Search This Blog

Thursday 8 February 2018

ಜಗನ್ನಾಥ ಪಂಡಿತ - ಉದ್ಧಟ ರಾಜ

ಅದು ಹದಿನೇಳನೇ ಶತಮಾನದ ಆರಂಭಕಾಲ. ಆಗಲೇ ಭಾರತದಲ್ಲಿ ಭಾಷೆ ಮತ್ತು ಲಿಪಿ ಪ್ರಾದೇಶಿಕತೆಯನ್ನು ಗುರುತಿಸಿಕೊಂಡ ಕಾಲ. ಆ೦ಧ್ರಪ್ರದೇಶದ ಪೂರ್ವ ಗೋದಾವರಿಯ ಅಮಲಾಪುರದ ಸಮೀಪದ ಮು೦ಗ೦ಡದಲ್ಲಿ. ಪೇರು ಭಟ್ಟ, ಮಹಾಲಕ್ಷ್ಮಿ ದಂಪತಿಗಳಿಗೆ ಮಗನಾಗಿ ಜನಸಿದವನೇ ಜಗನ್ನಾಥ. ವ್ಯಾಕರಣವೊಂದನ್ನು ಹೊರತು ಮಿಕ್ಕೆಲ್ಲ ಶಾಸ್ತ್ರಗಳನ್ನೂ ತನ್ನ ತಂದೆಯ ಬಳಿಯಲ್ಲಿಯೇ ಈತ ಕಲಿತನಲ್ಲದೆ ತನ್ನ ತಂದೆಗೆ ವ್ಯಾಕರಣವನ್ನು ಹೇಳಿಕೊಟ್ಟ ಶೇಷ ವೀರೇಶ್ವರನ ಬಳಿ ವ್ಯಾಕರಣಾಧ್ಯಯನ ಮಾಡಿದ. ಸಂಸ್ಕೃತ ಸಾಹಿತ್ಯ ತನ್ನ ಅವಸಾನದತ್ತ ಸಾಗುತ್ತಿದ್ದ ಕಾಲದಲ್ಲಿ ಪೂರ್ವಮೀಮಾ೦ಸ ತರ್ಕ- ವಿತರ್ಕ ವೈಯಾಕರಣ ವೇದಾ೦ತ ವೈಶೇಷಿಕ ವಿಶೇಷಣನ್ಯಾಯ ಶಾಸ್ತ್ರಾಲ೦ಕಾರ, ಸಂಗೀತ ಶಾಸ್ತ್ರಗಳನ್ನು ಸಮರ್ಥವಾಗಿ ಅಧ್ಯಯನ ಮಾಡಿ ಸಂಸ್ಕೃತ ಸಾಹಿತ್ಯಕ್ಕೊಂದು ನೆಲಯನ್ನು ದೊರಕಿಸಿಕೊಟ್ಟವನು ಜಗನ್ನಾಥ ಪಂಡಿತ. ಆಂಧ್ರ ಮತ್ತು ಅದರ ಸುತ್ತ ಮುತ್ತಲಿನ ಯಾವ ರಾಜರಿಂದಲೂ ಆಶ್ತನಿಗೆ ಸರಿಯಾದ ಮನ್ನಣೆ ದೊರಕುವುದಿಲ್ಲ. ತನ್ನ ವಿದ್ವತ್ತಿಗೆ ಗೌರವವನ್ನು ದೊರಕಿಸಿಕೊಳ್ಳುವ ಸಲುವಾಘಿ ತನ್ನ ಊರನ್ನು ಬಿಟ್ಟು ತೆರಳುವಾಗ ಬೇರೆ ರಾಜರುಗಳಿಗೆ ಹೇಳಿದ ಮಾತು
ದಿಲ್ಲೀಶ್ವರೋ ವಾ ಜಗದೀಶ್ವರೋ  ವಾ ಮನೋರಥಾನ್ ಪೂರಯಿತುಂ ಸಮರ್ಥಃ |
ಅನ್ಯೈಃ ನೃಪಾಲೈಃ ಪರಿದೀಯಮಾನಂ ಶಾಕಾಯ ವಾ ಸ್ಯಾತ್ ಲವಣಾಯ ವಾ ಸ್ಯಾತ್ ||
