Search This Blog

Saturday 30 June 2018

ಸಲಿಲಂ ವರ್ಷಯ ವರ್ಷಯ ವರ್ಷಯ... ಎನ್ನುವ ಗುರುಗುಹ ನುತ ........



ವೇಂಕಟಮಖಿ ಈ ಹೆಸರು ಸಾಮಾನ್ಯವಾಗಿ ಸಂಗೀತಕ್ಷೇತ್ರದಲ್ಲಿ ಅದರಲ್ಲೂ ಮುಖ್ಯವಾಗಿ ಕರ್ನಾಟಕೀ ಸಂಗೀತ ಪ್ರಿಯರಿಗೆ ಸಾಮಾನ್ಯವಾಗಿ ಗೊತ್ತಿರುತ್ತದೆ. ಈ ವೇಂಕಟಮುಖಿ ವಂಶದ ವೇಂಕಟವೈದ್ಯನಾಥ ದೀಕ್ಷಿತರು ಪ್ರಮುಖರು. ಅವರ ಮಗ ರಾಮಸ್ವಾಮಿ ದೀಕ್ಷಿತರು. ಇವರೆಲ್ಲರೂ ಸಂಗೀತವನ್ನೇ ಉಸಿರಾಗಿ ಹಿಡಿದುಕೊಂಡು ಬಂದವರಾಗಿದ್ದರು. ೧೭೭೫ನೇ ಇಸವಿಯಲ್ಲಿ ಈ ವಂಶದಲ್ಲಿ ಅನರ್ಘ್ಯ ರತ್ನವೊಂದರ ಜನನವಾಗುತ್ತದೆ. ಸಾಕ್ಷಾತ್ ಸರಸ್ವತಿಯಂತಿದ್ದ ಸುಬ್ಬಲಕ್ಷ್ಮಿ ಅಮ್ಮಾಳ್ ಅವರು ರಾಮಸ್ವಾಮಿ ದೀಕ್ಷಿತರ ಮಡದಿ ಇವರ ಪುತ್ರನೇ ಈಗ ನಾನು ಹೇಳ ಹೊರಟಿರುವ ಮುತ್ತುಸ್ವಾಮಿ ದೀಕ್ಷಿತರು. ಹೌದು ವಾತಾಪಿ ಗಣಪತಿಂ ಭಜೇ ಹಂ ಎನ್ನುವ ಹಾಡನ್ನು ಕೇಳದವರ್ಯಾರು. ? ಅಷ್ಟರ ಮಟ್ಟಿಗೆ ಅವರು ಪ್ರಸಿದ್ಧರಾಗಿದ್ದರು.
ರಾಮಸ್ವಾಮಿ ದೀಕ್ಷಿತರ ಊರು ತಿರುವಾರೂರು. ರಾಮ ಸ್ವಾಮಿ ದೀಕ್ಷೀತರು ತಿರುವಾವೂರಿನಿಂದ ಮನಾಲಿಗೆ ತಮ್ಮ ವಾಸ್ತವ್ಯ ಬದಲಿಸುತ್ತಾರೆ. ಅಲ್ಲಿಂದ ಚಿದಂಬರನಾಥಯೋಗಿಗಳೆಂಬವರು ಬಾಲಕ ಮುತ್ತು ಸ್ವಾಮಿಯನ್ನು ಕಾಶಿಗೆ ಕರೆದುಕೊಂಡು ಹೋಗುತ್ತಾರೆ. ಕಾಶಿಯಲ್ಲಿ ಆರುವರ್ಷ ಉಳಿಯುತ್ತಾರೆ ಅಲ್ಲಿ ಶ್ರೀವಿದ್ಯಾ ಉಪಾಸನೆಯಲ್ಲದೇ ವೇದ ಮತ್ತು ವೇದಾಂಗದೊಂದಿಗೆ ಯೋಗಾಭ್ಯಾಸ ಮಾಡುತ್ತಾರೆ. ಹಾಗೂ ಇವಿಷ್ಟಲ್ಲದೆ ಹಿಂದುಸ್ಥಾನಿ ಸಂಗೀತದ ಪರಿಚಯವೂ ಆಗುತ್ತದೆ. ಹಲವು ಹಿಂದುಸ್ಥಾನಿ ಸಂಗೀತ ರಾಗಗಳನ್ನು ಕರ್ನಾಟಕ ಸಂಗೀತದ ಚೌಕಟ್ಟಿನೊಳಗೆ ಸೇರಿಸಿ ಕೃತಿಗಳ ರಚನೆ ಮಾಡಿದರು. ಶ್ರೀರಂಗಪುರವಿಹಾರ, ಅಖಿಲಾಂಡೇಶ್ವರಿಯೇ ಮೊದಲಾದ ರಚನೆ ಇವರದ್ದೇ.
ಚಿದಂಬರನಾಥ ಯೋಗಿಯವರಿ ನಿರ್ಯಾಣವಾದ ನಂತರ ತಮ್ಮ ಸ್ವಕ್ಷೇತ್ರ ತಿರುತ್ತಣಿ ಎನ್ನುವಲ್ಲಿಗೆ ಹೋಗಿ ಅಲ್ಲಿ ಸುಬ್ರಹ್ಮಣ್ಯನ ಸೇವೆಯಲ್ಲಿ ತೊಡಗುತ್ತಾರೆ. ಒಂದು ದಿನ ಸುಬ್ರಹ್ಮಣ್ಯನೇ ವೃದ್ಧನ ರೂಪದಲ್ಲಿ ಬಂದು ದೀಕ್ಷಿತರ ಬಾಯಿಗೆ ಕಲ್ಲು ಸಕ್ಕರೆ ಹಾಕುತ್ತಾನೆ. ಅಲ್ಲಿಂದ ಸಂಗೀತದ ಕೃತಿಗಳ ರಚನೆಗೆ ತೊಡಗಿಕೊಳ್ಳುತ್ತಾರೆ. ಮಾಯಾಮಾಳವ ರಾಗದ "ಶ್ರೀನಾಥಾದಿಗುರುಗುಹೋಜಯತಿ" ಎನ್ನುವ ಕೃತಿಯನ್ನು ಮೊತ್ತಮೊದಲಿಗೆ ರಚಿಸುತ್ತಾರೆ. ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಸಂಗೀತದ ಕೃತಿಗಳನ್ನು ಸಂಸ್ಕೃತದಲ್ಲಿ ರಚಿಸಿದ ಹೆಗ್ಗಳಿಕೆ ದೀಕ್ಷಿತರಿಗೆ ಸಲ್ಲುತ್ತಾದೆ. ಈ ವಾಗ್ಗೇಯಕಾರರು ಸುಮಾರು ೩೦೦ರಷ್ಟು ಸಂಸ್ಕೃತ ಕೃತಿಗಳನ್ನು ನಮಗೆ ನೀಡಿದ್ದಾರೆ. ಐದು ರಾಗಮಾಲಿಕೆ. ಒಂದು ಪದವರ್ಣ ಮತ್ತು ಒಂದು ದರು ರಚಿಸಿದ ದೀಕ್ಷಿತರು ಮಣಿಪ್ರವಾಳದ ಸಾಹಿತ್ಯ ಕೃತಿಗಳನ್ನೂ ರಚಿಸಿದ್ದಾರೆ. ಇವರ ಸಂಸ್ಕೃತ ವಾಗ್ಮಯವೇ ನಮ್ಮನ್ನು ಯಾವುದೋ ಲೋಕಕ್ಕೆ ಕರೆದೊಯ್ಯುತ್ತದೆ.
ಇವರು ತಮ್ಮ ಗುರುಗಳ ಆಣತಿಯಂತೆ ಕಾಶಿಯಲ್ಲಿ ಗಂಗೆಯಲ್ಲಿ ಮಿಂದು ಪ್ರಾರ್ಥಿಸಿದಾಗ ಇವರ ಬೊಗಸೆಯ ನೀರಿನಲ್ಲಿ ವೀಣೆಯ ದರ್ಶನವಾಗಿತ್ತಂತೆ. ನಿಷ್ಣಾತ ವೈಣಿಕರಾದ ದೀಕ್ಷಿತರು ಪಂಚದಶ ಗಮಕಗಳನ್ನು ಪ್ರಯೋಗಮಾಡಿ ತೋರಿಸಿದ್ದರು. ತಾವು ಈ ’ಗುರುಗುಹ’ನ ದಾಸ, ಅವನ ಕಾಲಿನ ಕಸವೆಂಬ ಭಾವನೆಯಿಂದಲೇ ತಮ್ಮ ಮೊಟ್ಟ ಮೊದಲ ಕೃತಿ "ಶ್ರೀನಾಥಾದಿ ಗುರುಗುಹೋ ಜಯತಿ ಜಯತಿ.." ಎಂದು ಮಾಯಾ ಮಾಳವಗೌಳ ರಾಗದಲ್ಲಿ ರಚಿಸಿದರು. ಇವರ ಕೃತಿಗಳಲ್ಲಿ ಅವರು ಅದರ ರಚನೆಯ ರಾಗದ ಹೆಸರನ್ನು ಅತ್ಯಂತ ಅರ್ಥಪೂರ್ಣವಾಗಿ ಹೊಂದಿಸಿರುವುದೂ ಕೂಡ ಅವರ ವಿಶೇಷವಾಗಿ ಕಾಣಿಸುತ್ತದೆ. ದೀಕ್ಷಿತರು ಅನೇಕ ಚಿಕ್ಕ ಚಿಕ್ಕ ಕೃತಿಗಳನ್ನು ಸಮಷ್ಠಿ ಚರಣಗಳನ್ನೊಳಗೊಂಡಂತೆ ಅದ್ಭುತವಾಗಿ ರಚಿಸಿದ್ದಾರೆ. ದೀಕ್ಷಿತರು ತಮ್ಮ ಕ್ಷೇತ್ರ ಕೃತಿಗಳಲ್ಲಿ ಆಯಾ ಕ್ಷೇತ್ರದ ವಿವರಣೆ, ವಿಶೇಷತೆಯನ್ನು ಅಳವಡಿಸಿದ್ದಾರೆ.
