Search This Blog

Wednesday 23 May 2018

ವಾಗರ್ಥಾ ವಿವ ಸಂಪ್ರಕ್ತೌ - ಚಾಲುಕ್ಯ ಆರನೇ ವಿಕ್ರಮಾದಿತ್ಯ.

ಬನವಾಸಿ ಕದಂಬರಕಾಲ, ಆಗಿನ್ನು ಕನ್ನಡದ ಲಿಪಿ ತನ್ನ ಖಾತೆ ತೆರೆಯುತ್ತಿದ್ದ ಕಾಲವದು, ಬ್ರಾಹ್ಮಿಯಿಂದ ಕಳಚಿದ ಕೊಂಡಿ ಕನ್ನಡವಾಗಿ ಗುರುತಿಸಿಕೊಂಡು ತನ್ನದೇ ಸ್ವತಂತ್ರ ಇತಿಹಾಸವನ್ನು ನಿರ್ಮಿಸಿದ ಕಾಲದಲ್ಲಿ ಕುಬ್ಜನೆನ್ನುವ ಮೇರು ಕವಿಯೊಬ್ಬ ಸಂಪದ್ಭರಿತ ಸಾಹಿತ್ಯದ ರುಚಿಯನ್ನು ಉಣಿಸುತ್ತಿದ್ದ, ಅದೇ ಕಾಲ ಅಥಾ ತುಸು ಹಿಂದು ಮುಂದಕ್ಕೆ ಗುಡ್ನಾಪುರದ ಶಾಸನ ಕವಿಯಿಂದ ಇನ್ನೊಂದು ಸಾಹಿತ್ಯದ ಕೊಡುಗೆ ಬಿಟ್ಟರೆ ಆಮೇಲೆ ಚಾಳುಕ್ಯರ ಕಾಲದಲ್ಲಿನ ಎರಡನೇ ಪುಲಕೇಶಿಯ ಕಾಲದಲ್ಲಿ ಸುಮಾರು 634 ನೇ ಇಸವಿಯಲ್ಲಿ ರವಿಕೀರ್ತಿ ಎನ್ನುವ ಆಸ್ಥಾನ ಕವಿಯೊಬ್ಬ ಐಹೊಳೆಯ ಮೇಗುತಿಯಲ್ಲಿ ಸಾಹಿತ್ಯಾತ್ಮಕವಾದ ಶಿಲಾ ಫಲಕ ಖಂಡರಿಸಿ ತಾನು ಕಾಳಿದಾಸ ಭಾರವಿಯಂತಹ ಅತ್ಯಂತ ಶ್ರೇಷ್ಠ ಕವಿಗಳಿಗಿಂತ ಕಡಿಮೆಯವನಲ್ಲ ಎಂದು ಇತಿಹಾಸ ನಿರ್ಮಿಸುತ್ತಾನೆ.
ಈಗ ನಾನು ಇಲ್ಲಿ ಹೇಳುವುದು 1029ರ ಕಾಲದ ಚಾಲುಕ್ಯ ಆರನೇ ವಿಕ್ರಮಾದಿತ್ಯನ "ಹೂಲಿ"ಶಾಸನದ ಆರಂಭದ ಸಾಲು, ಬಾಣನ ಹರ್ಷ ಚರಿತದ ಮಂಗಲಾಚರಣೆಯ ಶ್ಲೋಕ “ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ ತ್ರೈಲೋಕ್ಯ ನಗರಾರಂಭ ಮೂಲ ಸ್ತಂಭಾಯ ಶಂಭವೇ”. ಇದು ಸುಮಾರಾಗಿ ಹೆಚ್ಚಿನ ಎಲ್ಲಾ ಶಾಸನಗಳಲ್ಲೂ ಕಂಡು ಬರುತ್ತದೆ. ಬನವಾಸಿ ಕದಂಬರ ಕಾಲದ ಶಾಸನಗಳಲ್ಲಿ ಇದು ಇಲ್ಲವೇ ಇಲ್ಲ ಅನ್ನಬಹುದು. ಆದರೆ ಆಮೇಲಿನ ಚಳುಕ್ಯರ ಕಾಲದಲ್ಲಿ ನಿಧಾನವಾಗಿ ಬಳಕೆಗೆ ಬಂದಿತು.