ದಿಲ್ಲಿಯವನಾದರೇನು, ಜಗದೊಡೆಯನಾದರೇನು ನನ್ನ ಮನಸ್ಸಿನಲ್ಲಿ ಉಂಟಾಗಿರುವ ಅಭಿಲಾಷೆಯನ್ನು ಪೂರಯಿಸುವವನಾದರೆ ಸಾಕು . ಇಲ್ಲಿ ನನಗೆ ದೊರಕುತ್ತಿರುವುದು ಉಪ್ಪಿಗೆ ಸಾಕಾದರೆ ಸೊಪ್ಪಿಗೆ ಸಾಕಾಗುವುದಿಲ್ಲವೆಂದು ನುಡಿಯುತ್ತಾನೆ. ಹೀಗೆ ಹೇಳುತ್ತಾ ದೆಹಲಿಯ ಮುಘಲ್ ದೊರೆ ಷಾಜಹಾನಿನ ಆಸ್ಥಾನದಲ್ಲಿ  "ಪ೦ಡಿತರಾಜ'ನಾಗಿ, ’ಕವೀಶ್ವರನೆಂದು ಬಿರುದು ಪಡೆದು, ’ಸಂಗೀತಕಲಾಸುಧಾನಿಧಿಯಾಗಿ ಮನ್ನಣೆ ಪಡೆಯುತ್ತಾನೆ. ಮುಘಲ್ ದೊರೆ ಷಹಜಹಾನನ ಭಾವ ಅಸಫ್ ಖಾನನನ್ನು ಹೊಗಳಿ ಅಸಫ್ ವಿಲಾಸವನ್ನು ಬರೆಯುತ್ತಾನೆ, ಮೇವಾಡದ ಜಗತ್ ಸಿ೦ಗನ ಕುರಿತಾದ ಜಗದಾಭರಣವನ್ನೂ, ಕಾಮರೂಪದ ಪ್ರಾಣನಾರಾಯಣನ ಕುರಿತಾಗಿ ರಚಿಸಿದ ಪ್ರಾಣಾಭರಣ’, ಹಾಗೂ ಗ೦ಗೆ ಯಮುನೆ ವಿಷ್ಣು ಲಕ್ಷ್ಮಿಯರ ಸ್ತುತಿಯಾದ ಗ೦ಗಾಲಹರಿ, ಅಮೃತಲಹರಿ, ಕರುಣಾಲಹರಿ ಮತ್ತು ಲಕ್ಷ್ಮಿಲಹರಿಗಳು, ಮುಕ್ತಕಗಳ ಸ೦ಗ್ರಹವಾಗುತ್ತದೆ ಭಾಮಿನೀವಿಲಾಸದೇವತಾಸ್ತ್ರೋತ್ರ, ಅಲ೦ಕಾರಶಾಸ್ತ್ರ, ವ್ಯಾಕರಣವೇ ಮೊದಲಾದ ಎಲ್ಲಾ ಕ್ಷೇತ್ರಗಳಲ್ಲಿ ಸಾಹಿತ್ಯವನ್ನು ಬೆಳೆಸಿದ ಜಗನ್ನಾಥ 14 ಕ್ಕೂ ಹೆಚ್ಚು ಗ್ರ೦ಥಗಳನ್ನು ರಚಿಸಿದ. ಸಮಕಾಲೀನ ಕವಿಗಳ ಮಧ್ಯ ಮೆರೆದ ಸವ್ಯಸಾಚಿ ಎನ್ನಿಸಿಕೊಳ್ಳುತ್ತಾನೆ. ಸ೦ಸ್ಕೃತ ಭಾಷಾಸಾಹಿತ್ಯದಲ್ಲಿ ಆನ೦ದವರ್ಧನನ ಧ್ವನ್ಯಾಲೋಕಕ್ಕೆ ಸರಿಸಮನಾಗಿ ನಿಲ್ಲಬಲ್ಲ ಇನ್ನೊ೦ದು ಕೃತಿಯಿದ್ದರೆ ಅದು ಜಗನ್ನಾಥನ ರಸಗ೦ಗಾಧರಮಾತ್ರ ಎನ್ನಿಸಿಕೊಳ್ಳುತ್ತದೆ.  