ದೀಕ್ಷಿತರು ಶ್ರೀ ಶಂಕರಾಚಾರ್ಯರ ವೇದಾಂತ ಸೂತ್ರಗಳಿಗೆ ಅನುಗುಣವಾಗಿ ಇಡೀ ವಿಶ್ವವು ಮಾಯೆಯಿಂದ ಸೃಷ್ಟಿಸಲ್ಪಟ್ಟಿದೆ, ಪರಮಾತ್ಮನ ಸಾಕ್ಷಾತ್ಕಾರ ನಮ್ಮಲ್ಲಿಯೇ ನಮಗೆ ಆಗಬೇಕಾದರೆ, ನಾವು ಮಾಯೆಯನ್ನು ಜಯಿಸಬೇಕೆಂದು ತೋರಿಸಿದವರು. ತಮ್ಮದೇ ರಚನೆ "ಮಾಯೆ ತ್ವಂ ಯಾಹಿ, ಮಾಂ ಬಾದಿತುಂ ಕಾಹಿ".... ಎಂಬ ಕೃತಿಯಲ್ಲಿ ಎಲೈ ಮಾಯೆಯೇ ನನ್ನನ್ನು ತ್ಯಜಿಸು, ಬಾಧಿಸಬೇಡವೆನ್ನುತ್ತಾರೆ. ಇವರ ಇನ್ನೊಂದು ವಿಶೇಷವೆಂದರೆ ಎಲ್ಲಾ ೭೨ ಮೇಳಕರ್ತ ರಾಗಗಳಲ್ಲೂ ಕೃತಿಗಳನ್ನು ರಚಿಸಿರುವುದು. ದೀಕ್ಷೀತರ ಈ ಕೃತಿಯಂತೂ ನನಗೆ ಹುಚ್ಚು ಹಿಡಿಸಿದೆ. ಸಾಹಿತ್ಯ ಮತ್ತು ಶೈಲಿ ಅತ್ಯಮೋಘ.
ಇದರ ರಾಗ : ಅಮೃತವರ್ಷಿಣಿ; ಆದಿತಾಳದಲ್ಲಿದೆ.
ಆನಂದಾಮೃತ ಕರ್ಷಿಣಿ.. ಅಮೃತ ವರ್ಷಿಣಿ....
ಹರಾದಿ ಪೂಜಿತೇ ಶಿವೇ ಭವಾನಿ.......||
ಶ್ರೀನಂದಾದಿ ಸಂರಕ್ಷಿಣಿ...... ಶ್ರೀ ಗುರುಗುಹ ಜನನಿ ಚಿದ್ರೂಪಿಣಿ...
ಸಾನಂದ ಹೃದಯ ನಿಲಯೇ ಸದಯೇ ಸತ್ಯ ಸ್ಸುವೃಷ್ಟಿ ಹೇತವೇ ತ್ವಾಂ.....
ಸಂತತಂ ಚಿಂತಯೇ ಅಮೃತೇಶ್ವರಿ......
ಸಲಿಲಂ ವರ್ಷಯ ವರ್ಷಯ ವರ್ಷಯ............ ||
ತಮ್ಮ ಶಿಷ್ಯನೊಬ್ಬನ ಉದರ ಸಂಬಂಧಿ ನೋವನ್ನು ಪರಿಹರಿಸುವ ಸಲುವಾಗಿ, ಅವನಿಗೆ ಗುರು ಮತ್ತು ಶನಿ ಗ್ರಹಗಳನ್ನು ಬಲ ಪಡಿಸುವುದಕ್ಕೋಸ್ಕರವೇ ಅವರು ಗುರು ಮತ್ತು ಶನಿ ಗ್ರಹಗಳನ್ನು ಕುರಿತು ಕೃತಿ ರಚಿಸಿದರು. ಹೀನ ಕುಲದವನಾದ ಅವನು ನವಗ್ರಹ ಶಾಂತಿ ಮಾಡಲಾಗುವುದಿಲ್ಲವೆಂದು, ಅವನಿಗೆ ಈ ಕೃತಿಗಳನ್ನು ಸ್ವತ: ಹೇಳಿಕೊಟ್ಟರು. ಮಂತ್ರಗಳಿಂದ ಹೇಗೆ ನಾವು ದೇವತೆಗಳನ್ನು ಒಲಿಸಿಕೊಂಡು ಗ್ರಹಗಳ ಶಾಂತಿ ಮಾಡಿಕೊಳ್ಳಬಹುದೋ ಹಾಗೆ ಸಂಗೀತದಿಂದಲೂ ಸಾಧ್ಯವೆಂದು ಶಿಷ್ಯನಿಗೆ ಉಪದೇಶಿಸಿದರು. ತನ್ಮಯನಾಗಿ, ಭಕ್ತಿಯಿಂದ ಅಭ್ಯಸಿಸಿದ ಶಿಷ್ಯನ ಉದರ ಬೇನೆ ವಾಸಿಯಾಗಿತ್ತು.... ಹೀಗೆ ದೀಕ್ಷಿತರು ಮಂತ್ರಾನುಷ್ಠಾನದ ಫಲವನ್ನು ನಾದೋಪಾಸನೆಯಿಂದ ಮಾಡಬಹುದೆಂದು ಜ್ಯೋತಿಷ್ಯ ಶಾಸ್ತ್ರದ ವಿಶೇಷಗಳನ್ನೆಲ್ಲಾ ಒಟ್ಟಾಗಿಸಿ, ನವಗ್ರಹ ಕೃತಿಗಳನ್ನು ರಚಿಸಿದರು. ಈ ಕೃತಿಗಳು ಸಂಗೀತ ಲೋಕದಲ್ಲೇ ಅತ್ಯಂತ ಶ್ರೇಷ್ಟ ಕೃತಿಗಳಾಗಿವೆ.
ದೀಕ್ಷಿತರು ಎಟ್ಟಿಯಾಪುರದಲ್ಲಿದ್ದಾಗ ಆಶ್ವಯುಜಮಾಸದ ದೀಪವಾಳಿಯ ಹಿಂದಿನ ದಿನ ನರಕ ಚತುರ್ದಶಿಯ ದಿನ ಕಾಶಿಯ ಅನ್ನಪೂರಣೇಶ್ವರಿಯ ಸ್ವರೂಪವನ್ನು ಕಾಣುತ್ತಾರೆ. ತಮ್ಮ ಅಂತಿಮ ಕಾಲ ಬಂತೆನ್ನುವುದು ಅವರ ಮನಸ್ಸಿಗೆ ಗೋಚರವಾಗಿ ತಮ್ಮ ಶಿಷ್ಯರಲ್ಲಿ "ಮೀನಾಕ್ಷಿ ಮೇ ಮುದಂ ದೇಹಿ" ಎನ್ನುವ ಕೃತಿಯ ಅನುಪಲ್ಲವಿಯ ಭಾಗವಾದ "ಮೀನಲೋಚನಿ ಪಾಶಮೋಚನೀ" ಎನ್ನುವ ಭಾಗವನ್ನು ಹೇಳುತ್ತಿರುವಾಗಲೇ ಜೀವನ್ಮುಕ್ತರಾದರು.
ದೀಕ್ಷಿತರ ಈ ರಚನೆ ಮೊದಲು ಎಂ ಎಲ್ ವಸಂತಕುಮಾರಿಯವರ ಕಂಠದಲ್ಲಿ. ಆ ನಂತರ ಈ ಗಾಯಕರು. ಶ್ರೀ ವಲ್ಸನ್ ಜೆ ಮೆನನ್ ರವರ ಕಂಠದಲ್ಲಿ. ನನಗೆ ತುಂಬಾ ಇಷ್ಟವಾಯಿತು.
#ಶಿಲೆಗಳಲ್ಲಡಗಿದ_ಸತ್ಯ

ಕಪ್ಪೆಯ ಸಂಗೀತವೂ ಮತ್ತು ಜಗತ್ತು.............

