Search This Blog

Monday 27 August 2018

ಅನಿತಭಾ - ರಸಾ - ಕುಭಾ ಮತ್ತು ಅಖಂಡ ಭಾರತ


ವೇದಗಳಲ್ಲಿ ಭಾರತದ ಯಾವ ಪ್ರದೇಶದ ಹೆಸರೂ ಅಷ್ಟಾಗಿ ಇಲ್ಲದ್ದರಿಂದ ವೇದ ಭಾರತದಲ್ಲಿ ರೂಪುಗೊಂಡದ್ದಲ್ಲ ಎನ್ನುವ ಒಂದು ವಾದ ಬಹಳ ಹಿಂದಿನಿಂದಲೂ ವಿದೇಶೀ ಚಿಂತಕರಲ್ಲಿ ಮತ್ತು ಸ್ವದೇಶದಲ್ಲಿರುವ ವಿದೇಶೀ ಮನಸ್ಥಿತಿಯವರ ಅಂಬೋಣ. ಈ ವಿಷಯವಾಗಿ ನನ್ನಲ್ಲಿ ಶ್ರೀ ಸಿಂಹ ಮೇಲೊಕೂಟೆ ಯವರು ಪ್ರಸ್ತಾವಿಸಿದಾಗ ನಾನು ಇದೆ ಎಂದು ಉತ್ತರಿಸಿದ್ದೆ. ವೇದಗಳ ಕುರಿತು ಸಾಕು ಇನ್ನು ನನ್ನ ಶಾಸನಗಳ ಕೆಲಸ ಮಾಡೋಣ ಎಂದು ಕುಳಿತರೆ ನನ್ನನ್ನು ಈ ಒಂದು ವಿಷಯ ಹಿಡಿದು ಬಿಟ್ಟಿತು.
ಋಗ್ವೇದದ ಐದನೇ ಮಂಡಲದ ೫೩ನೇ ಸೂಕ್ತವನ್ನು ಗಮನಿಸಿದರೆ ಅಲ್ಲಿ
ಮ ವೋ ರಸಾನಿತಭಾ ಕುಭಾ ಕ್ರುಮುರ್ಮಾ ವಃ ಸಿಂಧುರ್ನಿ ರೀರಮತ್ |
ಮಾ ವಃ ಪರಿಷ್ಠಾತ್ಸರಯುಃ ಪುರೀಷಿಣ್ಯಸ್ಮೇ ಇತ್ಸುಮ್ನಮಸ್ತು ವಃ ||
ಹೇ ಮರುತ್ತುಗಳೇ ರಸಾ, ಅನಿತಭಾ ಮತ್ತು ಕುಭಾ ಎನ್ನುವ ನದಿಗಳಲ್ಲಿ ಯಾವುವೂ ನಿಮ್ಮನ್ನು ತಡೆಯದಿರಲಿ, ಸಮುದ್ರವೂ ಮತ್ತು ನೀರಿನಿಂದ ತುಂಬಿರುವ ಸರಯೂ ನದಿಯೂ ಸಹ ನಿಮ್ಮನ್ನು ತಡೆಯದಿರಲಿ, ನಿಮ್ಮ ಬರುವಿಕೆಯಿಂದ ಆಗುವ ಸುಖವು ನಮಗಾಗಿಯೇ ಮೀಸಲಿರಲಿ ಎನ್ನುವುದು ಋಗ್ವೇದದ ಐದನೇ ಮಂಡಲದ ಐವತ್ತ ಮೂರನೇ ಸೂಕ್ತದ ಒಂಬತ್ತನೇ ಋಕ್ಕಿನಲ್ಲಿ ಪ್ರಸ್ತಾಪವಾಗಿದೆ.
ಈ ರಕ್ಕಿನಲ್ಲಿ ರಸಾ, ಅನಿತಭಾ, ಕುಭಾ ಮತ್ತು ಸರಯೂ ನದಿಯ ಉಲ್ಲೇಖ ಬಂದಿದೆ. ಇದರಲ್ಲಿ ರಸಾ, ಅನಿತಭಾ, ಕುಭಾ ನದಿಗಳು ಋಗ್ವೇದದಲ್ಲಿನ ಈ ಋಕ್ಕಿನಲ್ಲಿ ಮಾತ್ರ ಪಠಿತವಾಗಿದೆ ಬೇರೆಲ್ಲಿಯೂ ಇಲ್ಲ ಆದರೆ ಸರಯೂ ಮಾತ್ರ ರಾಮಾಯಣದಲ್ಲಿಯೂ ಗೋಚರವಾಗುತ್ತದೆ. ಈ ಅನಿತಭಾ ನದಿಯು ಪ್ರಾಯಶಃ ಯಮುನಾ ನದಿಯ ಉಪನದಿಯಾಗಿದ್ದಿರಬಹುದು ಈ ಮೂರು ನದಿಗಳು ಅಷ್ಟೊಂದು ಪ್ರಾಮುಖ್ಯತೆ ಪಡೆಯದೇ ಇರುವುದು ದೊಡ್ದ ನದಿಯೊಂದರ ಜೊತೆ ವಿಲೀನ ವಾಗಿದ್ದಿರಬಹುದು. ಇನ್ನು ಸರಯೂ ನದಿಯ ದಡದಲ್ಲಿಯೇ ಅಯೋಧ್ಯಾನಗರ ಇತ್ತು ಎನ್ನುವ ಪುರಾಣದ ಪ್ರಸ್ತಾವದಿಂದಾಗಿ ಇದು ಈ ನೆಲದ್ದೇ ಎನ್ನುವುದು ವೇದ್ಯವಾಗುತ್ತದೆ. ಋಗ್ವೇದದ ಹತ್ತನೇ ಮಂಡಲದಲ್ಲಿ "ಸರಸ್ವತೀ ಸರಯುಃ ಸಿಂಧುರೂರ್ಮಿಭಿರ್ಮಹೋ ಮಹೀರವಸಾ ಯಂತು ವಕ್ಷಿಣೀಃ" ಸರಸ್ವತೀ ಸರಯೂ ಸಿಮ್ಧೂ ನದಿಗಳು ನಮ್ಮ ರಕ್ಷಣೆಗೆ ಬರಲಿ ಎನ್ನುವ ಪ್ರಾರ್ಥನೆ ಕಂಡು ಬರುತ್ತದೆ. ಋಗ್ವೇದದ ನಾಲ್ಕನೇ ಮಂಡಲದಲ್ಲಿ "ಉತ ತ್ಯಾ ಸದ್ಯ ಆರ್ಯಾ ಸರಯೋರಿಂದ್ರ ಪಾರತಃ | ಅರ್ಣಾಚಿತ್ರ ರಥಾವಧೀಃ || ಎನ್ನುವ ಋಕ್ಕಿನಲ್ಲಿ ಇಂದ್ರನು ಚಿತ್ರರಥ ಎನ್ನುವ ರಾಜನನ್ನು ಇದೇ ಸರಯೂ ನದಿಯ ದಡದಲ್ಲಿ ಕೊಂದ ಎನ್ನುವ ಪ್ರಸ್ತಾವ ಬರುತ್ತದೆ. ಹೀಗೆ ಸರಯೂ ನದಿ ವೇದಗಳಲ್ಲಿ ಈ ಮೂರು ಋಕ್ಕುಗಳಲ್ಲಿ ಮಾತ್ರವೇ ಕಾಣಿಸಿಕೊಂಡು ಆಮೇಲೆ ರಾಮಾಯಣದಂತಹ ಪುರಾಣಗಳಲ್ಲಿ ಗೋಚರವಾಗುತ್ತಾಳೆ.