ಮಂಗಲೇಶನ ಮಹಾಕೂಟದ ಶಾಸನದಲ್ಲಿ ದಾಟ ಎನ್ನುವ ಕವಿ "ಯಥಾ ವಿಧಿ ಹುತಾಗ್ನೀನಾಂ"ಎಂದು ರಘುವಂಶದ ಶ್ಲೋಕವನ್ನು ಉದಾಹರಿಸಿದ್ದಾನೆ. ಅದರ ನಂತರ ಕಾಣಿಸಿಕೊಂಡ ರವಿಕೀರ್ತಿ ಕಾಳಿದಾಸ ಮತ್ತು ರಾಮಾಯಣದ ಅನೇಕ ಶ್ಲೋಕಗಳನ್ನು ತನ್ನ ಶಾಸನ ಕಾವ್ಯದಲ್ಲಿ ಸಮೀಕರಿಸಿ ಇಳಿಸಿಕೊಂಡಿದ್ದಾನೆ. ಆದರೆ ಇಲ್ಲಿ ಚಾಲುಕ್ಯ ಆರನೇ ವಿಕ್ರಮಾದಿತ್ಯನ ಹೂಲಿಯ ಶಿಲಾ ಶಾಸನದಲ್ಲಿ ಬಾಣನ ಹರ್ಷಚರಿತೆಯ ಮಂಗಲಾಚರಣೆಯ ಶ್ಲೋಕದ ಜೊತೆ ಜೊತೆಗೆ ಕಾಳಿದಾಸನ ರಘುವಂಶದ ಮಂಗಲಾಚರಣೆಯ ಅತ್ಯಂತ ಜನಪ್ರಿಯ ಶ್ಲೋಕವನ್ನು ತೆಗೆದುಕೊಂಡಿದ್ದಾನೆ.
ವಾಗರ್ಥಾ ವಿವ ಸಂಪ್ರಕ್ತೌ ವಾಗರ್ಥ ಪ್ರತಿಪತ್ತಯೇ
ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ || ಇದು ಕಾಳಿದಾಸನ ರಘುವಂಶದ ಮಂಗಲಾಚರಣೆ. ಕಾಳಿದಾಸ ಮಹಾಕಾವ್ಯವನ್ನು ಬರೆಯಲು ತೊಡಗಿಕೊಂಡಾಗ ಮೊಟ್ತಮೊದಲಿಗೆ ಆತ ಜಗತ್ತಿನ ಒಡೆಯರಾದ, ಜಗತ್ತಿಗೆ ತಂದೆ ತಾಯಿಯರಂತಿರುವ ಪಾರ್ವತೀ ಮತ್ತು ಪರಮೇಶ್ವರರನ್ನು ನೆನೆಯುತ್ತಾನೆ. ಇದರ ಅರ್ಥವನ್ನು ಇಲ್ಲಿ ಹೇಳಲು ತೊಡಗಿದರೆ ಅದೇ ದೊಡ್ದದಾಗುವುದರಿಂದ ಅದನ್ನು ನಾನು ಮುಂದುವರೆಸುತ್ತಿಲ್ಲ. ಆದರೆ ಈ ಶಾಸನ ಕವಿ ತಾನು ಪಾರ್ವತೀ ಪರಮೇಶ್ವರರನ್ನು ನೆನೆದು ಈ ಶಾಸನದ ವಾಕ್ಯವೂ ಸಹ ಅಷ್ಟೇ ಗಂಭೀರವಾದದ್ದು ಎನ್ನುವುದನ್ನು ಪ್ರತಿಪಾದಿಸಲು ಪ್ರಯತ್ನಿಸಿರ ಬಹುದು.
ಇಲ್ಲಿ ಗಮನಿಸ ಬೇಕಾದ ಅಂಶ ಎಂದರೆ ಈ ಚಲುಕ್ಯ ಆರನೇ ವಿಕ್ರಮಾದಿತ್ಯನ ಎಲ್ಲ್ಲಾ ಶಾಸನಗಳೂ ಒಂದಿಲ್ಲೊಂದು ವಿಶೇಷತೆಯನ್ನು ಹೊಂದಿರುವುದು ಕಾಣಬಹುದು. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ಉದಾಹರಿಸುತ್ತೇನೆ.