ಆಗ ಅಂದರೆ ನನ್ನ ನನ್ನ ಬಾಲ್ಯದಲ್ಲಿ ನಮ್ಮ ಹಳ್ಳಿಗೆ ವಿದ್ಯುತ್ ಬರದೇ ಇದ್ದ ಕಾಲ. ಸಂಜೆ ಸಮಯದಲ್ಲಿ ಎಲ್ಲರ ಮನೆಯಲ್ಲೂ ದೇವರೆದುರು ದೀಪಬೆಳಗಿಸಿ ಭಜನೆ ಮಾಡುತ್ತಿದ್ದಕಾಲ. ಹಣತೆಗಳ ದೀಪ, ಸೀಮೆ ಎಣ್ಣೆ ಲಾಟೀನುಗಳ ಯುಗ ಅದು. ಬೇಸಿಗೆಯಲ್ಲಿ ರಾತ್ರಿಯಲ್ಲಿ ನೀರವ ಮೌನ ಆವರಿಸಿ ಬಿಡುತ್ತಿತ್ತು. ಜೂನ್ ತಿಂಗಳ ಆರಂಭ ಬಿರು ಬಿಸಿಲಿನಿಂದ ಮಳೆಯ ಸೂಚನೆ ಕೊಡುತ್ತಿದ್ದ ಕಾಲ. ಬೇಸಿಗೆಯಲ್ಲಿ ರಾತ್ರಿಯಲ್ಲಿ ಕಗ್ಗತ್ತಲಿನ ನೀರವ ಮೌನವನ್ನು ಸಹಿಸಿದ ನಮಗೆ ಮಳೆಗಾಲದಲ್ಲಿ ಹಂಚಿನಿಂದ ನೀರು ಕೆಳಕ್ಕೆ ಬಿದ್ದ ಶಬ್ದ ಒಂದಾದರೆ ಮಳೆನಿಂತ ತಕ್ಷಣ ಕಪ್ಪೆಗಳ ಗಾಯನ ಕೇಳುತ್ತಿತ್ತು ಜೊತೆಗೆ ನೀರು ಕೋಳಿಗಳೂ ದನಿಗೂಡಿಸುತ್ತಿದ್ದವು. ಕಪ್ಪೆಗಳಲ್ಲೂ ಬೇರೆ ಬೇರೆ ಧಾಟಿ ಮತ್ತು ಸ್ವರವಿದೆ. ಚಿಕ್ಕ ಚಿಕ್ಕ ಕಪ್ಪೆಗಳ ಸ್ವರವೇ ಕೇಳುತ್ತಿರಲಿಲ್ಲ. ಅದೊಂದು ಅದ್ಭುತ ರೋಚಕ ಮತ್ತು ಖುಷಿಕೊಡುವ ಪ್ರಪಂಚ. ಕಪ್ಪೆ ಮತ್ತು ನೀರುಕೋಳಿಗಳಲ್ಲದೇ ಜೀರುಂಡೆಗಳ ಕೂಗಾಟವೂ ಇರುತ್ತಿತ್ತು. ಈಗ ಊರಿಗೆ ಹೋದರೆ ಇದ್ಯಾವುದೂ ಸಿಗುತ್ತಿಲ್ಲ. ಆದರೆ ಯಥಾ ಸ್ಥಿತಿಯನ್ನು ಕಾಯ್ದುಕೊಂಡದ್ದು ಜಾವದ ಹಕ್ಕಿ. ಈ ಹಕ್ಕಿ ಪ್ರತಿ ಗಂಟೆಗೊಮ್ಮೆ ಕೂಗುತ್ತಾ ಹೋಗುತ್ತದೆ. ರಾತ್ರಿ ಇಡಿ ಈ ಹಕ್ಕಿ ಕೂಗುವುದು ಕೇಳಿಸುತ್ತದೆ ರಾತ್ರಿ 9.15ಕ್ಕೆ ಒಮ್ಮೆ ಕೂಗಿದರೆ ಪುನಃ 10.15ಕ್ಕೆ ಕೂಗುತ್ತದೆ. ಆಶ್ಚರ್ಯವೆಂದರೆ ಜನನಿಬಿಡ ಬೆಂಗಳೂರಿನಲ್ಲಿಯೂ ಈ ಹಕ್ಕಿ ಕೂಗುತ್ತದೆ. ಆದರೆ ಇಲ್ಲಿ ನನ್ನ ಗಮನಕ್ಕೆ ಬಂದದ್ದು ಬೆಳಗ್ಗೆ ಅದರ ಕೂಗು ಮಾತ್ರ. ಬೆಳಗ್ಗೆ ನಾಲ್ಕು ಗಂಟೆಗೇ ಏಳುವುದರಿಂದ ೪.೧೫ಕ್ಕೆ ದಿನಾ ಕೂಗುತ್ತದೆ ೫.೧೫ಕ್ಕೆ ಪುನಃ ಕೂಗುತ್ತದೆ ಹೀಗೆ ಅದರ ಆ ದಿನದ ಕೊನೆಯ ಕೂಗು ಕೇಳಿಸುತ್ತದೆ. ಕಪ್ಪೆಗಳ ಕೂಗು ಇಲ್ಲವೇ ಇಲ್ಲ. ಇವೆಲ್ಲ ಬದಿಗಿಟ್ಟು ಮುಖ್ಯ ವಿಷಯಕ್ಕೆ ಬರುತ್ತೇನೆ.
ಒಂದಾನೊಂದು ಕಾಲದಲ್ಲಿ ವಶಿಷ್ಟ ಮಹರ್ಷಿ ಮಳೆ ಬರಬೇಕು ಎನ್ನುವ ಬಯಕೆಯಿಂದ ಪರ್ಜನ್ಯ ದೇವತೆಯನ್ನು ಪ್ರಾರ್ಥಿಸುತ್ತಾನೆ. ಈ ಋಷಿಯು ಪ್ರಾರ್ಥಿಸುವುದನ್ನು ಮಂಡೂಕಗಳು (ಕಪ್ಪೆ) ಅನುಮೋದಿಸುತ್ತವೆ. ಆಗ ತನ್ನ ಪ್ರಾರ್ಥನೆಯನ್ನು ಅನುಮೋದಿಸುತ್ತಿದ್ದ ಕಪ್ಪೆಗಳನ್ನು ಋಷಿಯು ಗಮನಿಸಿ ಆ ಮಂಡೂಕಗಳನ್ನು ಪ್ರಾರ್ಥಿಸುತ್ತಾನೆ.
ಸಂವತ್ಸರಂ ಶಶಯಾನಾ ಬ್ರಾಹ್ಮಣಾ ವ್ರತಚಾರಿಣಃ |
ವಾತಂ ಪರ್ಜನ್ಯ ಜಿನ್ವಿತಾಂ ಪ್ರ ಮಂಡೂಕಾ ಅವಾದಿಷುಃ ||
ಒಂದು ಸಂವತ್ಸರದ ಸತ್ರವನ್ನಾಚರಿಸುವ ಬ್ರಾಹ್ಮಣರಂತೆ ಒಂದು ಸಂವತ್ಸರದ ಪರ್ಯಂತ ಅಂದರೆ ಶರತ್ಕಾಲದಿಂದ ವರ್ಷಕಾಲದವರೆಗೆ ಮೌನದಿಂದ ತಪಸ್ಸನಾಚರಿಸುತ್ತಿದ್ದವೋ ಎನ್ನುವಂತೆ ಮಾನದಿಂದ ಇದ್ದ ಕಪ್ಪೆಗಳು ಪರ್ಜನ್ಯನಿಗೆ ತೃಪ್ತಿಯನ್ನು ಕೊಡುವಂತಹ ಮಾತನ್ನು (ವಾಕ್) ಉಚ್ಚರಿಸುತ್ತವೆ ಎಂದು ಋಗ್ವೇದದ ಏಳನೇ ಮಂಡಲದಲ್ಲಿ ಬರುತ್ತದೆ.
ನಿರುಕ್ತಕಾರರು ಪರ್ಜನ್ಯಂ ವರ್ಷಕಾಮಃ ಪರ್ಜನ್ಯಂ ತುಷ್ಟಾವ | ತಂ ಮಂಡೂಕಾ ಅನ್ವ ಮೋದಂತ | ವಶಿಷ್ಟನ ಪರ್ಜನ್ಯ ಪ್ರಾರ್ಥನೆಯನ್ನು ಮಂಡೂಕಗಳು ಅನುಮೋಡಿಸಿದವು ಎಂದಿದ್ದಾರೆ.
ಕಪ್ಪೆಗಳು ಯಾವಾಗಲೂ ನೀರಿನಲ್ಲಿ ಮುಳುಗಿರುವುದರಿಂದ ಅಥವಾ ಮುಳುಗಿ ಏಳುತ್ತಿರುವುದರಿಂದ ಅವುಗಳಿಗೆ ಮಂಡೂಕ ಅಥವಾ ಮಜ್ಜೂಕ ಎನ್ನಲಾಗಿದೆ. ಅಂದರೆ "ಮಜ್ಜನಾತ್" ಮುಳುಗಿ ಏಳುವುದರಿಂದ. ಮಜ್ಜೂಕ ಎನ್ನಲಾಗುತ್ತದೆ. ಸಂತೋಷ ದಿಂದಿರುವುವು ಎನ್ನುವ ಅರ್ಥವನ್ನು ಮಂದ್ ಎನ್ನುವ ಧಾತುವು ಕೊಡುವ ಕಾರಣದಿಂದಲೂ ಆರೀತಿ ಕರೆಯಲಾಗುತ್ತದೆ. ವ್ಯಾಕರಣ ಶಾಸ್ತ್ರಜ್ಞರು ಅಭಿಪ್ರಾಯಿಸುವಂತೆ ಮಂಡ್ ಎನ್ನುವುದು ಅಲಂಕರಿಸು ಎನ್ನುವ ಅರ್ಥ ಬರುತ್ತದೆ ಆದುದರಿಂದ ಮಂಡೂಕವು ಮಂಡ್ ಎನ್ನುವ ಧಾತುವಿನಿಂದ ಬಂದಿದೆ ಎನ್ನುತ್ತಾರೆ. ಕಪ್ಪೆಗಳು ಬೇರೆ ಬೇರೆ ಬಣ್ಣಗಳಿಂದಲೂ ಅಲಂಕಾರ ಗೊಂಡಿರುವುದರಿಂದ (ಹುಟ್ಟಿರುವುದರಿಂದ) ಅವುಗಳನ್ನು ಮಂಡೂಕ ಎನ್ನುತ್ತಾರೆ ಎನ್ನುವುದು ಅವರ ಅಭಿಮತ. ಮಂಡ್ ಎಂದರೆ ನೀರಿ ಎನ್ನುವ ಇನ್ನೊಂದು ಅರ್ಥವಿದೆ ಮಂಡೇ ಅಂದರೆ ನೀರಿನಲ್ಲಿ - ಓಕಃ ಅಂದರೆ ವಾಸಿಸು. ಮಂಡೂಕಃ ಅಂದರೆ ನೀರಿನಲ್ಲಿ ವಾಸಿಸುವುದು ಎನ್ನುವ ಅರ್ಥವನ್ನು ಧ್ವನಿಸುತ್ತದೆ. ಅದೇನೇ ಇರಲಿ ಮಂಡ್ ಎನ್ನುವುದು ಮದ್(ಮುದ್) ಎನ್ನುವುದರ ರೂಪಾಂತರವಾಗಿದ್ದಲ್ಲಿ ನೀರಿನಲ್ಲಿ ಹರ್ಷದಿಂದ ವಾಸಿಸುವಂತಹದ್ದು ಎನ್ನುವುದಾಗುತ್ತದೆ. ಅಂದರೆ ಒಟ್ಟಭಿಪ್ರಾಯವು ನೀರಿನಲ್ಲಿ ಅವುಗಳು ಅತ್ಯಂತ ಹೆಚ್ಚು ಸಂತೋಷದಲ್ಲಿರುತ್ತವೆ.