ವೇದಗಳಲ್ಲಿ ರಸಾ ಎನ್ನುವ ನದಿ ಪ್ರಸಿದ್ಧವಾದ ನದಿ ಮತ್ತು ಇದು ಅತ್ಯಂತ ಪವಿತ್ರವಾದ ನದಿಯಾಗಿತ್ತು ಕಾಲಕ್ರಮೇಣ ಅನಾವೃಷ್ಟಿಯಿಂದ ಈ ನದಿ ಬತ್ತಿ ಹೋಗಿದ್ದಿರಬಹುದೆನ್ನುವ ಅಭಿಪ್ರಾಯವೂ ಇದೆ. ಇನ್ನು ಕೆಲವರ ಊಹೆ ಸಿಂಧೂ ಎನ್ನುವ ನದಿಯೇ ರಸಾ ಎನ್ನುವ ನದಿ ಎಂದು. ದೇವನದಿ ಎನ್ನಿಸಿಕೊಂಡಿದ್ದ ಈ ನದಿ ಒಮ್ಮೆ ಬತ್ತಿಹೋದಾಗ ಅಶ್ವಿನೀದೇವತೆಗಳು ತಮ್ಮ ಸಾಮರ್ಥ್ಯದಿಂದ ನೀರು ತುಂಬಿಕೊಳ್ಳುವಂತೆ ಮಾಡಿದರು ಎಂದು ಒಂದನೇ ಮಂಡಲದಲ್ಲಿ ಬರುತ್ತದೆ.
ರಸ್ ಎನ್ನುವ ಧಾತು ಶಬ್ದವನ್ನುಂಟು ಮಾಡು ಎನ್ನುವುದನ್ನು ಸೂಚಿಸುತ್ತದೆ. ರಭಸದಿಂದ ದುಮ್ಮಿಕ್ಕಿ ಹರಿಯುವಾಗ ಹೆಚ್ಚಿನ ಶಬ್ದ ಬರುವುದರಿಂದ ಈ ನದಿಗೆ ರಸಾ ಎನ್ನುವ ಹೆಸರು ಬಂದಿದೆ ಎನ್ನುವುದು ಸಾಯಣಾಚಾರ್ಯರ ಅಭಿಮತ. ಋಗ್ವೇದದ ಹತ್ತನೇ ಮಂಡಲದಲ್ಲಿ ಫಣಿಗಳ ಕಥೆ ಬರುತ್ತದೆ. ಅಲ್ಲಿ "ಕಾಸ್ಮೇಹಿತಿಃ ಕಾ ಪರಿತಕ್ಮ್ಯಾಸೀತ್ಕಥಂ ರಸಾಯಾ ಅತರಃ ಪಯಾಂಸಿ" ಫಣಿಗಳು ಒಮ್ಮೆ ದೇವತೆಗಳ ಗೋವುಗಳನ್ನು ಅಪಹರಿಸಿಕೊಂಡು ಬಹುದೂರದ ಗುಡ್ದ ಒಂದರ ಮರೆಯಲ್ಲಿದ್ದ ಗುಹೆಯಲ್ಲಿ ಅಡಗಿಸಿರುತ್ತಾರೆ. ಆಗ ಅದನ್ನು ಇಂದ್ರ ಗಮನಿಸಿ ಅವರು ಎಲ್ಲಿ ಅಡಗಿಸಿಟ್ಟಿದ್ದಾರೆ ಎಂದು ಕಂಡು ಹಿಡಿಯಲು ಸರಮೆ ಎನ್ನುವ ನಾಯಿಯನ್ನು ಕಳುಹಿಸುತ್ತಾನೆ. ಈ ನಾಯಿ ಮತ್ತು ಫಣಿಗಳಿಗೆ ತುಂಬಾ ಪ್ರಶ್ನೋತ್ತರಗಳು ನಡೆಯುತ್ತವೆ. ಆಗ ಫಣಿಗಳು ಸರಮೆಯಲ್ಲಿ ಅಗಾಧವಾದ ಜಲರಾಶಿಯಿಂದ ಬೋರ್ಗರೆಯುವ ರಸಾ ನದಿಯನ್ನು ನೀನು ಹೇಗೆ ದಾಟಿ ಬಂದೆ ಎನ್ನುವಲ್ಲಿ ರಸಾ ನದಿಯ ಪ್ರಸ್ತಾಪದೊಂದಿಗೆ ಆ ನದಿಯ ವರ್ಣನೆಯೂ ಬರುತ್ತದೆ. ಹೀಗೆ ಅನಿತಾಭಾ ಎನ್ನುವ ನದಿ ಒಮ್ಮೆ ಮಾತ್ರ ನಗೆ ಕಾಣಿಸಿದರೆ ಉಳಿದ ನದಿಗಳು ಕಾಣ ಸಿಗುತ್ತವೆ. ಈ ನಮ್ಮ ಪವಿತ್ರ ಭೂಮಿಯನ್ನು ಹಸನು ಮಾಡಿ ಭರತಖಂಡದಲ್ಲಿ ತಮ್ಮ ಅಸ್ತಿತ್ವವನ್ನು ಅಂದಿನಿಂದ ಇಂದಿಗೂ ಉಳಿಸಿಕೊಂಡು ಬರಬೇಕಿದ್ದರೆ ಅವುಗಳ ಸಾಮರ್ಥ್ಯ ಮತ್ತು ಅವುಗಳ ಪಾವಿತ್ರ್ಯ ಎಷ್ಟಿದ್ದಿರಬಹುದು. ಅದೆಷ್ಟೋ ಸಹಸ್ರ ವರ್ಷಗಳ ಹಿಂದೆ ಇದ್ದು ಇನ್ನೂ ಸಹ ಅದರ ಹೆಸರು ಜೀವಂತವಾಗಿ ನಮಗೆ ಸಿಗುವಾಗ ವೇದ ಈ ಜನ ಮಾನಸದ್ದೇ ಅನ್ನುವುದರಲ್ಲಿ ಯಾವ ಸಂಶಯವೂ ಬೇಡ. ವೇದಗಳಲ್ಲಿ ಅಲ್ಲಲ್ಲಿ ಅನೇಕ ಭೂಭಾಗಗಳನ್ನು ನಾವು ಗುರುತಿಸಬಹುದು ಆದರೆ ಅಂತಹ ಮನಸ್ಥಿತಿ ನಮಗೆ ಬೇಕು. ನಾನಂತೂ ಭಾರತೀಯನಾಗಿಯೇ ಇರುವುದಕ್ಕೆ ಭಯಸುವವ. ನಾನು ಭಾರತೀಯ ಎನ್ನಲು ನನಗೆ ಹೆಮ್ಮೆ ಅನ್ನಿಸುತ್ತದೆ.
