದರ್ಶನ ಚಕ್ರಕ್ಕೆ ವಿಶಿಷ್ಟವಾದ ಸ್ಥಾನವಿದೆ. ಈ ಶಾಸನದ ರಂಭದಲ್ಲಿಯೇ ಸುದರ್ಶನ ಚಕ್ರವನ್ನು ಕೆತ್ತಿಸಿದ್ದು ಈ ಆಯುಧ ಮೂರ್ತಿಯ ಶಕ್ತಿಯನ್ನು ಸಾರಲಾಗಿದೆ. ಚಕ್ರಮೂರ್ತಿಯನ್ನು ಆಯುಧ ಮೂರ್ತಿಯಾಗಿ ಪೂಜಿಸುವುದಲ್ಲದೆ ಮಂತ್ರ, ಅಭಿಚಾರ ಕ್ರಿಯೆಗಳಲ್ಲೂ ಬಳಸಲಾಗುವುದು. ಇಂತಹ ಚಕ್ರಮೂರ್ತಿಗಳ ಹಿಂದೆ ನರಸಿಂಹ ಮೂರ್ತಿಯೂ ಇರುವ ನಿದರ್ಶನಗಳು ಇವೆ.) ಕದಂಬಪನ್ ಎನ್ನುವುದು ಸಂಸ್ಕೃತದಲ್ಲಿ ಭಾವನಾಮದ ಪ್ರತ್ಯಯವಾಗಿ '' ರೂಢಿಯಲ್ಲಿದ್ದು. ಅದರ ಕನ್ನಡ ಅನುಕರಣೆ ಇದು, ಉದಾಹರಣೆಗೆ ಧರಣಿಪ ಎನ್ನುವ ಪದ ಸಂಸ್ಕೃತವಾಗಿದ್ದು ಕನ್ನಡದಲ್ಲಿ ಪೊಡವಿಪ ಎನ್ನಿಸಿಕೊಳ್ಳುತ್ತದ. ಭಟ್ಟಾರಕ ಎನ್ನುವುದು ಗೌರವವಾಚಕ ಶಬ್ದ. ಬಹುಶತಹವನದುಳ್ ಎನ್ನುವುದರ ಸರಿಯಾದ ಪಾಠವು ಬಹುಶತವಹ ಎನ್ನಲಾಗಿದೆ. ಬಹುಶತಹವನದುಳ್ ಅಂದರೆ ಪಶುಪ್ರದಾನ ಎನ್ನುವುದು ಬಹುಶತಹವನದ ನಂತರದಲ್ಲಿ ಬರುವುದರಿಂದ ಪ್ರಾಣಿಗಳನ್ನು ಅರ್ಪಿಸುವ ಯಾಗವೆಂದಾದರೆ ಅದು ಯುದ್ಧವೇ ಇರಬಹುದು. ಪ್ಪಟ್ಟಣ ಅನ್ನುವುದನ್ನು ಪೊಟ್ಟಣ ಎನ್ನಲಾಗಿದೆ. ಆಸರಕ್ಕೆಲ್ಲ ಬಟರಿಯಾ ಎಂದು ತೆಗೆದುಕೊಂಡರೆ ಆಶ್ರಯನಾಗಿರುವ ಎಲ್ಲ ಭಟರಿಯಾ ಎಂದು ಅರ್ಥವಾಗುತ್ತದೆ. ಆದರೆ ಆಸರ ಕೆಲ್ಲ ಎಂದು ಪದ ವಿಭಾಗಿಸಿಕೊಂಡರೆ ಕೆಲ್ಲ ಎನ್ನುವ ಜನಾಂಗದ ಕುರಿತು ಹೇಳಲಾಗಿದೆ ಎನ್ನುವ ಅಭಿಪ್ರಾಯ ಕೂಡ ಇದೆ. ಭಟರಿಯಾ ಎನ್ನುವುದು ಸಂಸ್ಕೃತ ಪದ ಭೃಟಧಾತುವಿನಿಂದ ಬಂದ ಪದ ಭಟ. ಇದರಿಂದ ಭಟಾರ್ಕ ಶಬ್ದ ರೂಪುಗೊಂಡಿದ್ದು ಈ ಶಬ್ದದ ಪ್ರಯೋಗ ಸಂಸ್ಕೃತ ಶಾಸನಗಳಲ್ಲಿ ಕಾಣಸಿಗುತ್ತವೆ. "ಪ್ರೇಮಾಲಯ" ಎನ್ನುವಲ್ಲಿ ಮೊದಲಿಗೆ ಪ್ರೇಮಾಯ ಎಂದು ಕಂಡರಿಸಿದ್ದು ಆಮೇಲೆ ಅಕ್ಷರವನ್ನು ಸೇರಿಸಲಾಗಿದೆ. ಆದ್ದರಿಂದ ಶಾಸನದಲ್ಲಿ " ಸ್ವಲ್ಪ ಕೆಳಕ್ಕೆ ಕಾಣಿಸಿಕೊಂಡಿದೆ.
