Search This Blog

Wednesday 10 January 2018

ವ್ಯಾಕರಣಕ್ಕೊಂದು ಸರ್ಪಬಂಧ - ಭೋಜರಾಜನ ಕೊಡುಗೆ

ಕೈಲಾಸ ವಾಸಿಯಾದ ಶಿವನಿಗೆ ಅನೇಕ ಶ್ರೇಷ್ಟರಾದ ಗಣಗಳ ಸಮೂಹವೇ ಇದ್ದಿತ್ತು. ಅವರಲ್ಲಿ ಪುಷ್ಪದಂತನೆನ್ನುವವನು ಕೂಡಾ ಒಬ್ಬ. ಆತ ಒಮ್ಮೆ ತಿಳಿಯದೇ ತಪ್ಪು ಮಾಡುತ್ತಾನೆ. ಆಗ ಪಾರ್ವತಿ ಕೋಪಗೊಳ್ಳುತ್ತಾಳೆ. ಕೋಪಗೊಂಡ ಪಾರ್ವತಿ ಶಾಪ ನೀಡುತ್ತಾಳೆ. ಶಾಪದ ಪರಿಣಾಮ ಪುಷ್ಪದಂತನು ಭೂಲೋಕದಲ್ಲಿ ವರರುಚಿಯಾಗಿ ಹುಟ್ಟುತ್ತಾನೆ. ವರರುಚಿಗೆ ಇನ್ನೊಂದು ಹೆಸರಿರುವುದು ಕಾತ್ಯಾಯನ ಎಂದು. ಅವನು ಪಾಟಲೀ ಪುತ್ರದಲ್ಲಿ ಉಪಾಧ್ಯಾಯ ವರ್ಷನೆನ್ನುವವನ ಬಳಿ ಸಕಲ ಶಾಸ್ತ್ರವಿದ್ಯೆಗಳನ್ನು ಕಲಿಯುತ್ತಾನೆ. ಹಾಗೆಯೇ ಅಲ್ಲಿಯೇ ಉಪಕೋಶ ಅನ್ನುವವಳನ್ನು ವಿವಾಹವಾಗಿ ಪಾಟಲೀಪುತ್ರದಲ್ಲಿಯೇ ನೆಲೆಸುತ್ತಾನೆ. ಅದೇ ಕಾಲಕ್ಕೆ ಪಾಣಿನಿ ಎನ್ನುವ ಮಂದಬುದ್ಧಿಯವನೊಬ್ಬ ವರ್ಷನ(ವರರುಚಿ) ಶಿಷ್ಯನಾಗಿ ಬಂದು ಸೇರಿಕೊಳ್ಳುತ್ತಾನೆ. ಅವನ ಮಂದ ಬುದ್ಧಿಯನ್ನು ದಿನೆ ದಿನೇ ಸಹಿಸಲು ಅಸಾಧ್ಯವಾದಾಗ ವರರುಚಿಯ ಪತ್ನಿ ಅವನನ್ನು ಓಡಿಸುತ್ತಾಳೆ. ಇದರಿಂದ ಖಿನ್ನನಾದ ಪಾಣಿನಿ ಹಿಮಾಲಯಕ್ಕೆ ತಪಸ್ಸಿಗೆ ತೆರಳುತ್ತಾನೆ . ಅಲ್ಲಿ ಶಿವನನ್ನು ಮೆಚ್ಚಿಸಿ. ಎಲ್ಲಾ ವಿದ್ಯೆಗಳನ್ನೂ ಕರಗತ ಮಾಡಿ ಕೊಂಡು ಮರಳಿ ಪಾಟಲೀ ಪುತ್ರಕ್ಕೆ ಬಂದು ತನ್ನ ಮೊದಲ ಗುರುವಾಗಿದ್ದ ವರರುಚಿಯನ್ನು ವಾದಕ್ಕೆ ಕರೆದು ಏಳು ದಿನಗಳ ಕಾಲ ವಾದ ಮಾಡುತ್ತಾನೆ. ಪಾಣಿನಿ ಮತ್ತು ವರರುಚಿ ವಾದ ಮಾಡುತ್ತಾ ದಿನ ಕಳೆಯುತ್ತದೆ ಎಂಟನೇ ದಿನ ವರರುಚಿ ಪಾಣಿನಿಯನ್ನು ಗೆದ್ದನು ಆದರೆ ಅಷ್ಟರಲ್ಲಿ ಶಿವನು ಮೇಲಿನಿಂದ ಹೂಂಕರಿಸಲು ವರರುಚಿಯಲ್ಲಿದ್ದ ಐಂದ್ರ ವ್ಯಾಕರಣವೆಲ್ಲಾ ನಷ್ಟವಾಗಿ ವರರುಚಿ ಸೋತು ಪಾಣಿನಿಯೇ ಗೆದ್ದನು. ಇದೊಂದು ಕಲ್ಪಿತ ಕಥೆ ಯಾಗಿರಬಹುದು, ದಂತ ಕಥೆಯಾಗಿದ್ದರೂ ಸಹ ಪಾಣಿನಿಗಿಂತಲೂ ಪೂರ್ವದಲ್ಲೂ ಇನ್ನೊಂದು ವ್ಯಾಕರಣ ಪ್ರಬೇಧ ಇದ್ದದ್ದು ತಿಳಿದು ಬರುತ್ತದೆ. ಆದರೆ ಪಾಣಿನಿಯ ವ್ಯಾಕರಣವೇ ಮುಂದೆ ಪ್ರಮಾಣ ಗ್ರಂಥವಾಗುತ್ತಾ ಮಾಹೇಶ್ವರ ಸೂತ್ರಗಳೆನ್ನುವ ಹದಿನಾಲ್ಕು ಸೂತ್ರಗಳಿಂದ ಅಷ್ಟಾಧ್ಯಾಯಿಯಾಗಿ ಸರ್ವಮಾನ್ಯವಾಗುತ್ತದೆ.
