Search This Blog

Sunday 11 February 2018

ವಿಕ್ರಮ ಬೇತಾಳ - ದೇಶಕಂಡ ಅಪ್ರತಿಮ ದೇಶಭಕ್ತ,

ವಿಕ್ರಮ ಎನ್ನುವ ಹೆಸರನ್ನು ಕೇಳಿದಾಕ್ಷಣ ಅಖಂಡ ಭಾರತದ ಜನ ಮಾನಸದಲ್ಲಿ ಬಂದು ಹೋಗುವ ಮೊದಲ ಚಿತ್ರಣ ವಿಕ್ರಮ ಬೇತಾಳನದ್ದು. ವೇತಾಲ ಪಂಚವಿಂಶತಿ ಕಥಾ' ಬೇತಾಳ ಹೇಳಿದ ಇಪ್ಪತ್ತೈದು ಕಥೆಗಳು ಅಥವಾ ಸಿಂಹಾಸನದ ಗೊಂಬೆ ಹೇಳಿದ ಮೂವತ್ತೆರಡು ಕಥೆಗಳು ನಮ್ಮ ಮನಸ್ಸನ್ನು ಆವರಿಸಿ ಬಿಡುತ್ತದೆ. ವಿಕ್ರಮಾದಿತ್ಯನ ಹೆಸರನ್ನು ಕೇಳದ ಭಾರತೀಯರೇ ಇಲ್ಲ ಅನ್ನಿಸುತ್ತದೆ. ಈತ ನೇಪಾಳದವರಿಗೂ ಚಿರಪರಿಚಿತನಾಗಿದ್ದ. ವಿಕ್ರಮನಿಂದ ಆರಂಭವಾದ ಇಂದಿಗೂ ವಿಕ್ರಮಶಕೆ(ಬಿಕ್ರಮ ಸಂಬತ್) ನೇಪಾಳದ ಅಧಿಕೃತ ರಾಷ್ಟ್ರೀಯ ಪಂಚಾಂಗ. ಪಿ. ಎನ್ ಓಕ್ ಅವರು ತಮ್ಮ ಗ್ರಂಥದಲ್ಲಿ ಕಾಬಾ ಕೂಡ ಮೂಲತಃ ವಿಕ್ರಮಾದಿತ್ಯ ನಿರ್ಮಿಸಿದ ಶಿವಾಲಯವೆನ್ನುತ್ತಾರೆ. ಇಷ್ಟಾದರೂ ನಿಜವಾದ ವಿಕ್ರಮಾದಿತ್ಯ ಯಾರು ಎನ್ನುವ ಕುರಿತು ಇತಿಹಾಸಕಾರರಿಗೇ ಸರಿಯಾಗಿ ಗೊತ್ತಿಲ್ಲ. ಹೆಚ್ಚಿನವರು ಗುಪ್ತರ ಎರಡನೇ ಚಂದ್ರಗುಪ್ತನನ್ನೇ ವಿಕ್ರಮಾದಿತ್ಯನೆನ್ನುತ್ತಾರೆ. ಇನ್ನು ಕೆಲವರು ಮಾಳವದ ಯಶೋವರ್ಮನನ್ನೇ ವಿಕ್ರಮಾದಿತ್ಯನೆಂದು ತಿಳಿದಿದ್ದಾರೆ. ನಮ್ಮ ಇತಿಹಾಸದಲ್ಲಿ ವಿಕ್ರಮಾದಿತ್ಯ ಎನ್ನುವ ಹೆಸರಿನ ಮತ್ತು ಬಿರುದಿನ ಅನೇಕ ರಾಜರು ಗತಿಸಿಹೋಗಿದ್ದಾರೆ. ಇವೆಲ್ಲಕ್ಕೂ ಮಿಗಿಲಾಗಿ ಆತನೊಬ್ಬ ಕಾಲ್ಪನಿಕ ವ್ಯಕ್ತಿ ಎನ್ನುವ ಇತಿಹಾಸಕಾರರ ಸಂಖ್ಯೆ ಬಹಳ ದೊಡ್ದದು.
ವಿಕ್ರಮಾದಿತ್ಯ ಯಾರೆಂದು ತಿಳಿಯುವ ಮೊದಲು ಭಾರತೀಯ ಇತಿಹಾಸದ ಪಿತಾಮಹನೆಂದೇ ಕರೆಯಲ್ಪಡುವ ಪ್ರಸಿದ್ಧ ಬ್ರಿಟಿಷ್ ಇತಿಹಾಸಕಾರ ವಿ.ಎ.ಸ್ಮಿತ್ ಹೇಳುವಂತೆ "ಕ್ರಿ.ಪೂ 57ರಲ್ಲಿ ವಿಕ್ರಮ ಶಕೆಯನ್ನು ಶುರುಮಾಡಿದನೆನ್ನಲಾಗುವ ವಿಕ್ರಮಾದಿತ್ಯ ಕಾಲವೇ ಅಸ್ಪಷ್ಟ. ಆ ಹೆಸರಿನ ವ್ಯಕ್ತಿಯೇ ಇಲ್ಲ. ಈ ಶಕೆ ಶುರುವಾಗಿದ್ದು ಉಜ್ಜೈನಿಯ ಕೆಲ ಜ್ಯೋತಿಷಿಗಳಿಂದಿರಬಹುದು. ಮಾಳವ ಶಕೆಗೇ ಯಾವುದೋ ಒಬ್ಬ ವಿಕ್ರಮಾದಿತ್ಯನೆಂಬ ರಾಜ ತನ್ನ ಹೆಸರಿಟ್ಟುಕೊಂಡ. ಆ ವಿಕ್ರಮಾದಿತ್ಯ ಬಹುಶಃ ಕ್ರಿ.ಶ 390ರಲ್ಲಿ ಉಜ್ಜೈನಿಯನ್ನಾಕ್ರಮಿಸಿದ್ದ ಗುಪ್ತರ 2ನೇ ಚಂದ್ರಗುಪ್ತನಿರಬಹುದು." (The Oxford Students’ History of India Pp 80, 81 by V.A Smith Ed 1915)
