Search This Blog

Thursday 19 July 2018

ರಾಷ್ಟ್ರಂಧಾರಯತಾಂ ಧ್ರುವಂ - ರಾಜಧರ್ಮ ಹೇಗಿರಬೇಕು ?


ಬ್ರಹ್ಮನ್ ಬ್ರಾಹ್ಮಣೋ ಬ್ರಹ್ಮವರ್ಚಸೀ ಜಾಯತಾಮಾ ರಾಷ್ಟ್ರೇ ರಾಜನ್ಯಃ ಶೂರ 
ಇಷವ್ಯೋsತಿವ್ಯಾಧೀ ಮಹಾರಥೋ ಜಾಯತಾಂ ದೋಗ್ಧ್ರೀ ಧೇನುರ್ವೋಧಾನಡ್ವಾನಾಶುಃ
ಸಪ್ತಿಃ ಪುರಂಧಿರ್ಯೋಷಾ ಜಿಷ್ಣೂ ರಥೇಷ್ಠಾಃ ಸಭೇಯೋ ಯುವಾಸ್ಯ ಯಜಮಾನಸ್ಯ
ವೀರೋ ಜಾಯತಾಂ ನಿಕಾಮೇ ನಿಕಾಮೇ ನಃ ಪರ್ಜನ್ಯೋ ವರ್ಷತು ಫಲವತ್ಯೋ
ಓಷಧಯಃ ಪಚ್ಯಂತಾಂ ಯೋಗಕ್ಷೇಮೋ ನಃ ಕಲ್ಪತಾಮ್ || (ಯಜುರ್ವೇದ.22.22.)
ಯಜುರ್ವೇದದ ಮಂತ್ರ ಅದೆಷ್ಟು ಅರ್ಥವತ್ತಾಗಿ ನಮ್ಮ ಜನ ಮತ್ತು ನಮ್ಮ ನೆಲವನ್ನು ಹೊಗಳಿ ಸಮೃದ್ಧವಾಗಿರಲಿ ಎಂದು ಹೇಳುತ್ತದೆ.
ಪರಮಾತ್ಮನೇ(ದೇವನೇ) ನಮ್ಮ ರಾಷ್ಟ್ರದಲ್ಲಿ ಬ್ರಹ್ಮತೇಜಸ್ಸಿನಿಂದ ಕೂಡಿದ ಬ್ರಾಹ್ಮಣನು(ಬ್ರಾಹ್ಮಣ ಎನ್ನುವುದು ಇಲ್ಲಿ ಜಾತಿವಾಚಕವಲ್ಲ, ಕರ್ಮ ಮತ್ತು ಆಚಾರದ ದೃಷ್ಟಿಯಿಂದ) ಕಾಲ ಕಾಲಕ್ಕೂ ಹುಟ್ಟಿ ಬರುತ್ತಿರಲಿ. ಕ್ಷತ್ರಿಯನಾದವನು ತನ್ನ ಕ್ಷಾತ್ರ ತೇಜಸ್ಸಿನಿಂದ ಕೂಡಿದವನಾಗಿ ಮತ್ತು ಶೂರನೂ ಶಸ್ತ್ರಾಸ್ತ್ರ ಪ್ರಯೋಗಗಳಲ್ಲಿ ನಿಪುಣನೂ, ರೋಗರುಜಿನಗಳಿಲ್ಲದವನಾಗಿಯೂ, ಮಹಾರಥಿಯಾಗಿ ಜನ್ಮವೆತ್ತಿ ಬರುತ್ತಿರಲಿ. ಗೋವುಗಳು ಯಥೇಷ್ಟವಾಗಿ ಹಾಲು ಕೊಡುತ್ತಿರಲಿ. ಎತ್ತುಗಳು ಹೊರೆ ಹೊರಲು ಸಮರ್ಥವಾಗಿರಲಿ. ಕುದುರೆಗಳು ವೇಗವಾಗಿ ಓಡುವಂತಾಗಲಿ. ನಾರಿಯು ತನ್ನ ಉತ್ತರದಾಯಿತ್ವವನ್ನು ಸಮರ್ಥವಾಗಿ ನಿರ್ವಹಿಸುವವಳಾಗಿರಲಿ. ಶುಭಕರ್ಮಕರ್ತನ ಪುತ್ರನು ಜಯಶಾಲಿಯೂ, ಉತ್ತಮ ರಥಿಕನೂ, ಸಭೆಯಲ್ಲಿ ಕುಳಿತುಕೊಳ್ಳಲು(ಸಭೆಯಲ್ಲಿ ಆಸೀನರಾಗಲು) ಅರ್ಹನೂ, ಉತ್ಸಾಹಶಾಲಿಯೂ ಆಗಿರಲಿ. ನಮಗಾಗಿ ಓಷಧಿಯು( ಭೂಮಿಯು), ಫಲಭರಿತವಾಗಿ ಪಕ್ವವಾಗಲಿ. ನಮಗೆ ಯೋಗಕ್ಷೇಮವು ಸದಾ ಸಿದ್ಧಿಸಲಿ.
