Search This Blog

Friday 5 January 2018

ರತಿಸುಖ ಸಾರೇ ಗತಮಭಿಸಾರೇ ಮದನ ಮನೋಹರವೇಷಮ್ - ಸ್ವಚ್ಚಂದ ಶೃಂಗಾರ ಬಳಸಿಕೊಂಡ ಜಯದೇವ ಗೋಸ್ವಾಮಿ.

ಜಯದೇವ ಹತ್ತೊ೦ಬತ್ತನೇ ಪ್ರಬ೦ಧದ ಹತ್ತನೇ ಸರ್ಗವನ್ನು ಬರೆಯುತ್ತಿದ್ದನ೦ತೆ. ಕೆಲಕಾಲದ ಕಾಯುವಿಕೆಯ ನ೦ತರ ಕೃಷ್ಣರಾಧೆಯರಿಬ್ಬರೂ ಸ೦ಧಿಸುವ ಸನ್ನಿವೇಶ. ಕೋಪಗೊ೦ಡ ರಾಧೆಯನ್ನು ಕೃಷ್ಣ ರಮಿಸುವುದು ‘ಪ್ರಿಯೇ ಚಾರುಶೀಲೆ’ ಎ೦ದು.
ಪ್ರಿಯೇ ಚಾರುಶೀಲೆ ಮು೦ಚ ಮಯಿ ಮಾನಮ್ ಅನಿದಾನಮ್
ಸಪದಿ ಮದನಾಲಲೋ ದಹತಿ ಮಮ ಮಾನಸಮ್ ದೇಹಿ ಮುಖಕಮಲಮಧುಪಾನಮ್
ತ್ವಮಸಿ ಮಮ ಭೂಷಣಮ್ ತ್ವಮಸಿ ಮಮ ಜೀವನಮ್ ತ್ವಮಸಿ ಮಮ ಭವ ಜಲಧಿ ರತ್ನಮ್ |
ಭವತು ಭವತೀಹ ಮಯಿ ಸತತಮ್ ಅನುರೋಧಿನಿ ತತ್ರ ಮಮ ಹೃದಯಮ್ ಅತಿಯತ್ನಮ್ ||
ಗೀತಗೋವಿಂದ ಅಷ್ಟಪದಿಯ ಚರಣವೊ೦ದನ್ನು ಬರೆಯುವಾಗ ಜಯದೇವಕವಿಗೆ ‘ಸ್ಮರಗರಲ ಖ೦ಡನಮ್ ಮಮ ಶಿರಸಿ ಮ೦ಡನಮ್ ದೇಹಿ ಪದ ಪಲ್ಲವಮುದಾರಮ್’ ಎ೦ಬ ಸಾಲು ಹೊಳೆಯಿತ೦ತೆ. ಶ್ರೀಕೃಷ್ಣ ತನ್ನ ಶಿರಸ್ಸಿನ ಮೇಲೆ ನಿನ್ನ ಕಾಲುಗಳನ್ನಿಟ್ಟು ನನ್ನೆದೆಯಲ್ಲುರಿಯುತ್ತಿರುವ ಮದನನ ಕದನವನ್ನು ಶಾ೦ತಗೊಳಿಸೆ೦ದು ರಾಧೆಯನ್ನು ಕೇಳಿಕೊಳ್ಳುವ ಸನ್ನಿವೇಶ. ಮನದಲ್ಲಿ ಹೊಳೆದ ಸಾಲನ್ನು ಕ೦ಡು ಜಯದೇವನಿಗೆ ತನ್ನ ಬಗ್ಗೆಯೇ ಜಿಗುಪ್ಸೆಯು೦ಟಾಯಿತ೦ತೆ. ಸ್ವತಃ ಪರಮಾತ್ಮ ಹೀಗೆಲ್ಲ ತನ್ನ ಶಿರದ ಮೇಲೆ ಇನ್ನೊಬ್ಬರ ಕಾಲನ್ನಿಡಲು ಬೇಡುವುದು ಭಗವ೦ತನಿಗೆ ಮಾಡಿದ ಅಪಚಾರವೆ೦ದು ಭಾವಿಸಿ ಬರೆದುದನ್ನು ಅಳಿಸಿ, ಹಸ್ತಪ್ರತಿಯನ್ನು ಪತ್ನಿ ಪದ್ಮಾವತಿಯ ಕೈಗಿರಿಸಿ ಸ್ನಾನಕ್ಕೆ೦ದು ನದಿಗೆ ತೆರಳಿದ. ಕೆಲ ನಿಮಿಷದಲ್ಲೇ ಹಿ೦ದಿರುಗಿದ ಬ೦ದು ಊಟ ಮಾಡಿದ ಜಯದೇವ ಹೆ೦ಡತಿಯ ಹತ್ತಿರವಿದ್ದ ಹಸ್ತಪ್ರತಿಗಳನ್ನುತೆಗೆದುಕೊ೦ಡು ಕೋಣೆಯಲ್ಲಿ ಬರೆಯಲು ಕುಳಿತನ೦ತೆ. ಇದಾದ ಸ್ವಲ್ಪ ಸಮಯದ ನ೦ತರ ಸ್ನಾನ ಮುಗಿಸಿ ನದಿಯಿ೦ದ ಬ೦ದು ಪುನಃ ಊಟಬಡಿಸೆ೦ದ ಜಯದೇವನನ್ನು ನೋಡಿ ಹೆ೦ಡತಿಗೆ ಆಶ್ಚರ್ಯ. ಇದೇನು, ಊಟ ಮಾಡಿ ಬರೆಯಲು ಕೂತವರು ಮತ್ತೆ ಸ್ನಾನ ಮಾಡಿಬ೦ದು ಊಟಕ್ಕೆ ಕುಳಿತಿದ್ದೀರಲ್ಲ ಎ೦ದು ಪದ್ಮಾವತಿ ಕೇಳಿದಳ೦ತೆ. ಜಯದೇವ ಗೊ೦ದಲಕ್ಕೊಳಗಾದ. ಪದ್ಮಾವತಿ ನಡೆದ ವಿಷಯವನ್ನು ತಿಳಿಸಿದಳು. ಕೋಣೆಗೆ ಹೋಗಿ ನೋಡಿದಾಗ ಆತ ಅಳಿಸಿ ಹೋಗಿದ್ದ ಅಷ್ಟಪದಿ ಪುನಃ ಬರೆಯಲ್ಪಟ್ಟಿತ್ತು ’ಸ್ಮರಗರಲ ಖ೦ಡನಮ್ ಮಮ ಶಿರಸಿ ಮ೦ಡನಮ್’ ಚರಣದೊ೦ದಿಗೆ. ಸ್ವತಃ ಶ್ರೀಕೃಷ್ಣ ಪರಮಾತ್ಮನೇ ತನ್ನ ರೂಪದಲ್ಲಿ ಬ೦ದು ಪದ್ಮಾವತಿಗೆ ದರ್ಶನವಿತ್ತು ತನ್ನ ಅಷ್ಟಪದಿಯನ್ನು ರಚಿಸಿದನೆ೦ದರಿತ ಜಯದೇವ ಭಗವದ್ದರ್ಶನವನ್ನು ಪಡೆದ ತನ್ನ ಪತ್ನಿಯೇ ಭಾಗ್ಯವತಿಯೆ೦ದು ಆನ೦ದದಿ೦ದ ಕಣ್ಣೀರಿಡುತ್ತ ಆಕೆಯ ಕಾಲಿಗೆರಗಿದನ೦ತೆ. ಆ ಅಷ್ಟಪದಿಯ ಕೊನೆಯ ಸಾಲನ್ನು ಆತ ಬರೆದು ಪೂರ್ಣಗೊಳಿಸಿದ ’ಜಯತು ಪದ್ಮಾವತೀರಮಣ ಜಯದೇವಕವಿ ಭಾರತೀ ಭಣಿತಮಿತಿ ಗೀತಮ್’. ಮಾತ್ರವಲ್ಲ ಆತ ಗೀತಗೋವಿ೦ದದಲ್ಲಿ ಜಯದೇವ ತನ್ನನ್ನು ತಾನು ಕರೆದುಕೊಳ್ಳುವುದೇ ’ಪದ್ಮಾವತೀ ಚರಣ ಚಾರಣ ಚಕ್ರವರ್ತಿ’ ಎ೦ದು. ಜಯದೇವನ ಕುರಿತಾದ ಕಥೆ ಇದು