ಹೌದು ಭಾರತೀಯರ ಜನಮಾನಸದಲ್ಲಿ ಬೆರೆತುಹೋದ ಪ್ರಸಿದ್ಧ ವಿಕ್ರಮ ಶಕೆಯ ಶಕಪುರುಷ, ವೇತಾಳಪಂಚವಿಂಶತಿ(ವಿಕ್ರಮ ಬೇತಾಳವೆಂಬ ಹೆಸರಿನಿಂದ ಪ್ರಖ್ಯಾತವಾದ ಬೇತಾಳ ಹೇಳಿದ ಇಪ್ಪತ್ತೈದು ಕಥೆಗಳು), ಸಿಂಹಾಸನ ದ್ವಾತ್ರಿಂಶತ್(ಸಿಂಹಾಸನದ ಗೊಂಬೆ ಹೇಳಿದ ಮೂವತ್ತೆರಡು ಕಥೆಗಳು)ನಂಥ ಕಥೆಗಳ ನಾಯಕ, ಅಲ್ಲದೇ ಇಡಿಯ ಭಾರತವನ್ನು ಅಖಂಡವಾಗಿ ಆಳಿದ ಮಹಾರಾಜಾಧಿರಾಜನೊಬ್ಬನನ್ನು ತಮ್ಮಿಷ್ಟದಂತೇ ಈ ತಥಾಕಥಿತ ಇತಿಹಾಸಕಾರರು ಮಾಯಮಾಡಿಬಿಟ್ಟರು.ಅಂತಹ ಇತಿಹಾಸಕಾರರಿಗೆ ವಿಕ್ರಮಾದಿತ್ಯನೊಬ್ಬ ಇದ್ದ ಎನ್ನುವ ಸಂಪೂರ್ಣ ಜ್ಞಾನವಿದ್ದರೂ ಸಹ ಜಾಣ ಕುರುಡಿತ್ತು. ತಮ್ಮ ಹಿಂದಿನ ನಂಬಿಕೆಗಳಿಗೆ ಪೆಟ್ಟು ಬೀಳುತ್ತದೆ ಎಂದಾಗ ನಾಇಜತೆ ಇದ್ದರೂ ಒಪ್ಪುವುದು ಸಾಧ್ಯವಿರದ ಮನಸ್ಸವರದ್ದು. ಇಂತವರಿಗೆ ಇದ್ದ ದೊಡ್ಡ ಕಷ್ಟವೆಂದರೆ ಚರ್ಚ್ ಮತ್ತು ಬೈಬಲ್. ಬೈಬಲ್ಲಿನ ಪ್ರಕಾರ ಕ್ರಿ.ಪೂ 4004, ಅಕ್ಟೋಬರ್ 23ರ ಬೆಳಿಗ್ಗೆ 9 ಗಂಟೆಗೆ ಭೂಮಿಯ ಮೇಲೆ ಮೊದಲ ಸೃಷ್ಟಿ ಕಾರ್ಯ ನಡೆಯಿತಂತೆ. ಇದು ದೊಡ್ದ ಚರ್ಚು ಹೇಳಿದ ಮಾತು ಈ ಚರ್ಚಿನ ಮಾತು ಮೀರುವವರುಂಟೇ. ಬೈಬಲ್ಲಿನಲ್ಲಿ ಹೇಳಿದಂತೆ ಕ್ರಿ.ಪೂ 4004ರಲ್ಲಿ ಹುಟ್ಟಿದ ಆಡಮ್ ರಿಗೆ ತಮ್ಮ130ನೇ ವರ್ಷದಲ್ಲಿ ಮಗನೂ, 235ನೇ ವರ್ಷದಲ್ಲಿ ಮೊಮ್ಮಗನೂ ಹುಟ್ಟಿ, 930ನೇ ವರ್ಷದಲ್ಲಿ ಅಂದರೆ ಕ್ರಿ.ಪೂ 3074ರಲ್ಲಿ ಸಾಯುವಾಗ ಏಳನೇ ತಲೆಮಾರು ಹುಟ್ಟಿತ್ತು. ಬೈಬಲ್ ಇದಮಿತ್ಥಂ ಎಂದು ಹೇಳಿದಾಗ ಅಂದಿಗೆ ಹತ್ತಾರು ಸಾವಿರ ವರ್ಷಗಳ ಹಿಂದೆ ಭಾರತದಲ್ಲಿ ನಾಗರಿಕತೆ ಬೆಳೆದು ಉಚ್ಛ್ರಾಯ ಸ್ಥಿತಿಗೆ ತಲುಪಿತ್ತು ಎಂದರೆ ಅದು ಸಮಂಜಸವೇ ?ಇರಲಾರದು ಎನ್ನುವ ಮನಸ್ಥಿತಿ. ಭಾರತದಲ್ಲಿ ರಾಜಾಧಿರಾಜರು ಆಳಿದ್ದರೆಂದರೇನು? ಇದು ನಂಬಿಕೆಗೆ ಅರ್ಹವಲ್ಲವೆನ್ನುವ ಮನಸ್ಥಿತಿ. ಅದಕ್ಕಾಗಿಯೇ ಅಂದೆಂದೋ ಇದ್ದ ಸರಸ್ವತಿ ನಾಗರಿಕತೆಯನ್ನು ಧರಧರನೆ ಎಳೆದು ತಂದು ಕ್ರಿ.ಪೂ 2000ರದಾಚೀಚೆ ನಿಲ್ಲಿಸಿದರು. ರಾಮಾಯಣ, ಮಹಾಭಾರತಗಳೆಲ್ಲ ಅದರ ನಂತರವೇ ಆಯಿತು. ಕ್ರಿ.ಪೂ 16ನೇ ಶತಮಾನದಲ್ಲಿದ್ದ ಚಂದ್ರಗುಪ್ತ ಮೌರ್ಯ ಕ್ರಿ.ಪೂ 237ರಲ್ಲಿ ಅಲೆಕ್ಸಾಂಡರ್ ಭಾರತಕ್ಕೆ ಬರುವಾಗ ಹೇಗೂ ಸಿಕ್ಕಿಬಿದ್ದ. ಅಷ್ಟೇ ಆಗಿದ್ದರೆ ಕಷ್ಟವಿರುತ್ತಿರಲಿಲ್ಲ. ಇತಿಹಾಸದ ಪುಟಗಳಲ್ಲಿ ಎರಡು ಸಾವಿರ ವರ್ಷಗಳನ್ನು ಮಾಯಮಾಡಿದವರಿಗೆ ಆ ಕಾಲದಲ್ಲಿ ಆಳಿದ ರಾಜರನ್ನೂ, ರಾಜವಂಶಗಳನ್ನೂ ಏನು ಮಾಡುವುದೆಂಬ ಸಮಸ್ಯೆ ಎದುರಾಯಿತು. ಚಂದ್ರಗುಪ್ತ ಮೌರ್ಯನನ್ನು ಅಲೆಕ್ಸಾಂಡರಿನೊಡನೆ ಸಿಕ್ಕಿಸಲು ಹೋಗಿ ಸಾವಿರದ ಮುನ್ನೂರು ವರ್ಷಗಳ ಕಾಲ ಆಡಳಿತ ನಡೆಸಿದ್ದ 'ಅಗ್ನಿವಂಶ'ದ ನಾಲ್ಕು ರಾಜಮನೆತನಗಳೇ ಚರಿತ್ರೆಯ ಪುಟಗಳಲ್ಲಿ ಕಳೆದುಹೋದವು. ಇಲ್ಲಿ ಆಳ್ವಿಕೆ ನಡೆಸಿದ್ದ ನೂರಾರು ಅರಸರಲ್ಲಿ ಅವರಿಗೆ ಸಿಕ್ಕಿದ್ದು ಭೋಜರಾಜನೊಬ್ಬನೇ. ಬೇರೆ ಬೇರೆ ಕಾಲದಲ್ಲಿದ್ದ ಶುಂಗ, ಕಣ್ವ, ಆಂಧ್ರ ರಾಜವಂಶಗಳನ್ನು ಒಂದೇ ಸಮಯದಲ್ಲಿ ಒಂದೇ ಕಡೆ