ಈ ಶಾಸನದ ಪ್ರಮುಖ ಅಂಶವಾಗಿ ಕುಱುಮ್ಬಿಡಿ(ಕುಱುಂ+ಪಿಡಿ) - ಕುಮ್ಬಿಡಿ ಎಂದರೆ ರಾಜ್ಯದ ಒಂದು ತೆರಿಗೆ. ಕುಱುಮ್ಬಿಡಿ>ಕುಮ್ಬಿಡಿ>ಕುಱುದೆರೆ. ಮಾಂಡಲೀಕರು ತಾವು ಸಾಮಾನ್ಯವಾಗಿ ಅನುಭೋಗಿಸುತ್ತಿದ್ದ ಆದಾಯವನ್ನು (ಕುಮ್ಬಿಡಿಯನ್ನು) ದೇವಾಲಯಗಳಿಗೆ ಬಿಟ್ಟುಕೊಡುತ್ತಿದ್ದರು. ಇವನ್ನು ಕಿಱುದೆರೆಗಳು ಎಂದು ಹೇಳಲಾಗುತ್ತಿತ್ತು. ಕಿರು ತೆರಿಗೆಗಳು - ಮೊದಲನೆಯದಾಗಿ ಮನೆಗಳ ಮೇಲೆ ಕೊಡಬೇಕಾಗಿರುವ ತೆರಿಗೆಯನ್ನು ಮನೆವಣಂ ಎನ್ನಲಾಗುತ್ತಿತ್ತು, ದೊಡ್ಡ ದೊಡ್ಡ ಜೂಜುಗಳ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆ ಪಿರಿಯರವಣಂ, ಹಣ ಮತ್ತು ಬಡ್ಡಿ ವ್ಯವಹಾರದ ಮೇಲಿನ ತೆರಿಗೆ ಧನಬಳಂ, ಅಳತೆಗಳ ಮೇಲಿನ ತೆರಿಗೆ ಕಾಳಗೊಲ್ಚು, ರಾಶಿಯ ಮೇಲೆ ಹಾಕುತ್ತಿದ್ದ ತೆರಿಗೆ ಮೇಂಟಿಗಣ್ಡುಗ ಎನ್ನಲಾಗುತ್ತಿತ್ತು, ಸಣ್ಣ ಸಣ್ಣ ಅಂಗಡಿಗಳವರು ಕೊಡಬೇಕಾಗಿದ್ದ ತೆರಿಗೆ ಅಂಗಡಿಯ ತಿಂಗಳಿನ ಬೇಳೆ, ಪಟ್ಟಣಗಳನ್ನು ಉಂಬಳಿಯಾಗಿ ಪಡೆದವರು ಕೊಡುತ್ತಿದ್ದ ತೆರಿಗೆ ಪೊಳಲ ಮನ್ನೆಯ ದಾನಿಕೆ. ಜ್ಞಾತಿಗಳು ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬೇಕಾದಾಗ ಕೊಡುತ್ತಿದ್ದ ತೆರಿಗೆ ದಾಯ ದ್ರಮ್ಮ. ಹೀಗೆ ತೆರೆಇಗೆಯ ವ್ಯವಸ್ಥೆ ಹಲವಾರು ರೀತಿಯಲ್ಲಿದ್ದು ಎಲವನ್ನೂ ನಾನಿಲ್ಲಿ ತರುತ್ತಿಲ್ಲ. ಪತ್ತೊನ್ದಿ ಎಂದರೆ ನಾವು ಬೆಳೆದ ಧಾನ್ಯದ 1/10 ಭಾಗ ರಾಜ ಪ್ರಭುತ್ವಕ್ಕೆ ಸಲ್ಲಿಸಬೇಕೆಂಬ ತೆರಿಗೆ ನಿಯಮ. ಹೀಗೆ ಈ ಶಸನ ಬಹಳ ಮಹತ್ವದ ಶಾಸನವೆನ್ನಿಸಿಕೊಂಡಿದ್ದು. ಈ ಶಾಸನದ ಅಂತ್ಯಭಾಗದಲ್ಲಿ ಎರೆಡೆರಡು ಸಲ ಅಂದರೆ 13ನೇ ಸಾಲಿನ ಕೊನೆಗೆ ಮಹಾಪಾತಕನ್ ಎಂದು ಬಂದಿದ್ದು 15ನೇ ಸಾಲಿನಲ್ಲಿ ಪುನಃ ಮಹಾಪಾತಕಂ ಎನ್ನುವುದಾಗಿ ಬಂದಿದ್ದು ಕೊನೆಯ ಸಾಲು ಆಮೇಲೆ ಬರೆಯಲಾಗಿದೆ ಎನ್ನುವ ಅಭಿಪ್ರಾಯವೂ ಸಹ ಇದೆ.