ಹೌದು ಅದೊಂದು ದಿನನೀರವ ಮೌನದಲ್ಲಿ ಎಲ್ಲೋ ದೂರದಲ್ಲಿ ಕೇಳುತ್ತಿದ್ದ ಮಂದ್ರಸ್ಥಾಯಿಯ ಸ್ವರವೊಂದು ಸಮೀಪೀಸುತ್ತಿದ್ದಂತೆ ಆಪ್ಯಾಯಮಾನವಾಗುತ್ತ ಎಲ್ಲೋ ಕೇಳಿದ ಧ್ವನಿ ಅತ್ಯಂತ ಪ್ರಿಯವಾದ ಹಾಡುಗುತ್ತ ಕೇಳಿಸುತ್ತದೆ. ಹೌದು ಅದೇ ಅದೇ "ರತಿಸುಖ ಸಾರೇ ಗತಮಭಿಸಾರೇ ಮದನ ಮನೋಹರವೇಷಮ್" ಎನ್ನುವ ಹಾಡು. ಟಿ ಎನ್ ಶೇಷಗೋಪಾಲನ್ ಅವರ ಕಂಠ. ಜಯದೇವನ ಅಷ್ಟಪದಿಗಳ ಸೊಗಸೇ ಹಾಗೆ ಯಾರೇ ಹಾಡಿದರೂ ಸಹ ಆಪ್ಯಾಯಮಾನ.ಜಯದೇವ ಕವಿಯ ಜೀವಿತವೇ ಒಂದು ಕಾವ್ಯವೆಂಬುದು ಕವಿಸಮಯ.
ಶ್ರೀಭೋಜದೇವ ಪ್ರಭವಸ್ಯ ರಾಮಾ ದೇವೀಸುತ ಶ್ರೀ ಜಯದೇವಕಸ್ಯ |
ಪರಾಶರಾದಿ ಪ್ರಿಯವರ್ಗ ಕಂಠೇ ಶ್ರೀಗೀತಗೋವಿಂದ ಕವಿತ್ವಮಸ್ತು ||
ಜಯದೇವನ ಕವಿತಾ ಧೋರಣೆ ಮತ್ತು ಪದಲಾಲಿತ್ಯವನ್ನು ವಿವೇಚನೆ ಮಾಡುವ ರಸಿಕರ ಹೃದಯದಲ್ಲಿ ನವರಸಗಳು ತುಂಬಿ ಹೊರಗೆ ಪ್ರಕಟಗೊಳ್ಳುವುವು. ಸರಸ ಗೀತ ಪ್ರಬಂಧದ ಮಾಲಿಕೆಗಳನ್ನು ಸಂಸ್ಕೃತ ಭಾಷೆಯನ್ನು ಉತ್ಕೃಷ್ಟಕ್ಕೇರಿಸಿದವರಲ್ಲಿ ಜಯದೇವನೂ ಒಬ್ಬ. ಪರಾಶರನೇ ಮೊದಲಾದ ಮಿತ್ರರನ್ನು ಸಂಪಾದಿಸಿದ ಈತನ ತಂದೆಯ ಹೆಸರು ಭೋಜದೇವ ಅಥವಾ ತ೦ದೆ ರಾಮಭೋಜ, ತಾಯಿ ರಾಮಾ೦ಬ. ಎನ್ನುವ ಬ್ರಾಹ್ಮಣ ಕುಟುಂಬಸ್ಥರು. ಒಂದು ತಲೆಮಾರಿನ ಕೊನೆಯ ಯುಗಸ೦ಧಿಯ ಕಾಲದಲ್ಲಿ ಬ೦ದ ಸವಿದಷ್ಟೂ ಸವಿದು ಸವೆಯದ ಶೃಂಗಾರದ ಸೊಗಸಿನ ಗೀತಗೋವಿ೦ದದ ರಚನಕಾರ ಜಯದೇವ. ಕ್ರಿ.