ಒಂದು ವರ್ಷ ಮಾಡಲ್ಪಟ್ಟ ಸತ್ರಾದಿ ಯಾಗಗಳಲ್ಲಿ ಬ್ರಾಹ್ಮಣರು ಕೆಲವು ವ್ರತವನ್ನಾಚರಿಸುತ್ತಾರೆ ಅದರಲ್ಲಿ ಶರತ್ಕಾಲದಿಂದ ವರ್ಷಾಕಾಲದ ತನಕ ಮೌನದಿಂದ ಇದ್ದು ವರ್ಷಾಕಾಲದಲ್ಲಿ ಯಾಗ ಸಮಾಪ್ತಿಗೊಂಡು ಪರ್ಜನ್ಯ ನ ಕುರಿತಾದ ಸ್ತೋತ್ರಗಳಿಂದ ಉಚ್ಚ ಕಂಠದಲ್ಲಿ ಮಂತ್ರೋಚ್ಚಾರಣೆ ಮಾಡುವರು ಇಂತಹ ಸಮಯದಲ್ಲಿ ಬ್ರಾಹ್ಮಣರು ಸಂತೋಷದಿಂದ ಇರುವರು. ಇದನ್ನೇ ಮಂಡೂಕಕ್ಕೆ ಹೇಳಲಾಗಿದ್ದರೆ ಇನ್ನೊಂದು ರೀತಿಯಲ್ಲಿ ಶರತ್ಕಾಲದಿಂದ ವರ್ಷಾಕಾಲದ ತನಕ ಮೌನ ವ್ರತದಿಂದಿದ್ದು ಕೊನೆಗೆ ಪರ್ಜನ್ಯನನ್ನು ಕುರಿತು ಉಚ್ಚ ಸ್ವಾರದಲ್ಲಿ ಮಂತ್ರ ಹೇಳುವುದು ಹೇಗೆ ಕೇಳಿಸ ಬಲ್ಲುದೋ ಅದೇ ರೀತಿ ಶರತ್ಕಾಲದಲ್ಲಿ ಭೂಮಿ ಒಣಗಿ ಹೋಗಿ ನೀರಿನ ಆಸರೆಯೂ ಇಲ್ಲದ ಸ್ಥಿಯಲ್ಲಿ ಎಲ್ಲಿಯೋ ಅಡಗಿರುವ ಕಪ್ಪೆಗಳು ವರ್ಷಾಕಾಲ ಬಂದೊಡನೆ ಸಂತೋಷದಿಂದ ಹೊರಗೆ ಬಂದು ಕೂಗುತ್ತವೆ. ಎನ್ನುವುದು ಯಾಸ್ಕರ ನಿರುಕ್ತದ ಅರ್ಥ.
ಗೋಮಾಯುರೇಕೋ ಅಜಮಾಯುರೇಕಃ ಪೃಶ್ನಿರೇಕೋ ಹರಿತ ಏಕ ಏಷಾಂ |
ಸಮಾನಂ ನಾಮ ಬಿಭ್ರತೋ ವಿರೂಪಾಃ ಪುರುತ್ರಾ ವಾಚಂ ಪಿಪಿಶುರ್ವದಂತಃ ||
ಈ ಮಂಡೂಕ(ಕಪ್ಪೆ)ಗಳ ಮಧ್ಯದಲ್ಲಿ ಒಂದು ಗೋವಿನಂತೆ ಶಬ್ದ ಮಾಡುತ್ತದಂತೆ, ಇನ್ನೊಂದು ಆಡಿನಂತೆ ಶಬ್ದಮಾಡುತ್ತದಂತೆ, ಒಂದು ಕಪ್ಪೆ ಅನೇಕ ಬಣ್ಣಗಳನ್ನು ಹೊಂದಿದೆಯಂತೆ . ಇನ್ನೊಂದು ಹಸಿರು ಬಣ್ಣ ಮಾತ್ರ ಹೊಂದಿದೆಯಂತೆ ಈ ರೀತಿ ಬೇರೆ ಬೇರೆ ಶಬ್ದ ಮತ್ತು ರೂಪವನ್ನು ಹೊಂದಿದ್ದರೂ ಸಹ ಕಪ್ಪೆ ಅಥವಾ ಮಂಡೂಕ ಎನ್ನುವ ಒಂದೇ ಹೆಸರನ್ನು ಪಡೆದುಕೊಂಡಿದೆ ಮತ್ತು ಎಲ್ಲಾ ಪ್ರದೇಶಗಳಲ್ಲು ಕಾಣಿಸಿಕೊಳ್ಳುತ್ತದೆ.
ಗೋಮಾಯುರದಾದ ಜಮಾಯುರದಾತ್ಪೃಶ್ನಿರದಾದ್ಧರಿತೋ ನೋ ವಸೂನಿ |
ಗವಾಂ ಮಂಡೂಕಾ ದದತಃ ಶತಾನಿ ಸಹಸ್ರಸಾವೇ ಪ್ರ ತಿರಂತ ಆಯುಃ
ಗೋವಿನ ಶಬ್ದದಂತೆ ಮಾಡತಕ್ಕ ಮಂಡೂಕವೂ ಆಡಿನಂತೆ ಶಬ್ದ ಮಾಡತಕ್ಕ ಮಂಡೂಕವೂ ನಮಗೆ ಸಂಪತ್ತನ್ನು ಒದಗಿಸಲಿ ಬೇರೆ ಬೇರೆ ಬಣ್ಣಗಳನ್ನು ಹೊಂದಿರುವ ಮಂಡೂಕವೂ ಹಸಿರು ಬಣ್ಣ್ದ ಮಂಡೂಕವೂ ನಮಗೆ ಧನವನ್ನು ಒದಗಿಸಿ ಕೊಡಲಿ ಸಹಸ್ರಾರು ಔಷಧೀಯ ಸಸ್ಯಗಳು ಬೆಳೆಯುವ ಮಳೆಗಾಲದಲ್ಲಿ ನೂರಾರು ಸಂಖ್ಯೆಯ ಗೋ ಸಂಪತ್ತನ್ನು ಕೊಟ್ಟು ನಮ್ಮ ಆಯುಷ್ಯವನ್ನು ಹೆಚ್ಚಿಸ್ಸಲಿ ಎನ್ನುತ್ತಾ ಈ ಸೂಕ್ತ ಕೊನೆಗೊಳ್ಳುತ್ತದೆ.
ಈ ಸೂಕ್ತಗಳನ್ನೆಲ್ಲಾ ಗಮನಿಸುತ್ತಿರುವ ನನಗೆ ನಮ್ಮಲ್ಲಿ ಎಲ್ಲದರಲ್ಲಿಯೂ ನಾವು ದೇವರನ್ನು ದೈವತ್ವವನ್ನು ಕಂಡು ಅವುಗಳನ್ನು ಪೂಜ್ಯ ಸ್ಥಾನದಲ್ಲಿಟ್ಟು ಅವುಗಳ ನಾಶವನ್ನು ತಡೆಯುತ್ತಿದ್ದೆವು. ಇಲ್ಲಿ ಕಪ್ಪೆ ಒಂದು ನಿರುಪದ್ರವಿ ಜೀವಿ. ಅದನ್ನು ಅತ್ಯಂತ ಗೌರವದ ಸ್ಥಾನದಲ್ಲಿ ಕಲ್ಪಿಸಿಕೊಳ್ಳಲಾಗಿದೆ.
ಭಾರತವೇ ಹಾಗೆ ಇಲ್ಲಿ ನಾನು ಬದುಕುತ್ತೇನೆ ಉಳಿದವರನ್ನು ಬದುಕಲು ಬಿಡುತ್ತೇನೆ ಎನ್ನುವುದು ತತ್ವ. ವೇದವೂ ಅದನ್ನೇ ಸೂಕ್ಷ್ಮವಾಗಿ ಹೇಳುತ್ತದೆ, ನೀನು ಬದುಕು ಉಳಿದವರನ್ನೂ ಬದುಕಲು ಬಿಡು. ಇದೇ ಅಲ್ಲವೇ ಜಗತ್ತಿಗೆ ಬೇಕಾಗಿದ್ದು.
ಕಪ್ಪೆಯ ಕುರಿತು ಬರೆಯುತ್ತಾ ಸಾಗಿದರೆ ಇನ್ನೂ ಬರೆಯ ಬಹುದು. ಆದರೆ ಅದೆಲ್ಲಾ ವಿಷಯಾಂತರವಾದೀತು.