ಇದು ಈ ನೆಲದ ಮೊದಲ ರಾಷ್ಟ್ರಗೀತೆ. ಸ್ವಂತದ್ದನ್ನು ಯಾವುದನ್ನೂ ಆಶಿಸದೇ ಬೇರೆಯವರಿಗಾಗಿ ಮತ್ತು ಈ ನೆಲಕ್ಕಾಗಿ ಎಲ್ಲವನ್ನೂ ಈ ಯಜುರ್ವೇದದ ಸೂಕ್ತಕಾರ ಕೇಳಿಕೊಳ್ಳುತ್ತಾನೆ.
ಋಗ್ವೇದದದ ಹತ್ತನೇ ಮಂಡಲದಲ್ಲಿ ರಾಷ್ಟ್ರವನ್ನಾಳುವ ರಾಜನ ಕುರಿತಾಗಿ ಹೇಳಲಾಗಿದೆ.
ರಾಜಾನಮಭಿಷಿಚ್ಯೇತ ತಿಷ್ಯೇಣ ಶ್ರವಣೇನವಾ |
ಪೌಷ್ಣಾ ಸಾವಿತ್ರ ಸೌಮ್ಯಾಶ್ವಿರೋಹಿಣೀಷೂತ್ತರಾಸು ಚ ||
ಎನ್ನುವುದಾಗಿ ಪುಷ್ಯಾ ಮತ್ತು ಶ್ರವಣ ಮೊದಲಾದ ಶುಭ ನಕ್ಷತ್ರದಲ್ಲಿ ರಾಜ್ಯಾಭಿಷೇಕ ಮಾಡಬೇಕು ಮತ್ತು ಅದರ ವಿಧಿ ವಿಧಾನಗಳನ್ನೂ ಸಹ ಹೇಳಲಾಗಿದೆ. ರಾಜನಿಗೆ ಪುರೋಹಿತನಾಗಿದ್ದವನು ರಾಜನನ್ನು ಆಶೀರ್ವದಿಸಬೇಕು. ಅಪ್ರತಿರಥ ಸೂಕ್ತದಲ್ಲಿನ "ಆಶುಃ ಶಿಶಾನಃ" ಎನ್ನುವ ಮಂತ್ರವನ್ನು ಪಠಿಸುತ್ತಾ "ಎಲೈ ರಾಜನೇ ಸಮಸ್ತ ಪೃಥ್ವಿಯನ್ನು ಜಯಿಸುವವನಾಗು. ನಿನ್ನಲ್ಲಿ ಧರ್ಮವು ಜಾಗ್ರತವಾಗಿರಲಿ ನೀನು ಧರ್ಮದಂತೆ ನಡೆದುಕೋ. ಪ್ರಜಾ ಪಾಲನೆಯುಅಲ್ಲಿಯೂ ಸಹ ಧರ್ಮವನ್ನು ಆಚರಿಸು. ನಿನ್ನ ವಂಶವು ಅಭಿವೃದ್ಧಿಯಾಗಲಿ. ಎಂದು ಜಪಿಸಬೇಕು. ಯುದ್ಧಾರ್ಥವಾಗಿ ಹೊರಟು ನಿಂತ ರಾಜನನ್ನು ಅದೇ ಸೂಕ್ತದ "ಆತ್ವಾಹಾರ್ಷಮಂತರೇಧಿ ಧ್ರುವಸ್ತಿಷ್ಠಾ ವಿಚಾಚಲಿಃ" ಎನ್ನುವ ಮಂತ್ರದಿಂದ ಅಭಿಮಂತ್ರಿಸಬೇಕು ಎನ್ನುತ್ತದೆ. ಈ ಸೂಕ್ತ ಕರ್ತಾರ ಆಂಗೀರಸನ ಮಗನಾದ ಧ್ರುವ ಎನ್ನುವವನು.
ಆ ತ್ವಾಹಾರ್ಷಮಂತರೇಧಿ ಧ್ರುವಸ್ತಿಷ್ಠಾ ವಿಚಾಚಲಿಃ |
ವಿಶಸ್ತ್ವಾ ಸರ್ವಾ ವಾಂಛಂತು ಮಾ ತ್ವಾದ್ರಾಷ್ಟ್ರಮಧಿಭ್ರಶತ್ ||
ಎಲೈ ರಾಜನೇ ನಿನ್ನನ್ನು ರಾಷ್ಟ್ರಕ್ಕೆ ಅಧಿಪತಿಯಾಗಿ ಅಭಿಷಿಕ್ತನನ್ನಾಗಿ ಮಾಡಿ ಈ ರಾಷ್ಟ್ರಕ್ಕೆ ಕರೆತಂದಿದ್ದೇನೆ, ನಮ್ಮ ಮಧ್ಯದಲ್ಲಿದ್ದು ನಮಗೆಲ್ಲರಿಗೂ ಸ್ವಾಮಿಯಾಗಿರು. ಸ್ಥಿರ ಚಿತ್ತನಾಗಿಯೂ ಶತ್ರುಗಳಿಂದ ಅಹಿಂಸಿತನಾಗಿಯೂ ಸ್ಥಾನ ಭ್ರಷ್ಟನಾಗದೇ ಇದೇ ನೆಲದಲ್ಲಿ ಸ್ಥಿರವಾಗಿದ್ದು ನಮ್ಮನ್ನು ಸಲಹು. ಎಲ್ಲಾ ಪ್ರಜೆಗಳ ವಿಶ್ವಾಸವನ್ನು ಸಂಪಾದಿಸಿ ಅವರಿಂದ ನೀನು ಸದಾಕಾಲ ನಮ್ಮನ್ನು ಆಳುವಂತವನಾಗಬೇಕೆಂದು ಆಶಿಸು. ನಿನ್ನಿಂದ ಈ ರಾಜ್ಯ ಕೈಬಿಟ್ಟು ಹೋಗದಿರಲಿ ಎನ್ನುವುದಾಗಿ ಪುರೋಹಿತ ರಾಜನನ್ನು ಆಶೀರ್ವಾದಿಸುವ ರೂಪದ ಸೂಕ್ತ. ಇಲ್ಲಿ ಪುರೋಹಿತ ಪ್ರಜೆಗಳ ಪ್ರತಿನಿಧಿಯಾಗಿ ರಾಜನೊಬ್ಬನನ್ನು ಪ್ರಜೆಗಳು ಅಪೇಕ್ಷಿಸುವ ವಿಧಾನವನ್ನು ವ್ಯಕ್ತಪಡಿಸುತ್ತಾನೆ.
ಧ್ರುವಾ ದ್ಯೌರ್ಧ್ರುವಾ ಪೃಥಿವೀ ಧ್ರುವಾಸಃ ಪರ್ವತಾ ಇಮೇ |
ಧ್ರುವಂ ವಿಶ್ವಮಿದಂ ಜಗದ್ಧ್ರುವೋ ರಾಜಾ ವಿಶಾಮಯಂ ||
ಈ ದ್ಯುಲ್ಲೋಕ, ಮತ್ತು ಭೂಮಿ, ಈ ಪರ್ವತಗಳು, ಈ ಸಕಲ ಜಗತ್ತೂ ಸ್ಥಿರವಾಗಿ ಇರುವುವು. ಅದರಂತೆ ಪ್ರಜಾ ಪಾಲಕನಾದ ನೀನೂ ಸಹ ಧ್ರುವನಾಗಿರು. ಶಾಶ್ವತವಾಗಿ ನೆಲೆಸು ಎನ್ನುತ್ತದೆ ಈ ಮಂತ್ರ.