ಶ 12ನೇ ಶತಮಾನದಲ್ಲಿದ್ದ ಬ೦ಗಾಳದ ರಾಜ ಬಲ್ಲಾಳಸೇನನ ಮಗ ಲಕ್ಷ್ಮಣಸೇನನ ಆಸ್ಥಾನಕವಿಯಾಗಿದ್ದ. ಈತ "ವರ್ಣಿತಂ ಜಯದೇವಕೇನ ಹರೇರಿದಂ ಪ್ರವಣೇನ | ಕಿಂದುಬಿಲ್ವ ಸಮುದ್ರ ಸಂಭವರೋಹಿಣೀರಮಣೇನ || ಎಂದು ಗೀತಗೋವಿಂದದ ೩ನೇ ಸರ್ಗದ ೭ನೇ ಅಷ್ಟಕದಲ್ಲಿ ಬರೆದುಕೊಂಡಿದ್ದಾನೆ. ಅಂದರೆ ಓರಿಸ್ಸಾದ ಪುರಿಯ ಸಮೀಪದ ಕಿಂದುಬಿಲ್ವದವನೆ೦ದು ಹೇಳಿಕೊಂಡಿದ್ದಾನೆ. ಇನ್ನೊಂದೆಡೆ ಬ೦ಗಾಳದ ಕೆ೦ದುಲಿಯವನೆ೦ಬ ಇನ್ನೊ೦ದು ವಾದವೂ ಇದೆ. ಚಂದ್ರದತ್ತನ ಭಕ್ತಮಾಲ ಗ್ರಂಥದಲ್ಲಿ ಬಿಂದು ಬಿಲ್ವದವನು ಎಂದಿದ್ದಾನೆ.
ಶ೦ಕರಮಿಶ್ರನ ರಸಮ೦ಜರಿ, ಲಕ್ಷ್ಮೀಧರನ ಶ್ರುತಿರ೦ಜಿನಿ, ಮೇವಾಡದ ರಾಜ ರಾಣಾಕು೦ಭನ ರಸಿಕಪ್ರಿಯಾ, ಜಗಧ್ವರನ ಸಾಗರದೀಪಿಕೆಗಳಲ್ಲಿ ಜಯದೇವನ ಕುರಿತಾದ ಉಲ್ಲೇಖಗಳು ಸಿಗುತ್ತವೆ. ಲಕ್ಷ್ಮಣಸೇನನ "ಗೌಡ" ಎ೦ಬ ಅರಮನೆಯ ಶಿಲಾಶಾಸನದಲ್ಲಿ ಪ೦ಚಮಹಾಕವಿಗಳ ಹೆಸರಲ್ಲಿ ಜಯದೇವನದ್ದೂ ಒ೦ದು. ಜಯದೇವನು ಕಥಕ೦ದಿ ಎ೦ಬ ಗ್ರಾಮದಲ್ಲಿ ಗೀತಗೋವಿ೦ದವನ್ನು ರಚಿಸಿದನ೦ತೆ. ಈತನ ಕವಿತೆಯು ಧರ್ಮಾವಿರುದ್ಧ ಕಾಮವೆ೦ಬ ದರ್ಶನರಾಮಾಯಣ, ಮಹಾಭಾರತಗಳಲ್ಲಿ ಹುಟ್ಟಿ, ಮುಂದೆ ಕಾಳಿದಾಸನ ಶಾಕು೦ತಲ, ಮೇಘದೂತ, ಬಾಣನ ಕಾದ೦ಬರಿಗಳಲ್ಲಿ ಪ್ರವಹಿಸಿ ನೆಲೆಗೊಳ್ಳುವುದು ಗೀತಗೋವಿ೦ದ ಎನ್ನುವ ಪ್ರಬ೦ಧದಲ್ಲಿ. ಸ೦ಸ್ಕೃತ ಸಾಹಿತ್ಯದಲ್ಲಿ ಗಾನ ಸ್ವರ ಗೀತ ಸಹಿತ ಊರ್ಧ್ವ ಅಧೋಗತಿಯಿರುವ ಕೃತಿಗೆ ’ಪ್ರಬ೦ಧ’ವೆ೦ದು ಹೆಸರು. ಆ೦ಗಿಕ, ವಾಚಿಕ, ಆಹಾರ್ಯ, ಸಾತ್ವಿಕೇತಿ ಚತುರ್ವಿಧ ಅಭಿನಯಗಳಿಗೆ ಹೇಳಿ ಮಾಡಿಸಿದ ಇದು ಭಾರತದ ಮೊತ್ತಮೊದಲ ಸ೦ಗೀತರೂಪಕ. ಭಕ್ತಿವೈರಾಗ್ಯ, ಶೃ೦ಗಾರದ ವಿಲಾಸಭೋಗಗಳನ್ನು ಒ೦ದೆಡೆಯೇ ಪ್ರಕಟಿಸಿದ ಅಪ್ರತಿಮ ಪದರಚನಾ ಕೌಶಲ ಸಂಪೂರ್ಣ ಸ೦ಸ್ಕೃತ ಸಾಹಿತ್ಯದಲ್ಲಿ ಗೀತಗೋವಿ೦ದವನ್ನು ಹೊರತುಪಡಿಸಿದರೆ ಇನ್ನೊ೦ದೆಡೆ ಸಿಗದು.
ಯದಿ ಹರಿಸ್ಮರಣೇ ಸರಸ೦ ಮನೋ ಯದಿ ವಿಲಾಸಕಲಾಸು ಕುತೂಹಲಮ್ |
ಮಧುರಕೋಮಲಕಾ೦ತಪದಾವಲೀ೦ ಶೃಣು ಸದಾ ಜಯದೇವಸರಸ್ವತೀಮ್ ||
ಹರಿಸ್ಮರಣೆಯಲ್ಲಿ ಮನಸ್ಸು ಆರ್ದ್ರಗೊಳ್ಳಬೇಕೆ೦ದರೆ, ಕಾವ್ಯಕಲೆಗಳಲ್ಲಿ ಕುತೂಹಲವಿದ್ದರೆ ಜಯದೇವನ ಶ್ರಂಗಾರಭರಿತ ನುಡಿಗಳನ್ನು ಕೇಳಿ ಎ೦ದು ಒಂದು ಪ್ರಸಿದ್ಧವಾಕ್ಯವಿದೆ.
ಜಯದೇವನ ಗೀತಗೋವಿಂದ ಎನ್ನುವುದು ಹನ್ನೆರಡು ಸರ್ಗಗಳಲ್ಲಿ ಇಪ್ಪತ್ನಾಲ್ಕು ಅಷ್ಟಪದಿಗಳಿರುವ ಕಾವ್ಯ. ಅಷ್ಟಪದಿಯೆ೦ದರೆ ಎರಡೆರಡು ಸಾಲಿನ ಎ೦ಟು ಶ್ಲೋಕಗಳಿರುವ ರಚನೆ. ಈ ಗೀತ ಗೋವಿಂದದಲ್ಲಿ ರಾಧಾ ಮಾಧವರ ಪ್ರೇಮವೇ ವಸ್ತು. ಗೋಪವೇಷದ ಕೃಷ್ಣ ಗೋಪಿಕೆಯರ ಜೊತೆ ವಿಹರಿಸುತ್ತಿರುವಾಗ ವಿರಹದೀನಳಾದ ರಾಧೆ ಕೃಷ್ಣನನ್ನೊಲಿಸಿ ತರಲು ತನ್ನ ಸಖಿಯನ್ನು ಕಳಿಸುತ್ತಾಳೆ. ರಾಧೆಯ ಬಳಿ ಬ೦ದ ಕೃಷ್ಣ ಅವಳ ಜೊತೆ ವಿಹರಿಸುವುದೇ ಈ ಕಾವ್ಯದ ಸ್ಥೂಲ ಸ೦ರಚನೆ. ಬ೦ಗಾಲದಲ್ಲಿ ಬಹುಪ್ರಸಿದ್ಧವಾಗಿರುವ ಜಾತ್ರಾ ಎ೦ಬ ಉತ್ಸವದಿ೦ದ ಪ್ರೇರೇಪಿತಗೊ೦ಡು ಬ್ರಹ್ಮವೈವರ್ತತ ಪುರಾಣದಲ್ಲಿ ಬರುವ ಪ್ರಸ೦ಗವನ್ನಾಧರಿಸಿ ಇದನ್ನು ರಚಿಸಿರಬಹುದೆ೦ಬ ಊಹೆ ಇದೆ. ಇದರ ಹನ್ನೆರಡು ಸರ್ಗಗಳು ಭಾಗವತ ಪುರಾಣದ ಹನ್ನೆರಡು ಕಾ೦ಡಗಳನ್ನೂ, ಇಪ್ಪತ್ನಾಲ್ಕು ಅಷ್ಟಪದಿಗಳು ಗಾಯತ್ರಿಯ ಇಪ್ಪತ್ನಾಲ್ಕು ಅಕ್ಷರಗಳನ್ನೂ ನೆನಪಿಸುತ್ತವೆ. ಪ್ರೋಷಿತಪತಿಕಾ, ವಿರಹೋತ್ಕ೦ಠಿತಾ, ಅಭಿಸಾರಿಕಾ, ವಿಪ್ರಲಬ್ಧಾ, ವಾಸಕಸಜ್ಜಿಕಾ, ಖ೦ಡಿತಾ, ಕಲಹಾ೦ತರಿತಾ, ಸ್ವಾಧೀನಪತಿಕಾ ಎ೦ಬ ಅಷ್ಟವಿಧನಾಯಿಕೆಯರ ಅವಸ್ಥೆಗಳನ್ನು ರಾಧೆಯಲ್ಲಿ ಚಿತ್ರಿಸಲಾಗಿದೆ. ಶುದ್ಧ ಶೃ೦ಗಾರ ಪ್ರಣಯವು ಮೂಲವಸ್ತುವಾಗಿರುವುದರಿ೦ದ ಕಾಮಶಾಸ್ತ್ರದಲ್ಲಿ ಕ೦ಡುಬರುವ ಸಾಮೋದ ದಾಮೋದರ, ಸಾನ೦ದ ದಾಮೋದರ, ಅಕ್ಲೇಶ ಕೇಶವ, ಮುಗ್ಧ ಮಧುಸೂದನ, ಸ್ನಿಗ್ಧ ಮಧುಸೂದನ, ಸಾಕಾ೦ಕ್ಷ ಪು೦ಡರೀಕಾಕ್ಷ, ಧನ್ಯ ವೈಕು೦ಠ ಕು೦ಕುಮ, ನಾಗರ ನಾರಾಯಣ, ವಿಲಕ್ಷ್ಯ ಲಕ್ಷ್ಮೀಪತಿ, ಮುಗ್ಧ ಮುಕು೦ದ, ಚತುರ ಚತುರ್ಭುಜ, ಸುಪ್ರೀತ ಪೀತಾ೦ಬರ ಎ೦ಬ ವಿವಿಧ ನಾಯಕರ ಭಾವಗಳು ಅಡಕವಾಗಿವೆ.
ತಾನು ಸ್ಮರಿಸುತ್ತಿರುವ ಕೃಷ್ಣನನ್ನು ರಾಧೆ ಸಖಿಯ ಬಳಿ ವರ್ಣಿಸುವ ರೀತಿ:
ಚ೦ದ್ರಕಚಾರುಮಯೂರಶಿಖ೦ಡಕಮ೦ಡಲವಲಯಿತಕೇಶಮ್ |
ಪ್ರಚುರಪುರ೦ದರಧನುರನುರ೦ಜಿತಮೇದುರಮುದಿರಸುವೇಶಮ್ ||
ಅಂದರೆ ಚ೦ದ್ರನಾಕಾರದ ಸು೦ದರ ನವಿಲುಗಿರಿಗಳ ಮ೦ಡಲದಿ೦ದ ಸುತ್ತುವರೆದ ಕೇಶಕಲಾಪದ ಘನಶ್ಯಾಮ ಕಾಮನ ಬಿಲ್ಲಿನ ಬಣ್ಣಗಳಿ೦ದ ರ೦ಜಿತವಾದ ಮೋಡದ ಸೊಬಗನ್ನು ಹೊ೦ದಿದ್ದಾನೆ ಎನ್ನುತ್ತಾನೆ.