ಸಂಸ್ಕೃತ ಸಾಹಿತ್ಯ ಇತಿಹಾಸದಲ್ಲಿ ಕ್ರಿಸ್ತ ಪೂರ್ವದಲ್ಲಿ ಯಾಜ್ಞವಲ್ಕ್ಯ, ಬೌಧಾಯನ, ಕಾಟ್ಯಾಯನ, ಆಪಸ್ತಂಬ, ಪಿಂಗಲ, ಪಾಣಿನಿ ಹೀಗೆ ಸಾಹಿತ್ಯ ಕಾರರು, ಸ್ಮೃತಿಕಾರರು - ಭಾಷ್ಯಕಾರರು, ವಯ್ಯಾಕರಣಿಗಳ ದಂಡು ನಮಗೆ ಸಿಗುತ್ತದೆ. ಅವುಗಳಲ್ಲಿ ಪಾಣಿನಿಯೇ ಅತ್ಯಂತ ಗಂಭೀರವಾದ ಮಾರ್ಗವನ್ನು ಕರುಣಿಸಿದ ಅಂದರೆ ಅದು ಅತಿಶಯವಲ್ಲ. ಅಸ್ತವ್ಯಸ್ತ ವಾದ ಪದಬಳಕೆಯ ಕ್ರಮಕ್ಕೆ ಹದಿನಾಲ್ಕು ಸೂತ್ರಗಳನ್ನು ಹಾಕಿ ಒಂದು ವ್ಯವಸ್ಥಿತ ಪದ್ಧತಿಯನ್ನು ತೋರಿಸಿಕೊಟ್ಟದ್ದು ಪಾಣಿನಿಯ ದೊಡ್ದ ಕೊಡುಗೆ. ಅದನ್ನು ಅಳವಡಿಸಿಕೊಂಡು ಸಂಸ್ಕೃತ ಭಾಷಾ ಲೋಕ ಅಂದಿನಿಂದ ಇಂದಿನವರೆಗೆ ತನ್ನದೇ ಆದ ದೊಡ್ದ ಕೊಡುಗೆಯನ್ನು ನೀಡುತ್ತಾ ಬಂದಿದೆ.
ಒಂದು ದೇಶದ ರಾಜ ತಾನು ಕವಿಯಾಗಿ ಮಾರ್ಗದರ್ಶಕನಾಗಿ ಉತ್ತಮ ಆಡಳಿತಗಾರನಾಗಿ ಇದ್ದರೆ ದೇಶ ಎಂದೂ ಸಹ ದುರ್ಭಿಕ್ಷದಿಂದ ಇರಲು ಸಾಧ್ಯವೇ ಇಲ್ಲ ಅನ್ನುವುದಕ್ಕೆ ೧೧- ೧೨ ನೇ ಶತಮಾನದ ಭೋಜನೇ ಉದಾಹರಣೆ. ಸಾಹಿತ್ಯದ ಮೇಲೆ ಮಾತ್ರವಲ್ಲದೇ ಸಂಸ್ಕೃತ ಭಾಷಾ ಶಾಸ್ತ್ರದ ಮೇಲೂ ಸಹ ಆತ ಪ್ರಭುತ್ವದ ಜೊತೆಗೆ ಆಸಕ್ತಿ ಹೊಂದಿದ್ದ ಸಾಮಾನ್ಯರೂ ಸಹ ವ್ಯಾಕರಣ ಬದ್ಧರಾಗಿ ಮುಂದಿನ ಪೀಳಿಗೆಗೆ ಭಾಷೆಯನ್ನು ಜೀವಂತ ಇಡಲಿ ಎನ್ನುವ ಮಹತ್ವಾಕಾಂಕ್ಷೆಯಿಂದ ವ್ಯಾಕರಣಕ್ಕೆ ಸಂಬಂಧಿಸಿ ನಾಲ್ಕು ಶಾಸನಗಳನ್ನು ಬರೆಸಿದ ಅದು ಕೂಡಾ ಸಾರ್ವಜನಿಕರು ಹೆಚ್ಚಾಗಿರುವ ಕಡೆ ಅದನ್ನು ಬರೆಸಿದ ಅದುವೇ ಉಜ್ಜಯಿನಿಯ ಮಹಾಕಾಲೇಶ್ವರ ದೇವಾಲಯದ ಸರ್ಪಬಂಧ ಶಾಸನ. ಇಲ್ಲಿ ನಾನು ಸಧ್ಯಕ್ಕೆ ಒಂದನ್ನು ತಮ್ಮೆದುರಿಗೆ ಇಡುತ್ತಿದ್ದೇನೆ ಅದಕ್ಕೂ ಮೊದಲು
.ಇನ್ನೊಂದಿಷ್ಟು :