ಧ್ರುವಂ ತೇ ರಾಜಾ ವರುಣೋ ಧ್ರುವಂ ದೇವೋ ಬೃಹಸ್ಪತಿಃ |
ಧ್ರುವಂತ ಇಂದ್ರಶ್ಚಾಗ್ನಿಶ್ಚ ರಾಷ್ಟ್ರಂಧಾರಯತಾಂ ಧ್ರುವಂ ||
ಮಹಾರಾಜ, ನಿನ್ನ ರಾಜ್ಯವನ್ನು ಅತ್ಯಂತ ಪ್ರಕಾಶಮಾನನಾದ ವರುಣದೇವನು, ದಾನವೇ ಮೊದಲಾದ ಸದ್ಗುಣಯುಕ್ತನಾದ ಬೃಹಸ್ಪತಿಯೂ, ಇಂದ್ರ ಮತ್ತು ಅಗ್ನಿಗಳು ಸ್ಥಿರವಾಗಿ ನಿನ್ನ ರಾಜ್ಯವನ್ನು ಕಾಪಾಡಿ ಬೆಳಗಲಿ ಮತ್ತು ಸ್ತಿರವಾಗಿರಲಿ ಮತ್ತು ಪ್ರಜಾಜನರನ್ನು ಕಾಪಾಡಲಿ ಎಂದು ಆಶಿಸುತ್ತಾನೆ. ಮುಂದಿನ ಮಂತ್ರದಲ್ಲಿ ಪ್ರಜೆಗಳು ನಿನ್ನಲ್ಲಿ ರಾಜಭಕ್ತಿಯನ್ನಿಡುವಂತೆ ಮತ್ತು ಅವರೇ ನಿನಗೆ ಕರಾದಾಯಗಳನ್ನು ಸ್ವ ಮನಸ್ಸಿನಿಂದ ಕೊಡುವಂತೆ ಇಂದ್ರನು ಅನುಗ್ರಹಿಸಲಿ ಎನ್ನುತ್ತಾನೆ.
ಇದಕ್ಕೂ ಮಿಗಿಲಾದ ಆಶಿರ್ವಾದ ಅಥವಾ ಶುಭಾಶಯ ನಮಗೆ ಎಲ್ಲಿಂದ ದೊರಕುತ್ತದೆ. ಎಂತಹ ಆಶಯ ಇದು. ರಾಜನ ಸುಖವೇ ಪ್ರಜೆಗಳ ಸುಖವೆನ್ನುವುದು ಒಂದಾದರೆ, ಎಲ್ಲರನ್ನೂ ಜೀವಿಸಲು ಬಿಡು ಎನ್ನುವುದು ಇನ್ನೊಂದು ಅರ್ಥ. ರಾಜನಾದವ ಕರಗಳನ್ನು ಬೇಡಲೂ ಬಾರದು ಅಥವಾ ಬಲಾತ್ಕಾರದಿಂದ ತೆಗೆದುಕೊಳ್ಲಲೂ ಬಾರದು ಪ್ರಜೆಗಳಲ್ಲಿ ತಾವೇ ಸಮರ್ಪಿಸಬೇಕು ಎನ್ನುವ ಭಾವನೆ ಹುಟ್ಟಬೇಕಂತೆ. ಹಾಗಾದರೆ ಆ ರಾಜ ಎಂತವನಿರಬೇಕು! ಅವನ ಆಡಳಿತ ಹೇಗಿರಬಹುದು. ಇಂತಹ ಸೂಕ್ತ ಪಡೆದ ನಾವು ಧನ್ಯರು.
#ಶಿಲೆಗಳಲ್ಲಡಗಿದ_ಸತ್ಯ

No comments:

Post a Comment