ಆಳುವಂತೆ ಮಾಡಿ ಅಲ್ಲೋಲಕಲ್ಲೋಲಗೊಳಿಸಿದರು. ಅಷ್ಟು ಮಾತ್ರವಲ್ಲ. ಕ್ರಿ.ಪೂ 918ರಿಂದ-833ರವರೆಗೆ 'ಕಣ್ವ ವಂಶ'ದ ನಾಲ್ವರು ರಾಜರು ಆಳಿದ್ದಾರೆಂದು ನಮ್ಮಪುರಾಣಗಳು ಹೇಳಿದರೆ ವಿಲಿಯಂ ಜೋನ್ಸ್ ಎಂಬ ಇತಿಹಾಸಕಾರ ಶುಂಗರ ಕಾಲವನ್ನು ಮಾತ್ರ ಕಣ್ವರಿಗೆ ಜೋಡಿಸಿ, ಆ ನಾಲ್ವರು ರಾಜರನ್ನು ಅದೃಶ್ಯಮಾಡಿ ಕ್ರಿ.ಪೂ 1253ರಿಂದ - ಕ್ರಿ.ಪೂ 908ರವರೆಗೆ ಕಣ್ವರ ನಾಲ್ಕು ರಾಜರು ಆಳ್ವಿಕೆ ನಡೆಸಿದರೆ ಒಬ್ಬೊಬ್ಬರೂ 86 ವರ್ಷಗಳು ಆಡಳಿತ ನಡೆಸಿದಂತಾಗುತ್ತದೆ. ಇಷ್ಟು ವರ್ಷ ಯಾವ ರಾಜನೂ ಆಳ್ವಿಕೆ ನಡೆಸುವುದು ಪ್ರಕೃತಿ ಕ್ರಮಕ್ಕೆ ವಿರುದ್ಧ, ಹಿಂದೂ ಸಂಸ್ಕೃತಿಗೆ ಸಾಧ್ಯವಾದಷ್ಟು ಹಿಂದಿನ ಪ್ರಾಚೀನತೆಯನ್ನು ಕೊಡಲು ಇವೆಲ್ಲ 'ಪುರೋಹಿತಷಾಹಿ' ಬ್ರಾಹ್ಮಣರು ಮಾಡಿದ ಕುತಂತ್ರ ಎಂದು ಇತಿಹಾಸ ನಿರ್ಮಿಸಿ ಬಿಟ್ಟ. ಸಿಕ್ಕಸಿಕ್ಕವರನ್ನು ಕಂಡಕಂಡಲ್ಲಿ ತುಂಬಿಸಿ ಮಿಕ್ಕುಳಿದ ರಾಜರು ನಿಜವಾಗಿಯೂ ಹುಟ್ಟಿಯೇ ಇಲ್ಲ, ಅವರ ಅಸ್ತಿತ್ವವೆಲ್ಲ ಸುಳ್ಳೆಂದು ನಿರ್ಧರಿಸಿ ಸಮಾಧಿ ಮಾಡಿಬಿಟ್ಟರು. ಹೀಗೆ ಸಮಾಧಿಗೊಂಡವರಲ್ಲಿ ಪ್ರಸಿದ್ಧ ಶಕಕರ್ತರಾದ ವಿಕ್ರಮಾದಿತ್ಯ ಮತ್ತು ಶಾಲಿವಾಹನರು ಮೊದಲಿಗರು.
ಇದಕ್ಕೆ ಕಾರಣ ಬ್ರಿಟಿಷ್ ಚರಿತ್ರಕಾರರ ಎಳೆದಾಟದಲ್ಲಿ ಕ್ರಿ.ಪೂ 1534ರಲ್ಲಿದ್ದ ಚಂದ್ರಗುಪ್ತ ಮೌರ್ಯ ಅಲೆಕ್ಸಾಂಡರಿನ ಕಾಲವಾದ ಕ್ರಿ.ಪೂ 322ಕ್ಕೆ ಬಂದು ಬಿದ್ದಿದ್ದ. ಅದೇ ಕಾಲದಲ್ಲಿದ್ದ ಗುಪ್ತರು ಕ್ರಿ.ಶ 320 ರಷ್ಟು ಈಚೆಗೆ ಸರಿದು ಹೋದರು. ಅವರ ನಂತರ ಬಂದ ವಿಕ್ರಮಾದಿತ್ಯನನ್ನು ಇಡುವುದೆಲ್ಲಿ? ಸಣ್ಣಪುಟ್ಟ ರಾಜನಾಗಿದ್ದರೆ ಓಡಿಸಬಹುದಿತ್ತು. ಆದರೆ ಅವನು ಕ್ರಿ.ಪೂ 57ರಲ್ಲಿ ಶುರುಮಾಡಿದ ವಿಕ್ರಮ ಶಕೆ ಇಂದಿಗೂ ಜನಮಾನಸದ ಮನಸ್ಸಿನಲ್ಲಿ ಭದ್ರವಾಗಿ ಕೂತಿದೆಯಲ್ಲ. ಅಂಥವನನ್ನು ಗುಪ್ತರ ಕಾಲದಿಂದ ಈಚೆ ಎಳೆಯುವುದು ಸುಲಭದ ಮಾತಾಗಿರಲಿಲ್ಲ. ಆದ್ದರಿಂದ ಆ ವ್ಯಕ್ತಿ ಹುಟ್ಟಿಯೇ ಇಲ್ಲ, ಅವನೊಬ್ಬ ಅಪ್ಪಟ್ಟ ಕಾಲ್ಪನಿಕ ಕಥೆಯವನು ಎಂದು ಆಜ್ಞೆ ಮಾಡಿ ಚರಿತ್ರೆಯಲ್ಲಿ ಅವನಿಗೆ ಸ್ವಲ್ಪವೂ ಜಾಗಸಿಗದಂತೆ ಮಾಡಿಬಿಟ್ಟರು. ಅವನ ನಂತರ ಬಂದ ಶಾಲಿವಾಹನನಿಗೂ ಇದೇ ಗತಿಯಾಯ್ತು.
ಅಸಲಿಗೆ ಇವರಿಬ್ಬರೂ ಹಿಮಾಲಯದಿಂದ ದಕ್ಷಿಣದವರೆಗೆ ಭಾರತವನ್ನಾಳಿದ ಪ್ರಮೇರ ಅಥವಾ ಪನ್ವರ್ ರಾಜವಂಶದ ಮಹಾನ್ ಚಕ್ರವರ್ತಿಗಳು. ಆದರೆ ನಮ್ಮ ಇತಿಹಾಸಕಾರರು ಇವರನ್ನು ಕಾಲ್ಪನಿಕರನ್ನಾಗಿಸಿ ಇವರು ಪ್ರಾರಂಭಿಸಿದ ಶಕೆಗಳನ್ನು ಅನಾಮಧೇಯ ಶಕ ಅರಸರೊಟ್ಟಿಗೆ ಸೇರಿಸಿಬಿಟ್ಟರು. ಆದರೆ.