1 ಜಯತಿ ಶ್ರೀ ಪರಿಷ್ವಙ್ಗಶ್ಯಾರ್ಙ್ಗ[ವ್ಯಾ]ನತಿರಚ್ಯುತಃ ದಾನವಕ್ಷ್ಣೋರ್ಯುಗಾನ್ತಾಗ್ನಿಃ  [ಶಿಷ್ಟಾನಾನ್ತು] ಸುದರ್ಶನಃ 
2 ನಮಃ ಶ್ರೀಮತ್ಕದಂಬಪನ್ತ್ಯಾಗಸಂಪನ್ನನ್ಕಲಭೋರ[ನಾ] ಅರಿ ಕ
3 ಕುಸ್ಥಭಟ್ಟೋರನಾಳೆ ನರಿದಾವಿ[ಳೆ] ನಾಡುಳ್ ಮೃಗೇಶನಾ 
4 ಗೇನ್ದ್ರಾಭೀಳರ್ಭ್ಭಟಹರಪ್ಪೋರ್ ಶ್ರೀ ಮೃಗೇಶನಾಗಾಹ್ವಯ
5 ರಿರ್ವ್ವರಾ ಬಟರಿಕುಲಾಮಲವ್ಯೋಮತಾರಾಧಿನಾಥನ್ನಳಪ 
6 ಗಣಪಶುಪತಿಯಾ ದಕ್ಷಿಣಾಪಥ ಬಹುಶತಹವನಾ
7 ಹವದು[ಳ್] ಪಶುಪ್ರದಾನ ಶೌಯ್ರ್ಯೋದ್ಯಮಭರಿತೋ[ನ್ದಾನ]ಪ 
8 ಶುಪತಿಯೆನ್ದು ಪೊಗಳೆಪ್ಪೊಟ್ಟಣ ಪಶುಪತಿ 
9 ನಾಮಧೇಯನಾಸರಕ್ಕೆಲ್ಲಭಟರಿಯಾ ಪ್ರೇಮಾಲಯ 
10 ಸುತನ್ಗೆ ಸೇನ್ದ್ರಕಬಣೋಭಯದೇಶದಾ ವೀರಪುರುಷ ಸಮಕ್ಷ
11 ದೆ ಕೇಕಯ ಪಲ್ಲವರಂ ಕಾದೆರೆದು ಪೆತ್ತಜಯನಾ ವಿಜ 
12 ಅರಸನ್ಗೆ ಬಾಳ್ಗಳ್ಚು ಪಲ್ಮಡಿಉಂ ಮೂಳವಳ್ಳಿಉಂ ಕೊ
13 ಟ್ಟಾರ್ ಬಟಾರಿಕುಲದೊನಳಕದಮ್ಬನ್ಕಳ್ದೋನ್ ಮಹಾಪಾತಕನ್ 
14 ಇರ್ವ್ವರುಂ ಸಳ್ಪಙ್ಗದರ್ ವಿಜಾರಸರುಂ ಪಲ್ಮಡಿಗೆ ಕುರು
15 ಮ್ಬಿಡಿವಿಟ್ಟಾರ್ ಅದಾನಳಿವೊನ್ಗೆ ಮಹಾಪಾತಕಮ್ ಸ್ವಸ್ತಿ 
16 ಭಟ್ಟರ್ಗ್ಗೀಗಳ್ದೆ ಒಡ್ಡಲಿ ಆ ಪತ್ತೊನ್ದಿ ವಿಟ್ಟಾರಕರ

Wednesday 21 March 2018

ನಾಲಂದಾ ಹಸತೀವ ಸರ್ವನಗರೀಃ - ನಕ್ಕು ನಲಿಯುತ್ತಿದ್ದ ನಾಲಂದದ ಕಣ್ಣಾಲಿಗಳು........