ಕೊಪ್ಪಳ ಜಿಲ್ಲೆಯ ಇಟಗಿಯಲ್ಲಿನ ಕ್ರಿ 1112 ನೇ ಇಸವಿಯ ಚಾಲುಕ್ಯ ದೊರೆ 6ನೆಯ ವಿಕ್ರಮಾದಿತ್ಯನ ಕುರಿತು. ಅಚ್ಚ ಕನ್ನಡದ ಪರಿಶುದ್ಧ ಭಾಷೆ, ಆಲಂಕಾರಿಕ ಶೈಲಿಯಲ್ಲಿ ರಮಣೀಯ ವರ್ಣನೆಗಳು, ಹೀಗೆ ಪ್ರಬುದ್ಧ ಚಿಂತನೆಗೆ ಹಚ್ಚುವ ಕಾವ್ಯಾಸಕ್ತರಿಗೆ ಮತ್ತು ಸಾಹಿತ್ಯದ ಓದುಗರಿಗೆ ಅತ್ಯಂತ ಮಹತ್ವದ ಆಕರ ಎಂದೆನಿಸುವ ಶಾಸನದಲ್ಲಿ ಬೆಳ್ವಲ, ಇಟಗೆ ಮುಂತಾದುವುಗಳ ವರ್ಣನೆ ಕಣ್ಣಿಗೆ ಕಟ್ಟುವಂತಿದೆಸೃಷ್ಟಿಕರ್ತನಿಂದ-ಭರತನ ತನಕ : ಸ್ವಯಂಭು (ಬ್ರಹ್ಮವಿಗೆ ಮಗನಾಗಿ ಸ್ವಾಯಂಭುವ ಹುಟ್ಟಿದ ಸ್ವಾಯಂಭುವನಿಗೆ ಮನುವು ಮಗನಾಗಿ ಜನಿಸಿದ, ಮನುವಿನ ಮಗ ಪ್ರಿಯವ್ರತ ರಾಜಪ್ರಿಯವ್ರತ ರಾಜನಿಗೆ ಏಳುಜನ ಮಕ್ಕಳು "ಸಪ್ತ ದ್ವೀಪಮಂ ಪಚ್ಚುಕೊಟ್ಟ ನಿಳಾವಲ್ಲಭನಾಏಳುಜನ ತನ್ನ ಮಕ್ಕಳಿಗೆ ಹಂಚಿಕೊಟ್ಟನು. ಅಂತಹ ಪ್ರಿಯವೃತನ ವಂಶದವನು ಎಂದು ಚಾಳುಕ್ಯ ವಿಕ್ರಮಾದಿತ್ಯನನ್ನು ಹೊಗಳಲಾಗಿದೆ."ಎನಿಸಿರ್ದ್ಧಂಬುರುಹ ಸ್ವಯಂಭುಗೆ ಸುತಂ ಸ್ವಾಯಂಭುವಂ ಪುಟ್ಟಿದಂ  ಮನುವಾತಂಗೆ ಮಗಂ ಪ್ರಿಯಬ್ರತ ನೃಪಂ ತತ್ಪುತ್ರರಗ್ನೀದ್ರಮುಖ್ಯ ನರೇಂದ್ರೋತ್ತಮರೆರ್ವ್ವರಂ ತವರ್ಗ್ಗೆ ಸಪ್ತದ್ವೀಪಮಂ ಪಚ್ಚು ಕೊಟ್ಟನಿಳಾವಲ್ಲಭನಾ ಪ್ರಿಯಬ್ರತನುದಾತ್ತ ಕ್ಷಾತ್ರಗೋತ್ರೋತ್ತಮಂ || " ಎಪಿಗ್ರಾಪಿಯ ಇಂಡಿಕಾ 13, ಪುಟ 41 ರಲ್ಲಿ 6ನೇ ಸಾಲಿನಿಂದ.