ಪಾಣಿನಿ ಸುಪ್ರಸಿದ್ಧ ಸಂಸ್ಕೃತ ವ್ಯಾಕರಣ ಬರೆದಾತ. ತಾಯಿ ದಾಕ್ಷಾ ಅಥವಾ ದಾಕ್ಷೀ. ತಂದೆ ಶಲಂಕ, ಗಾಂಧಾರದೇಶದ ಶಲಾತುರಗ್ರಾಮದವ. ಪಾಣಿನಿಯನ್ನು ಅವನ ತಾಯಿಯ ಹೆಸರಿನ ಮೇಲೆ ದಾಕ್ಷಾಅಥವಾ ದಾಕ್ಷೀಪುತ್ರನೆಂದೂ ತಂದೆಯ ಹೆಸರಿನ ಮೇಲೆ ಶಾಲಂಕನೆಂದೂ ಗ್ರಾಮದ ಹೆಸರಿನ ಮೇಲೆ ಶಾಲಾತುರೀಯ ಎಂದೂ ಕರೆಯುತ್ತಿದ್ದರಂತೆ. ಶಾಲಾ ತುರೀಯ ಎಂಬ ರೂಪವನ್ನು ಪಾಣಿನಿಯೇ ತನ್ನ ಗ್ರಂಥದಲ್ಲಿ ವಿವರಿಸಿದ್ದಾನೆ. ಈತನಿಗೆ ಅಹಿಕ ಎಂಬ ಇನ್ನೊಂದು ಹೆಸರೂ ಇತ್ತು ಎಂದು ತಿಳಿದುಬರುತ್ತದೆ. ಪಾಟಲೀಪುತ್ತದಲ್ಲಿದ್ದ ವರ್ಷ ಎಂಬ ಆಚಾರ್ಯರಲ್ಲಿ ಪಾಣಿನಿ ಶಿಷ್ಯನಾಗಿದ್ದುದಾಗಿ ಕಥಾಸರಿತ್ಸಾಗರದಲ್ಲಿ ಹೇಳಲ್ಪಟ್ಟಿದೆ. ಪಾಣಿನಿ ಸಿಂಹದ ಬಾಯಿಗೆ ತುತ್ತಾಗಿ ಸತ್ತನೆಂದು ಕಥೆಯೊಂದರಿಂದ ತಿಳಿದುಬರುತ್ತದೆ.
ಪಾಣಿನಿಯ ಕಾಲವೂ ಇಂತಹದ್ದೇ ಎಂದು ತಿಳಿದು ಬಂದಿಲ್ಲ. ಕ್ರಿಸ್ತಪೂರ್ವದಲ್ಲಿ ಇದ್ದನೆಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲವಾದರೂ ಬ್ರಾಹ್ಮಣಗಳ ಕಾಲಕ್ಕಿಂತ ಈಚಿನವನೆಂದೂ ಪ್ರಾಯಃ ಪ್ರಾಚೀನ ಉಪನಿಷತ್ತುಗಳ ಕಾಲದವನಿರಬೇಕೆಂದೂ ಕೆಲವರು ಹೇಳಿದರೆ, ಬೌದ್ಧರ ಕಾಲಕ್ಕಿಂತ ಹಿಂದೆ ಅಂದರೆ ಕ್ರಿ.ಪೂ ಏಳನೆಯ ಶತಮಾನದವನಿರಬೇಕೆಂದೂ ಇನ್ನು ಕೆಲವರ ಅಭಿಮತ, ಅಲೆಗ್ಜಾಂಡರನ ದಂಡ(ದ)ಯಾತ್ರೆಗಳಿಗಿಂತ ಹಿಂದೆ ಪಾಣಿನಿಯ ವ್ಯಾಕರಣ ರಚಿತವಾಗಿದ್ದಿರಲು ಸಾಧ್ಯವೇ ಇಲ್ಲವೆಂದೂ ವೀಬರ್ ಹೇಳುತ್ತಾರೆ. ಅವರು ಹೇಳುವಂತೆ ಯವನರ ಲಿಪಿ ಎಂಬರ್ಥದಲ್ಲಿ ಯವನಾನೀ ಎಂಬ ಪದವನ್ನು ಪಾಣಿನಿ ಬಳಸಿದ್ದಾನೆ. ಅಲೆಗ್ಜಾಂಡರನ ದಂಡದಯಾತ್ರೆಗಳಿಗಿಂತ ಹಿಂದೆ ಭಾರತೀಯರಿಗೆ ಯವನರ ಪರಿಚಯವಿರಲಿಲ್ಲ. ಪಾಣಿನಿ ಯವನಾನೀ ಪದ ಬಳಸಿರುವುದರಿಂದ ಅವನಿಗೆ ಯವನರ ಮತ್ತು ವಾಯವ್ಯ ಪ್ರಾಂತ್ಯಗಳ ಪರಿಚಯವಿತ್ತೆಂಬುದು ಸ್ಪಷ್ಟವಾಗುತ್ತದೆ. ಇದು ನಂಬಲರ್ಹವಲ್ಲದ ವಾದ. ಆದರೆ ಇದಕ್ಕೆ ಪೂರಕವಾಗಿ ಪಾಣಿನಿಯ ಗಣಪಾಠದಲ್ಲಿ ಆಂಭಿ, ಭಗಲ ಎಂಬ ಹೆಸರುಗಳೂ ಬರುತ್ತವೆ. ಇದರಿಂದ ಪಾಣಿನಿ ಕ್ರಿ.