ಪೂರ್ಣೇ ತ್ರಿಂಶಶ್ಚಟೇ ವರ್ಷೇ ಕಲೌ ಪ್ರಾಪ್ತೇ ಭಯಂಕರೇ
ಶಕಾನಾಂಚ ವಿನಾಶಾರ್ಧಮ್ ಆರ್ಯಧರ್ಮ ವಿವೃದ್ಧಯೇ
ಜಾತಶ್ಶಿವಂಜಯಸ್ಸೋಪಿ ಕೈಲಾಸಾತ್ ಗುಹ್ಯಕಾಲಯತ್ (ಭವಿಷ್ಯತ್ಪುರಾಣ, ಶ್ಲೋಕ 3-1-7-14,15)
ಮೂರುಸಾವಿರ ವರ್ಷಗಳ ಭಯಂಕರ ಕಲಿಯುಗದ ನಂತರ ಶಕರನ್ನು ನಾಶಗೊಳಿಸಲು, ಆರ್ಯಧರ್ಮವನ್ನು ಎತ್ತಿಹಿಡಿಯಲು ಶಿವನ ವರಪ್ರಸಾದದಿಂದ ಒಬ್ಬನು ಜನಿಸಿದನು. ಅವನ ತಂದೆಯ ಹೆಸರು ಗಂಧರ್ವಸೇನ. ಗಂಧರ್ವಸೇನನು ತನ್ನ ಮಗನಿಗೆ ವಿಕ್ರಮಾದಿತ್ಯನೆಂದು ಹೆಸರಿಟ್ಟನು. ವಿಕ್ರಮನು ಐದು ವರ್ಷದವನಿದ್ದಾಗ ಕಾಡಿಗೆ ತೆರಳಿ ಹನ್ನೆರಡು ವರ್ಷಗಳ ಕಾಲ ತಪಸ್ಸನ್ನಾಚರಿಸಿದನು. ತಪಸ್ಸಿನ ನಂತರ ಪುನಃ ಅಂಬಾವತಿ(ಉಜ್ಜೈನಿ)ಗೆ ಮರಳಿ 32 ಮೂರ್ತಿಗಳುಳ್ಳ ಸ್ವರ್ಣಸಿಂಹಾಸನವನ್ನೇರಿದನು.

ಭವಿಷ್ಯತ್ಪುರಾಣದ ಶ್ಲೋಕಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ. ಕಲಿಯುಗ ಆರಂಭವಾಗಿದ್ದು ಕ್ರಿ.ಪೂ 3101-02 ರ ಸುಮಾರಿಗೆ. ಕಲಿಯುಗದ ೩೦೦೦ನೇ ವರ್ಷದಲ್ಲಿ ವಿಕ್ರಮಾದಿತ್ಯನ ಜನನವಾಗಿದ್ದು ಅರ್ಥಾತ್ ಕ್ರಿ.ಪೂ 101ರಲ್ಲಿ. ಈತ ಸಿಂಹಾಸನವನ್ನೇರಿದ್ದು ಕ್ರಿ.ಪೂ 82ರಲ್ಲಿ. ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ವಿಕ್ರಮಾದಿತ್ಯನೆಂಬುದು ಆತನಿಗೆ ಸಿಕ್ಕಿದ ಬಿರುದಲ್ಲ ಅದು ಆತನಿಗೆ ಹುಟ್ಟಿದಾಗಿನಿಂದ ಇದ್ದ ಹೆಸರು.
ನಮ್ಮ ಪುರಾಣದಲ್ಲಿ ಪ್ರಮಾರ ರಾಜವಂಶದ 32 ರಾಜರುಗಳ ಉಲ್ಲೇಖ ಸಿಗುತ್ತದೆ. ಈ ರಾಜವಂಶದ 8ನೇ ಚಕ್ರವರ್ತಿಯೇ ವಿಕ್ರಮಾದಿತ್ಯ. ವಿಕ್ರಮನ ನಂತರ ಅವನ ರಾಜ್ಯವು ಹದಿನೆಂಟು ಭಾಗಗಳಾಗಿ ಒಡೆದು ಹೋಯ್ತು. ಶಕರು, ಹೂಣರು ಮತ್ತೊಮ್ಮೆ ಭಾರತದತ್ತ ದಂಡೆತ್ತಿ ಬಂದರು. ಇಂಥ ಸಂದರ್ಭದಲ್ಲಿ ಇಡೀ ಭಾರತವನ್ನು ಏಕಛತ್ರಾಧಿಪತ್ಯದಡಿ ತಂದು ಶಕರನ್ನುದೇಶದಿಂದಾಚೆಗೆ ಓಡಿಸಿದವನೇ ವಿಕ್ರಮನ ಮರಿಮೊಮ್ಮಗನಾದ ಪ್ರಮಾರರ 11ನೇ ಚಕ್ರವರ್ತಿ ಶಾಲಿವಾಹನ. ಭವಿಷ್ಯತ್ ಪುರಾಣದ ನೂರು ಅಧ್ಯಾಯಗಳಲ್ಲಿ 72 ಅಧ್ಯಾಯಗಳು ಅಗ್ನಿವಂಶದ ನಾಲ್ಕು ರಾಜಕುಲಗಳ ವರ್ಣನೆಗೇ ಮೀಸಲಾಗಿವೆ. ಇವುಗಳಲ್ಲಿ 44 ಅಧ್ಯಾಯಗಳಲ್ಲಿರುವುದು ಕೇವಲ ವಿಕ್ರಮಾದಿತ್ಯ ಮತ್ತು ಶಾಲಿವಾಹನರ ವರ್ಣನೆಯೇ. ಇಷ್ಟೆಲ್ಲ ದಾಖಲೆಗಳಿದ್ದರೂ ಇತಿಹಾಸದಿಂದ ಇಲ್ಲವಾಗಿಸಿದ ನಮ್ಮವರು ನಮ್ಮ ಈ ಪುರಾಣಗಳ ಉಲ್ಲೇಖ ಅವರಿಗೆ ಸಾಧುವೆನಿಸದು.