#ಶಿಲೆಗಳಲ್ಲಡಗಿದ_ಸತ್ಯ

Sunday 26 August 2018

ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು - ಆತ್ಮಾರ್ಥೇ ಪೃಥಿವೀಂ ತ್ಯಜೇತ್


ಮಹಾ ಭಾರತದ ಆದಿಪರ್ವದ ೧೧೫ನೇ ಅಧ್ಯಾಯದಲ್ಲಿ ದುರ್ಯೋಧನನ ಹುಟ್ಟಿನ ಕುರಿತಾಗಿ ಹೇಳಲಾಗುತ್ತದೆ. ಹುಟ್ಟಿದೊಡನೆಯೇ ಮಕ್ಕಳು ಅಳುವಂತೆ ದುರ್ಯೋಧನನು ಹುಟ್ಟಿದೊಡನೆಯೇ ಕತ್ತೆಯು ಅರಚುವಂತೆ ಅರಚಲು ತೊಡಗಿದನಂತೆ. ಧ್ವನಿಯನ್ನು ಕೇಳಿದೊಡನೆಯೇ ಕತ್ತೆಗಳೂ ಸಹ ಕಿರುಚಲು ಪ್ರಾರಂಭಿಸಿದುವಂತೆ. ನರಿಗಳೂ, ರಣಹದ್ದುಗಳೂ, ಕಾಗೆಗಳು ಪ್ರತಿಧ್ವನಿಗೈಯ್ಯುತ್ತವೆ. ಹಲವು ಕಡೆಗಳಲ್ಲಿ ಸುಂಟರಗಾಳಿಯು ಏಳುತ್ತದೆ. ಅನಿರೀಕ್ಷಿತವಾಗಿ ಬೆಂಕಿಯು ನಾಲ್ಕು ದಿಕ್ಕುಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ಅದನ್ನು ತಿಳಿದ ಧೃತರಾಷ್ಟ್ರನು ಭಯಗೊಳ್ಳುತ್ತಾನೆ. ಬ್ರಾಹ್ಮಣರನ್ನೂ, ಭೀಷ್ಮನನ್ನೂ, ವಿದುರನನ್ನೂ, ಶಕುನಶಾಸ್ತ್ರವಿಶಾರದರನ್ನೂ, ಇತರ ಕುರುಪ್ರಮುಖರನ್ನೂ ಕರೆಯಿಸಿ ಸಮಾಲೋಚನೆ ನಡೆಸುತ್ತಾನೆ.
ಯುಧಿಷ್ಠಿರೋ ರಾಜಪುತ್ರೋ ಜ್ಯೇಷ್ಠೋ ನಃ ಕುಲವರ್ಧನಃ | ಪ್ರಾಪ್ತಃ ಸ್ವಗುಣತೋ ರಾಜ್ಯಂ ತಸ್ಮಿನ್ವಾಚ್ಯಮಸ್ತಿ ನಃ || ೩೧ || ಅಯಂ ತ್ವನನ್ತರಸ್ತಸ್ಮಾದಪಿ ರಾಜಾ ಭವಿಷ್ಯತಿ | ಏತದ್ವಿಬ್ರೂತ ಮೇ ತಥ್ಯಂ ಯದತ್ರ ಭವಿತಾ ಧ್ರುವಮ್ || ೩೨ || “ಮಹನೀಯರೇ! ರಾಜಕುಮಾರರಲ್ಲಿ ಹಿರಿಯನಾದ ಯುಧಿಷ್ಠಿರನು ನಮ್ಮ ವಂಶವರ್ಧಕನೆಂಬುದು ನಿಗೆಲ್ಲಾ ಗೊತ್ತೇ ಇದೆ ಅದು ನಿಶ್ಚಯವೂ ಹೌದು. ಅವನು ನಮ್ಮ ವಂಶದಲ್ಲಿ ಜ್ಯೇಷ್ಠಪುತ್ರನಾಗಿ ಹುಟ್ಟಿರುವುದರಿಂದಲೂ, ಅವನ ಉತ್ತಮಗುಣಗಳಿಂದಲೂ ನಮ್ಮ ರಾಜ್ಯಸಿಂಹಾಸನವು ಅವನಿಗೇ ಸೇರಬೇಕು. ಇದರಲ್ಲಿ ನನಗೆ ಯಾವ ಸಂಶಯವೂ ಇಲ್ಲ. ಆದರೆ ಅವನ ನಂತರ ಹುಟ್ಟಿರುವ ನನ್ನ ದೊಡ್ಡ ಮಗನೂ ರಾಜನಾಗಲು ಸಾಧ್ಯವಿದೆಯೇ? ನ್ಯಾಯ-ನೀತಿಗಳನ್ನೂ, ವಂಶದ ಪದ್ಧತಿಯನ್ನೂ ಅನುಸರಿಸಿ ಹೇಳಿರಿ.” ಎಂದು ಕೇಳಿಕೊಳ್ಳುತ್ತಾನೆ.