ವಾರಾಣಸೀ -ವಾರಣಾಸೀ - ವರಣಸೀ


ಕಾಶಿಯಲ್ಲಿ ಹರ್ಯಶ್ವನೆಂಬ ರಾಜನು ರಾಜ್ಯವನ್ನಾಳುತ್ತಿದ್ದನು. ಆತ ಪರಾಕ್ರಮಿಯಾಗಿದ್ದ. ಮತ್ತು ಅಷ್ಟೇ ಖ್ಯಾತಿಯನ್ನು ಪಡೆದಿದ್ದ. ಒಮ್ಮೆ ವೀತಹವ್ಯನ ಸಾವಿರ ಮಕ್ಕಳೆಲ್ಲಾ ಸೇರಿ ಹರ್ಯಶ್ವನ ಮೇಲೆ ಯುದ್ಧಕ್ಕೆ ಹೋಗುತ್ತಾರೆ. ಗಂಗಾ-ಯಮುನೆಯರ ಮಧ್ಯದಲ್ಲಿ ನಡೆದ ಮಹಾಯುದ್ಧದಲ್ಲಿ ಹರ್ಯಶ್ವ ಮರಣ ಹೊಂದುತ್ತಾನೆ. ಮಹಾರಥರಾದ ಹೈಹಯನ ಮಕ್ಕಳು ಹರ್ಯಶ್ವರಾಜನನ್ನು ಸಂಹರಿಸಿ ತಮ್ಮ ರಾಜಧಾನಿಗೆ ಹಿಂದಿರುಗುತ್ತಾರೆ. ಹರ್ಯಶ್ವನು ಸತ್ತ ನಂತರ ಅವನ ಮಗನಾದಸುದೇವನೆಂಬವನು (ಈತನಿಗೆ ಧನ್ವನೆನ್ನುವ ಹೆಸರೂ ಇದೆ) ಕಾಶೀರಾಜ್ಯದಲ್ಲಿ ಪಟ್ಟಾಭಿಷಿಕ್ತನಾಗುತ್ತಾನೆ. ಧರ್ಮಿಷ್ಟ. ಪುನಃ ವೀತಹವ್ಯನ ಸಾವಿರ ಮಕ್ಕಳು ಸುದೇವನ ಮೇಲೂ ದಂಡೆತ್ತಿ ಬಂದು ಅವನನ್ನು ಯುದ್ಧದಲ್ಲಿ ಸಂಹರಿಸಿ ತಮ್ಮ ರಾಜಧಾನಿಗೆ ಹೊರಟು ಹೋಗುತ್ತಾರೆ. ಬಳಿಕ ಅಮಾತ್ಯರು ಸುದೇವನ ಮಗನಾದ ದಿವೋದಸನನ್ನು ಕಾಶೀರಾಜ್ಯದ ಸಿಂಹಾಸನದಲ್ಲಿ ಪಟ್ಟಾಭೀಷೇಕಮಾಡುತ್ತಾರೆ. ಮಹಾತೇಜಸ್ವಿಯಾಗಿದ್ದ ದಿವೋದಸನು ಜಿತೇಂದ್ರಿಯರಾದ ಹೈಹಯ ಸುತರ ಪರಾಕ್ರಮವನ್ನು ಮನಗಂಡು ಇಂದ್ರನನ್ನು ಆರಾಧಿಸಿ ಅವನ ಆಜ್ಞಾನುಸಾರವಾಗಿ ಅಭೇದ್ಯವಾದ "ವಾರಾಣಸೀ" ಎಂಬ ನಗರವನ್ನು ನಿರ್ಮಿಸುತ್ತಾನೆ. ನೂತನವಾದ ಪಟ್ಟಣವು ಸುಸಜ್ಜಿತವಾದ ವ್ಯವಸ್ಥೆಗಳನ್ನು ಒಳಗೊಂಡಿತ್ತು. ಅದು ಸಂಪದ್ಭರಿತ ನಾಡಾಗಿತ್ತು. "ವಾರಾಣಸೀ" ನಗರದ ಒಂದು ಭಾಗವು ಗಂಗಾನದಿಯ ಉತ್ತರದಿಕ್ಕಿನ ತೀರಪ್ರದೇಶದವರೆಗೂಮತ್ತೊಂದು ಭಾಗವು ಗೋಮತೀ ನದಿಯ ದಕ್ಷಿಣತೀರಪ್ರದೇಶದವರೆಗೂವ್ಯಾಪಿಸಿತ್ತಲ್ಲದೇ ಪಟ್ಟಣವು ಅತ್ಯಂತಸುಂದರವಾಗಿದ್ದು ಇಂದ್ರನ ಅಮರಾವತಿಗೆ ಕಡಿಮೆ ಇರಲಿಲ್ಲ. ಧರ್ಮದಿಂದ ರಾಜ್ಯವನ್ನು ಪಾಲಿಸಿಕೊಂಡು ವಾರಾಣಾಸಿಯಲ್ಲಿ ವಾಸಮಾಡುತ್ತಿದ್ದ ದಿವೋದಸನ ಪಟ್ಟಣಕ್ಕೆ ಹೈಹಯಕುಮಾರರು ಪುನಃ ಮುತ್ತಿಗೆಹಾಕಿದರು. ಈಗ ದಿವೋದಸನು ಪಟ್ಟಣದಿಂದ ಹೊರಬಂದು ಹೈಹಯಕುಮಾರರನ್ನು ಎದುರಿಸಿ ಅವರೊಡನೆ ಘೋರ ಯುದ್ಧ ಮಾಡಿದನು. ಒಂದು ನೂರು ದಿವಸಗಳವರೆಗೆ ಯುದ್ಧಮಾಡುತ್ತಿದ್ದ ದಿವೋದಸನು ಯುದ್ಧದಲ್ಲಿ ತನ್ನ ಅನೇಕ ರಥಿಕರನ್ನೂಅಶ್ವ ಸೈನಿಕರನ್ನೂಗಜಸೈನಿಕರನ್ನೂಕಾಲಾಳುಗಳನ್ನೂ ಕಳೆದುಕೊಂಡನು. ಅವನ ಭಂಡಾರವೂ ಬರಿದಾಯಿತು. ಅಂತಹ ದಯನೀಯವಾದ ಅವಸ್ಥೆಯನ್ನು ಹೊಂದಿದ ರಾಜನು ಅಜೇಯಶತ್ರುಗಳನ್ನು ಎದುರಿಸಿ ಯುದ್ಧಮಾಡಲು ಸಾಧ್ಯವಾಗದೇ ಪಟ್ಟಣವನ್ನೇ ತ್ಯಜಿಸಿ ಪಲಾಯನ ಮಾಡಿದನು. ಬಳಿಕ ದಿವೋದಾಸನು ಭರದ್ವಾಜಮುನಿಯ ಆಶ್ರಮಕ್ಕೆ ಹೋಗಿ ಮಹರ್ಷಿಯ ಮುಂದೆ ಕೈಜೋಡಿಸಿ ಅವನಿಗೆ ಶರಣಾಗತನಾದನು. ಬೃಹಸ್ಪತಿಯ ಜ್ಯೇಷ್ಠಪುತ್ರನಾದಭರದ್ವಾಜನು ದಿವೋದಸನಿಗೆ ಹೀಗೆ ಕೇಳುತ್ತಾನೆ.