ಇದೇ ವಿಕ್ರಮಾದಿತ್ಯನ ಆಸ್ಥಾನದ ನವರತ್ನಗಳಲ್ಲೊಂದಾಗಿ ಮೆರೆದವನು ಕವಿಕುಲಗುರು ಕಾಳಿದಾಸ. ವಿಕ್ರಮನನ್ನು ಇಲ್ಲವೆನಿಸಿದಂತೆ ಕಾಳಿದಾಸನನ್ನು ಕ್ರಿಸ್ತ ಪೂರ್ವದಲ್ಲಿ ಇಲ್ಲವೆನಿಸುವುದು ಕಷ್ಟದ ಕೆಲಸವಾಗದೇ ಕ್ರಿಸ್ತ ಶಕೆಗೆ ತಂದು ನಿಲ್ಲಿಸಿ ಅಲ್ಲಿಯೂ ಗೊಂದಲವಾಇಗಿಸಿದ ಕೀರ್ತಿ ನಮ್ಮ ತಥಾಕಥಿತರಿಗೇ ಸಲ್ಲುತ್ತದೆ. ನಮಗೆ ತಿಳಿದ ಏಳು ಕೃತಿಗಳನ್ನು ಹೊರತುಪಡಿಸಿ ಈ ಕಾಳಿದಾಸ ಶ್ಯಾಮಲಾ ದಂಡಕ, ಘಟಕರ್ಪರ ಕಾವ್ಯವೇ ಇತ್ಯಾದಿ ಸಣ್ಣ ಪುಟ್ಟ ಲಘುಕಾವ್ಯಗಳನ್ನು ರಚಿಸಿದ್ದನೆಂದು ತಿಳಿದುಬರುತ್ತದೆ. ಇದೇ ಕಾಳಿದಾಸನ ಇನ್ನೊಂದು ಕೃತಿ ಜ್ಯೋತಿಷ್ಯ ಶಾಸ್ತ್ರವನ್ನಾಧರಿಸಿದ ’ಜ್ಯೋತಿರ್ವಿದಾಭರಣ’. ಇದರಲ್ಲಿ ಕಾಳಿದಾಸ ವಿವಿಧ ಶಕೆಗಳ ಬಗ್ಗೆ ವಿವರವಾಗಿ ಬರೆದಿದ್ದಾನೆ. ಅವನೇ ಹೇಳುವಂತೆ ಕಲಿಯುಗದಲ್ಲಿ ಆರು ಶಕೆಗಳು ಮತ್ತು ಶಕಕರ್ತೃರಿದ್ದಾರೆ.

ಯುಧಿಷ್ಟಿರೋ ವಿಕ್ರಮಶಾಲಿವಾಹನೌ
ನರಾಧಿನಾಥೋ ವಿಜಯಾಭಿನಂದನಃ |
ಇಮೇನ ನಾಗಾರ್ಜುನಮೇದಿನೀವಿಭು
ರ್ಬಲಿ ಕ್ಷಮಾತ್ ಷಟ್ ಶಕಕಾರಕಾ: ||

ಕಲಿಯುಗದ ಆರು ಶಕಕರ್ತೃರು ಯುಧಿಷ್ಟಿರ, ವಿಕ್ರಮಾದಿತ್ಯ, ಶಾಲಿವಾಹನ, ವಿಜಯಾಭಿನಂದನ, ನಾಗಾರ್ಜುನ ಮತ್ತು ಬಲಿ.
ಕ್ರಿ.ಪೂ 3102ರಲ್ಲಿ ಆರಂಭವಾದ 4,32,000 ವರ್ಷಗಳ ಕಲಿಯುಗದಲ್ಲಿ ಯುಧಿಷ್ಟಿರ ಶಕೆ 3044 ವರ್ಷಗಳು (ಯುಧಿಷ್ಟಿರ ಶಕೆಯ ಒಟ್ಟೂ ಕಾಲ ದ್ವಾಪರ ಯುಗದ 36 + ಕಲಿಯುಗದ 3044 ವರ್ಷಗಳು = 3080 ವರ್ಷ, ಯುಧಿಷ್ಟಿರ ಶಕೆ ಶುರುವಾಗಿದ್ದು ಮಹಾಭಾರತ ಯುದ್ಧ ಮುಗಿದ ನಂತರ ಅರ್ಥಾತ್ ಕ್ರಿ.ಪೂ 3138ರಲ್ಲಿ).
ವಿಕ್ರಮಾದಿತ್ಯನಿಂದ ಶುರುವಾದ ವಿಕ್ರಮಶಕೆಯ ಅವಧಿ 135 ವರ್ಷ. ಅಂದರೆ 3044ನೇ ಕಲಿಯುಗ ವರ್ಷದಿಂದ 3179ನೇ ಕಲಿಯುಗ ವರ್ಷದವರೆಗೆ.(ಕ್ರಿ.ಪೂ 57ರಿಂದ ಕ್ರಿ.ಶ 78ರ ತನಕ)
ಶಾಲಿವಾಹನ ಶಕೆಯ ಅವಧಿ 18,೦೦೦ ವರ್ಷಗಳು. 3179ನೇ ಕಲಿಯುಗ ವರ್ಷದಿಂದ 21,179ನೇ ಕಲಿಯುಗ ವರ್ಷದವರೆಗೆ.(ಕ್ರಿ.ಶ 78- ಕ್ರಿ.ಶ 21257)
ಇದಾದ ನಂತರ 1೦,೦೦೦ ವರ್ಷಗಳ ವಿಜಯಾಭಿನಂದನ ಶಕೆ, 4 ಲಕ್ಷ ವರ್ಷಗಳ ನಾಗಾರ್ಜುನ ಶಕೆ, 821 ವರ್ಷಗಳ ಬಲಿ ಶಕೆ ಬರಲಿಕ್ಕಿದೆಯಷ್ಟೆ. ಇವು ಆರನ್ನೂ ಸೇರಿಸಿದರೆ ಅದು ಕಲಿಯುಗದ ಅವಧಿಯಾದ 4,32,000 ವರ್ಷಗಳಾಗುತ್ತದೆ. ಕೊನೆಯ ಮೂರು ಶಕೆಗಳು ಭವಿಷ್ಯತ್ಕಾಲದ್ದಾದ್ದರಿಂದ ಅವುಗಳ ಚಿಂತೆ ಬಿಟ್ಟುಬಿಡೋಣ.
ಜ್ಯೋತಿರ್ವಿಧಾಭರಣದಲ್ಲಿ
ಯುಧಿಷ್ಟೀರೋಭೂ ದ್ಭುವಿ ಹಸ್ತಿನಾಪುರೇ | ತಥೋಜ್ಜಯಿನ್ಯಾಂ ಪುರಿ ವಿಕ್ರಮಾಹವಯಃ ||
ಶಾಲೇಯಧಾರಾಭೃತಿ ಶಾಲಿವಾಹನಃ | ಸುಚಿತ್ರಕೂಟೇ ವಿಜಯಾಭಿನಂದನಃ ||
ನಾಗಾರ್ಜುನೋ ರೋಹಿತಕೇ ಕ್ಷಿತೌ ಬಲಿ | ರ್ಭವಿಷತೀಂದ್ರೋ ಭೃಗುಕಚ್ಛಪತ್ತನೇ ||
ಚಂದ್ರವಂಶದ ಯುಧಿಷ್ಟಿರನ ರಾಜಧಾನಿ ಹಸ್ತಿನಾಪುರ, ಪ್ರಮಾರ ವಂಶದ ವಿಕ್ರಮನದ್ದು ಉಜ್ಜಯಿನೀ, ಅದೇ ವಂಶದ ಶಾಲಿವಾಹನನ ರಾಜಧಾನಿ ಧಾರಾನಗರ. ಗೋಹಿಲ ವಂಶದ ವಿಜಯಾಭಿನಂದನನದ್ದು ಚಿತ್ರಕೂಟ, ಸಿಸೋದರ ಕುಲದ ನಾಗಾರ್ಜುನ ಆಳುವುದು ರೋಹಿತಕದಲ್ಲಿ, ಕಲ್ಕಿವಂಶದ ಬಲಿಯ ರಾಜಧಾನಿ ಭೃಗುಕಚ್ಛ.