ಪೂ ನಾಲ್ಕನೆಯ ಶತಮಾನಕ್ಕಿಂತ ಹಿಂದಿನವನೆಂದು ಹೇಳಲು ಸಾಧ್ಯವೇ ಇಲ್ಲ ಎನ್ನುವ ವಾದವಿದೆ. ಅದಲ್ಲದೆ ಪತಂಜಲಿಯ ವ್ಯಾಕರಣ ಮಹಾಭಾಷ್ಯ ಕ್ರಿ.ಪೂ ಎರಡನೆಯ ಶತಮಾನದಲ್ಲಿ ರಚಿತವಾದುದೆಂದು ಹೇಳುವುದರಿಂದ ಪಾಣಿನಿ ಕ್ರಿಪೂ 400ಕ್ಕಿಂತ ಈಚಿನವನಾಗಿರಲೂ ಸಾಧ್ಯವಿಲ್ಲ. ಹೀಗೆಯೇ ವಿಚಾರಮಾಡಿ ಕೀತ್, ವೀಲರ್, ಮ್ಯಾಕ್ಸ್ ಮುಲ್ಲರ್ ಮುಂತಾದವರು ಪಾಣಿನಿಯ ಕಾಲ ಸುಮಾರು ಕ್ರಿ.ಪೂ 350 ಇರಬೇಕೆಂದು ಅಲ್ಲಿಗೆ ತಂದು ನಿಲ್ಲಿಸಿದ್ದಾರಾದರೂ ಗೋಲ್ಡ್ ಸ್ಟಕರ್ ಕ್ರಿ.ಪೂ ಏಳನೆಯ ಶತಮಾನದವನಿರಬೇಕೆಂದೂ, ಭಂಡಾರ್ಕರ್ ಕ್ರಿ.ಪೂ ಐದನೆಯ ಶತಮಾನಕ್ಕಿಂತ ಈಚಿನವನಿರಬೇಕೆಂದೂ ಬೆಳ್ವಲ್ಕರ್ ಅವರು ಕ್ರಿ.ಪೂ 700ರಿಂದ 600 ರೊಳಗಿರಬೇಕೆಂದೂ ನಾಮಾಶ್ರಯೀ ಅವರು ಕ್ರಿ.ಪೂ 2400 ರಲ್ಲಿದ್ದಿರಬೇಕೆಂದೂ ವಿ ಎಸ್.ಅಗ್ರವಾಲಾ ಕ್ರಿ.ಪೂ 480ರಿಂದ 410 ರೊಳಗಿರಬೇಕೆಂದೂ ಬೇರೆ ಬೇರೆ ಅಭಿಪ್ರಾಯ ಹೊಂದಿದ್ದಾರೆ.
ಪಾಣಿನಿಯ ವ್ಯಾಕರಣ ಸೂತ್ರಾತ್ಮಕವಾಗಿದೆ. ಅದರಲ್ಲಿ ಒಟ್ಟು 3,981 ಸೂತ್ರಗಳಿವೆ. ಎಲ್ಲ ಸೂತ್ರಗಳೂ ಒಂದೊಂದರಲ್ಲಿಯೂ ನಾಲ್ಕು ನಾಲ್ಕು ಪಾದಗಳುಳ್ಳ ಎಂಟು ಅಧ್ಯಾಯಗಳಾಗಿ ವಿಭಾಗಿಸಲ್ಪಟ್ಟಿವೆ. ಆದ್ದರಿಂದ ವ್ಯಾಕರಣ ಗ್ರಂಥಕ್ಕೆ ಅಷ್ಟಾಧ್ಯಾಯಿ ಎಂಬ ಹೆಸರೇ ಬಳಕೆಯಲ್ಲಿದೆ. ಅಷ್ಟಕ, ಪಾಣಿನೀಯ ವೃತ್ತಿ ಸೂತ್ರ, ಅಕಾಲಕವ್ಯಾಕರಣ, ಶಾಲಾತುರೀಯತಂತ್ರ ಎಂಬುದು ಅಷ್ಟಾಧ್ಯಾಯಿಯ ಇತರ ಹೆಸರುಗಳು. ವೃದ್ಧಿರಾದೈಚ್ ಎಂಬುದು ಇದರ ಮೊದಲನೆಯ ಸೂತ್ರ. ' ' ಎಂಬುದು ಕೊನೆಯ ಸೂತ್ರ. ಮಾಹೇಶ್ವರ ಸೂತ್ರಗಳೆಂದು ಕರೆಯಲ್ಪಡುವ ` ಉಣ್ ಋ ಲೃಕ್" ಇತ್ಯಾದಿ ಹದಿನಾಲ್ಕು ಸೂತ್ರಗಳೂ ಪಾಣಿನಿಯವೇ. ಇದಲ್ಲದೆ ಅಷ್ಟಾಧ್ಯಾಯಿಗೆ ಅನುಬಂಧವಾಗಿ ಪಾಣಿನಿಯಿಂದಲೇ ಗಣಪಾಠ, ಧಾತುಪಾಠ, ಲಿಂಗಾನುಶಾಸನ ಮತ್ತು ಶಿಕ್ಷಾಗಳೂ ರಚಿತವಾಗಿವೆ.