ಈತ ದೆಹಲಿ ಸುಲ್ತಾನನ ಬಳಿ ಹೋಗುವ ಮೊದಲೇ ಇಸ್ಲಾಂ ಧರ್ಮದ ಕುರಿತು ಬಹಳಷ್ಟು ಅಧ್ಯಯನ ಮಾಡಿದ್ದನೆನ್ನುವ ಮಾತು ಕೇಳಿ ಬರುತ್ತದೆ. ತನ್ನಲ್ಲಿರುವ ಪಾಂಡಿತ್ಯದಿಂದ ಪ್ರಕಾಂಡ ವಿದ್ವಾ೦ಸರನ್ನೆಲ್ಲ ಸೋಲಿಸಿ ಶಾಸ್ತ್ರೀಯ ಸಿದ್ಧಾ೦ತಗಳನ್ನೆಲ್ಲ ಖ೦ಡಿಸಿ ಗ್ರ೦ಥಗಳನ್ನು ಬರೆಯುತ್ತಾನೆ.
ಜಗನ್ನಾಥ ಬರೆದ `ಸಿದ್ಧಾಂತ ಕೌಮುದೀಎನ್ನುವ ಗ್ರಂಥಕ್ಕೆ ಭಟ್ಟೋಜಿ ದೀಕ್ಷಿತರು ಬರೆದಮನೋರಮಾಎನ್ನುವ ವ್ಯಾಖ್ಯಾನಗ್ರಂಥಕ್ಕೆ ಪ್ರತಿಯಾಗಿಮನೋರಮಾ ಕುಚಮರ್ದಿನೀಎ೦ಬ ಗ್ರ೦ಥವನ್ನೂ ಬರೆಯುತ್ತಾನೆ, ಅಪ್ಪಯ್ಯ ದೀಕ್ಷಿತರಚಿತ್ರಮೀಮಾ೦ಸಕ್ಕೆಚಿತ್ರಮೀಮಾ೦ಸಖ೦ಡನಎ೦ಬ ಟೀಕೆಯನ್ನೂ ಬರೆದು ತನ್ನ ವಿರೋಧಿಗಳಿ೦ದ "ಉದ್ಧಟರಾಜ"ನೆ೦ದೂ ಕರೆಸಿಕೊಂಡು ಖ್ಯಾತನಾದ.
ಭಾಮಿನೀ ವಿಲಾಸವೆನ್ನುವ ಮುಕ್ತಕಗಳ ಸಂಗ್ರಹ ದ ಆರಂಭದ ಶ್ಲೋಕವನ್ನು
ದುರ್ವೃತ್ತಾ ಜಾರಜನ್ಮಾನೋ ಹರಿಷ್ಯ೦ತೀತಿ ಶ೦ಕಯಾ |
ಮದೀಯಪದ್ಯರತ್ನಾನಾ೦ ಮ೦ಜೂಷೈಷಾ ಕೃತಾ ಮಯಾ ||
ದುರ್ನಡತೆಯ "ಕಳ್ಳಸೂಳೆ ಮಕ್ಕಳು" ಕದಿಯಬಹುದೆ೦ಬ ಸಂಶಯದಿಂದ ನನ್ನ ಪದ್ಯರತ್ನಗಳ ಪೆಟ್ಟಿಗೆಯನ್ನು ತಯಾರಿಸಿದ್ದೇನೆ ಎ೦ದು ವಿರೋಧಿಗಳಿಗೆ ಬೈಗುಳ ಸಲ್ಲಿಸಿಯೇ ಆರಂಭಿಸುತ್ತಾನೆ.(ಜಗನ್ನಾಥನೇ ಬೈಗುಳ ಉಪಯೋಗಿಸಿರುವುದರಿಂದ ಯಥಾವತ್ತಾಗಿ ಇಲ್ಲಿಡಲಾಗಿದೆ)
ಜಗನ್ನಾಥ ಪ೦ಡಿತರಾಜನ ಬರಹಗಳು ಒಂದು ಬಗೆಯ ವಿಚಿತ್ರ ಲೋಕಕ್ಕೆ ಕೊಂಡೊಯ್ಯುತ್ತದೆ.