ನಾಲಂದ ವಿಶ್ವವಿದ್ಯಾಲಯವು ಗುಪ್ತ ದೊರೆ ಕುಮಾರಗುಪ್ತನ ಕಾಲದಲ್ಲಿ ಸ್ಥಾಪಿತಗೊಂಡಿತೆಂದು ತಿಳಿದು ಬರುತ್ತದೆ. ನಾಲಂದಾದಲ್ಲಿ ಸಮುದ್ರಗುಪ್ತನ ಮುದ್ರೆಯು ದೊರೆತಿದ್ದರಿಂದ ಆತನ ಕಾಲದಲ್ಲಿ ಅಥವಾ ಆತನಿಗಿಂತಲೂ ಪೂರ್ವದಲ್ಲಿಯೇ ಸ್ಥಾಪನೆ ಗೊಂಡಿದ್ದಿರಬಹುದು. ಅದೇನೇ ಇರಲಿ ಇದೊಂದು ಭವ್ಯ ಭಾರತದ ಕುರುಹಂತೂ ಹೌದು.
ಒಮ್ಮೆ ಇಂದ್ರ ತನ್ನ ದೇವಲೋಕದ ಆಸ್ಥಾನದಲ್ಲಿ ಕುಳಿತಿರುವಾಗ, ದೇವತೆಗಳೆಲ್ಲಾ ಬಂದು ಇಂದ್ರನಲ್ಲಿ ಒಂದು ಆಶ್ಚರ್ಯಕರವಾದ ವಿಷಯವಿದೆ ಎಂದು ಹೇಳುತ್ತಾರೆ. ಆಗ ಇಂದ್ರ ಅದೇನೆಂದು ಕೇಳಿದಾಗ ಸ್ವರ್ಗಕ್ಕೆ ಸಮನಾದ ಪ್ರತಿಸ್ವರ್ಗ ಒಂದು ಭೂಲೋಕದಲ್ಲಿದೆ ಎಂದು ಹೇಳುತ್ತಾರೆ. ಇಂದ್ರ ಸ್ವಭಾವತಃ ಅಸೂಯಾಪರ ಆತನಿಗೆ ತನ್ನ ಲೋಕದಂತೆ ಇನ್ನೊಂದು ಇರಬಾರದು ಎನ್ನುವ ಹಠ ಮತ್ತು ಈಗಿನವರಿಗಿರುವಂತೆ "ಈಗೋ" ಹುಟ್ಟಿಕೊಳ್ಳುತ್ತದೆ. ಇಂದ್ರ ನೇರವಾಗಿ ಭೂಲೋಕಕ್ಕೆ ಬರುತ್ತಾನೆ. ಹೌದು ಆತನಿಗೆ ಎಲ್ಲೆಲ್ಲೂ ಯಜ್ಞದ ಆಹುತಿಗಳ ಪರಿಮಳ ಮೂಗಿಗೆ ಹೊಡೆಯುತ್ತದೆ. ಕಿವಿಗೆ ಸಸ್ವರವಾದ ವೇದ ಘೋಷಗಳು, ನರ್ತನ ಗೀತನ ವಾದನಾದಿಗಳು ಗಮನಕ್ಕೆ ಬರುತ್ತವೆ. ಇಂದ್ರ ಭ್ರಮಾಧೀನನಾಗುತ್ತಾನೆ. ಇದೇ ಸ್ವರ್ಗ ಎಂದು ಅದೇ ಸಮಯಕ್ಕೆ ಆತನಿಗೆ ಎದುರಾಗಿ ಬ್ರಾಹ್ಮಣ ವಟುಗಳು ಮಂತ್ರಗಳನ್ನು ಉರು ಹೊಡೆದುಕೊಳ್ಳುತ್ತಾ ಬರುತ್ತಿರುವುದು ಕಾಣಿಸುತ್ತದೆ ಅವರಲ್ಲಿಯೇ ಕೇಳುತ್ತಾನೆ. ಇದು ಯಾವ ನಗರ ? ಈ ಭವನ ಏನು ? ಎಂದು. ವಟುಗಳು ಹೇಳುತ್ತಾರೆ ಇದು ಭೂ ಲೋಕದ ಸ್ವರ್ಗ. ಇಲ್ಲಿರುವವರೆಲ್ಲಾ ಇಂದ್ರರೇ. ಎಂದು.