ಅಷ್ಟಾಧ್ಯಾಯಿಯ ಪ್ರಥಮಾಧ್ಯಾಯದ ಮೊದಲ ಎರಡು ಪಾದಗಳಲ್ಲಿ ಸಂಜ್ಞಾ ಪರಿಭಾಷಾ, ಮೂರನೆಯ ಪಾದದಲ್ಲಿ ಆತ್ಮನೇಪದಪ್ರಕ್ರಿಯೆ, ನಾಲ್ಕನೆಯ ಪಾದದಲ್ಲಿ ವಿಭಕ್ತಿ ಸಂಜ್ಞೆ.
ದ್ವಿತೀಯಾಧ್ಯಾಯದ ಮೊದಲ ಎರಡು ಪಾದಗಳಲ್ಲಿ ಸಮಾಸ, ಮೂರನೆಯ ಪಾದದಲ್ಲಿ ಕಾರಕ, ನಾಲ್ಕನೆಯ ಪಾದದಲ್ಲಿ ಸಮಾಸ ಮತ್ತು ಲುಕ್ ಪ್ರಕ್ರಿಯೆ.
ಮೂರನೆಯ ಅಧ್ಯಾಯದಲ್ಲಿ ಧಾತು ಪ್ರತ್ಯಯಗಳು ಮತ್ತು ಕೃದಂತ ನಿಷ್ಪತ್ತಿ.
ನಾಲ್ಕನೆಯ ಅಧ್ಯಾಯದಲ್ಲಿ ಸ್ತ್ರೀಪ್ರತ್ಯಯ, ತದ್ಧಿತಸಮಾಸಾಂತಗಳು.
ಆರು ಏಳನೆಯ ಅಧ್ಯಾಯಗಳಲ್ಲಿ ಸ್ವರವಿಧಿಗಳು, ಎಂಟನೆಯ ಅಧ್ಯಾಯದಲ್ಲಿ ಸಂಧಿಗಳು-ಮುಂತಾದ ಪದಗಳಿಗೆ ಸಂಬಂಧಿಸಿದ ಪ್ರಕರಣಗಳಿವೆ. ಕೆಲವೇ ಅಕ್ಷರಗಳುಳ್ಳ ಪುಟ್ಟ ಪುಟ್ಟ ಸೂತ್ರಗಳಿಂದ ಮಹತ್ತರವಾದ ವಿಷಯಗಳನ್ನು ಪ್ರತಿಪಾದಿಸಿರುವುದು ಪಾಣಿನಿಯ ವೈಶಿಷ್ಟ್ಯ. ಇದರ ಎಂಟೂ ಅಧ್ಯಾಯಗಳ ಎಲ್ಲ ಸೂತ್ರಗಳನ್ನೂ ಅದೇ ಅನುಪೂರ್ವಿಯಲ್ಲಿ ಕಂಠಪಾಠಮಾಡಿದ್ದಾದರೆ ಸೂತ್ರಾರ್ಥಗಳನ್ನು ಅಷ್ಟು ಕಷ್ಟವಿಲ್ಲದಂತೆ ಗ್ರಹಿಸಬಹುದು. ಪಾಣಿನಿಯ ಪ್ರತ್ಯಾಹಾರ ವಿಧಾನ, ಮುಂದಿನ ಸೂತ್ರಗಳಿಗೆ ಹಿಂದು ಹಿಂದಿನ ಸೂತ್ರಗಳಿಂದ ಪದಗಳನ್ನು ಅನುವರ್ತನ ಮಾಡಿಕೊಳ್ಳುವುದು, ಸ್ವರಜ್ಞಾನಕ್ಕೆ ಚ್ ತ್ ನ್ ಮೊದಲಾದ ಇತ್ ಸಂಜ್ಞೆಗಳು, ಬಹ್ವಕ್ಷರ ಸಂಜ್ಞೆಗಳಿಗೆ ಬದಲಾಗಿ, ಟಿ, , ಮೊದಲಾದ ಏಕಾಕ್ಷರ ಸಂಜ್ಞೆಗಳು, ಲಟ್ ಲಿಟ್ ಇತ್ಯಾದಿ ಸಂಜ್ಞೆಗಳು ಕಾಲ ನಾಮಗಳಾಗಿ ಏರ್ಪಟ್ಟಿರುವುದು ಇಂಥವೆಲ್ಲ ಶಾಸ್ತ್ರದಲ್ಲಿ ಲಾಘವವನ್ನು ಅಳವಡಿಸಿಕೊಳ್ಳುವುದಕ್ಕಾಗಿ. ಆದರೆ ಇದೆಲ್ಲದರಿಂದ ಶಾಸ್ತ್ರ ಅಭ್ಯಾಸಿಸುವವರಿಗೆ ಮೊದಮೊದಲು ತುಂಬ ಜಟಿಲವಾಗಿ ಕಾಣಿಸುತ್ತದೆ ಆದರೆ ಮುಂದೆ ಹೋದಂತೆ ಇದರ ಆಸ್ವಾದವೇ ಬೇರೆ.