ಧೃತರಾಷ್ಟ್ರನು ಇಷ್ಟು ಹೇಳುವುದರೊಳಗಾಗಿಯೇ ಹೆಣ್ಣುನರಿಗಳೂ, ಮಾಂಸಭಕ್ಷಕಪ್ರಾಣಿಗಳೂ ಅಪಸ್ವರಗಳಿಂದ ಅರಚ ತೊಡಗಿದವು. ದುರ್ನಿಮಿತ್ತಗಳನ್ನು ಕಂಡು ಬ್ರಾಹ್ಮಣರೂ ಮತ್ತು ವಿದುರನೂ ಭ್ರಾಂತರಾಗಿ ಈ ರೀತಿಯಾಗಿ ಹೇಳುತ್ತಾರೆ
ಶತಮೇಕೋನಮಪ್ಯಸ್ತು ಪುತ್ರಾಣಾಂ ತೇ ಮಹೀಪತೇ | ತ್ಯಜೈನಮೇಕಂ ಶಾನ್ತಿಂ ಚೇತ್ಕುಲಸ್ಯೇಚ್ಛಸಿ ಭಾರತ || ೩೭ || ಏಕೇನ ಕುರು ವೈ ಕ್ಷೇಮಂ ಕುಲಸ್ಯ ಜಗತಸ್ತಥಾ | ತ್ಯಜೇದೇಕಂ ಕುಲಸ್ಯಾರ್ಥೇ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ | ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್ || ೩೮ || “ಮಹಾರಾಜ, ನಿನ್ನ ಮಗನು ಹುಟ್ಟಿದಾಗ ಉಂಟಾದ ಭಯಂಕರವಾದ ನಿಮಿತ್ತಗಳಿಂದ ಇವನು ವಂಶವಿನಾಶಕನೆಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಆದುದರಿಂದ ಇವನನ್ನು ಪರಿತ್ಯಜಿಸುವುದರಿಂದಲೇ ದುಷ್ಪರಿಣಾಮಗಳ ಶಾಂತಿಯಾಗಬೇಕಾಗಿದೆ. ಇವನನ್ನು ಪುತ್ರವಾತ್ಸಲ್ಯದಿಂದ ಹಾಗೆಯೇ ಉಳಿಸಿಕೊಂಡರೆ ಕುಲಕ್ಕೇ ನಾಶಕನಾಗುವನು. ಇವನನ್ನು ಪರಿತ್ಯಜಿಸಿದರೂ ನಿನಗೆ ತೊಂಬತ್ತೊಂಬತ್ತು ಮಂದಿ ಮಕ್ಕಳು ಉಳಿಯುವರು. ನೀನು ವಂಶದ ಹಿತವನ್ನೂ ಮತ್ತು ಜಗತ್ತಿನ ಹಿತವನ್ನೂ ಬಯಸುವೆಯಾದರೆ ಖಂಡಿತವಾಗಿಯೂ ಒಂದು ಶಿಶುವನ್ನು ವರ್ಜಿಸಬೇಕು. ಹಿರಿಯರು ಹೇಳುವುದೇನೆಂದರೆ "ವಂಶದ ಹಿತರಕ್ಷಣೆಗಾಗಿ ಒಬ್ಬನನ್ನು ವಿಸರ್ಜಿಸಬಹುದು. ಒಂದು ಗ್ರಾಮದ ಹಿತರಕ್ಷಣೆಗಾಗಿ ಒಂದು ಕುಲವನ್ನಾದರೂ ದೂರಮಾಡಬಹುದು. ಒಂದು ದೇಶದ ಹಿತರಕ್ಷಣೆಗಾಗಿ ಒಂದು ಹಳ್ಳಿಯನ್ನಾದರೂ ಕೈಬಿಡಬಹುದು. ಪ್ರಪಂಚವನ್ನೇ ಬಿಡಬಹುದು.” ಆತ್ಮೋದ್ಧಾರದ ಕಾರಣಕ್ಕಾಗಿ ಬ್ರಾಹ್ಮಣರ ಮತ್ತು ವಿದುರನ ಸಲಹೆಯಂತೆ ಧೃತರಾಷ್ಟ್ರನು ದುರ್ಯೋಧನನನ್ನು ವಿಸರ್ಜಿಸಲಿಲ್ಲ. ಅಂದಿನ ಸಭೆಯನ್ನು ಮಾತ್ರ ವಿಸರ್ಜಿಸಿದನು. ಒಂದು ವೇಳೆ ಅಂದು ಧೃತರಾಷ್ಟೃ ದುರ್ಯೋಧನನನ್ನು ಕೊಂದಿದ್ದರೆ ಅಥವಾ ಅವನಿಗೆ ಪಟ್ಟವನ್ನೇ ಕಟ್ಟದಿದ್ದರೆ ಮುಂದಿನ ಯಾವ ಅನಾಹುತವೂ ಘಟಿಸುತ್ತಲೇ ಇರಲಿಲ್ಲ. ಈ ವಿದುರನ ಮಾತು ಮುಂದೆ ನಮಗೆ ಬ್ರಿಟೀಷರ ಆಗಮನದ ನಂತರ ಅವರನ್ನು ಇಲ್ಲಿಂದ ಓಡಿಸಬೇಕಾದರೆ ಅರ್ಥವಾಗುತ್ತದೆ. ಅದೆಷ್ಟೋ ಜನ ತಮ್ಮ ದೇಶಕ್ಕಾಗಿ ಇಡೀ ರಾಷ್ಟೃದ ಹಿತವನ್ನು ಕಾಪಾಡಲಿಕ್ಕಾಗಿ ಆತ್ಮಾರ್ಥೇ ಪೃಥಿವೀಂ ತ್ಯಜೇತ್ ಅನ್ನುವುದು ನಿಜವಾಗಿ ಮಾಡಿ ತೋರಿಸುತ್ತಾರೆ. ಅದೆಷ್ಟೋ ಜನ ಮಹತ್ವದ ಅವಕಾಶದಿಂದ ವಂಚಿತರಾಗುತ್ತಾರೆ. ಹೀಗೆ ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ತ್ಯಾಗ ಎನ್ನುವುದು ಮಹತ್ತರ ಪಾತ್ರ ನಿರ್ವಹಿಸುತ್ತದೆ.