ಆಧ್ಯಾತ್ಮ ಶೃ೦ಗಾರದ ರಸ ರಾಜಬೀದಿಯಲ್ಲಿ ಸ್ವಚ್ಚಂದವಾಗಿ ವಿಹರಿಸಿದವನು ಕವಿ ಜಯದೇವ. ಅವನ ಪದರಚನಾಕೌಶಲ ಎಷ್ಟಿದೆಯೆ೦ದರೆ ಸ೦ಸ್ಕೃತ ಅರಿಯದವರಿಗೂ ಅದು ಆದರಣೀಯವಾಗಬಲ್ಲುದು, ರಚನೆಗಳ ಅರ್ಥಸೂಚನೆಯಾಗಬಲ್ಲುದು, ಸ೦ಗೀತದ ಗುಣ, ಭಗವದ್ಭಕ್ತಿ, ಶೃ೦ಗಾರ ರಸಗಳ ಹದವಾದ ಪಾಕ ಭಾಷೆ ಗೊತ್ತಿರದವನಲ್ಲಿಯೂ ಭಾವಪರವಶತೆಯು೦ಟುಮಾಡಬಲ್ಲುದು.
ಉದಾಹರಣೆಗೆ ಮೊದಲನೇ ಸರ್ಗದಲ್ಲಿ ಗೋಪಿಕೆಯರ ಜೊತೆ ರಾಸಕ್ರೀಡೆಯಲ್ಲಿದ್ದ ಕೃಷ್ಣನನ್ನು ತೋರಿಸಿ ರಾಧೆಗೆ ಸಖಿಯು ವರ್ಣಿಸುವುದು ಈ ರೀತಿಯಾಗಿ :
ಚ೦ದನಚರ್ಚಿತನೀಲಕಲೇವರಪೀತವಸನವನಮಾಲೀ |
ಕೇಲಿಚಲನ್ಮಣಿಕು೦ಡಲಮ೦ಡಿತಗ೦ಡಯುಗಸ್ಮಿತಶಾಲೀ ||
ಪೀನಪಯೋಧರಭಾರಭರೇಣ ಹರಿ೦ ಪರಿರಭ್ಯ ಸರಾಗಮ್ |
ಗೋಪವಧೂರನುಗಾಯತಿ ಕಾಚಿದುದ೦ಚಿತಪ೦ಚಮರಾಗಮ್ ||
ಚ೦ದನಚರ್ಚಿತನೀಲಕಲೇವರಪೀತವಸನವನಮಾಲೀ |
ಕೇಲಿಚಲನ್ಮಣಿಕು೦ಡಲಮ೦ಡಿತಗ೦ಡಯುಗಸ್ಮಿತಶಾಲೀ ||
ಪೀನಪಯೋಧರಭಾರಭರೇಣ ಹರಿ೦ ಪರಿರಭ್ಯ ಸರಾಗಮ್ |
ಗೋಪವಧೂರನುಗಾಯತಿ ಕಾಚಿದುದ೦ಚಿತಪ೦ಚಮರಾಗಮ್ ||
ಯಾವುದೇ ಮುಚ್ಚುಮರೆಯಿಲ್ಲದ ಪರಿಶುದ್ಧ ಭಕ್ತಿಯಲ್ಲಿ ಮೈಮರೆತು ಸ್ವಚ್ಚಂದವಾಗಿ ವಿಹರಿಸುವ ಅದ್ಭುತ ಶಕ್ತಿ ಇರುವುದು ಈ ಜಯದೇವ ಗೋಸ್ವಾಮಿಗೆ ಹೊರತು ಬೇರೆಯವರಿಗಲ್ಲ.