ಪಾಣಿನಿಯ ಕಾಲದಲ್ಲಿಸಂಸ್ಕೃತ ಆಡುಭಾಷೆಯಾಗಿತ್ತು. ಅಲ್ಲದೆ ಗ್ರಾಂಥಿಕ ಸಂಸ್ಕೃತ ಭಾಷೆಗೂ ವ್ಯಾವಹಾರಿಕ ಸಂಸ್ಕೃತ ಭಾಷೆಗೂ ಅಷ್ಟಾಗಿ ವ್ಯತ್ಯಾಸವಿರಲಿಲ್ಲ. ಭಾಷೆಗೇ ಲೌಕಿಕ ಭಾಷೆ ಎನ್ನುವುದು. ಇದು ವೇದಗಳ ವೈದಿಕ ಭಾಷೆಗಿಂತ ತುಂಬ ಭಿನ್ನವಾಗಿತ್ತು. ವೈದಿಕ ಮತ್ತು ಲೌಕಿಕ ಭಾಷೆಗಳೆರಡಕ್ಕೂ ಅನ್ವಯಿಸುವಂತೆ ಒಂದೆ ವ್ಯಾಕರಣವನ್ನು ಶಬ್ದಾನುಶಾಸನ ಎನ್ನುವ ಹೆಸರಿನಲ್ಲಿ ರಚಿಸಿದ ಕೀರ್ತಿ ಸಲ್ಲುವುದು ಪಾಣಿನಿಯೊಬ್ಬನಿಗೆ ಮಾತ್ರ. ಅಲ್ಲದೆ ಈವರೆಗೆ ಉಪಲಬ್ಧವಾಗಿರುವ ಶಬ್ದಾನುಶಾಸನಗಳಲ್ಲಿ ಸಮಗ್ರವಾಗಿರುವುದು ಪಾಣಿನಿಯ ಅಷ್ಟಾಧ್ಯಾಯಿಯೊಂದೇ. ಇದರಲ್ಲಿನ ಸಾಂಕೇತಿಕ ಪರಿಶುದ್ಧತೆ ಮತ್ತು ಸೂತ್ರನಿರ್ಮಾಣ ಚಾತುರ್ಯ ಬೇರೆಲ್ಲೂ ಕಾಣಸಿಗುವುದಿಲ್ಲ.
ಪಾಣಿನಿಯೇ ತನಗಿಂತ ಹಿಂದಿನ ಹತ್ತು ವೈಯಾಕರಣಿಗಳನ್ನೂ ಪ್ರಾಂಚ, ಉದಂಚ, ಎಂಬ ಎರಡೂ ವ್ಯಾಕರಣ ಪದ್ಧತಿಗಳನ್ನೂ ಹೆಸರಿಸಿದ್ದಾನೆ. ಆಪಿಶಲಿ, ಕಾಶಕೃತ್ಸ್ನ ಎಂಬುವರು ಪಾಣಿನಿಗಿಂತ ಹಿಂದೆಯೇ ಪ್ರಸಿದ್ಧಿಪಡೆದಿದ್ದ ವೈಯಾಕರಣಿಕಗಳು. ಕಾಶ್ಯಪ, ಗಾರ್ಗ್ಯ, ಗಾಲವ, ಚಾಕ್ರವರ್ಮ, ಭಾರದ್ವಾಜ ಶಾಕಟಾಯನ, ಶಾಕಲ್ಯ, ಸೇನಕ, ಸ್ಫೋಟಾಯನರು ಉದಂಚರು. ಪಾಣಿನಿಗಿಂತ ಹಿಂದಿನವನಾದ ಯಾಸ್ಕನೂ ಔದುಂಬರಾಯಣ, ಔಪಮನ್ಯು, ಶಾಕಟಾಯನ ಮುಂತಾದ ವೈಯಾಕರಣಿಗಳ ಹೆಸರುಗಳನ್ನು ಉಲ್ಲೇಖಿಸಿದ್ದಾನೆ. ಇವರೆಲ್ಲರಲ್ಲಿ ಶಾಕಟಾಯನನೇ ಪ್ರಧಾನನೆನ್ನಬಹುದು. ಆದರೆ ಅವನ ವ್ಯಾಕರಣ ಗ್ರಂಥ ಇಂದಿಗೂ ಉಪಲಬ್ಧವಾಗಿಲ್ಲ.
