ಬೆಂಗಳೂರಿನ ಸಮೀಪದ ಬೇಗೂರಿನ ಗಂಗ ಎರೆಯಪ್ಪನ ಶಾಸನ ಇದು. ಸುಮಾರು ೮೯೦ನೇ ಇಸವಿಯ ಶಾಸನ. ತನ್ನ ಹಗೆಗಳನ್ನೆಲ್ಲಾ ಸಂಹರಿಸಿ ವೈರಿಗಳ ಉಪಟಳವನ್ನು ನಿಲ್ಲಿಸಿ, ಲಕ್ಷ್ಮೀಯೇ ತಾನಾಗಿ ವರಿಸಿದ ಪತಿ, ತಾಳವೇ ಮೊದಲಾದ ಅಸಂಖ್ಯ ಗುಣಸಮೂಹಗಳೆಂಬ ಆಭರಣಗಳಿಂದ ಭೂಷಿತನಾದ, ಶ್ರೇಷ್ಟ ಪುರುಷ ಶ್ರೀಮತ್ ಎರೆಯಪ್ಪ ರಾಜರು ತನ್ನ ವೈರಿಗಳನ್ನೆಲ್ಲ ನಿರ್ಮೂಲ ಮಾಡಿ ಗಂಗವಾಡಿ ತೊಂಭತ್ತಾರು ಸಾವಿರವನ್ನು *ಏಕಚ್ಛತ್ರದಡಿಯಲ್ಲಿ ಆಳುತ್ತ (*ಒಬ್ಬನೇ ರಾಜನ ಆಳ್ವಿಕೆ) ಪ್ರಜಾಜನರನ್ನು ಸುಖದಿಂದ ಆಳುತ್ತಿದ್ದ ಅರಸು ಎರೆಯಪ್ಪ ಅರಸ. ತನ್ನ ಅಪ್ಪಣೆಯಂತೆ ವೀರ ಮಹೇಂದ್ರ ಎನ್ನುವವನು ತುಂಬೆಪಾದಿಯಲ್ಲಿ ಹೋರಾಡಿ ವೀರ ಮರಣವನ್ನು ಹೊಂದಿರುವುದನ್ನು ಕೇಳಿ ತಾನು ಮೆಚ್ಚಿ ನಾಗತ್ತರನಿಗೆ ಪಟ್ಟವನ್ನು ಕಟ್ಟಿ ಬೆಂಪೂರು ಹನ್ನೆರಡು ಎನ್ನುವ ಪ್ರದೇಶವನ್ನು ಶಾಸನಬದ್ಧವಾಗಿ ಕಲ್ನಾಡಾಗಿ ನೀಡಿದ ಎನ್ನಲಾಗಿದೆ. ಇರುಗನು ಹೋರಾಡಿ ಮಡಿದ ಉಲ್ಲೇಖವಿದ್ದು ಅವನು ಅಯ್ಯಪದೇವನ ಮಗನಿರಬಹುದು. ಎರೆಯಪ್ಪನು ಮೆಚ್ಚಿ ಇರುಗನಿಗೆ, ನಾಗತ್ತರ ಪಟ್ಟ ಕಟ್ಟಿ, ಬೆಂಪೂರು ಹನ್ನೆರಡನ್ನು ಅವು (ಹನ್ನೆರಡು)ಯಾವುವೆಂದರೆ ಬೆಂಪೂರು, ತೊವೆಗೂರು, ಹೂವಿನಪುಲ್ಲಿಮಂಗಳ, ಕೂತನಾಡು, ನಲ್ಲೂರು. ಕೊಮರಂಗಂದು ,ಇಗ್ಗಲೂರು, ದುಗ್ಮೊನೆಲ್ಮಲ್ಲಿ, ಗಳಂಜವಾಗಿಲೂ, ಸಾರಮು, ಎಳ್ಕುಂಟೆ, ಪರವೂರು ಮತ್ತು ಕೂಡಲು). ನಾಗತ್ತರನು ಬೇಗೂರು ಪ್ರಾಂತ್ಯದ ಅಧಿಕಾರಿಯಾಗಿದ್ದನು ಎನ್ನುವುದು ತಿಳಿಯುವುದು. ಆನೆಯೊಳಾಂತಿರುದು ಸಾಯುವ ವಿಷಯ ಬಂದಿರುವುದರಿಂದ ಆನೆಯ ಜೊತೆ ಕಾಳಗ ನಡೆದಿರುವುದು ತಿಳಿಯುವುದಲ್ಲದೇ, ಕಲ್ನಾಡು ಮುಂತಾದ ಪದ ಬಳಕೆ ಕಂಡು ಬರುತ್ತದೆ.
No comments:
Post a Comment