ಆದರೆ ಈ ಸ್ವರಾಜ್ಯದ ಕಲ್ಪನೆ ಈ ರಾಷ್ಟ್ರದ್ದ ಕಲ್ಪನೆ ಕಟ್ಟಿ ಕೊಟ್ಟದ್ದು ಋಗ್ವೇದ ಮತ್ತು ಯಜುರ್ವೇದಗಳು.
ಇತ್ಥಾ ಹಿ ಸೋಮ ಇನ್ಮದೇ ಬ್ರಹ್ಮಾ ಚಕಾರ ವರ್ಧನಂ |
ಶವಿಷ್ಠ ವಜ್ರನ್ನೋಜಸಾ ಪೃಥಿವ್ಯಾ ನಿಃ ಶಶಾ ಅಹಿಮರ್ಚನ್ನನು ಸ್ವರಾಜ್ಯಂ || ಇದು ಒಂದನೇ ಮಂಡಲದ ೮೦ನೇ ಸೂಕ್ತ ಇದರ ಅರ್ಥ ಅತ್ಯಂತ ಬಲಿಷ್ಟನೂ ಸಮರ್ಥನೂ ಆದ ಇಂದ್ರನು ಈ ಜಗತ್ತಿನ ಅಭಿವೃದ್ಧಿಯನ್ನು ಮಾಡುತ್ತಾ ಈ ದುಷ್ಟ ಜನರಾದ ವೃತ್ರನೇ ಮೊದಲಾದವರನ್ನು ಸೋಲಿಸಿ ಸ್ವರಾಜ್ಯವನ್ನು ಸ್ಥಾಪಿಸಲಿ ಎನ್ನುವ ಅರ್ಥ.
ಸ್ವಸ್ಯ ರಾಜ್ಯಂ ಸ್ವರಾಜ್ಯಂ ಎಂದು ಸ್ವರಾಜ್ಯವನ್ನು ಹೇಳಲಾಗುತ್ತದೆ. ರಕ್ಷಣೆಗೆ ಅರ್ಹರಾದ ಪ್ರಜೆಗಳನ್ನು ರಕ್ಷಿಸುತ್ತಾ ಅವರವರ ಅನುರಾಗವನ್ನು ಹೊಂದಲು ಯೋಗ್ಯವಾದ ರೀತಿಯಿಂದ ಇರುವಿಕೆಯು ಅಥವಾ ಆ ಪ್ರಕಾರವಾದ ಕರ್ಮಗಳನ್ನು ಆಚರಿಸುವ ಸನ್ನಿವೇಶವನ್ನು ಹೊಂದಿರುವಿಕೆಯು ರಾಜ್ಯವೆನಿಸುವುದು. ಇಂತಹ ಸ್ವರಾಜ್ಯಕ್ಕೆ ಗೌರವ ಪೂರ್ವಕವಾದ ಮಳೆ ಬೆಳೆ ಬೆಳೆಯುವಂತೆ ಮಾಡಿ ಸಂಪದ್ಭರಿತವನ್ನಾಗಿ ಇಂದ್ರನು ಮಾಡಲಿ ಎನ್ನುವ ಆಶಯದೊಂದಿಗೆ ಶತ್ರುಗಳ ಕೈವಶವಾಗದಂತೆ ಬಲವನ್ನೂ ನೀಡಲಿ ಎಂದು ಆಶಯ.

ಔಶಿಜ ಕಕ್ಷೀವಾನನೆನ್ನುವ ಮಂತ್ರದೃಷ್ಟಾರ ಮತ್ತು ಸ್ವನಯ ಮಹಾರಾಜ


ಸೋಮಾನಂ ಸ್ವರಣಂ ಕೃಣುಹಿ ಬ್ರಹ್ಮಣಸ್ಪತೇ |
ಕಕ್ಷೀವಂತಂ ಔಶಿಜಃ ||
ಕಕ್ಷೀವತ, ಔಶಿಜ ಅಥವಾ ಕಕ್ಷೀವಾನ್ ಎಂದು ಕರೆಯಲ್ಪಡುವ ಋಷಿಯೊಬ್ಬ ಋಗ್ವೇದ ಕಾಲದ ಪ್ರಾಚೀನರಲ್ಲಿ ಕಂಡು ಬರುವವನು ಈತನ ತಾಯಿ ಉಶಿಜಾ ಎನ್ನುವವಳು ತಂದೆ ದೀರ್ಘತಮ ಈತ ಕ್ಷತ್ರಿಯನೆಂದು ಎಲ್ಲೋ ಒಂದು ಕಡೆ ಹೇಳಲಾಗಿದ್ದು ಬ್ರಾಹ್ಮಣ್ಯವನ್ನು ಹೊಂದಿದ ಎಂದು ಹೇಳಲಾಗುತ್ತದೆ. ಈತ ಪಜ್ರ ಎನ್ನುವ ವಂಶದವನು. ಈತನ ವಂಶೀಯರನ್ನು ಪಜ್ರವಂಶೀಯ ಆಂಗೀರಸರೆಂದು ಕರೆಯಲಾಗಿದೆ. ಈತ ಸೂಕ್ತ ದೃಷ್ಟಾರನಾಗಿದ್ದ. ಕಕ್ಷೀವಾನ ಮತ್ತು ಸ್ವನಯ ಎನ್ನುವ ಎರಡು ಹೆಸರುಗಳು ಋಗ್ವೇದದಲ್ಲಿ ಕಾಣಿಸಿಕೊಂಡರೆ ಕಕ್ಷೀವಾನನ ಹೆಸರಿ ತೈತ್ತೀರೀಯ ಸಂಹಿತೆಯಲ್ಲಿಯೂ ಕಾಣಿಸಿಕೊಂಡಿದೆ.