ಹೌದು ಭೂಲೋಕದ ಸ್ವರ್ಗವಾಗಿದ್ದು ನಮಗೀಗ ಕಾಣಸಿಗದಿರುವುದು ಬೇರಾವುದೂ ಅಲ್ಲ ಅದು ನಲಂದಾ !! ನಲಂದಾ ವಿಶ್ವವಿದ್ಯಾಲಯ ನಾವಂದು ಕೊಂಡತೇ ಕೇವಲ ಬೌದ್ಧ ಧರ್ಮದ ಅಧ್ಯಯನ ಕೇಂದ್ರವಾಗಿರಲಿಲ್ಲ. ಅದು ವಿಶ್ವದ ಬೇರೆ ಬೇರೆ ಪ್ರದೇಶದ ಜನರನ್ನು ತನ್ನೆಡೆಗೆ ಸೆಳೆದ ಅದ್ಭುತ ಪ್ರಪಂಚವಾಗಿತ್ತು. ಇಲ್ಲಿ ಪ್ರವೇಶ ಪಡೆಯಬೇಕಿದ್ದರೆ ಈಗಿನ ನಡಿಯಾ ಜಿಲ್ಲೆಯ ನವದ್ವೀಪದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗ ಬೇಕಿತ್ತು. ಈ ನವದ್ವೀಪ ಇಂದಿಗೂ ಪ್ರಾಚೀನ ನಗರವೊಂದಕ್ಕೆ ಹೋದ ಅನುಭವ ಕೊಡುತ್ತದೆ. ಗಂಗಾ ಮತ್ತು ಪದ್ಮಾ ಎನ್ನುವ (ಗಂಗೆಯ ಕವಲು ನದಿ ಪದ್ಮಾ) ಒಂದೆಡೆ ಸೇರುವ ಪ್ರದೇಶ(ಇಲ್ಲಿಯೇ ಕೆಲವುವರ್ಷ ನಾನು ಇದ್ದೆ). ಈ ಗಂಗೆಯನ್ನು ದಾಟಿದರೆ ಭಕ್ತಿ ಪಂಥದ ಹರಿಕಾರ ಚೈತನ್ಯ ಮಹಾಪ್ರಭು ಜನಿಸಿದ ಊರು ಸಿಗುತ್ತದೆ. ಜೀವ, ರೂಪ ಮತ್ತು ಸನಾತನ ಗೋಸ್ವಾಮಿಯರ ಜನ್ಮ ಸ್ಥಳವದು. ಅಂತಹ ಪ್ರದೇಶದಲ್ಲಿ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕಿತ್ತು. ಅಂತಹ ನಲಂದಾ ಕುರಿತಾದ ಒಂದು ಶಾಸನದಲ್ಲಿ ವರ್ಣನೆ ಹೀಗೆ ಬರುತ್ತದೆ :