ಕಿಮಾಗಮನಕೃತ್ಯಂ ತೇ ಸರ್ವಂ ಪ್ರಬ್ರೂಹಿ ಮೇ ನೃಪ |
ಯತ್ತೇ ಪ್ರಿಯಂ ತತ್ಕರಿಷ್ಯೇ ಮೇಽತ್ರಾಸ್ತಿ ವಿಚಾರಣಾ || ೨೫ ||
ರಾಜನೇ! ಯಾತಕ್ಕಾಗಿ ಬಂದಿರುವೆಎಲ್ಲವನ್ನೂ ನನಗೆ ಹೇಳು. ನಿನಗೆ ಪ್ರಿಯವಾದ ಕಾರ್ಯವನ್ನು ನಾನು ಮಾಡಿಕೊಡುವೆನು. ಆಗ ದಿವೋದಸನು ಹೇಳುತ್ತಾನೆ ಯುದ್ಧದಲ್ಲಿ ವೀತಹವ್ಯನ ಮಕ್ಕಳು ನನ್ನ ವಂಶವನ್ನೇ ನಾಶಮಾಡಿಬಿಟ್ಟರು. ಯುದ್ಧದಲ್ಲಿ ಪರಾಜಯವನ್ನು ಹೊಂದಿ ಎಲ್ಲವನ್ನೂ ಕಳೆದುಕೊಂಡಿರುವ ನಾನೊಬ್ಬನೇ ಈಗ ಉಳಿದುಕೊಂಡಿದ್ದೇನೆ. ರಕ್ಷಣೆಗಾಗಿ ನಿನ್ನಲ್ಲಿ ಬಂದಿರುವೆ ಎನ್ನುತ್ತಾನೆ. ಪಾಪಕರ್ಮಿಗಳಾದ ವೀತಹವ್ಯನ ಮಕ್ಕಳು ನಮ್ಮ ವಂಶದಲ್ಲಿ ನನ್ನೊಬ್ಬನನ್ನು ಮಾತ್ರವೇ ಜೀವಂತ ಉಳಿಸಿದ್ದಾರೆ ಎನ್ನುತ್ತಾನೆ. ಆಗ ಭರಧ್ವಾಜನು ಭಯಪಡಬೇಡ. ನಿನಗೆ ಪುತ್ರಪ್ರಾಪ್ತಿಗಾಗಿ ನಾನೊಂದು ಇಷ್ಟಿಯನ್ನು ಮಾಡುತ್ತೇನೆ. ಇಷ್ಟಿಯ ಫಲವಾಗಿ ಹುಟ್ಟುವ ಪುತ್ರನ ಮೂಲಕವಾಗಿ ನೀನು ವೀತಹವ್ಯನ ಸಾವಿರಮಕ್ಕಳನ್ನೂ ಸಂಹರಿಸುವೆ.” ಭರದ್ವಾಜನು ಹೀಗೆ ಹೇಳಿ ಒಡನೆಯೇ ರಾಜನಿಂದ ಪುತ್ರಕಾಮೇಷ್ಟಿಯನ್ನು ವಿಧಿವತ್ತಾಗಿ ಮಾಡಿಸುತ್ತಾನೆ. ಈ ಯಾಗದ ಫಲವಾಗಿ ದಿವೋದಾಸನಿಗೆ "ಪ್ರತರ್ದನ"ನೆಂಬ ಮಗನು ಹುಟ್ಟುತ್ತಾನೆ. ಪ್ರತರ್ದನನು ಹುಟ್ಟಿದೊಡನೆಯೇ ಹದಿಮೂರು ವರ್ಷದ ಪ್ರಾಯದವನಾಗಿ ಬೆಳೆದುಬಿಟ್ಟನು. ಆಗಲೇ ಅವನು ಸಂಪೂರ್ಣ ವೇದಗಳನ್ನೂ ಅಧ್ಯಯನಮಾಡಿದ್ದನು. ಧನುರ್ವೇದದಲ್ಲಿಯೂ ಪಾರಂಗತನಾಗಿದ್ದನು. ದಿವೋದಾಸನು ಸುದೇವ ಅಥವಾ ಧನ್ವನ ಮಗನಾಗಿದ್ದರಿಂದ ಈತನಿಗೆ ಧನ್ವಂತರಿ ಎನ್ನುವ ಹೆಸರೂ ಇತ್ತು. ಈತನೇ ಇಂದು ನಾವು ಆರಾಧಿಸಿಕೊಂಡು ಬರುವ ಧನ್ವಂತರಿ. ಆಯುರ್ವೇದದ ಜನಕ. ದೇವತೆಗಳ ವೈದ್ಯ ಹಾಗೂ ಆಯುರ್ವೇದ ಶಾಸ್ತ್ರ ಪ್ರವರ್ತಕನೆಂದು ಖ್ಯಾತ. ಈತನ ಅಂದರೆ ದಿವೋದಾಸನ ಹೆಸರು ಋಗ್ವೇದದಲ್ಲಿ ಸಿಗುತ್ತದೆ ಆದರೆ ಧನ್ವಂತರಿಯ ಹೆಸರು ಸಿಗುವುದಿಲ್ಲ. ಕೌಶಿಕ ಸೂತ್ರದಲ್ಲಿ ಧನ್ವಂತರಿಯ ಹೆಸರು ಪ್ರಾಯಶಃ ಮೊತ್ತಮೊದಲು ಸೂಚಿತವಾಗಿದೆ ಎನ್ನಬಹುದು. ಮಹಾಭಾರತಕ್ಕೆ ಸೇರಿದ ಹರಿವಂಶದಲ್ಲಿ ಅಷ್ಟಾಂಗ ಆಯುರ್ವೇದ ಶಾಸ್ತ್ರ ಪ್ರವರ್ತಕನಾದ ಕಾಶಿರಾಜನ ವಂಶದಲ್ಲಿ ಈತ ಜನ್ಮ ತಾಳಿದನೆಂದೂ ಕಾಶಿರಾಜ ಅಥವಾ ಧನ್ವರಾಜನ ಮಗನಾದ್ದರಿಂದ ಈತನನ್ನು ಧನ್ವಂತರಿ ಎಂದು ಕರೆಯಲಾಯಿತೆಂದೂ ಸೂಚಿತವಾಗಿದೆ. ಕಾಶಿರಾಜರ ವಂಶವೃಕ್ಷ ಹರಿವಂಶದಲ್ಲಿ ರೀತಿ ಸೂಚಿತವಾಗಿದೆ : ಕಾಶೇಯ,ದೀರ್ಘತಪಸ್ಸುಧನ್ವಧನ್ವಂತರಿಕೇತುಕಾಮಭೀಮರಥ (ಭೀಮಸೇನ)ದಿವೋದಾಸಪ್ರತರ್ದನವತ್ಸಅಲರ್ಕ. ಕಾಶೇಯನ ಪೌತ್ರನಾದ ಧನ್ವ ಹಾಲಿನ ಸಮುದ್ರವನ್ನು ಕಡೆದ ಸಮಯದಲ್ಲಿ ಉತ್ಪನ್ನವಾದ ಅಬ್ಜ ದೇವತೆಯ ಆರಾಧನೆಯಿಂದ ಅಬ್ಜಾವತಾರನಾದ ಧನ್ವಂತರಿಯನ್ನು ಮಗನನ್ನಾಗಿ ಪಡೆದ. ಧನ್ವಂತರಿ ಭರದ್ವಾಜರಿಂದ ಆಯುರ್ವೇದದ ಉಪದೇಶಗಳನ್ನು ಪಡೆದು ವಿಜ್ಞಾನವನ್ನು ಶಲ್ಯಶಾಕಲ್ಯಕಾಯಚಿಕಿತ್ಸಾಭೂತವಿದ್ಯಾಕೌಮಾರಭೃತ್ಯಅಗದತಂತ್ರರಸಾಯನಶಾಸ್ತ್ರ ಮತ್ತು ವಾಜೀಕರಣ ತಂತ್ರಗಳೆಂದು ಎಂಟು ಭಾಗಗಳಾಗಿ ಶಿಷ್ಯರಿಗೆ ಉಪದೇಶಿಸಿದನಂತೆ.
ಸುಶ್ರುತ ಸಂಹಿತೆಯಲ್ಲಿ ಕಾಶಿಯ ರಾಜನಾದ ದಿವೋದಾಸನೇ ಧನ್ವಂತರಿ ಎಂದು ಹೇಳಿದೆ. ಈತ ಆಯುರ್ವೇದದಲ್ಲಿ ಪಾರಂಗತನಾಗಿದ್ದುದರಿಂದ ಈತನನ್ನು ಧನ್ವಂತರಿ ದಿವೋದಾಸನೆಂದು ಕರೆಯುತ್ತಾರೆ. ಅಗ್ನಿಪುರಾಣ ಮತ್ತು ಗರುಡ ಪುರಾಣಗಳಲ್ಲಿ ವೈದ್ಯ ಧನ್ವಂತರಿಯ ವಂಶದಲ್ಲಿ ನಾಲ್ಕನೆಯವನೇ ದಿವೋದಾಸನೆಂಬ ಉಲ್ಲೇಖವಿದೆ. ಅಗ್ನಿಪುರಾಣದಲ್ಲಿ ಮನುಷ್ಯಕುದುರೆಹಸುಗಳಿಗೆ ಸಂಬಂಧಿಸಿದ ಆಯುರ್ವೇದ ಜ್ಞಾನ ಧನ್ವಂತರಿ ದಿವೋದಾಸ ಮತ್ತು ಸುಶ್ರುತರ ನಡುವಿನ ಗುರು ಶಿಷ್ಯ ಸಂಭಾಷಣೆಯ ರೂಪದಲ್ಲಿ ವರ್ಣಿತವಾಗಿದೆ. ಧನ್ವಂತರಿದಿವೋದಾಸ ಸುಶ್ರುತನಿಗೆ ಆಯುರ್ವೇದವನ್ನು ಉಪದೇಶಿಸಿದನೆಂದು ಹೇಳಿದೆ.
ಶಲ್ಯ ಶಾಸ್ತ್ರದಲ್ಲಿ ಪಾರಂಗತರಾದವರನ್ನು ಧನ್ವಂತರಿ ಎಂದೂ ಕರೆಯುತ್ತಾರೆ. ಸುಶ್ರುತ ಸಂಹಿತೆಯ ಪ್ರಕಾರ ಆಯುರ್ವೇದದ ಎಂಟು ಅಂಗಗಳಲ್ಲಿ ಶಲ್ಯವೇ ಪ್ರಧಾನವಾದುದರಿಂದ ಶಲ್ಯ ಅಂಗದಲ್ಲಿ ನಿಪುಣನಾದ ವೈದ್ಯನನ್ನು ಪ್ರಾರಂಭದಲ್ಲಿ ಧನ್ವಂತರಿ ಎಂದೇ ಕರೆಯುತ್ತಿದ್ದರು. ವೈದ್ಯರನ್ನು ಮೂರು ವಿಧವಾಗಿ ವಿಂಗಡಿಸಿ ಒಂದೇ ರೋಗಕ್ಕೆ ನೂರು ಔಷಧಿಗಳನ್ನು ಬಲ್ಲವನನ್ನು ವೈದ್ಯನೆಂದೂ ಇನ್ನೂರು ಔಷಧಿಗಳನ್ನು ಬಲ್ಲವನನ್ನು ಭಿಷಕ್ ಎಂದೂ ಮೂನ್ನೂರು ಔಷಧಿಗಳನ್ನು ಬಲ್ಲವನನ್ನು ಧನ್ವಂತರಿ ಎಂದು ಕರೆಯುತ್ತಿದ್ದರು. ವೈದ್ಯ ಚಿಕಿತ್ಸೆಯಲ್ಲಿ ನಿಪುಣನಾದವನನ್ನು ಅನಂತರ ಧನ್ವಂತರಿ ಎಂದು ಕರೆಯಲಾಯಿತು.