ಒಮ್ಮೆ ಸ್ವನಯ ಎನ್ನುವ ಮಹಾರಾಜ ವಿಹಾರಕ್ಕಾಗಿ ಹೊರರಡುತ್ತಾನೆ, ರಾಜ ಹೊರಟ ಅಂದರೆ ಪರಿವಾರ ಸಹಜ ತಾನೇ ರಾಜನ ಜೊತೆ ಸಂಸಾರವೇ ಹೊರಟಿತ್ತು. ಹೀಗೇ ಹೋಗುತ್ತಿದ್ದಾಗ ದಾರಿಯಲ್ಲಿ ಒಬ್ಬ ಸುಂದರ ಋಷಿಕುಮಾರ ಮಾರ್ಗಾಯಾಸದಿಂದ ಮಲಗಿರುವುದು ಕಾಣುತ್ತದೆ. ರಾಜ ಸ್ವನಯ ಆತನನನ್ನು ನೋಡಿ ನಿಂತು ಬಿಡುತ್ತಾನೆ. ಋಷಿ ಕುಮಾರನ ಮೈ ಯೆಲ್ಲಾ ಮಾರ್ಗದಲ್ಲಿನ ಧೂಳು ಆವರಿಸಿರುತ್ತದೆ. ಕಾಡಿನ ಮಾರ್ಗವಾಗಿ ಬಹಳ ದೂರ ನಡೆದು ಬಂದಿದ್ದ ಕತ್ತಲಾವರಿಸಿತ್ತು ರಾತ್ರಿಯಾಯಿತು ಅಲ್ಲಿಯೇ ಮಲಗಿದವನಿಗೆ ಮಾರ್ಗಾಯಾಸ ಬೇರೆ ಹಾಯಾಗಿ ನಿದ್ದೆ ಹೊತ್ತಿತ್ತು. ಈತನ ಬಾಹ್ಯ ಸೌಂದರ್ಯಕ್ಕೆ ಸ್ವನಯ ಮಾರುಹೋಗುತ್ತಾನೆ. ಬೆಳಗಿನ ಜಾವ ರಾಜ ಆತನನ್ನೇ ನೋಡುತ್ತಾ ನಿಂತೇ ಬಿಟ್ಟ. ರಾಜ ನಿಂತಾಕ್ಷಣ ಆತನ ಪರಿವಾರವೂ ನಿಂತು ಬಿಟ್ಟಿತು. ಕೋಲಾಹಲದಿಂದಾಗಿ ಋಷಿಕುಮಾರನಿಗೆ ಎಚ್ಚರವಾಯಿತು. ಋಷಿಕುಮಾರ ಸುತ್ತಲೂ ನೋಡುತ್ತಾನೆ. ಸುತ್ತಲೂ ಜನಗಳ ಗುಂಪು ನೆರೆದಿದೆ. ರಾಜ ಗುಂಪನ್ನೆಲ್ಲಾ ಚದುರಿಸಿ ಋಷಿಕುಮಾರರೇ ತಾವೆಲ್ಲಿಗೆ ಹೋಗುತ್ತಿದ್ದೀರಿ ? ಎಲ್ಲಿಂದ ಬಂದಿರುವಿರಿ ಎಂದು ಪ್ರಶ್ನಿಸುತ್ತಾನೆ. ತಾನು ಗುರುಗಳ ಆಶ್ರಮದಿಂದ ಸ್ನಾತಕನಾಗಿ ಹೊರಟು ಬಂದಿರುವೆ, ಪಜ್ರವಂಶೀಯನಾದ ನಾನು ಉಚಥ್ಯನ ಮಗನಾದ ದೀರ್ಘತಮಸ್ಸೆನ್ನುವ ಋಷಿಯ ಮಗ ಕಕ್ಷೀವಾನ ಎಂದು ನನ್ನ ಹೆಸರು, ನನ್ನನ್ನು ಔಶಿಜ ಎಂದೂ ಕರೆಯುತ್ತಾರೆ ಎಂದು ಮೃಧು ಧ್ವನಿಯಲ್ಲಿ ಹೇಳಿದ. ನಾನು ನನ್ನ ಮನೆಯ ಕಡೆ ಹೋಗುತ್ತಿದ್ದೇನೆ. ಬಹಳ ದೂರ ನಡೆದು ಬಂದಿದ್ದರಿಂದ ಮಾರ್ಗಾಯಾಸದಿಂದ ಬಳಲಿ ಇಲ್ಲಿಯೇ ವಿಶ್ರಾಂತಿ ತೆಗೆದುಕೊಂಡೆ ಬಹಳ ಹೊತ್ತಾಗಿ ಬಿಟ್ಟಿತು ಎಂದು ಉತ್ತರಿಸಿದಾಗ ರಾಜ ತನ್ನ ಪರಿಚಯ ಹೇಳಿಕೊಳ್ಳುತ್ತಾನೆ. ತಾನು ಭಾವಯವ್ಯನ ಮಗ, ಸ್ವನಯ ಎನ್ನುವುದು ನನ್ನ ಹೆಸರು. ಎಂದು ಪರಿಚಯಿಸಿಕೊಳ್ಳುತ್ತಾನೆ. ಹಾಗೆಯೇ ರಾಜ ತನ್ನ ಪರಿವಾರದ ತನ್ನ ಮಡದಿಯನ್ನು ಹಾಗೂ ಪುತ್ರಿಯರನ್ನೂ ಪರಿಚಯಿಸಿ ಪುರೋಹಿತರನ್ನೂ ಪರಿಚಯಿಸಿ ತಾನು ವಿಹಾರಕ್ಕಾಗಿ ಬಂದಿರುವುದಾಗಿ ತಿಳಿಸುತ್ತಾನೆ. ಸ್ವನಯನು ಕಕ್ಷೀವಾನ್ ನನ್ನು ತನ್ನ ರಥದ ಮೇಲೆ ಕುಳ್ಳೀರಿಸಿಕೊಳ್ಳುತ್ತಾನೆ. ಸ್ವನಯ ಆತನ ರೂಪಕ್ಕೆ ಮಾರುಹೋಗಿದ್ದ. ರಾಜ ಆತನನ್ನು ಆತನನ್ನು ತನ್ನ ಅರಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಮಧುಪರ್ಕಾದಿಗಳನ್ನು ಕೊಡುತ್ತಾನೆ ಹಾಗೆಯೇ ಪುರೋಹಿತರ ಸಮ್ಮುಖದಲ್ಲಿ ತನ್ನ ಮಡದಿಯನ್ನು ಕೇಳಿಕೊಂಡು ತನ್ನ ಹತ್ತು ಮಂದಿ ಪುತ್ರಿಯರನ್ನು ಆಂಗೀರಸ ಗೋತ್ರದ ಕಕ್ಷೀವಾನನಿಗೆ ಮದುವೆ ಮಾಡಿಕೊಡುತ್ತಾನೆ.