ಪಾಣಿನಿಗಿಂತ ಹಿಂದೆಯೇ ಆಪಿಶಲಿ ಮತ್ತು ಕಾಶಕ್ರತ್ಸ್ನರ ವ್ಯಾಕರಣಗಳು ಪ್ರಚಲಿತವಾಗಿದ್ದುವು. ಕಾಶಕೃತ್ಸ್ನವ್ಯಾಕರಣದಲ್ಲಿ ಮೂರು ಅಧ್ಯಾಯಗಳೂ, ಆಪಿಶಲಿ ವ್ಯಾಕರಣದಲ್ಲಿ ಎಂಟು ಅಧ್ಯಾಯಗಳೂ ಇದ್ದುವು. ಆಪಿಶಲಿ ವ್ಯಾಕರಣ ಕ್ಲಿಷ್ಟವಾದದ್ದು. ಕಾಶಕೃತ್ಸ್ನ ವ್ಯಾಕರಣ ಕಾತಂತ್ರವ್ಯಾಕರಣಕ್ಕೆ ಮೂಲವಾಗಿದ್ದಂತೆ, ಆಪಿಶಲಿಯ ಅಷ್ಟಾಧ್ಯಾಯಿ ಪಾಣಿನಿಯ ಅಷ್ಟಾಧ್ಯಾಯಿಗೆ ಮೂಲವೆನಿಸಿಕೊಂಡಿದೆ. "ವಿಭಕ್ತ್ಯಂತಂ ಪದಂ" ಎಂಬ ಆಪಿಶಲಿಯ ಸೂತ್ರವೇ "ಸುಪ್ತಿಙಂತಂ ಪದಂ" ಎಂದು ಪಾಣಿನಿಯಿಂದ ರೂಪಾಂತರಗೊಂಡಿರುವುದು. ಆಪಿಶಲಿಯೇ ಪಂಚಪಾದಿ ಉಣಾದಿ ಸೂತ್ರಕರ್ತಾ ಎಂಬುದು ಅಭಿಜ್ಞರ ಮತ. ಪಾಣಿನಿಯ ಪ್ರತ್ಯಾಹಾರಸೂತ್ರಗಳಿಗೂ ಆಪಿಶಲಿಯೇ ಮಾರ್ಗದರ್ಶಿ ಎಂದು ತೋರುತ್ತದೆ. ಹೀಗೆ ಸಂಸ್ಕೃತವ್ಯಾಕರಣ ಗ್ರಂಥಗಳಲ್ಲಿ ಆಪಿಶಲಿ ಮೂಲವಾದ ಪಾಣಿನೀಯ ಪದ್ಧತಿ ಮತ್ತು ಕಾಶಕೃತ್ಸ್ನ ಮೂಲವಾದ ಕಾತಂತ್ರಪದ್ಧತಿ ಎಂಬ ಎರಡು ಪದ್ಧತಿಗಳು ಕಂಡುಬರುತ್ತವೆ. ಚಾಂದ್ರ, ಜೈನೇಂದ್ರ, ಸರಸ್ವತೀ ಕಂಠಾಭರಣಗಳು ಪಾಣಿನೀಯ ಪದ್ಧತಿಗೂ ಹೈಮ ಶಬ್ಬಾನುಶಾಸನ, ಮುಗ್ಧಬೋಧ, ಸಂಕ್ಷಿಪ್ತಸಾರ, ಸಾರಸ್ವತ, ಸುಪದ್ಮ, ಪ್ರಯೋಗ ರತ್ನಮಾಲಾಗಳು ಕಾತಂತ್ರಪದ್ಧತಿಗೂ ಸೇರಿದುವು. ಕಾಲಕ್ರಮದಲ್ಲಿ ಪಾಣಿನಿಯ ಅಷ್ಟಾಧ್ಯಾಯಿಯಲ್ಲಿ ತಮಗೆ ಕಂಡುಬಂದ ಕೆಲವು ಲೋಪದೋಷಗಳನ್ನು ಕ್ರಮಪಡಿಸುವುದಕ್ಕಾಗಿಯೂ ಕೆಲವು ಕಡೆ ಕ್ಲಿಷ್ಟವಾದ ಸೂತ್ರಗಳ ಅರ್ಥವನ್ನು ವಿವರಿಸುವುದಕ್ಕಾಗಿಯೂ ಅನಾವಶ್ಯಕವಾದುವನ್ನು ಪರಿಹರಿಸುವುದಕ್ಕಾಗಿಯೂ ಹೆಚ್ಚು ಲಾಘವವನ್ನು ಸಾಧಿಸುವುದಕ್ಕಾಗಿಯೂ ಕಾತ್ಯಾಯನ, ಭಾರದ್ವಾಜ, ಸುನಾಗ ಮುಂತಾದವರು ಪಾಣಿನಿಯ ಸೂತ್ರಗಳಿಗೆ ವಾರ್ತಿಕ ಎಂಬ ಅಡಕವಾದ ಟಿಪ್ಪಣಿಗಳನ್ನು ಬರೆದರು. ಇವರಲ್ಲಿ ಕಾತ್ಯಾಯನನೇ ಪ್ರಮುಖ. ಇವನಿಗೆ ವರರುಚಿ ಎಂಬುದು ಅಂಕಿತನಾಮ. ಕಾತ್ಯಾ ಎಂಬ ವಂಶದವನಾದುದರಿಂದ ಕಾತ್ಯಾಯನ ಎಂಬ ಹೆಸರೂ ರೂಢಿಯಲ್ಲಿದೆ. ಇವನನ್ನೇ ವಾರ್ತಿಕಾಚಾರ್ಯ, ವೃತ್ತಿಕಾರ ಎನ್ನುವುದು. ಕಾತ್ಯಾಯನನ ವಾರ್ತಿಕವನ್ನು ಆಧಾರವಾಗಿಟ್ಟುಕೊಂಡು ಪಾಣಿನಿಯ ಸೂತ್ರಗಳನ್ನು ಅರ್ಥೈಸಿಕೊಂಡು ವ್ಯಾಕರಣ ಮಹಾಭಾಷ್ಯವನ್ನು ಅನಂತರ ರಚಿಸಿದವ ಪತಂಜಲಿ. ಸಂಸ್ಕೃತ ವ್ಯಾಕರಣದಲ್ಲಿ ಈತನದೇ ಕೊನೆಯ ಮಾತೆಂದು ಈಗಲೂ ಪರಿಗಣಿಸಲಾಗುತ್ತಿದೆ. ಪಾಣಿನಿ, ವರರುಚಿ, ಪತಂಜಲಿ- ಮೂವರನ್ನೂ ವ್ಯಾಕರಣ ಶಾಸ್ತ್ರದಲ್ಲಿ ಧುರೀಣರಾದ ಮುನಿತ್ರಯರೆಂದು ಭಾವಿಸಲಾಗಿದೆ. ಮೂವರೂ ಮುನಿಗಳೇ ಆಗಿದ್ದರೆಂಬುದು ಸಾಂಪ್ರದಾಯಿಕ ನಂಬಿಕೆ.

ಪಾಣಿನಿಯ ಸೂತ್ರಗಳಿಗೆ ರಚಿತವಾಗಿರುವ ಟೀಕೆಗಳಲ್ಲಿ ಅತ್ಯಂತ ಪ್ರಾಚೀನವೂ ಪ್ರಧಾನವೂ ಆದುದು ಕಾಶಿಕಾವೃತ್ತಿ. ಇದನ್ನು ಜಯಾದಿತ್ಯ, ವಾಮನ ಎಂಬ ಇಬ್ಬರು ಜೈನಪಂಡಿತರು ಕ್ರಿ.. ಏಳನೆಯ ಶತಮಾನದ ಪೂರ್ವಾರ್ಧದಲ್ಲಿ ರಚಿಸಿದರು ಎಂದು ತಿಳಿದು ಬರುತ್ತದೆ.ಪಾಣಿನಿಯ ಅಷ್ಟಾಧ್ಯಾಯಿ ಸೂತ್ರಗಳ ಮೂಲಕ ವ್ಯಾಕರಣಶಾಸ್ತ್ರ ಅಭ್ಯಸಿಸುವುದು ಇತ್ತೀಚಿನವರೆಗೂ ತುಂಬ ಕಷ್ಟಕರವಾಗಿತ್ತು. ಕ್ರಿ.. ಹದಿನೇಳನೆಯ ಶತಮಾನದಲ್ಲಿ ಭಟ್ಟೋಜಿ ದೀಕ್ಷಿತ ಬೇರೆ ಬೇರೆ ಪ್ರಕರಣಗಳಿಗೆ ಸಂಬಂಧಿಸಿದ ಸೂತ್ರಗಳನ್ನೆಲ್ಲ ಒಟ್ಟುಗೂಡಿಸಿ ಸಿದ್ಧಾಂತ ಕೌಮುದಿಯನ್ನು ರಚಿಸಿದ ಮೇಲೆ ಅದು ತುಂಬ ಜನಪ್ರಿಯವಾಯಿತು. ಸಿದ್ಧಾಂತಕೌಮುದಿಯ ಮೂಲಕವಾಗಿಯೇ ಶಾಸ್ತ್ರಾಭ್ಯಾಸ ಮಾಡುವ ಕ್ರಮ ಆರಂಭವಾಯಿತು.


2 comments:

  1. ತುಂಬಾ ಉಪಯುಕ್ತವಾಗಿದೆ. ನಿಮಗೆ ಧ್ಯನ್ಯವಾದಗಳು.

    ReplyDelete