 ಸ್ಕಾಂದಪುರಾಣ ಗರುಡಪುರಾಣ ಮತ್ತು ಮಾರ್ಕಂಡೇಯ ಪುರಾಣಗಳಲ್ಲಿರುವ ಕಥೆಯ ಪ್ರಕಾರ ಗಾವಲನೆಂಬ ಋಷಿ ಸಂಚರಿಸುತ್ತಿರುವಾಗ ಬಹಳ ಬಾಯಾರಿದವನಾಗಿ ದಾರಿಯಲ್ಲಿ ನೀರನ್ನು ಹೊತ್ತು ಬರುತ್ತಿದ್ದ ವೈಶ್ಯಕನ್ಯೆಯಾದ ವೀರಭದ್ರಾ ಎಂಬಾಕೆಯಿಂದ ನೀರು ಪಡೆದು ತೃಪ್ತನಾಗಿ ಆಕೆಗೆ ಉತ್ತಮವಾದ ಮಗನಾಗಲೆಂದು ಆಶೀರ್ವದಿಸಿದನೆಂದೂ ಕಾಲಕ್ರಮೇಣ ಆಕೆಯಲ್ಲಿ ಜನಿಸಿದ ಗಂಡು ಮಗು ಬಾಲ್ಯದಲ್ಲಿಯೇ ಸಕಲಶಾಸ್ತ್ರಗಳಲ್ಲಿ ಪಾರಂಗತನಾಗಿ ಅಶ್ವಿನೀಕುಮಾರರಿಂದ ಆಯುರ್ವೇದವನ್ನು ಕಲಿತು ಧನ್ವಂತರಿ ಎಂದು ಪ್ರಖ್ಯಾತನಾಗಿ ವೈದ್ಯಶಾಸ್ತ್ರ ಪ್ರವರ್ತಕನಾದನೆಂದೂ ವರ್ಣಿತವಾಗಿದೆ.
ಧರ್ಮಾತ್ಮನಾದ ದಿವೋದಾಸನು ವಾರಾಣಸೀಪುರಿಗೆ ರಾಜನಾಗಿದ್ದನು. ಅದೇ ಸಮಯದಲ್ಲಿ ಭಗವಾನ್ ಶಂಕರನು ಪಾರ್ವತಿಯನ್ನು ವಿವಾಹಮಾಡಿಕೊಂಡು ಅವಳಿಗೆ ಪ್ರಿಯವನ್ನುಂಟು ಮಾಡುವ ಅಪೇಕ್ಷೆಯಿಂದ ಮಾವನಾದ ಹಿಮವಂತನ ಮನೆಯಲ್ಲೇ ಇದ್ದುಬಿಟ್ಟನು. ಸಮಯದಲ್ಲಿ ಮಹಾದೇವನ ಆಜ್ಞೆಯಂತೆ ದೇವೀಮಂತ್ರಗಳ ಪಾರ್ಷದರು ಮಹೇಶ್ವರನ ಪುನಶ್ಚರಣೆಯಿಂದ ಪಾರ್ವತಿಯನ್ನು ತುಷ್ಟಿಗೊಳಿಸುತ್ತಿದ್ದರು. ಇದರಿಂದ ಪಾರ್ವತಿಯು ಸಂತುಷ್ಟಳಾದಳು. ಆದರೆ ಅವಳ ತಾಯಿಯಾದ ಮೇನೆಗೆ ಇದು ಸಹ್ಯವಾಗಲಿಲ್ಲ. ಅವಳು ಮಗಳ ಎದುರಿನಲ್ಲಿಯೇ ಮಹೇಶನನ್ನೂ ಅವನ ಪಾರ್ಷದರನ್ನೂ ಅನಾಚಾರಿಗಳೆಂದು ನಿಂದಿಸುತ್ತಿದ್ದಳು. ಇದರಿಂದ ಕುಪಿತಳಾದ ಉಮೆಯು ಮಹೇಶನ ಬಳಿಗೆ ಹೋಗಿ ದೇವ! ಇನ್ನು ಮುಂದೆ ನಾನಿಲ್ಲಿ ವಾಸಮಾಡುವುದಿಲ್ಲ. ನಿನ್ನ ಮನೆಗೆ ನನ್ನನ್ನು ಕರೆದುಕೊಂಡು ಹೋಗು.” ಎಂದು ಹೇಳಿದಳು. ಪಾರ್ವತಿಯು ಹೇಳಿದಂತೆ ಮಾಡಲು ತಾನು ವಾಸವಾಗಿರಲು ಯೋಗ್ಯಸ್ಥಳವು ಯಾವುದೆಂದು ನಿರ್ಧರಿಸಲು ಮಹಾದೇವನು ಎಲ್ಲ ಲೋಕಗಳನ್ನೂ ಅವಲೋಕಿಸಿದನು. ಮಹೇಶ್ವರನು ಪಾರ್ವತಿಯೊಡನೆ ವಾಸಮಾಡಿಕೊಂಡಿರಲು ಭೂಲೋಕವನ್ನೇ ಆರಿಸಿಕೊಂಡನು. ಅದರಲ್ಲಿಯೂ ಸಿದ್ಧಿಕ್ಷೇತ್ರವಾದ ವಾರಾಣಸಿಯೇ ಅವನಿಗೆ ಬಹಳ ಮೆಚ್ಚುಗೆಯಾಯಿತು. ದಿವೋದಾಸನು ವಾರಾಣಸಿಯನ್ನು ಆಳುತ್ತಿರುವನೆಂದು ತಿಳಿದು ಮಹೇಶನು ತನ್ನ ಪಾರ್ಷದನಾದ ನಿಕುಂಭನಿಗೆ ವಾರಾಣಸೀ ಕ್ಷೇತ್ರವನ್ನು ಮನುಷ್ಯ ರಹಿತವನ್ನಾಗಿ ಮಾಡುವಂತೆ ಹೇಳಿದನು. ಶಂಕರನ ಆಜ್ಞೆಯಂತೆ ನಿಕುಂಭನು ವಾರಾಣಸಿಗೆ ಹೋಗಿ ಕಂಡುಕನೆಂಬವನ ಕನಸಿನಲ್ಲಿ ಕಾಣಿಸಿಕೊಂಡು ಪಟ್ಟಣದ ಗಡಿಯಲ್ಲಿ ಅವನದೊಂದು ಪ್ರತಿಮೆಯನ್ನು ಸ್ಥಾಪಿಸುವಂತೆಯೂ ಮೂಲಕ ಅವನಿಗೆ ಅಲ್ಲಿ ನೆಲೆಸಲು ಅವಕಾಶ ಮಾಡಿಕೊಡುವಂತೆಯೂ ತಿಳಿಸಿದನು. ಕಂಡುಕನು ರಾಜನಿಗೆ ತಿಳಿಸಿ ನಗರದ ಗಡಿಯಲ್ಲಿ ನಿಕುಂಭನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಪ್ರತಿಮೆಗೆ ಮಹಾಪೂಜೆಯನ್ನೂ ಮಾಡತೊಡಗಿದನು. ಕಂಡುಕನು ತನ್ನ ಇಷ್ಟಾರ್ಥ ಸಿದ್ಧಿಗಾಗಿ ಪ್ರತಿಮೆಯೊಂದನ್ನು ಪೂಜಿಸುತ್ತಿದ್ದಾನೆಂಬ ವಿಷಯವನ್ನು ತಿಳಿದ ವಾರಾಣಸಿಯ ನಾಗರಿಕರು ಸಾಲು-ಸಾಲಾಗಿ ನಿಕುಂಭನನ್ನು ಪೂಜಿಸಲು ಬರತೊಡಗಿದರು. ಹಾಗೆ ಪೂಜಿಸಿದವರೆಲ್ಲರಿಗೂ ನಿಕುಂಭನು ಬೇಡಿದ ವರಗಳನ್ನು ದಯಪಾಲಿಸುತ್ತಿದ್ದನು. ದಿವೋದಸನ ಪತ್ನಿಯಾದ ಸುಯಶಾ ಎಂಬುವಳು ಕೂಡ ಸಂತಾನವನ್ನು ಪಡೆಯುವ ಸಲುವಾಗಿ ನಿಕುಂಭನ ಪ್ರತಿಮೆಯಿದ್ದೆಡೆಗೆ ಬಂದು ಮಹಾಪೂಜೆಯನ್ನು ಮಾಡತೊಡಗಿದಳು. ಆದರೆ ಎಷ್ಟು ಪ್ರಾರ್ಥಿಸಿದರೂ ನಿಕುಂಭನು ರಾಣಿಗೆ ಸಂತಾನದ ವರವನ್ನು ಕೊಡಲಿಲ್ಲರಾಜನು ಯಾವುದಾದರೂ ಕಾರಣದಿಂದ ನಮ್ಮ ಮೇಲೆ ಕೋಪಿಸಿಕೊಂಡರೆ ಒಡನೆಯೇ ನಮ್ಮ ಕಾರ್ಯಸಿದ್ಧಿಯಾಗುತ್ತದೆಎಂಬುದು ನಿಕುಂಭನ ಅಭಿಪ್ರಾಯವಾಗಿದ್ದಿತು. ತನ್ನ ಪತ್ನಿಯು ಎಷ್ಟು ಪೂಜಿಸಿದರೂ ಎಷ್ಟು ಬೇಡಿಕೊಂಡರೂ ಸಂತಾನಪ್ರಾಪ್ತಿಯಾಗದಿರಲು ದಿವೋದಾಸನು ಕುಪಿತನಾಗಿ ನಿಕುಂಭನ ಪ್ರತಿಮೆಯಿದ್ದ ಸ್ಥಾನವನ್ನು ವಿನಾಶಗೊಳಿಸಿದನು. ತನ್ನ ಆಲಯವು ಭಗ್ನವಾದುದನ್ನು ಕಂಡು ನಿಕುಂಭನು ರಾಜನಿಗೆ ನನ್ನ ಆಲಯವನ್ನು ವಿನಾಶಗೊಳಿಸಿದ ಕಾರಣ ನಿನ್ನ ಪಟ್ಟಣವು ಅನಿರೀಕ್ಷಿತವಾಗಿ ಜನಶೂನ್ಯವಾಗುತ್ತದೆಎಂದು ಶಪಿಸಿದನು. (ಇಂದಿಗೂ ವಾರಣಾಸಿಯಲ್ಲಿ ಅಲ್ಲಿನ ಮೂಲ ನಿವಾಸಿಗಳೆಂದು ಯಾರೂ ಇಲ್ಲ ಎಲ್ಲರೂ ಬೇರೆಡೆಯಿಂದ ಅಲ್ಲಿ ಹೋಗಿ ನೆಲೆನಿಂತು ನೆಲೆ ಕಂಡುಕೊಂಡವರೇ ಇರುವುದು) ವಾರಾಣಸಿಯಲ್ಲಿ ಅದರಂತೆ ವಾಸಮಾಡುತ್ತಿದ್ದ ವಾರಾಣಸಿ ಜನಶೂನ್ಯವಾಯಿತು. ದಿಕ್ಕಾಪಾಲಾಗಿ ಓಡಿಹೋದರು. ಅನಂತರ ಮಹಾದೇವನು ಪಟ್ಟಣದಲ್ಲಿ ತನ್ನ ನಿವಾಸವನ್ನು ಕಲ್ಪಿಸಿಕೊಂಡನು. ಹೀಗೆ ದಿವೋದಾಸನ ಕುರಿತಾಗಿ ಹಾಗೂ ವಾರಾಣಸಿಯ ಕುರಿತಾಗಿ ಪುರಾಣಗಳಲ್ಲಿ ವಿಧವಿಧದ ಕಥೆಗಳು ದೊರಕುತ್ತವೆ. ಬ್ರಹ್ಮ ವೈವರ್ತಪುರಾಣದಲ್ಲಿ ಈತ ಸರ್ವವಿಷ ಚಿಕಿತ್ಸೆ ಹಾಗೂ ಇತರ ಚಿಕಿತ್ಸೆಗಳಲ್ಲಿ ಪ್ರವೀಣನೆಂದು ಹೇಳಿದೆ. ಈತನ ಭಾವಚಿತ್ರ ರೀತಿಯ ಪ್ರತಿಮೆಯ ವಿಚಾರವಾಗಿ ಭಾಗವತಪುರಾಣ ಮಾರ್ಕಂಡೇಯ ಪುರಾಣ ವಿಷ್ಣುಧರ್ಮೋತ್ತರ ಪುರಾಣ ವಿಷ್ಣು ಪುರಾಣಗಳಲ್ಲೂ ಶಿಲ್ಪರತ್ನ 'ಸಮರಾಂಗಣಸೂತ್ರಧಾರ' ಎಂಬ ಶಿಲ್ಪಶಾಸ್ತ್ರ ಗ್ರಂಥಗಳಲ್ಲಿಯೂ ವಿವರಣೆಗಳಿವೆ. ಆದರೆ ಗ್ರಂಥಗಳಲ್ಲಿ ವರ್ಣಿತವಾಗಿರುವಂತೆ ಇರುವ ಧನ್ವಂತರಿಯ ವಿಗ್ರಹ ಇದುವರೆಗೂ ದೊರೆತಿರುವಂತೆ ತೋರುವುದಿಲ್ಲ.