ಇದೇ ಕಾಳಿದಾಸ ವಿಕ್ರಮನನ್ನು ಮುಂದಿನ ಶ್ಲೋಕದಲ್ಲಿ ಹೊಗಳಿದ್ದಾನೆ.

ದೀಯತಾಂ ದಶಲಕ್ಷಾಣಿ ಶಾಸನಾನಿ ಚತುರ್ದಶ |
ಹಸ್ತೇ ನ್ಯಸ್ತಚತುಃಶ್ಲೋಕೇ ಉತಾಗಚ್ಛತು ಗಚ್ಛತು ||
ಸರಸ್ವತೀ ಸ್ಥಿತಾ ವಕ್ತ್ರೇ ಲಕ್ಷ್ಮೀಃ ಕರಸರೋರುಹೇ |
ಸರ್ವದಾ ಸರ್ವದೋ ಸೀತಿ ಮಿಥ್ಯಾ ಸಂಸ್ತೂಯಸೇ ಬುಧೈ |
ನಾರಯೋ ಲೇಭಿರೇ ಪೃಷ್ಟಂ ನ ವಕ್ಷಃ ಪರಯೋಷಿತಃ ||

ವಿಕ್ರಮನು ಎಷ್ಟು ದೊಡ್ಡ ವಿದ್ವಜ್ಜನಪೋಷಕನೆಂದರೆ ಕೈಯಲ್ಲಿ ನಾಲ್ಕು ಶ್ಲೋಕಗಳಿದ್ದರೆ ಅವನನ್ನು ಎಂಥ ಸಮಯದಲ್ಲೂ ಭೇಟಿಯಾಗಬಹುದಿತ್ತಂತೆ. ಕವಿಗಳ ಪ್ರತಿ ಶ್ಲೋಕಕ್ಕೂ ಹತ್ತು ಲಕ್ಷ ವರಹಗಳು, ಅದಕ್ಕಾಗಿ ಹದಿನಾಲ್ಕು ಶಾಸನಗಳು ಬಹುಮಾನವಾಗಿ ದೊರೆಯುತ್ತಿದ್ದವು.
ಹೇ ರಾಜನೇ! ಸರಸ್ವತಿಯೇ ನಿನ್ನ ಮುಖ, ಲಕ್ಷ್ಮಿಯೇ ನಿನ್ನ ಕೈಗಳು. ವಿದ್ವಾಂಸರು ನಿನ್ನನ್ನು ಕೇಳಿದ್ದೆಲ್ಲ ಕೊಡುವ ದಾನಿಯೆಂದು ಹೊಗಳುತ್ತಾರೆ. ಅದು ಮಾತ್ರ ಬರಿ ಸುಳ್ಳು. ಶತ್ರುಗಳಿಗೆ ನಿನ್ನ ಬೆನ್ನು, ಮತ್ತು ಪರಸ್ತ್ರೀಯರಿಗೆ ನಿನ್ನ ಎದೆ ಎಂದಿಗೂ ಸಿಗಲಾರದು.
ಏಳನೇ ಶತಮಾನದ ಭೋಜರಾಜನನ್ನು ಕುರಿತು ಹದಿನೈದನೇ ಶತಮಾನದಲ್ಲಿ ಬಂದ ಭೋಜಪ್ರಬಂಧದಲ್ಲಿ ಇದೇ ಶ್ಲೋಕಗಳನ್ನು ಬಳಸಿಕೊಳ್ಳಲಾಗಿದೆ ! ವರರುಚಿ, ಭಾಸ, ಮಾಘ, ಭವಭೂತಿ, ದಂಡಿ, ಕಾಳಿದಾಸರು ಸೇರಿ ಸಂಸ್ಕೃತ ಕವಿಗಳನ್ನೆಲ್ಲ ಭೋಜನ ಆಸ್ಥಾನದಲ್ಲಿದ್ದರೆಂಬಂತೆ ಒಟ್ಟಿಗೆ ತುರುಕಿ ಕಲಸುಮೆಲೋಗರಗೊಳಿಸಿದ ಭೋಜಪ್ರಬಂಧವೆಂಬ ಶುದ್ಧ ಕಾಲ್ಪನಿಕ ಕೃತಿಯನ್ನು ಹಿಡಿದುಕೊಂಡು ಇತಿಹಾಸಕಾರರು ಭೋಜನನ್ನೇ ವಿಕ್ರಮಾದಿತ್ಯನನ್ನಾಗಿಸಿದರು. ಭೋಜಪ್ರಬಂಧದ ಅರ್ಧಕ್ಕರ್ಧ ಕಥೆ ೧೩ನೇ ಶತಮಾನದಲ್ಲಿ ರಚಿತವಾದ ಕುಮಾರದಾಸನ ಕುರಿತಾದ ಸಿಂಹಳದ ’ಪೂಜಾವಳಿ’ ಎಂಬ ಕೃತಿಯನ್ನು ಬಳಸಿಕೊಂಡದ್ದು. ಶುದ್ಧ ವೈದಿಕ ಕಾಳಿದಾಸ ಕುರಿಕಾಯುವ ಪೆದ್ದನಾಗಿಬಿಟ್ಟ.
ವಿಕ್ರಮನ ಆಸ್ಥಾನ ಜ್ಯೋತಿಷಿಯಾದ ಶ್ರೀಕೃಷ್ಣಮಿಶ್ರನ ಜ್ಯೋತಿಷ್ಯಫಲರತ್ನಮಾಲಾ ಗ್ರಂಥದಲ್ಲಿ.

ಶ್ರೀವಿಕ್ರಮಾರ್ಕೋ ಜಗತೀತಲೇಸ್ಮಿನ್ | ಜೀಯಾನ್ಮನುಪ್ರಖ್ಯಯಶಾ ನರೇಂದ್ರಃ ||
ಪುಪೋಷ ಯಃ ಕೋಟಿಸುವರ್ಣತೋ ಮಾಂ | ಸಬಾಂಧವಂ ಸಪ್ತತಿ ವತ್ಸರಾಣಿ ||

ನನ್ನನ್ನೂ, ನನ್ನ ಬಂಧುಗಳನ್ನೂ ಎಪ್ಪತ್ತು ವರ್ಷಗಳ ಕಾಲ ಕಾಪಾಡಿದ, ನನಗೆ ಒಂದು ಕೋಟಿ ಸುವರ್ಣ ನಾಣ್ಯಗಳಿಂದ ಕನಕಾಭಿಷೇಕ ನಡೆಸಿದ ಅಭಿನವ ಮನುವಿನಂಥ ವಿಕ್ರಮಾದಿತ್ಯ ಚಕ್ರವರ್ತಿಯು ಯಾವಾಗಲೂ ಶಾಂತಿ ಮತ್ತು ಯಶಸ್ಸಿನಿಂದ ರಾರಾಜಿಸುವಂಥಾಗಲಿ ಎಂದು ಹಾರೈಸುತ್ತಾನೆ.