ಬಿಳಿಯ ಧೋತ್ರವನ್ನು ಧರಿಸಿ ದೇಹವನ್ನು ಮುಚ್ಚುವಂತೆ ಉತ್ತರೀಯದೊಂದಿಗೆ ಶೋಭಿಸುತ್ತಾ ಕೈಯಲ್ಲಿ ಧರ್ಭೆಯ ಚಾಪೆಯನ್ನು ಹಿಡಿದು ತಲೆಯಲ್ಲಿ ಗೋಪಾದದಷ್ಟಿರುವ ಶಿಖೆಯನ್ನು ಧರಿಸಿ, ವೇದಾದಿಗಳ ಪದಕ್ರಮ, ಘನ ಪಾಠಗಳ ಉದ್ಘೋಷದೊಂದಿಗೆ ನಡೆದು ಬರುತ್ತಿರುವ ವಿದ್ಯಾರ್ಥಿಗಳ ಸಮೂಹವನ್ನು ನೋಡುತ್ತಿದ್ದರೆ ಅದು ಕೈಲಾಸದಲ್ಲಿರುವ ಶಿವನ ಮಂದಿರದಲ್ಲಿ ಸಾಕ್ಷಾತ್ ಶಿವನನ್ನೇ ಕಂಡಂತಹ ಭಾವ ಮನಸ್ಸಿನಲ್ಲಿ ಮೂಡುತ್ತಿತ್ತು. ಶುಭ್ರವಾದ ಸ್ವಚ್ಚವಾದ ಮನಸ್ಸು ಮತ್ತು ಕಲಿಕೆಯನ್ನು ನೋಡುತ್ತಿದ್ದರೆ ಇಡೀ ನಾಲಂದಾ ನಗರಿಯೇ ಮಂದ ಹಾಸದೊಂದಿಗೆ ವಿಜ್ರಂಭಿಸುತ್ತಿರುವಂತಿತ್ತು ಅಂತಹ ಪ್ರದೇಶಕ್ಕೆ ಎಲ್ಲಿಯಾದರೂ ಶತ್ರು ಸೈನ್ಯ ನುಗ್ಗಿದರೆ ಎದುರಿಸಬಲ್ಲ ಧನುರ್ವೇದದೊಂದಿಗೆ ಸಾಮರ್ಥ್ಯದ ತರಬೇತಿಯೂ ನಡೆಯುತ್ತಿತ್ತು. ಗೋಡೆಗಳಮೇಲೆ ಅಲ್ಲಲ್ಲಿ ಚಿತ್ತಾರಗಳ ಆಕರ್ಷಕ ಜೋಡಣೆ ಇತ್ತು. ಎಲ್ಲಾ ವಿಧದ ವಿದ್ವಜ್ಜನರ ಸಂದೋಹವೇ ಅಲ್ಲಿತ್ತು. ಒಂದೆಡೆ ದೇವವಾಣಿಯ ಕಲರವವಾದರೆ ಇನ್ನೊಂದೆಡೆ ಕಲಾವಿದರ ಕಲಾ ಪ್ರಕಾರಗಳ ಪ್ರದರ್ಶನ, ಛಾತ್ರ ಸಮೂಹಗಳ ದಂಡು ನೋಡಿದರೆ ಛಾತ್ರಾಲಯವು ದೇವಾಲಯ ಎನ್ನುವಂತಿತ್ತು. ಇದು ಬೇರೆಲ್ಲೂ ಅಲ್ಲ ನಮ್ಮ ನೆಲದಲ್ಲಿನ ಪ್ರಾಚೀನ ವಿದ್ಯಾಪೀಠ ನಾಲಂದಾದ ವರ್ಣನೆ. ಇದು ಯಶೋವರ್ಮದೇವನು ಹಾಕಿಸಿದ ನಾಲಂದಾದಲ್ಲಿರುವ ಶಿಲಾಶಾಸನದಲ್ಲಿರುವ ಸಾಲುಗಳು.
ಯಾಸಾವೂರ್ಜಿತ ವೈರಿ ಭೂ ಪ್ರವಿಗಲದ್ದಾನಾಂಬುಪಾನೋಲ್ಲಸನ್ಮಾದ್ಯೋದ್ಭೃಂಗಕರೀಂದ್ರಕುಂಭದಲನಪ್ರಾಪ್ತಶ್ರಿಯಾಂ ಭೂಭುಜಾಮ್ |
ನಾಲಂದಾ ಹಸತೀವ ಸರ್ವನಗರೀಃ ಶುಭ್ರಾಭ್ರಗೌರಸ್ಫುರಚ್ಚೈತ್ಯಾಂಶುಪ್ರಕಾರೈಃ ಸದಾಗಮಕಲಾವಿಖ್ಯಾತ ವಿದ್ವಜ್ಜನಾ || ||
ಯಸ್ಯಾಮಂಬುಧರಾ ವಲೇಹಿ ಶಿಖರ ಶ್ರೇಣೀ ವಿಹಾರವಲೀ ಮಾಲೇವೋರ್ಧ್ವವಿರಾಜಿನೀ ವಿರಚಿತಾ ಛಾತ್ರಾ ಮನೋಜ್ಞಾ ಭುವಃ |

ನಾನಾರತ್ನ ಮಯೂಖಜಾಲಖಚಿತ ಪ್ರಾಸಾದ ದೇವಾಲಯಾ ಸದ್ವಿದ್ಯಾಧರಸಂಘರಮ್ಯವಸತಿರ್ಧತ್ತೇ ಸುಮೇರೋಃ ಶ್ರಿಯಮ್ || ||
ಇಂತಹ ನಾಲಂದ ೧೦ನೇ ಶತಮಾನದ ತರುವಾಯ ನಾಶಹೊಂದಿತು. ಅದಕ್ಕೆ ಒಂದು ಬಲವಾದ ಕಾರಣವಿದೆ. ಭುಕ್ತಿಯಾರ ಖಿಲ್ಜಿ ಎಂಬ ಓರ್ವ ಮತಾಂಧರಾಜ ಆತ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ತಾನು ಸಾಕಿಕೊಂಡಿದ್ದ 400 ಕ್ಕೂ ಅಧಿಕ ವೈದ್ಯರಿಗೆ ಈತನ ರೋಗ ಪತ್ತೆ ಹಚ್ಚಿ ಗುಣಪಡಿಸಲಾಗಲಿಲ್ಲವಂತೆ. ಕೊನೆಗೆ ಯಾರೋ ಅವನಿಗೆ ನಲಂದಾ ವಿಶ್ವವಿದ್ಯಾಲಯದ ಕುಲಪತಿಗಳಾದ ಶೀಲಭದ್ರ ಎನ್ನುವವರ ಹೆಸರನ್ನು ಸೂಚಿಸುತ್ತಾರೆ. ಅಲ್ಲಿ ಹೋಗಿ ಗುಣ ಪಡಿಸಿಕೋ ಎಂದು. ಆತನಿಗಾದರೂ ಬೇರೆ ಧರ್ಮೀಯರಿಂದ ಚಿಕಿತ್ಸೆ ಪಡೆದುಕೊಳ್ಲಲು ಮನಸ್ಸಿರಲಿಲ್ಲ. ಹಾಗೆಯೇ ನಿರಾಕರಿಸುತ್ತಾನೆ. ಆದರೆ ದಿನದಿಂದ ದಿನಕ್ಕೆ ರೋಗದಿಂದ ತನ್ನ ದೇಹ ಕ್ಷೀಣಿಸುತ್ತಾ ಹೋದಾಗ ಅನಿವಾರ್ಯವಾಗಿ ಭದ್ರ ಅವರನ್ನು ಕರೆಸುತ್ತಾನೆ. ಆದರೆ ಅಲ್ಲಿಯೂ ಅವರೊಡನೆ ಸಹ ತನ್ನದೊಂದು ಷರತ್ತು ಮುಂದಿಡುತ್ತಾನೆ, ಅದೇನೆಂದರೆ ಯಾವುದೇ ರೀತಿಯ ಔಷಧಿಗಳಿಲ್ಲದೆ ಆತನನ್ನು ಗುಣಪಡಿಸಬೇಕೆಂದು. ಅದಕ್ಕೆ ಶೀಲಭದ್ರ ಸರಿ ಎಂದು ನಾಳೆ ಬರುವುದಾಗಿ ಹೇಳಿ ಹೊರಡುತ್ತಾರೆ. ಮರುದಿನ ಶೀಲಭದ್ರ ಅವರು ಕೈಯಲ್ಲಿ ಒಂದು ಖುರಾನ್ ಹಿಡಿದುಕೊಂಡು ಬಂದು ಅದನ್ನು ಭಕ್ತಿಯಾರ್ ಖಿಲ್ಜಿಯ ಕೈಗಿಟ್ಟು ದಿನಾ ಪುಟದಿಂದ ಪುಟದವರೆಗೆ ಓದು ಎಂದು ಹೇಳುತ್ತಾರೆ. ಆಶ್ಚರ್ಯವೆಂದರೆ ಕೆಲವೆ ದಿನಗಳಲ್ಲಿ ಖಿಲ್ಜಿ ಗುಣಮುಖನಾಗುತ್ತಾನೆ. ಆದರೆ ಓರ್ವ ಅನ್ಯಧರ್ಮದವಿನಿಂದ ಗುಣಮುಖನಾದೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಆತನಿಂದ ಸಾಧ್ಯವಾಗಲಿಲ್ಲ. ಕೂಡಲೇ ತನ್ನ ಸೈನ್ಯವನ್ನು ಕರೆದು ನಲಂದಾದಲ್ಲಿ ಖುರಾನ್ ಪುಸ್ತಕಗಳಿಗಾಗಿ ಹುಡುಕುವಂತೆ ಹೇಳುತ್ತಾನೆ, ಒಂದು ವೇಳೆ ಅದು ಸಿಗದೇ ಹೋದಲ್ಲಿ ಇಡೀ ವಿಶ್ವವಿಶ್ವವಿದ್ಯಾಲಯವನ್ನೇ ಸುಟ್ಟು ಭಸ್ಮ ಮಾಡುವಂತೆ ಆಜ್ಞೆ ಮಾಡುತ್ತಾನೆ. ಮುಂದೆ ನಡೆದದ್ದು ಕರಾಳ ಇತಿಹಾಸ. ಒಂಭತ್ತು ಮಹಡಿಗಳಲ್ಲಿ ಹರಡಿಕೊಂಡಿದ್ದ ಗ್ರಂಥಾಲಯ ಹೊತ್ತಿ ಉರಿಯುತ್ತದೆ. ಅದೆಷ್ಟೋ ಅಮೂಲ್ಯ ಗ್ರಂಥಗಳು ನಮ್ಮ ಕಣ್ಣಿನಿಂದ ಮರೆಯಾಗುತ್ತವೆ. ಭಾರತ ಮಾತ್ರವಲ್ಲ ಜಗತ್ತಿನ ಭವ್ಯ ಇತಿಹಾಸವನ್ನೇ ಕೊನೆಗಾಣಿಸುತ್ತಾನೆ ಪಾಪಿ ಮತಾಂಧ. ಆದರೆ ಭಕ್ತಿಯಾರ್ ಖಿಲ್ಜಿಗೆ ಶೀಲಭದ್ರ ಕೊಟ್ಟ ಚಿಕಿತ್ಸೆ ಏನು ಅಂತ ಉತ್ಸುಕರಾಗಿರಬಹುದು. ಒಂದು ಖುರಾನ್ ಅವನ ಆರೋಗ್ಯವನ್ನು ಸುಧಾರಿಸಿತೇ? ಇಲ್ಲ. ಆತ ಆಯುರ್ವೇದದ ಕೆಲ ಔಷಧಿಗಳ ಲೇಪನವನ್ನು ಖುರಾನಿನ ಪುಟಗಳ ಮೇಲೆ ಲೇಪನ ಮಾಡಿದ್ದ . ಖುರಾನ್ ಓದುವಾಗ ದ್ರವ್ಯಗಳ ವಾಸನೆ ಮೂಗಿನ ಮುಖಾಂತರ ಹಾಗೂ ಪ್ರತಿಬಾರಿ ಪುಟ ತಿರುಗಿಸುವಾಗ ಆತ ನಾಲಿಗೆಗೆ ಎಂಜಲಿಗೆಂದು ಬೆರಳು ತಾಗಿಸಿ ಪುಟ ತಿರುಗಿಸುತ್ತಿದ್ದಾಗ ಬಾಯಿಯಮುಖಾಂತರ ಆತನ ದೇಹ ಸೇರುತಿತ್ತು. ಭಕ್ತಿಯಾರ್ ಖಿಲ್ಜಿ ಔಷಧವಿಲ್ಲದೇ ಗುಣಮುಖನಾಗಿದ್ದ. ಆದರೆ ಗುಣಪಡಿಸಿದ ಕಾರಣಕ್ಕೆ ಪ್ರತ್ಯುಪಕಾರ ಮಾಡಬೇಕಿತ್ತಲ್ಲ ಅದನ್ನೂ ಮಾಡಿಬಿಟ್ಟ