ನಿತರಾ೦ ನೀಚೋಽಸ್ಮಿತಿ ಖೇದ೦ ಕೂಪ ಕದಾಪಿ ಕೃಥಾಃ |
ಅತ್ಯ೦ತ ಸರಸಹೃದಯೋ ಯತಃ ಪರೇಷಾ೦ ಗುಣಗ್ರಹೀತಾಸಿ ||
ಬಾವಿಯನ್ನು ಕುರಿತಾಗಿ "ಬಾವಿಯೇ ತಗ್ಗಿನಲ್ಲಿರುವೆಯೆ೦ದು ಯಾವತ್ತೂ ವಿಷಾದ ಪಡಬೇಡ. ನಿನ್ನ೦ತರ೦ಗ ತಿಳಿನೀರಿನಿ೦ದ ತು೦ಬಿದೆ, ನೀನು ಅನ್ಯರ ಗುಣವನ್ನು[ಹಗ್ಗವನ್ನು] ಗ್ರಹಿಸುವೆ.)
ಎ೦ದು ಕೀಳರಿಮೆಯಿ೦ದ ಕುಗ್ಗಿದ ಸದ್ಗುಣಿಗಳಿಗೆ ಒ೦ದು ಕಡೆ ಸಮಾಧಾನ ಹೇಳಿದರೆ ಇನ್ನೊಮ್ಮೆ
ನೈರ್ಗುಣ್ಯಮೇವ ಸಾಧೀಯೋ ಧಿಗಸ್ತು ಗುಣಗೌರವಮ್
ಸದ್ಗುಣಗಳಿಗೆ ಧಿಕ್ಕಾರ, ಗುಣಹೀನತೆಯನ್ನೇ ಸಾಧಿಸಬೇಕು. ಇತರ ಮರಗಳು ನಳನಳಿಸಿದರೆ ಶ್ರೀಗ೦ಧದ ಮರಗಳು ಕತ್ತರಿಸಲ್ಪಡುತ್ತವೆ ಎ೦ದು ರೋಷದಿಂದ ಹೇಳುತ್ತಾನೆ.
ಭೂತಿರ್ನೀಚಗೃಹೇಷು ವಿಪ್ರಸದನೇ ದಾರಿದ್ರ್ಯ ಕೋಲಾಹಲೇ
ನಾಶೋ ಹ೦ತ ಸತಾಮಸತ್ಪಥಜುಷಾಮಾಯುಃ ಶತಾನಾ೦ ಶತಮ್ |
ದುರ್ನೀತಿ೦ ತವ ವೀಕ್ಷ್ಯ ಕೋಪದಹನಜ್ವಾಲಾಜಟಾಲೋಽಪಿ ಸನ್
ಕಿ೦ ಕುರ್ವೇ ಜಗದೀಶ ಯತ್ಪುನರಹ೦ ದೀನೋ ಭವಾನ್ ಈಶ್ವರಃ ||
(ನೀಚರ ಮನೆಯಲ್ಲಿ ಸಮೃದ್ಧಿ, ಜ್ಞಾನಿಗಳ ಮನೆಯಲ್ಲಿ ದಾರಿದ್ರ್ಯ ಕೋಲಾಹಲ; ಸತ್ಪುರುಷರು ಅಲ್ಪಾಯುಗಳು, ದುಷ್ಟರಿಗೆ ನೂರಾರು ವರ್ಷದ ಆಯುಷ್ಯ; ನಿನ್ನ ದುರ್ನೀತಿಯನ್ನು ಕ೦ಡು ಸಿಟ್ಟು ನೆತ್ತಿಗೇರುತ್ತಿದೆ. ಏನು ಮಾಡಲಿ? ನಾನು ದೀನ, ನೀನು ಜಗದೀಶ) ಎ೦ದು ಒ೦ದೆಡೆ ಜಗದೀಶ್ವರನನ್ನೇ ತರಾಟೆಗೆ ತೆಗೆದುಕೊ೦ಡರೆ ಮತ್ತೊ೦ದೆಡೆ
ಕಲಿ೦ದಗಿರಿನ೦ದಿನೀತಟಸುರದ್ರುಮಾಲ೦ಬಿನೀ |
ಮದೀಯಮತಿಚು೦ಬಿನೀ ಭವತು ಕಾಽಪಿ ಕಾದ೦ಬಿನೀ ||
ಎ೦ದು ಮಧುರಕೋಮಲಕಾ೦ತ ಮ೦ಜುಲ ಕವಿತಾಪಾಟಗಳಿ೦ದ ತನ್ನ ಆರಾಧ್ಯ ದೈವವನ್ನು ಭಕ್ತಿಪೂರ್ವಕವಾಗಿ ನೆನೆಯುತ್ತಾನೆ.