ಅಗ್ನೀದ್ರನಿಗೆ ಜಂಬೂದ್ವೀಪವೂ(ಲವಣ ಸಮುದ್ರಾವೃತ), ಮೇಧಾತಿಥಿಗೆ ಪ್ಲಕ್ಷದ್ವೀಪ(ಇಕ್ಷುರದ್ವೀಪಾವೃತ). ವಪುಷ್ಮಂತನಿಗೆ ಶಾಲ್ಮಲೀ ದ್ವೀಪ (ಸುರಾಸಮುದ್ರ). ಜ್ಯೋತಿಷ್ಮಂತನಿಗೆ ಕುಶದ್ವೀಪ. ರಾಜಚಕ್ರನೆಂದು ಖ್ಯಾತನಾದ ದ್ಯುತಿಮಂತನಿಗೆ ಕ್ರೌಂಚದ್ವೀಪ. ಹವ್ಯನನಿಗೆ ಶಾಕಾಂತದ್ವೀಪ. ಸವನನಿಗೆ ಪುಷ್ಕರದ್ವೀಪ. ಜಂಬೂದ್ವೀಪದ ಒಡೆಯನಾದ ಅಗ್ನೀಧ್ರನಿಗೆ ಒಂಭತ್ತು ಮಕ್ಕಳು ಅವರಲ್ಲಿ ನಾಭಿಯೇ ಮೊದಲಾದವರು. (ನಾಭಿಕ್ಷೇತ್ರ, ಕಿಂಪುರುಷವರ್ಷ, ಹರಿವರ್ಷ, ಇಳಾವೃತ....ಹೀಗೆಯೇ ಸಾಗುತ್ತದೆ.) ಇವರೆಲ್ಲಾ ಸೇರಿ ನವಖಂಡಗಳನ್ನು ಆಳಿದರು. ನಾಭಿಯ ಮಗ ಋ‌ಷಭನೂ ಆತನ ಮಗ ಭರತನೂ ಈ ಭರತಖಂಡವನ್ನು ಆಳಿದರು. ಇಂತಹ ಭರತಾದಿ ರಾಜರುಗಳಿಗಿಂತಲೂ ಬಹಳ ಅತ್ಯಂತ ಪ್ರಸಿದ್ಧನಾಗಿ ಈಗ ಚಕ್ರವರ್ತಿಯಾಗಿದ್ದಾನೆ ಎಂದು ಶ್ಲಾಘಿಸಲ್ಪಟ್ಟಿದೆ. ಲವಣಾಂಭೋನಿಧಿ ಸುತ್ತಿರಲ್ಕೆಸೆವ ಜಂಭೂದ್ವೀಪವಗ್ನೀಧ್ರರಾಜ್ಯವಿಳಾಸಾಸ್ಪದ ವಿಕ್ಷುವೇಷ್ಟಿತ ವಿಶಾಳಪ್ಲಕ್ಷವಕ್ಷುಣ್ಣ ಸೌಷ್ಠವ ಮೇಧಾತಿದಿಪಾಳಿತಂ ಸುರೆಗಡಲ್ ಸುತ್ತಿರ್ಪ್ಪಿನಂ ನೋಡಲೊಪ್ಪುವುದಾ ಶಾಲ್ಮಲಿ ಸೋಷ್ಮಸಾಹಸವಪುಷ್ಮದ್ಭೂಭುಜಸ್ವೀಕೃತಂ || ಎಪಿಗ್ರಾಪಿಯ ಇಂಡಿಕಾ 13, ಪುಟ 41 ರಲ್ಲಿ 7ನೇ ಸಾಲಿನಿಂದ.
ಚಂದ್ರವಂಶದ ಹಿರಿಮೆಯನ್ನು ಸಾರುತ್ತಾ ...... ಎರಡನೆಯ ಕಮಳ ಗರ್ಭರುಂ ತ್ರಿಭುವನ ಸದ್ಧರ್ಮ ಸೂತ್ರಧಾರರುಂ" ಎಂದು ಚಂದ್ರವಂಶದ ಪರಂಪರೆಯನ್ನು ಹೇಳುತ್ತಾ .....  ಅನುಪಮ ಹೇಮ ತಾಮರಸಗರ್ಬ್ಭನ ಮಾನಸಪುತ್ರನತ್ರಿ ತನ್ಮನುಪತಿನೇತ್ರ ಪುತ್ರಿಕೆಗೆ ಪುಟ್ಟಿದ ನಂದನನಿಂದುಮೌಳಿಮಂಡನನ ಮೃತಾಂಶು ತತ್ಪ್ರಿಯಸುತಂ ಬುಧನುನ್ನತ ಸೋಮ ವಂಶವರ್ದ್ಧನನೊಗೆದಂ ಬುಧಂ ಗವಿಳೆಗಂ ಪೃಥುಕೀರ್ತಿರವಂ ಪುರೂರವ || ಎಪಿಗ್ರಾಪಿಯ ಇಂಡಿಕಾ 13, ಪುಟ 41 ರಲ್ಲಿ 17ನೇ ಸಾಲಿನಿಂದ. ಸ್ವಾಯಂಭುವನಿಂದ ಹಿಡಿದು ಚಾಕ್ಷುಷನ ತನಕ ಆರು ಮನುಗಳು ಆಳಿದ ತರುವಾಯ ಏಳನೆಯ ವೈವಸ್ವತನು ದಕ್ಷನ ಮೊಮ್ಮಗ ವಿವಸ್ವಂತನ ಮಗನು. ಇಳೆ ಪುರೂರವ ಮುಂತಾದವರಿಂದ ಸಾಗಿ ಹಾರೀತಿಯ ಹಲವು ಮಕ್ಕಳಿಂದ ಈ ಚಾಳುಕ್ಯ ವಂಶವು ಚಂದ್ರವಂಶದಿಂದ ಕೀರ್ತಿ ಹೊಂದಿತು. ಎನ್ನುವುದಾಗಿ ಹೇಳಲಾಗಿದೆ. ಅದೇ ಸತ್ಯಾಶ್ರಯಕುಳವಾಯಿತು. 