ವಿಕ್ರಮನು ದಕ್ಷಿಣ ಸಾಗರದಿಂದ ಹಿಮಾಲಯದವರೆಗೂ ಆಡಳಿತ ನಡೆಸಿ, ಶಕರನ್ನು ಒದ್ದೋಡಿಸಿ, ನೇಪಾಳವನ್ನು ಗೆದ್ದು ಅಂಶುವರ್ಮನನ್ನು ಸಾಮಂತನನ್ನಾಗಿಸಿ ವಿಕ್ರಮ ಶಕೆಯನ್ನು ಕ್ರಿ.ಪೂ 57ರಲ್ಲಿ ಸ್ಥಾಪಿಸಿದ. ಇದಾದ ನಂತರ ಉಜ್ಜೈನಿಗೆ ಹಿಂದಿರುಗಿ 7೦ ವರ್ಷಗಳ ಕಾಲ ಕವಿಗಳು, ವಿದ್ವಾಂಸರ ಜೊತೆ ತನ್ನ ಆಸ್ಥಾನದಲ್ಲಿ ಕಾಲಕ್ಷೇಪ ನಡೆಸಿದ. ವಿಕ್ರಮ ಪಟ್ಟಕ್ಕೇರಿದ್ದು 2೦ನೇ ವರ್ಷದಲ್ಲಿ, ನಂತರ 24 ವರ್ಷಗಳ ಕಾಲ ದಂಡಯಾತ್ರೆಯಲ್ಲಿ ಈಡೀ ಭರತಖಂಡವನ್ನು ಗೆದ್ದು ಶಕಸ್ಥಾಪಕನಾಗಿ, ಜ್ಯೋತಿಷ್ಯಫಲರತ್ನಮಾಲದ ರಚನೆಯ ವೇಳೆಗೆ 7೦ ವರ್ಷಗಳನ್ನು ವಿದ್ವಾಂಸರ ಮಧ್ಯೆ ಕಳೆದಿದ್ದ.
ಕಾಶ್ಮೀರವನ್ನಾಳಿದ 82ನೇ ಅರಸು ಹಿರಣ್ಯನು ಸಂತಾನವಿಲ್ಲದೇ ಕ್ರಿ.ಶ 14ರಲ್ಲಿ ತೀರಿಕೊಂಡಾಗ ಸಿಂಹಾಸನ ಮ್ಲೇಚ್ಛರ ವಶವಾಗಬಹುದೆಂದು ಹೆದರಿ ಕಾಶ್ಮೀರ ರಾಜಾಸ್ಥಾನದವರು ವಿಕ್ರಮನಲ್ಲಿ ಮೊರೆಯಿಟ್ಟರಂತೆ. ಆಗ ತನ್ನ ಮಂತ್ರಿ ಮಾತ್ರಗುಪ್ತನನ್ನು ಕಾಶ್ಮೀರದ ಅರಸನನ್ನಾಗಿ ವಿಕ್ರಮನು ನೇಮಿಸಿ ಇಡೀ ಭರತವರ್ಷವನ್ನು ಏಕಚಕ್ರಾಧಿಪತ್ಯದಡಿ ತಂದನು. ಈ ಘಟನೆ ನಡೆದಾಗ ಅವನಿಗೆ ೧೧೫ ವರ್ಷಗಳಾಗಿದ್ದವು. ಇದಾದ ಐದನೇ ವರ್ಷ ವಿಕ್ರಮನು ಗತಿಸಿದನೆಂದು ಕಲ್ಹಣನ ರಾಜತರಂಗಿಣಿಯೂ ಸಹ ಉಲ್ಲೇಖವಿದೆ. ಕಲ್ಹಣನು ಕಾಳಿದಾಸನಿಗಿಂತ ಒಂದು ಹೆಜ್ಜೆ ಮುಂದೆಯೇ ಹೋಗಿ ’ಶಕರನ್ನೂ, ಮ್ಲೇಚ್ಛರನ್ನೂ ಸಂಹರಿಸಲು ಮಹಾವಿಷ್ಣುವೇ ಭೂಮಿಯಲ್ಲಿ ಅವತಾರವೆತ್ತಬೇಕೆಂದಿದ್ದ. ಆದರೆ ವಿಕ್ರಮನು ವಿಷ್ಣುವಿನ ಕೆಲಸವನ್ನು ಹಗುರಗೊಳಿಸಲು ತಾನೇ ಮ್ಲೇಚ್ಛರನ್ನು ನಾಶಗೊಳಿಸಿದನೆಂದು ಹೊಗಳಿದ್ದಾನೆ.
ಹೀಗೆ ಒಂದೆರಡು ಕವಿ, ಇತಿಹಾಸಕಾರರಲ್ಲ, ಮತ್ಸ್ಯ, ಬ್ರಹ್ಮಾಂಡ ಪುರಾಣ, ಶತಪಥ ಬ್ರಾಹ್ಮಣದಿಂದ ಮೊದಲ್ಗೊಂಡು ನೇಪಾಳರಾಜವಂಶಾವಳೀ, ಕಲಿಯುಗ ರಾಜವೃತ್ತಾಂತ, ಬೌದ್ಧರ ದೀಪವಂಶ-ಮಹಾವಂಶ, ಟಾಲೆಮಿಯ ದಾಖಲೆಗಳು, ಭಾಸ್ಕರಾಚಾರ್ಯನ ಸಿದ್ಧಾಂತಶಿರೋಮಣಿ, ಸೋಮನಾಥ ಮಿಶ್ರನ ಜ್ಯೋತಿಷ್ಯ ಕಲ್ಪಲತಾ ಸೇರಿದಂತೆ ಅಸಂಖ್ಯ ಜಾನಪದ, ಪೌರಾಣಿಕ ಕಥೆಗಳೂ ವಿಕ್ರಮನನ್ನು ಬಾಯ್ತುಂಬ ಹೊಗಳಿವೆ.