ಈತನ ಜೊತೆ ಚರ್ಚಿಸಲು ಆಗಿನ ಕಾಲದ ಮಹಾಮಹಾಮೇಧಾವಿಗಳೂ ಹೆದರುತ್ತಿದ್ದರ೦ತೆ. ಪ೦ಡಿತಕುಲವನ್ನೆಲ್ಲ ಚೆ೦ಡಾಡಿದ ಮೇಲೂನಖಾನಾಂ ಪಾಂಡಿತ್ಯಂ ಪ್ರಕಟಯತು ಕಸ್ಮಿನ್?’ ಸಿ೦ಹವು ಮಾ೦ಸವನ್ನು ಸಿಗಿಯುವ೦ತೆ ಎದುರಾಳಿಗಳನ್ನು ಸಿಗಿಯುವ ತನ್ನ ಪಾ೦ಡಿತ್ಯಕ್ಕೆ ಬಲಿಯೇ ಸಿಗುತ್ತಿಲ್ಲವಲ್ಲ ಎ೦ದು ಒ೦ದು ಕಡೆ ಹಾಸ್ಯಮಾಡುತ್ತಾನೆ. ಜಯಪುರದಲ್ಲಿ ಓರ್ವ ಮುಸಲ್ಮಾನ ಧರ್ಮಗುರು ಅಲ್ಲಿಯ ಹಿಂದೂ ಪಂಡಿತರನ್ನೆಲ್ಲ ವಾದದಲ್ಲಿ ಸೋಲಿಸಿದ್ದ. ಅವನ ಜೊತೆ ವಾದಕ್ಕೆ ಯಾರೂ ಮು೦ದಾಗದಿದ್ದಾಗ ಜಗನ್ನಾಥನು ಅರೇಬಿಕ್ ನಲ್ಲಿಯೇ ಕುರಾನನ್ನು ಅಭ್ಯಾಸ ಮಾಡಿ ಪಂಡಿತನೊಡನೆ ವಾದಮಾಡಿ, ಆತನನ್ನು ಸೋಲಿಸಿದ ಬಳಿಕ, ಈತನ ಕೀರ್ತಿಯು ದೇಶಾದ್ಯ೦ತ ಹರಡಿತ೦ತೆ.
ಘಟನೆಯ ನಂತ್ಯರವೇ ಜಗನ್ನಾಥ ಮತ್ತು ಮುಘಲ್ ದೊರೆ ಶಹಜಹಾನ್ ಇಬ್ಬರೂ ಆಪ್ತಮಿತ್ರರಾದರು.
ಜಗನ್ನಾಥ ಮತ್ತು ಷಹಜಹಾನ್ ಒಮ್ಮೆ ಚದುರ೦ಗವಾಡುತ್ತಿದ್ದಾಗ ಷಾಜಹಾನನ ಸಾಕುಮಗಳು ಲವ೦ಗಿ ತ೦ದೆಗಾಗಿ ಚಿನ್ನದ ಹೂಜಿಯಲ್ಲಿ ನೀರು ತ೦ದಳ೦ತೆ. ಅವಳನ್ನು ನೋಡಿದಕೂಡಲೇ ಜಗನ್ನಾಥ ನುಡಿದನ೦ತೆ
ಇಯಂ ಸುಸ್ತನೀ ಮಸ್ತಕನ್ಯಸ್ತಕುಂಭಾ
ಕುಸುಂಭಾರುಣಂ ಚಾರು ಚೇಲಂ ದಧಾನಾ |
ಸಮಸ್ತಸ್ಯ ಲೋಕಸ್ಯ ಚೇತಃಪ್ರವೃತ್ತೀಮ್
ಗೃಹೀತ್ವಾ ಘುಟೇ ಸ್ಥಾಪಯಿತ್ಯೇವ ಭಾತಿ ||
(ಅರುಣವರ್ಣದ ಬಟ್ಟೆಯನ್ನುಟ್ಟ, ತಲೆಯ ಮೆಲೆ ಕಳಶವನ್ನು ಹೊತ್ತ ಈಕೆ ಸಮಸ್ತ ಲೋಕದ ಚೈತನ್ಯವನ್ನೇ ಹೊತ್ತು ತರುತ್ತಿರುವಂತೆ ಹೊಳೆಯುತ್ತಿದ್ದಾಳೆ.)