ಚಾಳುಕ್ಯ ವಿಕ್ರಮ; "ಪೆಣದುಗ್ರಾಹಿತ ವಂಶಮಂ" ಎಂದು ಶೌರ್ಯ ಸಾಹಸ, ಅವನ ಔನ್ನತ್ಯವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿರುವ ಕವಿ, ವಿಕ್ರಮಾದಿತ್ಯನನ್ನು ಶ್ಲೇಷ ರೂಪಕಾಲಂಕಾರಗಳನ್ನು ಬಳಸಿ ತನ್ನ ಕವಿತಾ ಸಾಮರ್ಥ್ಯವನ್ನು ಮೆರೆದಿದ್ದಾನೆ. ಕೇಳೀಗೃಹವನ್ನೂ ಉದ್ಘರಿಸಿರುವ ಕವಿಯ ಹೇಳಿರುವುದು ಹೀಗೆ.... ಪೆಣದುಗ್ರಾಹಿತವಂಶಮಂತರಿದು ಭೂಭೃದ್ವರ್ಗ್ಗಮಂ ನುರ್ಗ್ಗಿ ತಕ್ಷಣದಿಂ ಕಂಟಕಕೋಟಿಯಂ ಕಡಿದು ಸಪ್ತಾಂಭೋಧಿ ಸಂರುದ್ಧಧಾರಿಣಿಯಂ ಧೋರ್ವ್ವಳದಿಂದೆ ನೇರ್ಪ್ಪಡಿಸಿ ಕೀರ್ತ್ತಿಶ್ರೀಗೆ ಕೇಳೀಗೃಹಾಂಗಣಮಪ್ಪಂತಿರೆ ಮಾಡಿದಂ ಸುಭಟರಾರ್ಚ್ಚಾಳುಕ್ಯರಾಮಂಬರ || ಎಪಿಗ್ರಾಪಿಯ ಇಂಡಿಕಾ 13, ಪುಟ 41 ರಲ್ಲಿ 25ನೇ ಸಾಲಿನಿಂದ.  ಎಂದು ಕೀರ್ತಿಶ್ರೀಗೆ ಕೇಳೀಗೃಹದಂತೆ ಎಂದು ಅತ್ಯಂತ ಮನೋಜ್ಞವಾಗಿ ವರ್ಣಿಸಿದ್ದಾರೆ.
ವಿಕ್ರಮಾದಿತ್ಯನ ದೋರ್ದ್ದಂಡವನ್ನು(ಭುಜಬಲ-ಬಾಹುಬಲ)ವನ್ನು ತಿಳಿಸುತ್ತಾ ಕವಿಯು - ಕಮಠಾಧೀಶನ ಬೆನ್ನೊಳಿರ್ದ್ದು ಫಣಿರಾಜೋದ್ಯತ್ಫಣಾಗ್ರಕ್ಕೆ ವಂದು ಮಹೀಕಾಮಿನಿ ದಿಗ್ಗಜಬ್ರಜದ ಕುಂಭಾಗ್ರಂಗಳಂ ಮೆಟ್ಟಿ ವಿ  ಕ್ರಮಚಕ್ರೇಶನುದಗ್ರವಪ್ಪ ಭುಜಮಂ ಬಂದೇರಿದಳ್ ರಾಗದಿಂದಮಿದೇನುನ್ನತಮಯ್ತೊ ದಕ್ಷಿಣಭುಜಂ ಚಾಳುಕ್ಯ ಚಕ್ರೇಶನ || ಎಪಿಗ್ರಾಪಿಯ ಇಂಡಿಕಾ 13, ಪುಟ 41 ರಲ್ಲಿ 26ನೇ ಸಾಲಿನಿಂದ. ಆಮೆಯ(ಕೂರ್ಮ)ಬೆನ್ನಿನ ಮೇಲೆ, ಆದಿಶೇಷನ ಹೆಡೆಗಳಮೇಲೆ, ದಿಗ್ಗಜಗಳ ತಲೆಗಳ ಮೇಲೆ ಈ ಜಗತ್ತು ನಿಂತಿದೆ ಎನ್ನುವುದು ನಮ್ಮ ಪ್ರಾಚೀನ ಪುರಾಣಗಳ ಕಲ್ಪನೆ. ಆದರೆ ರಾಜನೂ ಸಹ ಭೂಧರ(ಭೂಮಿಯನ್ನು ಧರಿಸಿದವನು). ಅದೇ ರೀತಿ ವಿಕ್ರಮಾದಿತ್ಯನೂ ಧರಿಸಿದ್ದಾನೆ. ಭೂ ದೇವಿಯು ಅವನ ಭುಜಕ್ಕೆ ಏರಲು (ದೋರ್ದ್ದಂಡ) ಆಮೆಯ ಬೆನ್ನು, ಆದಿಶೇಷನ ಹೆಡೆ, ಮತ್ತು ದಿಗ್ಗಜಗಳ ತಲೆ ಮೆಟ್ಟಿಲುಗಳಾದವು ಎಂದು ಶಾಸನ ಕವಿ ವರ್ಣಿಸುತ್ತಾನೆ. 