ಈಗ ವಾರಾಣಸಿಯ ಅಥವಾ ವಾರಣಾಸಿಯ ಎಂದು ಅವಲೋಕಿಸಿದರೆ ವಾರಣಾಸಿ ಎಂದು ಬಂದಿರುವುದು ಈಗ ಅಲ್ಲ ಪ್ರಾಚೀನ ಭಾರತದಲ್ಲಿಯೂ ವಾರಣಾಸಿ ಎಂದು ಕರೆದದ್ದು ನಮ್ಮ ಶಾಸನಗಳಲ್ಲಿ ಕಂಡುಬರುತ್ತದೆ. ವಾರಣಸೀ ಮತ್ತು ವರಣಸೀ ಎಂತಲೂ ಕರೆದಿರುವುದಿದೆ. ವರಣಾ ಮತ್ತು ಅಸೀ ಎನ್ನುವ ಎರಡು ನದಿಗಳ ಮಧ್ಯದಲ್ಲಿ ಈ ನಗರದ ನಿರ್ಮಾಣ ವಾಗಿದ್ದಕ್ಕೆ ವಾರಾಣಸೀ ಆಗಿದೆ ಎಂದು ಹೇಳಲಾಗುತ್ತದೆ.
ವರಣಾಸೀ ಚ ನದ್ಯೌ ದ್ವೇ ಪುಣ್ಯೇ ಪಾಪ ಹರೇ ಉಭೇ |
ತಯೋರಂತರ್ಗತಾ ಯಾ ತು ಸೈ ವಾ ವಾರಾಣಸೀ ಸ್ಮೃತಾ || ಎಂದು ನಿರುಕ್ತಕಾರರು ಹೇಳಿದ್ದಾರೆ.
ರಾಮಾಯಣದ ಉತ್ತರ ಕಾಂಡದಲ್ಲಿ
ತದ್ಭವಾನದ್ಯ ಕಾಶೇಯ ಪುರೀಂ ವಾರಾಣಸೀಂ ವ್ರಜ | ರಮಣೀಯಾಂ ತ್ವಯಾ ಗುಪ್ತಾಂ ಸುಪ್ರಾಕಾರಾಂ ಸುತೋರಣಾಮ್ ||
ರಾಘವೇಣ ಕೃತಾನುಜ್ಞಃ ಕಾಶೇಯೋ ಹ್ಯಕುತೋಭಯಃ | ವಾರಾಣಸೀಂ ಯಯೌ ತೂರ್ಣಂ ರಾಘವೇಣ ವಿಸರ್ಜಿತಃ || ಇಲ್ಲಿಯೂ ಕಾಶಿಯನ್ನು ವಾರಾಣಸೀ ಎಂದೇ ಕರೆಯಲಾಗಿದೆ.
ವನಪರ್ವದ ೮೪ನೇ ಅಧ್ಯಾಯದಲ್ಲಿ
ತತೋ ವಾರಾಣಸೀಂ ಗತ್ವಾ ಅರ್ಚಯಿತ್ವಾ ವೃಷಧ್ವಜಮ್ | ಕಪಿಲಾಹ್ರದೇ ನರಃ ಸ್ನಾತ್ವಾ ರಾಜಸೂಯಮವಾಪ್ನುಯಾತ್ || ೭೮ || ಕೋಟಿತೀರ್ಥಕ್ಷೇತ್ರದ ಪ್ರವಾಸವನ್ನು ಮುಗಿಸಿಕೊಂಡು ಮುಂದೆ ಯಾತ್ರಿಕನು ಸುಪ್ರಸಿದ್ಧವಾದ ವಾರಾಣಸೀತೀರ್ಥಕ್ಷೇತ್ರಕ್ಕೆ (ಕಾಶಿಗೆ) ಪ್ರಯಾಣಮಾಡಬೇಕು. ಪುಣ್ಯಕ್ಷೇತ್ರದಲ್ಲಿರುವ ಕಪಿಲಾಹ್ರದತೀರ್ಥದಲ್ಲಿ ಸ್ನಾನಮಾಡಿ ವಾರಾಣಸಿಯ ಅಧಿದೇವತೆಯಾದ ವೃಷಭಧ್ವಜನಾದ ಪರಶಿವ ನನ್ನು ಭಕ್ತಿಯಿಂದ ಅರ್ಚಿಸುವುದರಿಂದ ರಾಜಸೂಯಯಾಗವನ್ನು ಮಾಡಿದ ಫಲವು ಲಭ್ಯವಾಗುತ್ತದೆ. ಎಂದು ಬರುತ್ತದೆ.
ಭಾಗವತದ ಸಪ್ತಮಸ್ಕಂಧದಲ್ಲಿ ಹದಿನಾಲ್ಕನೇ ಅಧ್ಯಾಯದಲ್ಲಿ
ನೈಮಿಷಂ ಫಾಲ್ಗುನಂ ಸೇತುಃ ಪ್ರಭಾಸೋಽಥ ಕುಶಸ್ಥಲೀ | ವಾರಾಣಸೀ ಮಧುಪುರೀ ಪಮ್ಪಾ ಬಿನ್ದುಸರಸ್ತಥಾ || ೩೧ || ಪ್ರಭಾಸ, ಕುಶಸ್ಥಲೀ, ವಾರಾಣಸೀ ಮತ್ತು ಮಧುಪುರಿಯ ಉಲ್ಲೇಖ ಇದೆ.

ಹತ್ತನೇ ಸ್ಕಂಧದಲ್ಲಿ ಚಕ್ರಂ ವಿಷ್ಣೋಸ್ತದನುಪ್ರವಿಷ್ಟಂ ವಾರಾಣಸೀಂ ಸಾಟ್ಟಸಭಾಲಯಾಪಣಾಮ್ | ಸಗೋಪುರಾಟ್ಟಾಲಕಕೋಷ್ಠಸಙ್ಕುಲಾಂ ಸಕೋಶಹಸ್ತ್ಯಶ್ವರಥಾನ್ನಶಾಲಾಮ್ || ೪೧ || ದಗ್ಧ್ವಾ ವಾರಾಣಸೀಂ ಸರ್ವಾಂ ವಿಷ್ಣೋಶ್ಚಕ್ರಂ ಸುದರ್ಶನಮ್ | ಭೂಯಃ ಪಾರ್ಶ್ವಮುಪಾತಿಷ್ಠತ್ ಕೃಷ್ಣಸ್ಯಾಕ್ಲಿಷ್ಟಕರ್ಮಣಃ || ೪೨ || ಎನ್ನುವುದಾಗಿ ಎಲ್ಲಾ ಕಡೆಯೂ ವಾರಾಣಸೀ ಎನ್ನುವ ಪದ ಉಲ್ಲೇಖಿಸಲ್ಪಟ್ಟಿದೆಯೇ ವಿನಃ ವಾರಣಾಸೀ ಅಲ್ಲ.