ಇನ್ನು ಶಾಲಿವಾಹನನೂ ಸಾಮಾನ್ಯನಲ್ಲ. ಈತ ಅದೇ ವಿಕ್ರಮಾದಿತ್ಯನ ಮರಿಮೊಮ್ಮಗ. ಅಜ್ಜನನ್ನೇ ಇಲ್ಲವೆನ್ನಿಸಿದವರಿಗೆ ಮೊಮ್ಮಗನನ್ನು ಇಲ್ಲವೆನಿಸುವುದು ಕಷ್ಟದ ಕೆಲಸವಲ್ಲ. ’ವಾಹನ’ ಪ್ರಾಸಪದವನ್ನೇ ಹಿಡಿದುಕೊಂಡು ಶಾಲಿವಾಹನನನ್ನು ’ಶಾತವಾಹನ’ ಅರಸನನ್ನಾಗಿಸಿ ಅವನಿಗಿಂತ ನಾನೂರು ವರ್ಷ ಮೊದಲಿದ್ದ ಶಾತವಾಹನರ ಗೌತಮೀಪುತ್ರ ಶಾತಕರ್ಣಿಯೊಡನೆ ಗಂಟುಹಾಕಿದರು. ಅಲ್ಲಿಗೆ ಇತಿಹಾಸದ ಕಥೆಯೇ ಮುಗಿಯಿತು. ಇಂಥ ಗಂಟುಗಳನ್ನು ಬಿಡಿಸಲಾಗದ ನಮ್ಮ ಇತಿಹಾಸದ ಪುಸ್ತಕಗಳೆಲ್ಲ ಇನ್ನಷ್ಟು ಗಂಟು ಗಂಟಾಗಿ ಕಗ್ಗಂಟಾಗಿ ರಾಡಿಯಾಗಿವೆ. ಶಾಲಿವಾಹನನು ವಿಕ್ರಮನ ನಂತರ ಅರವತ್ತು ವರ್ಷಗಳ ಅರಾಜಕತೆಯಲ್ಲಿ ಹದಿನೆಂಟು ತುಂಡಾದ ರಾಜ್ಯವನ್ನು ಒಟ್ಟುಗೂಡಿಸಿ, ಪ್ರತಿನಿತ್ಯ ದೇಶವನ್ನು ಲೂಟಿಮಾಡುತ್ತಿದ್ದ ಶಕರು, ಚೀನಿಯರು, ಬಾಹ್ಲೀಕರು, ಕಾಮರೂಪಿಯರು, ರೋಮನ್ನರು, ಟಾರ್ಟರರು, ಮ್ಲೇಚ್ಛರ ದಂಡುಗಳ ರುಂಡಚೆಂಡಾಡಿ ಉಜ್ಜೈನಿಯ ಅಧಿಪತಿಯಾದವ. ಭವಿಷ್ಯತ್ ಪುರಾಣದ ಪ್ರಕಾರ ವಿದೇಶಿಗರನ್ನು ಸಿಂಧೂನದಿಯಾಚೆ ಓಡಿಸಿದ್ದರಿಂದ ನದಿಯೀಚೆಗಿನ ಭಾಗ ಸಿಂಧೂಸ್ಥಾನವೆಂದೂ, ಆಚೆಗಿನ ಭಾಗ ಮ್ಲೇಚ್ಛಸ್ಥಾನವೆಂದೂ ಕರೆಯಲ್ಪಟ್ಟಿತು. ಇವನಿಂದ ಕರೆಯಲ್ಪಟ್ಟ ಸಿಂಧೂಸ್ಥಾನವೇ ಅಪಭೃಂಶವಾಗಿ ಮುಂದೆ ಹಿಂದೂಸ್ಥಾನವೆನಿಸಿದ್ದು. ಈ ದಿಗ್ವಿಜಯದ ಕುರುಹಾಗಿಯೇ ಕ್ರಿ.ಶ 78ರಲ್ಲಿ ಶಾಲಿವಾಹನ ಶಕೆ ಆರಂಭವಾಯಿತು. ಇದು ಇಂದು ನಮ್ಮ ರಾಷ್ಟ್ರೀಯ ಶಕೆಯಾಗಿದೆ.
ಇವನ ಕುರಿತು ಪ್ರಸಿದ್ಧ ಜಾನಪದ ಕಥೆಯೊಂದಿದೆ. ಶಾಲಿವಾಹನನಿಗೆ ಮಣ್ಣಿನ ಆಟಿಕೆಗಳಿಗೆ ಜೀವ ನೀಡಬಲ್ಲ ವಿಶೇಷವಾದ ಶಕ್ತಿಯೊಂದಿತ್ತು. ರಾಜ್ಯಭೃಷ್ಟನಾಗಿದ್ದರೂ, ಯಾರ ನೆರವೂ ಇಲ್ಲದಿದ್ದರೂ, ವಿದೇಶಿಗರೆಲ್ಲ ಒಟ್ಟಾಗಿ ಧಾಳಿ ಮಾಡಿದರೂ ತನ್ನ ಶಕ್ತಿಯನ್ನುಪಯೋಗಿಸಿ ಅವರನ್ನೆಲ್ಲ ಸೋಲಿಸಿಬಿಟ್ಟ. ಶಾಲಿವಾಹನ ಮಣ್ಣಿನಿಂದ ಮಾಡಿದ ಆನೆ, ಕುದುರೆ, ಸೈನಿಕರ ಗೊಂಬೆಗಳಿಗೆ ಜೀವ ನೀಡುತ್ತ ಹೋದನಂತೆ. ಎಷ್ಟು ಬಾರಿ ಹೊಡೆದುರುಳಿಸಿದರೂ ಮತ್ತೆ ಮತ್ತೆ ಮಣ್ಣಿನಿಂದೆದ್ದು ಬರುತ್ತಿದ್ದ ಈ ಸೈನ್ಯವನ್ನು ಎದುರಿಸಲಾಗದೇ ಶಕರು ಧೂಳೀಪಟವಾದರಂತೆ. ಕಥೆಗಳು ಏನೇ ಇದ್ದರೂ ಶಾಲಿವಾಹನ, ವಿಕ್ರಮಾದಿತ್ಯರಿಬ್ಬರೂ ಸಹ ನಮ್ಮ ನೆಲದ ಮಹಾನ್ ಸ್ವಾತಂತ್ರ್ಯವೀರರೆಂಬುದು ನಿರ್ವಿವಾದ. ಅವರನ್ನು ಪುಸ್ತಕಗಳಿಂದಳಿಸಿದಷ್ಟು ಸುಲಭವಾಗಿ ಮನಸ್ಸಿನಿಂದಳಿಸುವುದು ಸಾಧ್ಯವಿಲ್ಲ. ಇಂಥವರನ್ನಳಿಸಲು ಇನ್ನಿಲ್ಲದ ಪ್ರಯತ್ನ ಮಾಡುವ ನಮ್ಮ ಬುದ್ಧಿಜೀವಿ ಇತಿಹಾಸಕಾರರು ಎಷ್ಟೇ ಪ್ರಯತ್ನಿಸಿದರೂ ಅವರು ಮಣ್ಣಿನಿಂದ ಮತ್ತೆ ಮತ್ತೆ ಮೇಲೆದ್ದು ಬರುತ್ತಾರೆ, ಶಾಲಿವಾಹನನ ಗೊಂಬೆಗಳಂತೆ.
ಧನ್ಯವಾದಗಳು.
ಭವಿಷ್ಯತ್ ಪುರಾಣ, ಮತ್ಸ್ಯ, ಬ್ರಹ್ಮಾಂಡ ಪುರಾಣ, ಶತಪಥ ಬ್ರಾಹ್ಮಣ, ನೇಪಾಳರಾಜವಂಶಾವಳೀ, ಕಲಿಯುಗ ರಾಜವೃತ್ತಾಂತ, ಬೌದ್ಧರ ದೀಪವಂಶ-ಮಹಾವಂಶ, ಟಾಲೆಮಿಯ ದಾಖಲೆಗಳು, ಭಾಸ್ಕರಾಚಾರ್ಯನ ಸಿದ್ಧಾಂತಶಿರೋಮಣಿ, ಸೋಮನಾಥ ಮಿಶ್ರನ ಜ್ಯೋತಿಷ್ಯ ಕಲ್ಪಲತಾ


(The Oxford Students’ History of India Pp 80, 81 by V.A Smith E

No comments:

Post a Comment