ವಿಕ್ರಮಾದಿತ್ಯನಿಗೆ ಶತ್ರುರಾಜರೂ ಸಹ ವಂದಿಸುತ್ತಿದ್ದರು ಎನ್ನುವುದು ಕವಿಯ ಈರೀತಿಯ ಅಂಬೋಣ.... ಪುದಿದು ಪೊದಳ್ದ ವಿಕ್ರಮ ವಿಜೃಂಭಣಮಂ ತೊರೆದಾಳ್ವೆಸಕ್ಕೆ ಪೂಣ್ದೊದವಿದ ಭೀತಿಯಿಂದೆರಗಲನ್ಯನೃವಾವಳಿ ಪಾದಪೀಠದೊಳ್ ಪದನಕದರ್ಪ್ಪಣಂಗಳೊಳಗಾ ರಿಪುಭೂಪರ ರೂಪು ಚಂದ್ರ ಬಿಂಬದ ಮೃಗದಂತಿರ್ಪ್ಪುವು ನೆಗರ್ತ್ತೆಯ ವಿಕ್ರಮಚಕ್ರವರ್ತ್ತಿಯ || ಎಪಿಗ್ರಾಪಿಯ ಇಂಡಿಕಾ 13, ಪುಟ 41 ರಲ್ಲಿ 30ನೇ ಸಾಲಿನಿಂದ.  ವಿಕ್ರಮಾದಿತ್ಯನ ಅಡಿಯ ಉಗುರುಗಳ ಕನ್ನಡಿಗಳಲ್ಲಿ ಮೂಡಿದ ವೈರಿ ರಾಜರುಗಳ ರೂಪಗಳು ಚಂದ್ರ ಬಿಂಬದ ಜಿಂಕೆಯಂತೆ ಕಾಣುತ್ತಿದ್ದವು. ಇಲ್ಲಿ ವೈರಿ ರಾಜರ ಮುಖಗಳನ್ನು ಚಂದ್ರನ ಬಿಂಬಕ್ಕೆ ಹೋಲಿಸಿರುವುದು ಅತ್ಯಂತ ಮಹತ್ವದ್ದು. ವೈರಿಗಳ ಮುಖವು ಕಪ್ಪಾಗಿದ್ದವು, ಅಥವಾ ವೈರಿಗಳ ಮುಖವು ಕಳೆಗುಂದಿದ್ದವು ಎನ್ನುವುದನ್ನು ಹಾಗೆ ಕವಿ ವಿಡಂಬನೆಮಾಡಿದ್ದಾನೆ. ಹೀಗೆ ಶಾಸನ ಒಂದರ ಕವಿ ಎಂತಹ ಅದ್ಭುತವಾದ ಕಾವ್ಯದ ಸೃಷ್ಟಿಗೆ ರಾಜಾಶ್ರಯವನ್ನು ಬಳಸಿಕೊಂಡಿದ್ದ ಅಥವಾ ಕವಿಯೊಬ್ಬನನ್ನು ರಾಜ ತನ್ನ ವರ್ಣನೆಗೆ ಬಳಸಿಕೊಂಡಿರಬಹುದಾದ

 

No comments:

Post a Comment