     ಮು೦ದೆ ಲವ೦ಗಿಯನ್ನು ಮದುವೆಯಾದ ಜಗನ್ನಾಥ ಷಹಜಹಾನನ ಅಳಿಯನಾದ. ಆದರೆ ಮುಸ್ಲಿಮ್ ಯುವತಿಯನ್ನು ಮದುವೆಯಾದ ಜಗನ್ನಾಥ ಪಂಡಿತನಿಗೆ ಬಹಿಷ್ಕಾರ ಹಾಕಲಾಯ್ತು. ಷಹಜಹಾನಿನ ಮಗ ದಾರಾಶೂಕೋವಿಗೆ ವೇದಾ೦ತವನ್ನು ಕಲಿಸಿ ನಮ್ಮ ದರ್ಶನಗಳು ಪರ್ಷಿಯನ್ನಿಗೂ ಅಲ್ಲಿ೦ದ ಕಾಲಾನುಕ್ರಮದಲ್ಲಿ ಇ೦ಗ್ಲೀಷಿಗೂ ಭಾಷಾ೦ತರಣಗೊ೦ಡು ವಿಶ್ವವಿಖ್ಯಾತಗೊಳ್ಳಲು ಮೂಲ ಕಾರಣನಾದವನು ಕೂಡ ಇವನೇ. ಇತಿಹಾಸದಲ್ಲಿ ದಾರಶಿಕೋವನಲ್ಲದೇ ಇನ್ನೂ ಒಬ್ಬ ಇದೇ ರೀತಿ ಬೆಳೆದು ನಿಂತ ಉದಾಹರಣೆ ಸಿಗುತ್ತದೆ. ಔರ೦ಗಾಜೇಬ ಪಟ್ಟಕ್ಕೆ ಬ೦ದ ಕೂಡಲೇ ತ೦ದೆ ಷಹಜಹಾನನನ್ನು ಬ೦ಧಿಸಿ ಜೈಲಲ್ಲಿಟ್ಟ, ದಾರಾಶುಕೋ ಕೊಲ್ಲಲ್ಪಟ್ಟ. ಬೇರೆ ದಾರಿಕಾಣದ ಜಗನ್ನಾಥ ಪತ್ನಿಯೊಡನೆ ಕಾಮರೂಪಕ್ಕೆ ತೆರಳಿ ರಾಜ ಪ್ರಾಣನಾರಾಯಣನ ಆಶ್ರಯ ಪಡೆದ. ಔರ೦ಗಾಜೇಬ ಕಾಮರೂಪವನ್ನ ಮುತ್ತಿಗೆ ಹಾಕಿದಾಗ ಅಲ್ಲಿ೦ದಲೂ ಹೊರಟು ದೇಶಸ೦ಚಾರ ಮಾಡಿ ಕೊನೆಗೆ ಕಾಶಿಗೆ ಬ೦ದ. ಅಷ್ಟರಲ್ಲಾಗಲೇ ಅವನಿಗೆ ತೀರಾ ವಯಸ್ಸಾಗಿತ್ತು. ಧರ್ಮಭೃಷ್ಟನಿಗೆ ಆಶ್ರಯ ನೀಡಲು ಕಾಶಿಯ ಜನ ಸಿದ್ಧರಿರಲಿಲ್ಲ. ಒ೦ದು ದಿನ ಬೆಳ್ಳ೦ಬೆಳ್ಳಗೆ ಪಂಡಿತರಾಜ ಕಾಶಿಯ ಗ೦ಗೆಯ ಘಾಟಿನ ಮೇಲೆ ದಾರಿಗಡ್ಡವಾಗಿ ಮಲಗಿದ್ದ. ಜನರೆಲ್ಲ ಗ೦ಗಾಸ್ನಾನಕ್ಕಾಗಿ ಬರುತ್ತಿದ್ದರು. ಅದೇ ದಾರಿಯಲ್ಲಿ ಸ್ನಾನಕ್ಕೆ ಬ೦ದಿದ್ದ ಜಗನ್ನಾಥನ ಪರಮವಿರೋಧಿ ಅಪ್ಪಯ್ಯ ದೀಕ್ಷಿತರು ದಾರಿಮಧ್ಯ ಯಾರೋ ಮಲಗಿದ್ದು ನೋಡಿ ತಾತ್ಸಾರದಿ೦ದ ಬೈದರು
ಕಿಂ ನಿಃಶಂಕಂ ಶೇಷೇ ಶೇಷೇ ವಯಸಿ ತ್ವಮಾಗತೇ ಮೃತ್ಯೌ
(ಮರಣ ಸಮೀಪಿಸಿರುವ ಇಳಿ ವಯಸ್ಸಿನಲ್ಲಿ ಇಲ್ಲಿ ಬಂದು ಹೀಗೆ ಮಲಗಿರುವಿರಲ್ಲ?) 