ಪ್ರಾತಾರತ್ನಂ ಪ್ರಾತರಿತ್ವಾ ದಧಾತಿ ತಂ ಚಿಕಿತ್ವಾನ್ಪ್ರತಿ ಗೃಹ್ಯಾನಿ ಧತ್ತೇ | ತೇನ ಪ್ರಜಾಂ ವರ್ಧಯಮಾನ ಆಯೂ ರಾಯಸ್ಪೋಷೇನ ಸಚತೇ ಸುವೀರಃ ||
ಸ್ವನಯ ರಾಜನಿಂದ ಪ್ರಾತಃಕಾಲದಲ್ಲಿ ಅರ್ಪಿತವಾದ ರತ್ನಾದಿಗಳನ್ನು ಕಕ್ಷೀವಂತನು ಅದು ಕೆಟ್ಟ ಸಂಪತ್ತಲ್ಲ ಎಂದು ತಿಳಿದು ಅದನ್ನು ಸ್ವೀಕರಿಸಿ ಅದನ್ನು ತನ್ನ ಪಿತೃವಿಗೆ(ದೀರ್ಘತಮನಿಗೆ ಕೊಟ್ಟು) ಆತನಿಂದ ಪುನಃ ಕೊಡಲ್ಪಟ್ಟದ್ದನ್ನು ಸ್ವೀಕರಿಸಿ ಪುತ್ರನನ್ನು ಪ್ರಜೆಗಳನ್ನು ಪೋಷಿಸುತ್ತಾ ದೀರ್ಘಾಯುವಾಗಿ ಉತ್ತಮ ಸಂತಾನ ಉಳ್ಲವನಾಗಿ ಐಶ್ವರ್ಯವಂತನಾಗಿ ಜೀವಿಸಿದನು ಎನ್ನುವುದು ಈ ಋಕ್ಕಿನ ಅರ್ಥ. ರಾಜ ಸ್ವನಯ ಏನು ಕೊಟ್ಟ ಅನ್ನುವುದನ್ನು ಗಮನಿಸಿದರೆ ರಥಗಳನ್ನು ಕೊಟ್ಟ, ನೂರು ಸುವರ್ಣ ದ್ರವ್ಯಗಳನ್ನು ಕೊಟ್ಟನಂತೆ, ನೂರು ಕುದುರೆಗಳು ನೂರು ಎತ್ತುಗಳನ್ನು ಕೊಟ್ಟನಂತೆ, ಸಾವಿರದ ಅರವತ್ತು ಗೋವುಗಳನ್ನು ನೀಡುತ್ತಾನೆ, ಹನ್ನೊಂದು ರಥಗಳನ್ನು ನೀಡಿದ ಎನ್ನಲಾಗಿದೆ. ಅವುಗಳನ್ನು ಸ್ವೀಕರಿಸಿದ ಕಕ್ಷೀವಾನ ಇವುಗಳನ್ನೆಲ್ಲಾ ತನ್ನ ತಂದೆ ದೀರ್ಘತಮನಿಗೆ ಕೊಡುತ್ತಾನೆ. ದೀರ್ಘತಮ ಅದನ್ನು ತನ್ನ ಮಗನಿಗೇ ಮರಳಿಸುತ್ತಾನೆ.
ಕಕ್ಷೀವಾನನ ಕುರಿತಾಗಿ ಸ್ವಲ್ಪ "ಕಕ್ಷ್ಯಾ ರಜ್ಜುರಶ್ವಸ್ಯ" ಎನ್ನುವುದು ನಿರುಕ್ತದ ಮಾತು. ಕಕ್ಷ್ಯಾ ಎನ್ನುವುದು ಕುದುರೆಯನ್ನು ಕಟ್ಟುವ ಹಗ್ಗ. ಅಂತಹ ಹಗ್ಗವನ್ನು ಹಿಡಿದು ಕೊಂಡಿದ್ದರಿಂದಲೇ ಕಕ್ಷೀವಂತನಿಗೆ ಕಕ್ಷ್ಯಾವಾನ್ ಆದ. ಈ ಕುದುರೆ ಕಟ್ಟುವ ಹಗ್ಗ ಕ್ಷತ್ರಿಯನ ಬಳಿ ಇರಬೇಕಾಗಿತ್ತು ಅದು ಕಕ್ಷೀವಾನ್ ನ ಬಳಿ ಹೇಗೆ ಬಂತು ಎನ್ನುವ ಒಂದು ಸಂದೇಹ ಉಂಟಾಗುತ್ತದೆ. ಕಕ್ಷೀವಾನ ಕ್ಷತ್ರಿಯನಾಗಿದ್ದನೇ ಸ್ವನಯ ಮಹಾರಾಜ ಕೊಟ್ಟ ದಾನದ ಪರಿಗ್ರಹ ಹೇಗೆ ಸಾಧ್ಯ ಎನ್ನುವ ಜಿಜ್ಞಾಸೆ ಉಂಟಾಗುತ್ತದೆ.