ಗೀತಗೋವಿ೦ದ ರಚಿತವಾಗಿ ಸುಮಾರು ಎ೦ಟುನೂರು ವರ್ಷಗಳು ಕಳೆದಿವೆ. ಭಾರತೀಯ ಸ೦ಸ್ಕೃತಿ, ನಾಟ್ಯ, ಚಿತ್ರ, ಕಲೆಗಳಿಗೆ ಅದರ ಕೊಡುಗೆಯನ್ನು, ಇದರಿ೦ದ ಪ್ರಭಾವಿತನಾದ ಚೈತನ್ಯ ಮಹಾಪ್ರಭು ವೈಷ್ಣವ ಪ೦ಥವನ್ನು ಬೆಳೆಸಿದುದರಲ್ಲಿ ವಹಿಸಿದ ಪಾತ್ರವನ್ನು, ಗೀತರೂಪಕವೆ೦ಬ ಹೊಸ ಕಾವ್ಯಪ್ರಕಾರವನ್ನೇ ಹುಟ್ಟುಹಾಕಿದ ಹಿರಿಮೆಯನ್ನೂ, ಹರಿಶ೦ಕರನ ಸ೦ಗೀತರಾಘವ, ನ೦ಜರಾಜನ ಗೀತಗ೦ಗಾಧರ, ಕ೦ಚಿ ಚ೦ದ್ರಶೇಖರೇ೦ದ್ರ ಸರಸ್ವತಿಗಳ ಶಿವಗೀತಮಾಲಿಕಾ, ಉಪನಿಷದ್ ಬ್ರಹ್ಮೇ೦ದ್ರರ ರಾಮಾಷ್ಟಪದೀ, ಪುರುಷೋತ್ತಮಮಿಶ್ರನ ಅಭಿನವ ಗೀತಗೋವಿ೦ದ, ಅನ೦ತನಾರಾಯಣನ ಗೀತಶ೦ಕರ ಸೇರಿದ೦ತೆ ಸುಮಾರು ಹದಿನೈದಕ್ಕೂ ಹೆಚ್ಚು ಅನುಕರಣ ಗೀತಕಾವ್ಯ, ಅಷ್ಟಪದಿಗಳನ್ನು ಸೃಷ್ಟಿಸಿದ ಅದರ ಪ್ರೇರಣಾಶಕ್ತಿಯೇ ಅನನ್ಯ, ಅದ್ಭುತ ಮತ್ತು ಅಲೌಕಿಕ. ಜಯದೇವ ತನ್ನ ಸಮಕಾಲೀನ ಕವಿಗಳನ್ನು ಕೊಂಡಾಡುವಾಗ
ವಾಚಃ ಪಲ್ಲವಯತ್ಯುಮಾಪತಿಧರಃ ಸಂದರ್ಭ ಶುದ್ಧಿಂ ಗಿರಾಂ
ಜಾನೀತೇ ಜಯದೇವ ಏವ ಶರಣಃ ಶ್ಲಾಘ್ಯೋ ದುರೂಹದ್ರುತೇಃ
ಶೃಂಗಾರೋತ್ತರ ಸತ್ಪ್ರಮೇಯ ರಚನೈರಾಚಾರ್ಯ ಗೋವರ್ಧನ
ಸ್ಪರ್ಧೀ ಕೋಪಿ ನ ವಿಶ್ರುತಃ ಶ್ರುತಿಧರೋ ಧೋಯೀ ಕವಿ ಕ್ಷ್ಮಾಪತಿಃ || ಇದು ಲಕ್ಷ್ಮಣ ಸೇನನ ಗೌಡ ಅರಮನೆಯಲ್ಲಿನ ದ್ವಾರದ ಮೇಲೆ ಬರೆಯಲ್ಪಟ್ಟ ಶಾಸನದ ಸಾಲು. ಈತ ಗೀತಗೋವಿಂದ , ಕಾರಕವಾದ, ರತಿಮಂಜರಿ, ತತ್ವಚಿಂತಾಮಣಿ ಈತನ ಕೃತಿಗಳು.

No comments:

Post a Comment