ಜಗನ್ನಾಥ ಪ೦ಡಿತ ಮುಸುಕು ಸರಿಸಿ ನಿಧಾನಕ್ಕೆ ನಿದ್ದೆಯಿ೦ದೆದ್ದು ಮೇಲೆ ನೋಡಿದ..
ಅಪ್ಪಯ್ಯ ದೀಕ್ಷಿತರು ತಮ್ಮ ಸಿದ್ಧಾ೦ತವನ್ನೆಲ್ಲ ಖ೦ಡಿಸಿ ಒಗೆದಿದ್ದ ಖ೦ಡಿತರಾಜನನ್ನು ನೋಡಿ ಬೆವರಲಾರ೦ಭಿಸಿದರು. ನಾಲಿಗೆಯ ಪಸೆ ಒಣಗಿಹೋಗಿತ್ತು. ತೊದಲುತ್ತ ವಿನೀತರಾಗಿ ಹೇಳಿದರು
ಅಥವಾ ಸುಖಂ ಶಯೀಥಾ: ತವ ನಿಕಟೇ ಜಾಗರ್ತಿ ಜಾಹ್ನವೀ ಜನನೀ.’
(ಸುಖವಾಗಿ ಮಲಗಿಕೋ ನಿನ್ನ ಪಕ್ಕದಲ್ಲಿ ತಾಯಿ ಗಂಗಾದೇವಿ ಜಾಗ್ರತಳಾಗಿದ್ದಾಳೆ.)
ಮಾತು ಕೇಳಿ ಜಗನ್ನಾಥನಿಗೆ ಜ್ಞಾನೋದಯವಾಯಿತು. ತನ್ನ ಪಾಪವನ್ನು ತೊಳೆಯಲು ಗ೦ಗೆಗಿ೦ತ ಉತ್ತಮರು ಇನ್ಯಾರಿದ್ದಾರೆ೦ದು ಭಾವಿಸಿ ಪತ್ನಿಯೊಡನೆ ಜಲಸಮಾಧಿಗೆ ಸಿದ್ಧನಾದ. ಹೇಳಿಕೇಳಿ ಈತ ಧರ್ಮಭೃಷ್ಟ. ಈತ ಗ೦ಗೆಯಲ್ಲಿ ಸಮಾಧಿಯಾಗುವುದಕ್ಕೆ ಹೋದದ್ದನ್ನು ನೋಡಿ ಧರ್ಮನಿಷ್ಠರು ಗ೦ಗೆಯನ್ನು ಮುಟ್ಟದ೦ತೆ ವಿರೋಧಿಸಿದರು. ಹತಾಶನಾದ ಜಗನ್ನಾಥ ಪ೦ಡಿತ ದಡದಲ್ಲೇ ನಿ೦ತು ಭಕ್ತಿಯಿ೦ದ ಗ೦ಗೆಯನ್ನುಗ೦ಗಾಲಹರಿ ಮೂಲಕ ಪ್ರಾರ್ಥಿಸತೊಡಗಿದ.
ವಿಭೂಷಿತಾ೦ಗರಿಪೂತ್ತಮಾ೦ಗಾ ಸಧ್ಯಃ ಕೃತಾನೇಕಜನಾರ್ತಿಭ೦ಗಾ |
ಮನೋಹರೋತ್ತು೦ಗಚಲತ್ತರ೦ಗಾ ಗ೦ಗಾ ಮಮಾ೦ಗಾನ್ಯಮಲೀಕರೋತು ||
ಇವನ ಒ೦ದೊ೦ದು ಶ್ಲೋಕಕ್ಕೂ ಒ೦ದೊ೦ದು ಮೆಟ್ಟಿಲೇರಿ ಬ೦ದ ಗ೦ಗೆ ಐವತ್ತೆರಡನೇ ಶ್ಲೋಕಕ್ಕೆ ಉಕ್ಕಿ ಹರಿದು ಲವ೦ಗಿ ಸಹಿತನಾದ ಜಗನ್ನಾಥನನ್ನು ತನ್ನಲ್ಲಿ ಸೆಳೆದು ಐಕ್ಯಗೊಳಿಸಿಕೊ೦ಡಳು.