ಅದದಾಂ ಅರ್ಭಾಂ ಮಹತೇ ವಚಸ್ಯವೇ ಕಕ್ಷೀವತೇ ವೃಚಯಾಮಿಂದ್ರ ಸುನ್ವತೇ........ ಎನ್ನುವ ಒಂದನೇ ಮಂಡಲದ ೫೧ನೇ ಸೂಕ್ತದಲ್ಲಿ ಹೀಗೆ ಬರುತ್ತದೆ. ಕಕ್ಷೀವಂತನೆನ್ನುವ ರಾಜನಿಗೆ ವೃಚಯಾ ಎನ್ನುವ ತನ್ನ ಮಗಳನ್ನು ಕೊಟ್ಟಿರುವೆ ಎಂದು ಸ್ವನಯ ರಾಜ ಹೇಳುತ್ತಾನೆ. ಆದರೆ ಇದೇ ವೃಚಯಾ ಎನ್ನುವ ಸ್ತ್ರೀ ಹೆಚ್ಚು ಕಡೆ ಕಾಣಿಸಿಕೊಳ್ಳದಿದ್ದರೂ ಇಲ್ಲಿ ಕಾಣಿಸಿಕೊಂಡಿದ್ದು ಇಲ್ಲಿ ಸೋಮವನ್ನು ಹಿಂಡಿ ನಿನ್ನನ್ನು(ಇಂದ್ರ) ಆರಾಧಿಸಿದ ಕಕ್ಷೀವಂತನೆಂಬ ರಾಜ ಎನ್ನಿಸಿಕೊಳ್ಳುತ್ತಾನೆ. ಹಾಗಾದರೆ ಹೇಗೆ ಕಕ್ಷೀವಂತ ನೆನ್ನುವವನು ರಾಜನಾದ ಎನ್ನುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅದಕ್ಕೆ ಸಿಗುವ ಉತ್ತರ ಇಷ್ಟೇ! ಕಳಿಂಗ ಎನ್ನುವ ರಾಜನೊಬ್ಬನಿಗೆ ಬಹುಕಾಲದಿಂದ ಮಕ್ಕಳಿರಲಿಲ್ಲ. ಅದಾಗಲೇ ಅವನಿಗೆ ವೃದ್ಧಾಪ್ಯವೂ ಸಮೀಪಿಸಿತ್ತು ಪುತ್ರೋತ್ಪಾದನೆಗೆ ಅಸಮರ್ಥನಾಗಿದ್ದ. ಒಮ್ಮೆ ಉಚಥ್ಯನ ಮಗ ದೀರ್ಘತಮನು ಕಳಿಂಗರಾಜನಿದ್ದಲ್ಲಿ ಬಂದಾಗ ಕಳಿಂಗ ದೀರ್ಘತಮನಲ್ಲಿ ತನ್ನ ಸ್ಥಿತಿಯನ್ನು ಹೇಳಿಕೊಂಡು ಮರುಗುತ್ತಾನೆ. ಮತ್ತು ದೀರ್ಘತಮನಲ್ಲಿ ತನ್ನ ರಾಜ ಮಹಿಷಿಯಲ್ಲಿ ಒಂದು ಪುತ್ರೋತ್ಪಾದನೆ ಮಾಡಿಕೊಡು ಎಂದು ಬೇಡಿಕೊಳ್ಳುತ್ತಾನೆ. ದೀರ್ಘತಮ ಆಳೊಚಿಸಿ ಆಗಬಹುದು ಎಂದು ಒಫ್ಫಿಕೊಳ್ಳುತ್ತಾನೆ. ರಾಜ ರಾಣಿಯಲ್ಲಿ ವಿಷಯ ತಿಳಿಸಿ ದೀರ್ಘತಮನಲ್ಲಿ ನೀನು ಒಬ್ಬ ಪುತ್ರನನ್ನು ಪಡೆ ಎಂದು ಹೇಳುತ್ತಾನೆ. ರಾಣಿಗೆ ಎದುರು ಮಾತನಾಡುವಂತಿಲ್ಲ ಒಪ್ಪಿಕೊಂಡು ಆಮೇಲೆ ಕುರೂಪಿಯೂ ವಯಸ್ಸಿನಲ್ಲಿಯೂ ಬಹಳ ಹಿರಿಯನಾದವನನ್ನು ಅಸಹ್ಯ ಪಟ್ಟೂ ಉಶಿಕ್ ಎನ್ನುವ ತನ್ನ ಸ್ತ್ರೀಯನ್ನು ತನ್ನ ಬಟ್ಟೆಗಳನ್ನು ತೊಡಿಸಿ ಋಷಿಯ ಸಮೀಪಕ್ಕೆ ಕಳುಹಿಸುತ್ತಾಳೆ. ದೀರ್ಘತಮನಿಗೆ ಇದು ತಿಳಿಯುತ್ತದೆ. ಆತ ಅವಳಿಗೆ ಮಂತ್ರೋದಕವನ್ನು ಪ್ರೋಕ್ಷಿಸಿ ಅವಳನ್ನು ಋಷಿ ಪುತ್ರಿಯನ್ನಾಗಿ ಶುದ್ಧೀಕರಿಸಿ ಅವಳೊಡನೆ ರಮಿಸುತ್ತಾನೆ. ಈಕೆಯಲ್ಲಿ ಹುಟ್ಟಿದವನೇ ಕಕ್ಷೀವಾನ್!, ಉಶಿಕ್ ನಿಂದ ಹುಟ್ಟೀದ್ದರಿಂದ ಔಶಿಜನೂ ಆದ, ಆದರೂ ಬ್ರಾಹ್ಮಣ ಮತ್ತು ಕ್ಷತ್ರಿಯ ಸಂಬಂಧ ವಿದ್ದರೂ ಬ್ರಾಹ್ಮಣತ್ವ ಈತನಿಗೆ ಲಭಿಸಿದ್ದರಿಂದ ಸ್ವನಯ ಮಹಾರಾಜನ ದಾನ ಪರಿಗ್ರಹಕ್ಕೆ ಅರ್ಹನೆನ್ನಿಸಿಕೊಳ್ಳುತ್ತಾನೆ. ಈತ ಮಂತ್ರ ದೃಷ್ಟಾರನಾಗುತ್ತಾನೆ. ಋಗ್ವೇದದಲ್ಲಿ ಯಜುರ್ವೇದದಲ್ಲಿ ಸಾಮವೇದದಲ್ಲಿ ಈತನ ಹೆಸರು ಕಂಡು ಬರುತ್ತದೆ. ಈತ ಪುರುಕುತ್ಸನ ಜೊತೆಯಲ್ಲಿಯೂ ಗೋಚರಿಸುತ್ತಾನೆ. ನೂರು ವರ್ಷಗಳು ಜೀವಿಸಿದ್ದ ಎಂದು ತಿಳಿದು ಬರುತ್ತದೆ. ಇಲ್ಲಿ ಗಮನಿಸ ಬೇಕಾದದ್ದು ಬಹಳಷ್ಟಿದೆ. ಅವುಗಳಲ್ಲಿ ಒಂದು ವೇದಕಾಲದಲ್ಲಿ ಅಥವಾ ವೇದಗಳಲ್ಲಿ ಜಾತಿಯ ಕಟ್ಟುಪಾಡುಗಳಿರಲಿಲ್ಲ ಎನ್ನುವುದು. ಪುರಾಣಗಳಲ್ಲಿ ಕಂಡು ಬರುವ ನಿಯೋಗ ಮೊದಲೂ ಇತ್ತು, ಹಾಗೆಯೇ ಬಹುಪತ್ನಿತ್ವ ಕೂಡಾ ಹೊಸದಲ್ಲ.
#ಶಿಲೆಗಳಲ್ಲಡಗಿದ_ಸತ್ಯ