ಅಬ್ಬ.....ಜೀವನದುದ್ದಕ್ಕೂ ಧರ್ಮನಿಷ್ಟರನ್ನು ವಿರೋಧಿಸಿಕೊ೦ಡೇ ಬ೦ದ, ಮಹಾ ಮಹಾ ಶಾಸ್ತ್ರೀಯ ಸಿದ್ಧಾ೦ತಗಳನ್ನು ಟೀಕಿಸಿದ ಒಗೆದ, ಯಮುನಾ ನದೀ ತೀರ, ಯುವಕನ್ಯೆಯ ಜೊತೆ ಮದ್ಯವೊ೦ದಿದ್ದರೆ ಜೀವನವೇ ಪಾವನ ಎ೦ದವನ ಭಕ್ತಿ ಎಷ್ಟು ದೊಡ್ಡದಲ್ಲವೇ.
ಜಗನ್ನಾಥನ ಒ೦ದು ಪ್ರಸಿದ್ಧ ಶ್ಲೋಕ.
ನೀಲೋದ್ಫಲಸ್ಯ ಪದ್ಮಸ್ಯ ಮತ್ಸಸ್ಯ ಕುಮುದಸ್ಯ |
ಏಕೈವನಿ ಪ್ರಸೂತಾನಾಮ್ ಪೇಶಾಂ ಗಂಧ: ಪೃಥಕ್ ಪೃಥಕ್||
ಕಮಲಗಳು, ಕಣ್ಣೈದಿಲೆ, ಮೀನು - ಇವೆಲ್ಲ ಒಂದೇ ನೀರಿನಲ್ಲಿ ಹುಟ್ಟಿದ್ದರೂ, ಇವು ಹೊರ ಸೂಸುವ ಪರಿಮಳ ಬೇರೆ ಬೇರೆ.
ಒಂದು ಮನೆ, ಒಂದು ಜಾತಿ, ಒಂದು ಮತ, ಒಂದು ಊರು, ಒಂದು ವಂಶದಲ್ಲಿ ಹುಟ್ಟಿದ ಮಾತ್ರಕ್ಕೆ ಯಾರೊಬ್ಬನೂ ಕೂಡ ಮೇಲು ಅಥವ ಕೀಳು ಆಗುವುದಿಲ್ಲ. ಮೂಲವು ಒಂದೇ ಆದರೂ, ಒಬ್ಬೊಬ್ಬರ ಗುಣ ಒಂದೊಂದು ರೀತಿ.
ಜಗನ್ನಾಥ ತಂದೆಯಂತೆಯೇ ಚತುಃಶಾಸ್ತ್ರಗಳನ್ನು ಹೃದ್ಗತ ಮಾಡಿಕೊಳ್ಳುವುದರ ಜೊತೆಗೆ, ಅಲಂಕಾರಶಾಸ್ತ್ರವನ್ನೂ ಕರತಲಾಮಲಕ ಮಾಡಿಕೊಂಡಿದ್ದ. ಪಂಡಿತ ರಾಜನೆನಿಸಿಕೊಂಡಿದ್ದಲ್ಲದೆ, ಪದವಾಕ್ಯಪ್ರಮಾಣಪಾರವಾರಪಾರೀಣ ಎಂಬ ಬಿರುದನ್ನು ಗಳಿಸಿದ್ದ. ಶಾಸ್ತ್ರವೇತ್ತನೂ ಸುಕವಿತಾ ಸಾಮಥ್ರ್ಯವುಳ್ಳವನೂ ಆದ ಜಗನ್ನಾಥನಷ್ಟು ಖ್ಯಾತಿ ಸಂಸ್ಕೃತ ಅಲಂಕಾರಶಾಸ್ತ್ರೇತಿಹಾಸದಲ್ಲಿ ಬೇರೊಬ್ಬರಿಗಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು.


No comments:

Post a Comment